
ಮಡಿಕೇರಿ ಸೆ.6 NEWS DESK : ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ಮಡಿಕೇರಿ, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಮಡಿಕೇರಿ ಶಾಖೆ ಸಹಯೋಗದೊಂದಿಗೆ, ಚೆಂಬು ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದಲ್ಲಿ ಜನ ಸುರಕ್ಷಾ ಅಭಿಯಾನ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿದ ಕೆನರಾ ಬ್ಯಾಂಕ್ ನ ಆಪ್ತ ಸಮಾಲೋಚಕಿ ಸುಜಾತ, ಜನ ಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದರ ಮೂಲಕ ಅದರ ಪ್ರಯೋಜನವನ್ನು ಪಡೆದು ಕೊಳ್ಳುವಂತೆ ಸಲಹೆ ನೀಡಿದರು. ಮುಖ್ಯವಾಗಿ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಸುರಕ್ಷ ಭೀಮಾ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಮತ್ತು ಅಟಲ್ ಪಿಂಚಣೆ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕರಾದ ಕೆ.ಎಲ್.ಪ್ರಿಯಾ ಮಾತನಾಡಿ, ಸರಕಾರದ ಯೋಜನೆಗಳಾದ ಪಿ.ಎಂ.ಇ ಜಿ.ಪಿ, ಪಿ.ಎಂ ಮುದ್ರಾ, ಪಿ.ಎಂ.ಎಫ್.ಎಂ.ಇ ಸಾಲ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದು, ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡುವುದು ಮತ್ತು ಡಿಜಿಟಲ್ ಪೇಮೆಂಟ್ ಗಳ ಬಗ್ಗೆ ಮಾಹಿತಿ ನೀಡುವುದು ಅವಾರ್ಡ್ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಚೆಂಬು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪಿ.ಜಿ.ತೀರ್ಥರಾಮ, ಉಪಾಧ್ಯಕ್ಷರಾದ ಶಾರದಾ ಸೂರ್ಯಕುಮಾರ್, ಇಂಡಿಯನ್ ಓವರ್ಸೀಸ್ ಬ್ಯಾಂಕ್ ನ ಶಾಖಾ ವ್ಯವಸ್ಥಾಪಕರಾದ ಅವಿನಾಶ್ ಉಪಸ್ಥಿತರಿದ್ದರು. ಹೆಚ್.ಕೆ.ವಿಜಯಾ ಸ್ವಾಗತಿಸಿದರು. ಕೆ.ಎಲ್.ಪ್ರಿಯಾ ವಂದಿಸಿದರು.









