
ಮಡಿಕೇರಿ ಸೆ.5 NEWS DESK : ವಿದ್ಯಾರ್ಥಿಗಳು ಭವಿಷ್ಯದ ಸೇನಾ ಆಧಿಕಾರಿಗಳಾಗಿ ಕೇವಲ ಶಸ್ತ್ರಾಸ್ತ್ರಗಳನ್ನು ಮಾತ್ರವಲ್ಲ, ಮೌಲ್ಯ, ದೃಷ್ಟಿಕೋನವನ್ನು ಹಾಗೂ ಅಂತರಂಗದಲ್ಲಿ ನೈತಿಕತೆಯನ್ನು ಕೂಡ ಹೊತ್ತು ಸಾಗಬೇಕು ಎಂದು ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷ ಏರ್ ವೈಸ್ ಮಾರ್ಷಲ್ ಬಿಜೊ ಜಾನ್ ಮೆಮನ್ ಕಿವಿ ಮಾತು ಹೇಳಿದರು. ಕೊಡಗು ಸೈನಿಕ ಶಾಲೆಯ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ ನಡೆದ 29ನೇ ಸ್ಥಳೀಯ ಆಡಳಿತ ಮಂಡಳಿ (ಎಲ್.ಬಿ.ಎ) ಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಶಾಲೆಯ ಯುದ್ಧವೀರರ ಸ್ಮಾರಕದ ಆವರಣದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಧ್ವಜ ಸ್ತಂಭವನ್ನು ಉದ್ಘಾಟಿಸಿ ಮಾತನಾಡಿದರು. ಸೈನಿಕ ಶಾಲೆ ಕೊಡಗು ಹದಿನೇಳು ವರ್ಷಗಳ ಹಿಂದೆ ಭವಿಷ್ಯದ ಸೈನಿಕ ಅಧಿಕಾರಿಗಳನ್ನು ನಿರ್ಮಿಸುವ ಮಹೋನ್ನತ ದೃಷ್ಟಿಕೋನದೊಂದಿಗೆ ಸ್ಥಾಪಿತವಾಗಿದೆ. ಇಂದು ತನ್ನ ಸಾಮಥ್ರ್ಯ ಮತ್ತು ಗೌರವವನ್ನು ವೃದ್ಧಿಸಿಕೊಂಡು ಗಣನೀಯ ಬೆಳವಣಿಗೆಯನ್ನು ಕಂಡಿದೆ. ಕಾಲದ ಪರೀಕ್ಷೆಗೆ ತಕ್ಕಂತೆ ದೃಢವಾಗಿ ನಿಂತು, ಕಾಲಾನುಕ್ರಮವಾಗಿ ಆಧುನಿಕ ಶಿಕ್ಷಣ ಹಾಗೂ ತರಬೇತಿಯ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಬೆಳೆದು ನಿಂತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ, ದೈಹಿಕ, ನೈತಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಅಗತ್ಯವಾದ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಈ ಸಂಸ್ಥೆ ಬೆಳೆದು ಬಂದಿರುವುದು ಶ್ಲಾಘನೀಯ ಎಂದರು. ಕಳೆದ ಎರಡು ವರ್ಷಗಳಲ್ಲಿ ವಿಶೇಷವಾಗಿ ಶಾಲೆಯು ಮೂಲಸೌಕರ್ಯ, ಶೈಕ್ಷಣಿಕ ಫಲಿತಾಂಶ, ಪೂರಕ ಚಟುವಟಿಕೆಗಳು ಹಾಗೂ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನದಲ್ಲಿ ಅಪಾರ ಪ್ರಗತಿ ಸಾಧಿಸಿದೆ. ಯು ಪಿ ಎಸ್ ಸಿ, ಎನ್ ಡಿ ಎ ಪರೀಕ್ಷೆಯಲ್ಲಿ ಶಾಲೆಯ ಅತ್ಯುತ್ತಮ ಸಾಧನೆ ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. 19 ವಿದ್ಯಾರ್ಥಿಗಳು ಎನ್ ಡಿ ಎ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಅವರಲ್ಲಿ 4 ಮಂದಿ ಪ್ರತಿಷ್ಠಿತ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಸೇರ್ಪಡೆಗೊಂಡಿರುತ್ತಾರೆ. ಇದು ಸಾಧಾರಣ ಸಾಧನೆಯಲ್ಲ. ಇದಕ್ಕಾಗಿ ವಿದ್ಯಾರ್ಥಿಗಳ ಪರಿಶ್ರಮ, ಅಧಿಕಾರಿಗಳ ಹಾಗೂ ಶಿಕ್ಷಕರ ಸಮರ್ಪಿತ ಹಾಗೂ ಅವಿರತ ಮಾರ್ಗದರ್ಶನವೇ ಕಾರಣವಾಗಿದೆ ಎಂದು ಹೇಳಿದರು. ಕ್ರೀಡಾ ವಿಭಾಗದ ಸಾಧನೆಗಳ ಕ್ಷೇತ್ರದಲ್ಲಿಯೂ ಶಾಲೆಯ ವಿದ್ಯಾರ್ಥಿಗಳು ತಮ್ಮ ನೈಜ ಸಾಮಥ್ರ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ತೋರಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ 2025-26ನೇ ಸಾಲಿನಲ್ಲಿ ಒರಿಸ್ಸಾದ ಭುವನೇಶ್ವರದಲ್ಲಿ ನಡೆದ ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ವಲಯ ಫುಟ್ಬಾಲ್ ಸ್ಪರ್ಧೆಯಲ್ಲಿ ಶಾಲೆಯು ಸಾಧಿಸಿದ ಸಾಧನೆ ಪೂರಕವಾಗಿದೆ. ಜೊತೆಗೆ, ಮಹಾರಾಷ್ಟ್ರದ ಚಂದ್ರಪುರದಲ್ಲಿ ನಡೆದ ಅಖಿಲ ಭಾರತ ಸೈನಿಕ ಶಾಲೆಗಳ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ವಿದ್ಯಾರ್ಥಿನಿಯರಾದ ದೀಪ್ತಿ ದೇವಿ, ಸಾನಿಕಾ ಉದಯ್ ಹಾಗೂ ದೀಪ್ತಿ ಬಿ.ಯು. ರವರ ಸಾಧನೆ ಶಾಲೆಯ ಕೀರ್ತಿಗೆ ನೂತನ ಮೈಲಿಗಲ್ಲನ್ನು ನಿರ್ಮಿಸಿದೆ. ಇದರೊಂದಿಗೆ ಶೈಕ್ಷಣಿಕ ಹೊಣೆಗಾರಿಕೆಯೊಂದಿಗೆ ಶಿಕ್ಷಕರ ನಿರಂತರ ವೃತ್ತಿಪರ ಅಭಿವೃದ್ಧಿಗೆ ಶಾಲೆ ಹೆಚ್ಚಿನ ಆದ್ಯತೆ ನೀಡಿದ್ದು, ಶಿಕ್ಷಕರಿಗೆ ಆಧುನಿಕ ಬೋಧನಾ ತಂತ್ರಗಳು ಹಾಗೂ ತರಬೇತಿಗಳನ್ನು ಒದಗಿಸಲಾಗುತ್ತಿದ್ದು, ಅವರು ಗುಜರಾತಿನ ಗಾಂಧಿನಗರದ ಐ ಐ ಟಿ ಇ, ಮುಂತಾದ ಪ್ರತಿಷ್ಠಿತ ಸಂಸ್ಥೆಗಳ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು. ವೇದವ್ಯಾಸ ಶೈಕ್ಷಣಿಕ ವಿಭಾಗದ ಆಧುನೀಕರಣ ಹಾಗೂ `ಶಿಖರ್’ ತರಗತಿಯ ನಿರ್ಮಾಣ, ಶಾಲೆಯ ಶೈಕ್ಷಣಿಕ ಉನ್ನತಿಯ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಗಳಾಗಿವೆ. ಇವು ಕೇವಲ ಕಟ್ಟಡದ ಬದಲಾವಣೆಗಳಲ್ಲ, ಶಾಲೆಯನ್ನು ರಾಷ್ಟ್ರಮಟ್ಟದ ಮಾದರಿ ಸಂಸ್ಥೆಯನ್ನಾಗಿ ರೂಪಿಸುವ ದೃಷ್ಟಿಯ ಭಾಗವಾಗಿವೆ ಎಂದರು. ಇದರೊಂದಿಗೆ ವಿದ್ಯಾರ್ಥಿಗಳ ಪ್ರದರ್ಶಿಸಿದ ಡೊಳ್ಳು ಕುಣಿತ, ಇನ್ಕ್ರಿಡಿಬಲ್ ಇಂಡಿಯಾ ನೃತ್ಯ ಹಾಗೂ ಯಕ್ಷಗಾನದ ನೃತ್ಯಗಳಲ್ಲಿ ಕಾಣಿಸಿದ ಸಾಂಸ್ಕೃತಿಕ ವೈವಿಧ್ಯತೆ ಮನೋಜ್ಞವಾಗಿತ್ತು ಎನ್ನುದರೊಂದಿಗೆ ವಿದ್ಯಾರ್ಥಿಗಳನ್ನು ಪ್ರಶಂಸಿಸಿದರು.
ಭವಿಷ್ಯದ ಬದುಕಲ್ಲಿ ಯಶಸ್ಸನ್ನು ಸಾಧಿಸುವ ಜವಾಬ್ದಾರಿ ವಿದ್ಯಾರ್ಥಿಗಳಲ್ಲಿದೆ. ಶಾಲೆಯು ಎಲ್ಲಾ ಸೌಲಭ್ಯಗಳನ್ನು ಹೊಂದುವುದರೊಂದಿಗೆ ಅತ್ಯುತ್ತಮ ಮಾರ್ಗದರ್ಶನವನ್ನೂ ಸಹ ಹೊಂದಿದೆ. ಇದರೊಂದಿಗೆ ನಿಮ್ಮ ಬದ್ಧತೆ, ಕೇಂದ್ರೀಕೃತ ಪರಿಶ್ರಮ ನಿಮ್ಮದಾಗಿದೆ ಎಂದು ಹೇಳಿದರು.
ತಾವು ಶಾಲೆಯಲ್ಲಿ ಇರುವವರೆಗಿನ ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ನಿಮ್ಮ ಶಿಕ್ಷಕರಿಂದ ಕಲಿಯಿರಿ, ನಿಮ್ಮ ಸಹಪಾಠಿಗಳಿಗೆ ಸಹಕಾರ ನೀಡುವುದರೊಂದಿಗೆ ಪರಿಶ್ರಮದಿಂದ ತರಬೇತಿಯನ್ನು ಪಡೆಯಿರಿ. ಜೊತೆಗೆ ನಿಮ್ಮ ಶಾಲೆಯ, ನಿಮ್ಮ ಕುಟುಂಬದ ಅದಕ್ಕಿಂತಲೂ ಮುಖ್ಯವಾಗಿ ನಮ್ಮ ದೇಶದ ಕೀರ್ತಿಯನ್ನು ಸದಾ ಎತ್ತಿ ಹಿಡಿಯಿರಿ. ದೇಶಭಕ್ತಿಯ ಪ್ರೇರಣೆ ನಿಮ್ಮೆಲ್ಲರಿಗೂ ದಾರಿ ತೋರಿಸಲಿ ಎಂದು ಹಾರೈಸಿದರು.
