
ಮಡಿಕೇರಿ NEWS DESK ಸೆ.8 : ರಾಜ್ಯ ಸರಕಾರದ ವತಿಯಿಂದ ಸೆ.9 ರಿಂದ ಪುನರರಾಂಭಗೊಳ್ಳುವ ಜಾತಿವಾರು ಜನಗಣತಿಯಲ್ಲಿ ಕೊಡಗಿನಲ್ಲಿ ಅಕ್ರಮವಾಗಿ ಆಶ್ರಯ ಪಡೆದಿರುವ ರೋಹಿಂಗ್ಯ ಹಾಗೂ ಬಾಂಗ್ಲಾ ದೇಶಿಗರನ್ನು ಸ್ಥಳೀಯ ನಾಗರೀಕರು ಮತ್ತು ಮತದಾರರೆಂದು ದಾಖಲಿಸುವ ಸಾಧ್ಯತೆಗಳಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಜನಗಣತಿ ಸಂದರ್ಭ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಸೇರಿಸಬೇಕೆಂದು ಒತ್ತಾಯಿಸಿ ಗೋಣಿಕೊಪ್ಪದಲ್ಲಿ ಸಿಎನ್ಸಿ ವತಿಯಿಂದ ನಡೆದ 12ನೇ ಮಾನವ ಸರಪಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೋಹಿಂಗ್ಯ ಹಾಗೂ ಬಾಂಗ್ಲಾ ದೇಶಿಗರನ್ನು ಸ್ಥಳೀಯರೆಂದು ಅಧಿಕೃತಗೊಳಿಸುವ ಒಳ ಸಂಚು ನಡೆದಿದ್ದು, ಕೊಡವರು ಈ ಕುರಿತು ಜಾಗೃತರಾಗಿ ಕೊಡವ ಲ್ಯಾಂಡ್ ನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು. ಟರ್ಕಿ ದೇಶದ ಕಾರ್ಮಿಕರಿಗೆ ಪ್ಯಾರಿಸ್ನಲ್ಲಿ ಗೆಸ್ಟ್ ವರ್ಕರ್ ಪರ್ಮಿಟ್ ನೀಡಿದಂತೆ ಕೊಡಗಿನಲ್ಲೂ ಕಾರ್ಮಿಕ ಸಮಸ್ಯೆಯನ್ನು ನೀಗಿಸಲು ವಲಸಿಗ ಕಾರ್ಮಿಕರಿಗೆ ಗೆಸ್ಟ್ ವರ್ಕರ್ ಪರ್ಮಿಟ್ ನೀಡಬೇಕು. ವಾರ್ಷಿಕ ಕೆಲಸ ಮುಗಿದ ನಂತರ ಅವರ ರಾಜ್ಯ ಅಥವಾ ದೇಶಕ್ಕೆ ಹಿಂದಿರುಗಬೇಕು. ಮತ್ತೆ ಬರಬೇಕಾದರೆ ವರ್ಕ್ ಪರ್ಮಿಟ್ ನವೀಕರಣಗೊಳಿಸುವ ಪದ್ಧತಿ ಜಾರಿಗೆ ತರಬೇಕು. ಆ ಮೂಲಕ ಜನಸಂಖ್ಯೆ ಪಲ್ಲಟಕ್ಕೆ ತಡೆ ಹಾಕಬೇಕು. 2015ರಲ್ಲಿ ನರೇಂದ್ರ ಮೋದಿ-ಶೇಕ್ ಅಸಿನಾ ಒಪ್ಪಂದ ಡಾಖಾದಲ್ಲಿ ನಡೆದಾಗ ಅದರ ಮೂಲ ತಿರುಳೆ ಈ ಗೆಸ್ಟ್ ವರ್ಕರ್ ಪರ್ಮಿಟ್ ಆಗಿತ್ತು. ಕೊಡಗಿನಲ್ಲಿಯೂ ಅದನ್ನು ಮುಂದುವರೆಸಬೇಕು. ಆದರೆ ದುರುಳ ರಾಜಕರಣಿಗಳು-ಮಧ್ಯವರ್ತಿಗಳು ಹಾಗೂ ಭ್ರಷ್ಟ ಅಧಿಕಾರಿಗಳ ಅಕ್ರಮ ಕೂಟಕ್ಕೆ ಓಟ್ ಬ್ಯಾಂಕ್ ಸೃಷ್ಟಿ, ಭೂಮಿ ಕಬ್ಜ ಮತ್ತು ಮರ ಹನನ ಮುಖ್ಯ ಗುರಿಯಾಗಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. ಅಕ್ರಮ ವಲಸಿಗರಿಗೆ ಆಶ್ರಯ ಕಲ್ಪಿಸುವ ಏಕೈಕ ಉದ್ದೇಶದಿಂದ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಲಾಗುತ್ತಿದ್ದು, ದೊಡ್ಡ ಜಾಲವೊಂದು ಕಾರ್ಯಾಚರಿಸುತ್ತಿದೆ. ಬಾಂಗ್ಲಾ ದೇಶಿಗರು ಹಾಗೂ ರೋಹಿಂಗ್ಯಗಳು ಕಾನೂನು ಬಾಹಿರವಾಗಿ ಕೊಡವ ಲ್ಯಾಂಡ್ ನಲ್ಲಿ ಆಶ್ರಯ ಪಡೆದು ತಮ್ಮ ಇರುವಿಕೆಯನ್ನು ಸಕ್ರಮಗೊಳಿಸಿಕೊಳ್ಳಲು ಮುಂದಾಗಿರುವುದು, ಸರಕಾರಿ ಯಂತ್ರಗಳು ಆಶ್ರಯ ನೀಡಲು ಹವಣಿಸುತ್ತಿರುವುದು ಮತ್ತು ದೊಡ್ಡ ದೊಡ್ಡ ಕಂಪೆನಿಗಳು ಬೆಂಬಲಕ್ಕೆ ನಿಂತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಿದ್ದಾಪುರದಲ್ಲಿ ಸುಮಾರು 6 ಸಾವಿರ, ಹಾಲುಗುಂದ (ಪಾಲಂದ) ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 5 ಸಾವಿರ, ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರ, ತಿತಿಮತಿ ವ್ಯಾಪ್ತಿಯಲ್ಲಿ 2 ಸಾವಿರ ಮತ್ತು ನಾಪೋಕ್ಲು ವಿಭಾಗದಲ್ಲಿ ಸುಮಾರು 9 ಸಾವಿರ ಬಾಂಗ್ಲಾ ಹಾಗೂ ರೋಹಿಂಗ್ಯ ಕುಟುಂಬಗಳು ಅಕ್ರಮವಾಗಿ ವಾಸಿಸುತ್ತಿರುವ ಕುರಿತು ಸಂಶಯವಿದೆ. ಇವರನ್ನೆಲ್ಲ ಗಿರಿಜನ ಮತ್ತು ಅಲ್ಪಸಂಖ್ಯಾತರ ರೂಪದಲ್ಲಿ ಪರಕಾಯ ಪ್ರವೇಶ ಮಾಡಿಸಿ ರೇಷನ್ ಕಾರ್ಡ್, ಪಾನ್ ಕಾರ್ಡ್, ಆಧಾರ್ ಕಾರ್ಡ್ ಮೂಲಕ ಮತದಾರರ ಪಟ್ಟಿಯಲ್ಲಿ ಸೇರಿಸಿ ಖಾಯಂ ವಿಳಾಸದಾರರನ್ನಾಗಿ ಮಾಡುವ ಸಂಚು ನಡೆದಿದೆ.
