
ಮಡಿಕೇರಿ ಸೆ.8 NEWS DESK : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಿಂದ ಕಾಫಿ ಸೇರಿದಂತೆ ವಿವಿಧ ಕೃಷಿಗಳಿಗೆ ಅಪಾರ ಹಾನಿಯಾಗಿದ್ದು, ಜಿಲ್ಲಾ ಬಿಜೆಪಿ ಸೆ.9 ರಂದು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆಹಾನಿ ಸಮೀಕ್ಷೆ ನಡೆಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಬೆಳೆಹಾನಿ ಬಗ್ಗೆ ಕನಿಷ್ಟ ಕಾಳಜಿಯನ್ನು ತೋರದ ಕಾರಣ ಬಿಜೆಪಿ ಹಾನಿಯನ್ನು ಪರಿಶೀಲಿಸಿ, ವರದಿ ತಯಾರಿಸಿ ಸಂಸದರ ಮೂಲಕ ಕೇಂದ್ರ ಸರ್ಕಾರಕ್ಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಿದೆ ಎಂದು ತಿಳಿಸಿದರು.
ಅತೀ ಹೆಚ್ಚು ಮಳೆಯಾಗಿರುವ ತೋಳೂರು ಶೆಟ್ಟಳ್ಳಿ, ಶಾಂತಳ್ಳಿ, ಬೆಟ್ಟದಳ್ಳಿ, ಹಮ್ಮಿಯಾಲ, ಮುಟ್ಲು, ಮುಕ್ಕೋಡ್ಲು, ಕಾಲೂರು, ಗಾಳಿಬೀಡು, ಬೆಟ್ಟಗೇರಿ, ಚೇರಂಬಾಣೆ, ಚೆಟ್ಟಿಮಾನಿ, ಭಾಗಮಂಡಲ, ಬಲ್ಲಮಾವಟಿ, ಕಕ್ಕಬ್ಬೆ ವಿಭಾಗಗಳಿಗೆ ಪಕ್ಷದ ಸಮೀಕ್ಷಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಭಾರೀ ಮಳೆಯಿಂದ ಜಿಲ್ಲೆಯ ಪ್ರಮುಖ ಕೃಷಿಯಾದ ಕಾಫಿಗೆ ಅಪಾರ ಹಾನಿಯಾಗಿದೆ. ಅರೇಬಿಕಾ ಕಾಫಿ ಫಸಲು ಅಧಿಕ ಮಳೆಯಿಂದ ಕೊಳೆತು ಉದುರಿದ್ದರೆ, ರೋಬಸ್ಟಾ ಕಾಫಿಯೂ ಕೊಳೆ ರೋಗದ ಸಮಸ್ಯೆಗೆ ತುತ್ತಾಗಿದ್ದು, ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಿದ್ದೂ ಈ ಬಗ್ಗೆ ಜಿಲ್ಲೆಯ ಶಾಸಕರಾಗಲಿ, ಉಸ್ತುವಾರಿ ಸಚಿವರಾಗಲಿ ಹೆಚ್ಚಿನ ಕಾಳಜಿ ವಹಿಸಿಲ್ಲವೆಂದು ಆರೋಪಿಸಿ, ಪ್ರಸ್ತುತ ಪರಿಸ್ಥಿಗಳ ನಡುವೆ ಬೆಳೆಗಾರಿಗೆ ತಲಾ 2 ಲಕ್ಷ ಪರಿಹಾರವನ್ನಾದರು ನೀಡಬೇಕೆಂದು ಆಗ್ರಹಿಸಿದರು. ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಸತತ ಮೂರು ವರ್ಷ ಬೆಳೆಗಾರರಿಗೆ ಪರಿಹಾರವನ್ನು ವಿತರಿಸಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪರಿಹಾರವನ್ನು ನೀಡಿಲ್ಲ. ಇದೀಗ ಬೆಳೆಹಾನಿ ಸಮೀಕ್ಷಾ ತಂಡವನ್ನು ಜಿಲ್ಲಾಡಳಿತ ರಚಿಸಿದೆ. ಇದು ಸಮೀಕ್ಷೆ ಮಾಡುವುದರ ಒಳಗಾಗಿ ಕೊಳೆತು ಉದುರಿ ಹೋಗಿರುವ ಕಾಫಿ ಕರಗಿ ಹೋಗಿರುತ್ತದೆ, ಬೆಳೆಹಾನಿಯ ನಿಖರ ಮಾಹಿತಿ ದೊರೆಯುವುದಿಲ್ಲ ಎಂದರು. ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಸುಮಾರು 55 ಸಾವಿರ ಬೆಳೆಗಾರರಿಗೆ ಅನುಕೂಲತೆಯನ್ನು ಒದಗಿಸಿತ್ತು. ಇಂದಿನ ಕಾಂಗ್ರೆಸ್ ಸರ್ಕಾರ ಜಿಲ್ಲೆಯ ಕಾಫಿ ಬೆಳೆಗಾರರಿಗೆ ಪರಿಹಾರ ನೀಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಕಳೆದ ಎರಡು ವರ್ಷಗಳಿಂದಲೂ ಷಡ್ಯಂತ್ರ ರೂಪುಗೊಳ್ಳುತಿತ್ತು ಎನ್ನುವುದು ತಿಳಿದಿದ್ದೂ ರಾಜ್ಯ ಸರ್ಕಾರ ಮೌನವಾಗಿರುವುದು