ಸಭೆಯಲ್ಲಿ ಶಾಲೆಯ ಪ್ರಾಂಶುಪಾಲರು ಹಾಗೂ ಪ್ರಸ್ತುತ ಸಭೆಯ ಕಾರ್ಯದರ್ಶಿಗಳಾದ ಕರ್ನಲ್ ಅಮರ್ ಜೀತ್ ಸಿಂಗ್ ಮಾತನಾಡಿ, ಕಳೆದ ಆರು ತಿಂಗಳಲ್ಲಿ ಶಾಲೆಯ ತರಬೇತಿ ಮತ್ತು ಆಡಳಿತಾತ್ಮಕ ಪ್ರಗತಿಯನ್ನು ಕುರಿತು ವಿವರಿಸುವುದರೊಂದಿಗೆ ಶಾಲೆಯು ಸಾಧಿಸಿದ ಸಾಧನೆಗಳ ಕುರಿತು ವಿವರಿಸಿದರು. ಅಲ್ಲದೆ ಮುಂದೆ ಶಾಲೆಯು ಹಮ್ಮಿಕೊಂಡಿರುವ ಶೈಕ್ಷಣಿಕ ಹಾಗೂ ಆಡಳಿತ ಕ್ರಮವನ್ನು ವಿವರಿಸಿದರು. ಈ ಸಭೆಯು ವಿವಿಧ ಅಂಶಗಳ ಕುರಿತು ವಿವರವಾದ ಚರ್ಚೆಗಳೊಂದಿಗೆ ಪೂರ್ಣಗೊಂಡಿತು. ಜೊತೆಗೆ ಶಾಲೆಯು ಮುಂದಿನ ದಿನಗಳಲ್ಲಿ ಹೊಂದಬೇಕಾದ ಬೆಳವಣಿಗೆ ಮತ್ತು ಅಭಿವೃದ್ಧಿಯ ಗುರಿಯನ್ನು ನಿರ್ಧರಿಸಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಸ್ಥಳೀಯ ಆಡಳಿತ ಮಂಡಳಿಯ ಸದಸ್ಯರಾದ ಕೊಡಗು ಜಿಲ್ಲಾಧಿಕಾರಿ ವೆಂಕಟ ರಾಜಾ, ಪ್ರತಿನಿಧಿನಿಧಿಯಾಗಿ ಸಹಾಯಕ ಆಯುಕ್ತರಾದ ನಿತಿನ್ ಚಕ್ಕಿ, ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ತಜ್ಞರಾದ ಡಾ. ಎಂ.ಪಿ.ಸದಾಶಿವ, ಕೊಡಗು ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಪ್ರತಿನಿಧಿಯಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕಿ ಬಿ.ಎನ್.ಪುಷ್ಟ, ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಪ್ರದ್ಯುಮ್ನ ಕುಮಾರ್ ಸೇಥಿ, ಮೈಸೂರಿನ ಸಿ ಪಿ ಡಬ್ಲ್ಯೂ ಡಿ ಯ ಅಂಭಿಯಂತರರಾದ ಅಮೋಲ್ ನಾಮ್ ದೇವ್, ಪೋಷಕ ಪ್ರತಿನಿಧಿಯಾದ ಸಂಪತ್ ಕುಮಾರ್ ಶರ್ಮಾ, ಶಾಲೆಯ ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪಿ ಪ್ರಕಾಶ್ ರಾವ್ ಉಪಸ್ಥಿತರಿದ್ದರು. ಸಭೆಯಲ್ಲಿ ಶಾಲೆಯ ವಾರ್ಷಿಕ ಸಂಚಿಕೆಯಾದ `ಕೊಡಗಿಯನ್’ ನ್ನು ಬಿಡುಗಡೆಗೊಳಿಸಲಾಯಿತು. 