ನಕಲಿ ಆಧಾರ್ ಮತ್ತು ಐಡಿ ಕಾರ್ಡ್ ನೀಡುವ ಜಾಲ ಕಳೆದ ಎರಡು ವರ್ಷಗಳಿಂದ ಚಟುವಟಿಕೆಯಿಂದ ಇದ್ದು, ಈ ನಕಲಿ ಆಧಾರ್ ಕಾರ್ಡ್ನ್ನೇ ಬಳಸಿ ಅಕ್ರಮ ವಲಸಿಗರು ಕೊಡಗು ಮಾತ್ರವಲ್ಲದೆ ಹೊರ ಭಾಗದಲ್ಲೂ ತೋಟದ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕೊಡವ ಲ್ಯಾಂಡ್ ನ ಪ್ರತೀ ಗ್ರಾಮಗಳಲ್ಲಿ ಅವರದ್ದೇ ಆದ ಮಾರುಕಟ್ಟೆ, ಮನಿಚೈನ್, ಬಡ್ಡಿದಂಧೆ, ಗೋವು ಕಳ್ಳತನ, ಹಲ್ಲೆ, ಸುಲಿಗೆ, ಕಾಫಿ, ಕಾಳು ಮೆಣಸು ಕಳ್ಳತನ, ಕಳ್ಳಬೇಟೆ, ಅಕ್ರಮವಾಗಿ ಕಾವೇರಿ ನದಿಯಿಂದ ವಿದ್ಯುತ್ ತಂತಿ ಬಳಸಿ ಮೀನು ಹಿಡಿಯುವುದು ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ಭ್ರಷ್ಟ ರಾಜಕಾರಣಿಗಳು ಅಕ್ರಮ ವಲಸಿಗರ ಮಾಹಿತಿ ಕಲೆಹಾಕಿ ಅವರನ್ನೆಲ್ಲ ಮತದಾರರ ಪಟ್ಟಿಯಲ್ಲಿ ಸೇರಿಸಿ ನಿವೇಶನ ಮತ್ತು ವಸತಿ ನೀಡುವ ಭರವಸೆ ನೀಡುತ್ತಿದ್ದು, ಇದಕ್ಕೆ ಆಡಳಿತ ಯಂತ್ರ ಬೆಂಬಲ ನೀಡುತ್ತಿದೆ. ಜಾಗ ಮಂಜೂರು ಮಾಡಿ ಹಕ್ಕುಪತ್ರ ಕೊಡಿಸುವ ಮೂಲಕ ಮತದಾರರ ಸಂಖ್ಯಾಬಲವನ್ನು ಹೆಚ್ಚಿಸಿಕೊಂಡು ಆ ಜನಸಂಖ್ಯೆ ತೂಕದ ಆಧಾರದಲ್ಲಿ ಮುಂದಿನ ಕ್ಷೇತ್ರ ಮರು ವಿಂಗಡಣೆ ಸಂದರ್ಭ ಕೊಡಗಿಗೆ ಪ್ರತ್ಯೇಕ ಪಾರ್ಲಿಮೆಂಟ್ ಸೀಟು ಸಿಗದಂತೆ ಮಾಡುವ ಹುನ್ನಾರ ಅಡಗಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. ಕೊಡವರ ಬಾಹುಳ್ಯದ ಮೂಲ ನೆಲೆಯಾದ ಪಶ್ಚಿಮಘಟ್ಟದ ಪರ್ವತ ಶ್ರೇಣಿಯ ಸಂಕೋಲೆಗಳಾದ ಮರೆನಾಡಿನಿಂದ ಸೂರ್ಲಬ್ಬಿನಾಡ್ ವರೆಗೆ ಸೂಕ್ಷ್ಮ ಪರಿಸರ ವಲಯದ ಕುರಿತು ಹೈಕೋರ್ಟ್ ಸ್ಪಷ್ಟ ಆದೇಶವಿದ್ದರೂ ಅದನ್ನು ಗಾಳಿಗೆ ತೂರಿ ಸಾವಿರಾರು ಎಕರೆ ಪ್ರದೇಶದಲ್ಲಿ ಅಕ್ರಮ ಬಾಂಗ್ಲಾ ದೇಶಿಗರು ಹಾಗೂ ರೋಹಿಂಗ್ಯಗಳಿಗೆ ಆಶ್ರಯ ಕಲ್ಪಿಸಲು ಷಡ್ಯಂತ್ರ ನಡೆದಿದೆ ಎಂದು ಎನ್.ಯುನಾಚಪ್ಪ ಆರೋಪಿಸಿದರು. ಹಗಲು ರಾತ್ರಿ ಎನ್ನದೆ ಬಾಂಗ್ಲಾ ದೇಶಿಗರು ಹಾಗೂ ರೋಹಿಂಗ್ಯಗಳು ಬೆಂಗಳೂರು-ಮಂಗಳೂರು-ಮೈಸೂರು ಮಾರ್ಗವಾಗಿ ಕೊಡಗನ್ನು ಪ್ರವೇಶಿಸುತ್ತಿದ್ದಾರೆ. ಬಸ್ ಸೇರಿದಂತೆ ಎಲ್ಲಾ ವಾಹನಗಳನ್ನು ಚೆಕ್ ಪೋಸ್ಟ್ ನಲ್ಲಿ ತಡೆದು ಶೋಧಿಸಬೇಕು ಮತ್ತು ಮಾಹಿತಿ ಕಲೆ ಹಾಕಬೇಕು. ಈ ಜಾಲದ ಹಿಂದೆ ಯಾರಿದ್ದಾರೆ ಎಂಬುವುದರ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಕುಟುಂಬ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಕೊಡವರು ಜನಸಂಖ್ಯಾ ನಿಯಂತ್ರಣದ ಮೂಲಕ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಅಮೋಘ ಕಾಣಿಕೆಯನ್ನು ನೀಡಿದ್ದಾರೆ. ರಾಷ್ಟ್ರೀಯ ಭದ್ರತೆಗಾಗಿ ಎರಡು ಜಾಗತಿಕ ಯುದ್ಧಗಳು, ಪಾಕಿಸ್ತಾನದ ವಿರುದ್ಧ ನಾಲ್ಕು ಯುದ್ಧ, ಚೀನಾದ ವಿರುದ್ಧ 1 ಯುದ್ಧ ಮತ್ತು ವಿಶ್ವ ಸಂಸ್ಥೆಯ ಅಸಂಖ್ಯಾತ ಶಾಂತಿ ಪಡೆಗಳಲ್ಲಿ ಭಾಗಿಯಾಗಿ ಹುತಾತ್ಮರಾದ ಕಾರಣ ಕೊಡವರ ಜನಸಂಖ್ಯೆ ಕಡಿಮೆಯಾಗಿದೆ. ರಾಷ್ಟç ನಿರ್ಮಾಣ ಮತ್ತು ರಾಷ್ಟ್ರೀಯ ಭದ್ರತೆಗಾಗಿ ಜನಸಂಖ್ಯೆಯನ್ನು ಕಳೆದುಕೊಂಡ ಕೊಡವರನ್ನು ಗೌರವಾಧರಗಳಿಂದ ಕಂಡು ಅವರ ನಗಣ್ಯ ಜನಸಂಖ್ಯೆಗೆ “ಸಿಕ್ಕಿಂನ ಸಂಘ ಮತಕ್ಷೇತ್ರದ” ಮಾದರಿಯಲ್ಲಿ ವಿಶೇಷ ಪ್ರಾತಿನಿಧ್ಯವನ್ನು ಲೋಕಸಭೆ ಮತ್ತು ವಿಧಾನಸಭೆಯಲ್ಲಿ ನೀಡಬೇಕು