ಸರಿಯಲ್ಲ. ಒಟ್ಟು ಪ್ರಕರಣವನ್ನು ಕೇಂದ್ರೀಯ ತನಿಖಾ ಸಂಸ್ಥೆ ಮತ್ತು ಇಡಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, ಭಾರೀ ಮಳೆಯಿಂದ ಕೃಷಿಗೆ ಹಾನಿಯಾಗಿರುವಾಗ ಸರ್ವೇ ಕಾರ್ಯವನ್ನು ನಡೆಸುವಲ್ಲಿ ಜಿಲ್ಲೆಯ ಶಾಸಕರು ಹಾಗೂ ಉಸ್ತುವಾರಿ ಸಚಿವರು ಕನಿಷ್ಟ ಕಾಳಜಿಯೂ ಇಲ್ಲದಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದರು. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಎನ್ಡಿಆರ್ಎಫ್ನಡಿ ಜಿಲ್ಲೆಯ ಮಳೆಹಾನಿಗೆ ಸಂಬಂಧಿಸಿದಂತೆ ಸಾಕಷ್ಟು ಅನುದಾನ ಬಂದಿದೆ. ಎಸ್ಡಿಆರ್ಎಫ್ನಲ್ಲಿ ಕೇಂದ್ರದ ಶೇ.75 ರಷ್ಟು ಮತ್ತು ರಾಜ್ಯದ ಶೇ.25 ಅನುದಾನವಿದೆ. ಈ ಹಣವನ್ನು ಎಸ್ಡಿಆರ್ಎಫ್ನ ನಿಯಮಗಳನ್ನು ಮೀರಿ ಕಾಂಗ್ರೆಸ್ ಕಾರ್ಯಕರ್ತರ ಮನೆ ಮನೆಗೆ ರಸ್ತೆ ಮಾಡಲಾಗಿದೆ ಎಂದು ಟೀಕಿಸಿದರು. ಜಿಲ್ಲೆಯ ರಸ್ತೆಗಳೆಲ್ಲ ಹದಗೆಟ್ಟು ಹೋಗಿವೆ, ಲೋಕೋಪಯೋಗಿ ಇಲಾಖೆಗೆ ವರ್ಷಂಪ್ರತಿ ರಸ್ತೆಗಳ ನಿರ್ವಹಣೆಗೆ ಪ್ರತಿ ಕಿ.ಮೀಗೆ 60 ಸಾವಿರ ರೂ. ನಿಗದಿಯಾಗಿದೆ. ಆದರೆ ಕಾಮಗಾರಿ ನಡೆಯುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಮೈಸೂರು ದಸರಾ ಉತ್ಸವಕ್ಕೆ ಚಾರಿತ್ರಿಕವಾದ ಮತ್ತು ಧಾರ್ಮಿಕವಾದ ಹಿನ್ನೆಲೆ ಇದೆ. ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದು ಶ್ರೀ ಚಾಮುಂಡೇಶ್ವರಿಗೆ ಮಾಡಿರುವ ಅಪಚಾರವೆ ಆಗಿದೆ. ಈ ಹಿನ್ನೆಲೆ ಹಿಂದೂ ಜಾಗರಣಾ ವೇದಿಕೆಯಿಂದ ಸೆ.9 ರಂದು ‘ಚಾಮುಂಡಿ ಚಲೋ’ ಜಾಥವನ್ನು ಆಯೋಜಿಸಲಾಗಿದೆ. ಜಿಲ್ಲೆಯಿಂದ ಸಾಕಷ್ಟು ಕಾರ್ಯಕರ್ತರು ತೆರಳಲಿದ್ದಾರೆ ಎಂದು ಹೇಳಿದರು. ಬೂಕರ್ ಪ್ರಶಸ್ತಿ ಮೊದಲಾಗಿ ಅನುವಾದಕರಿಗೆ ನೀಡುವ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿ ಪಡೆದ ಲೇಖಕಿ ಬಾನು ಮುಷ್ತಾಕ್ರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ರಾಜ್ಯ ಸರ್ಕಾರ, ಅನುವಾದಕಿ ದೀಪಾ ಬಾಸ್ತಿಯವರನ್ನು ಯಾಕೆ ಆಹ್ವಾನಿಸಿಲ್ಲವೆಂದು ಕೆ.ಜಿ.ಬೋಪಯ್ಯ ಪ್ರಶ್ನಿಸಿದರು. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ಐಟಿಗೆ ಅದರ ನಿಬಂಧನೆಗಳನ್ನು ಮೀರಿ ಸೌಜನ್ಯ ಪ್ರಕರಣವನ್ನು ನೀಡಲಾಗಿದೆ. ಆಕೆಯ ಸಾವಿಗೆ ನ್ಯಾಯ ದೊರಕಬೇಕೆನ್ನುವ ದೃಷ್ಟಿಯಿಂದ ಈ ಬಗ್ಗೆ ನಮ್ಮ ತಕರಾರಿಲ್ಲ. ಆದರೆ, ಇಂತಹ ಪ್ರಕರಣಗಳನ್ನು ಬಿಟ್ಟು ಧಾರ್ಮಿಕ ಶ್ರದ್ಧಾಕೇಂದ್ರಗಳ ಮೇಲೆ ಇಂದು ವ್ಯವಸ್ಥಿತ ಷಡ್ಯಂತ್ರಗಳು ನಡೆಯುತ್ತಿರುವುದನ್ನು ಖಂಡಿಸುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಬಿ.ಕೆ.ಅರುಣ್ ಕುಮಾರ್ ಹಾಗೂ ನಗರಾಧ್ಯಕ್ಷ ಉಮೇಶ್ ಸುಬ್ರಮಣಿ ಉಪಸ್ಥಿತರಿದ್ದರು.