2024-25ನೇ ಸಾಲಿನಲ್ಲಿ ಶಾಲೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವಿಜ್ಞಾನ ವಿಷಯ ಶಿಕ್ಷಕರಾದ ಎನ್ ಸುಬ್ಬರಂಗಯ್ಯ ಹಾಗೂ ದಾದಾ ಧರೆಪ್ಪ ಕುಸನಾಳೆಯವರನ್ನು ಸನ್ಮಾನಿಸುವುದರೊಂದಿಗೆ, ಅಖಿಲ ಭಾರತ ಸೈನಿಕ ಶಾಲೆಗಳ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಮೂವರು ವಿದ್ಯಾರ್ಥಿನಿಯರಿಗೆ ಪದಕ ಹಾಗೂ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಯಿತು. ಶಾಲಾ ವಿದ್ಯಾರ್ಥಿನಿಯರ ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಸಭೆಗೂ ಮುನ್ನ ಏರ್ ವೈಸ್ ಮಾರ್ಷಲ್ ಬಿಜೊ ಜಾನ್ ಮೆಮನ್ ಶಾಲೆಯ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಯುದ್ಧವೀರರ ಸ್ಮಾರಕದ ಆವರಣದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಧ್ವಜ ಸ್ತಂಭವನ್ನು ಉದ್ಘಾಟಿಸಿದರು. ಶಾಲೆಯ ಪರೇಡ್ ಮೈದಾನದಲ್ಲಿ ವಿದ್ಯಾರ್ಥಿಗಳು ನೀಡಿದ ಗಾರ್ಡ್ ಆಫ್ ಹಾನರ್ ನ ಗೌರವ ವಂದನೆ ಸ್ವೀಕರಿಸಿದರು. ವಿಶೇಷ ಸಭೆಯ ನಂತರ ಆಸಕ್ತ ಎನ್ ಡಿ ಎ ವಿದ್ಯಾರ್ಥಿಗಳಿಗೆ ಸಂಪನ್ಮೂಲ ಕೇಂದ್ರವಾಗಿ ಕುವೆಂಪು ವಿವಿದೊದ್ಧೇಶ ಸಭಾಂಗಣದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟಿರುವ “ಶಿಖರ್” ಎಂಬ ಹೆಸರಿನ ಹೊಸ ತರಗತಿ ಕೊಠಡಿಯನ್ನು ಹಾಗೂ ಆಡಳಿತ ಮಂಡಳಿಯ ಕಟ್ಟಡದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ರೋಬೋಟಿಕ್ ಪ್ರಯೋಗಾಲಯವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರೇರ್ ಆಡ್ಮಿರಲ್ ಆರ್.ಎಂ.ಪುರಂದರೆ ವಿ ಎಸ್ ಎಂ (ನಿವೃತ್ತ), ಎಲಿಜಾ ಮೆಮನ್ ಹಾಗೂ ದಿವ್ಯಾಸಿಂಗ್ ಹಾಜರಿದ್ದರು. :: ಸಂವಾದ :: ಮಧ್ಯಾಹ್ನದ ಅವಧಿಯಲ್ಲಿ ಮುಖ್ಯ ಅಥಿತಿಗಳು 12ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ತಮಟೆ ಕಲಾ ಪ್ರದರ್ಶನ, ಲೇಝಿಂ ನೃತ್ಯ ಕೌಶಲ್ಯ ಹಾಗೂ ಕೇರಳದ ಪ್ರಸಿದ್ಧ ಯುದ್ಧ ಕಲೆ ಕಳರಿಪಾಯಟ್ಟು ಪ್ರದರ್ಶನಗಳನ್ನು ವೀಕ್ಷಿಸಿದರು. ಈ ಸಂದರ್ಭ ಮುಖ್ಯ ಅತಿಥಿಗಳು ವಿದ್ಯಾರ್ಥಿಗಳ ಶಿಸ್ತು, ಸಂಸ್ಕೃತಿಯ ಕುರಿತಾದ ಹಮ್ಮೆ ಹಾಗೂ ನವೀನತೆಯನ್ನು ಮೆಚ್ಚಿ, ಎಲ್ಲ ಕ್ಷೇತ್ರಗಳಲ್ಲಿಯೂ ಶ್ರೇಷ್ಠತೆಯನ್ನು ಸಾಧಿಸಲು ಅವರನ್ನು ಪ್ರೋತ್ಸಾಹಿಸಿದರು.