ಎಂದು ಒತ್ತಾಯಿಸಿದರು. ಮುಕ್ಕೋಡ್ಲುವಿನ ಆದಿಮಸಂಜಾತ ವೃದ್ಧ ದಂಪತಿಗಳಾದ ಕಾಳಚಂಡ ನಾಣಿಯಪ್ಪ ಅವರ ತೋಟವನ್ನು ನಾಶ ಮಾಡಿ ಅವಮಾನಿಸಿರುವುದು ಅಮಾನವೀಯ ಕೃತ್ಯ ಮತ್ತು ಕ್ರೂರ ವ್ಯಂಗ್ಯವಾಗಿದೆ. ಮೂಲ ನಿವಾಸಿ ಕೊಡವರನ್ನು ಅವರ ಪ್ರಾಚೀನ ನೆಲೆಯಿಂದ ಪಲ್ಲಟಗೊಳಿಸಿ ಖಾಲಿಯಾದ ಆ ಪ್ರದೇಶದಲ್ಲಿ ಅಕ್ರಮ ವಲಸಿಗರಿಗೆ ಆಶ್ರಯ ನೀಡಿ ಓಟ್ ಬ್ಯಾಂಕ್ ಸೃಷ್ಟಿಸಿಕೊಳ್ಳುವ ಹುನ್ನಾರ ನಡೆದಿದೆ. ಇದು ಹೀಗೆ ಪುನರಾವರ್ತನೆಯಾದರೆ ನಾವು ಸಹಿಸಲಾರೆವು ಎಂದು ಎಚ್ಚರಿಕೆ ನೀಡಿದರು. ಸುಮಾರು 1 ಲಕ್ಷ ವಿದೇಶಿಯರು ಅಕ್ರಮವಾಗಿ ಕೊಡವ ಭೂಮಿಯಲ್ಲಿ ನೆಲೆಸಿದ್ದಾರೆ ಎನ್ನುವ ಮಾಹಿತಿ ಇದೆ. ದೊಡ್ಡ ದೊಡ್ಡ ಕಂಪೆನಿ ತೋಟಗಳು ಇದರಲ್ಲಿ ಶಾಮೀಲಾಗಿದ್ದು, ಅವರನ್ನು ಸಂಪರ್ಕಿಸಿರುವ ಆಡಳಿತಾಂಗ ಸಮೃದ್ಧ ಗ್ಯಾರಂಟಿ ಮತಬ್ಯಾಂಕ್ ನಿರ್ಮಿಸಲು ಕಾರಸ್ಥಾನ ರೂಪಿಸಿದೆ. ಇದು ಕೊಡವ ನೆಲದ ಜನಸಂಖ್ಯೆ ಪಲ್ಲಟ ಮತ್ತು ಜನಸಂಖ್ಯಾ ದುರಾಕ್ರಮಣಕ್ಕೆ ಕಾರಣವಾಗಿ ರಾಷ್ಟ್ರೀಯ ಭದ್ರತೆಗೆ ಸವಾಲಾಗಲಿದೆ. ಈ ವಿಪತ್ತಿನಿಂದ ಹೊರ ಬರಬೇಕಾದರೆ ಆದಿಮ ಸಂಜಾತ ಅಖಂಡ ದೇಶ ಪ್ರೇಮಿ ಕೊಡವರ ಹಕ್ಕು ರಕ್ಷಣೆಯಾಗಬೇಕು. ಆ ಹಕ್ಕು ರಕ್ಷಣೆಯ ಖಾತರಿಯಾಗಬೇಕಾದರೆ ಕೊಡವರ ಜನಸಂಖ್ಯಾ ಮಾಹಿತಿಯ ಅನನ್ಯತೆ, ಅದಕ್ಕೆ ಪೂರಕವಾದ “ಕೋಡ್ ಮತ್ತು ಕಲಂ” ಅನ್ನು 2026ರ ರಾಷ್ಟ್ರೀಯ ಜನಗಣತಿಯಲ್ಲಿ ಜಾತಿವಾರು ಮಾಹಿತಿ ಕಲೆ ಹಾಕುವ ಸಂದರ್ಭ ಸ್ಪಷ್ಟವಾಗಿ ದಾಖಲಿಸಲ್ಪಡಬೇಕೆಂದು ಎನ್.ಯು.ನಾಚಪ್ಪ ಹೇಳಿದರು. ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ, ಆಂತರಿಕ ಸ್ವಯಂ ನಿರ್ಣಯ ಹಕ್ಕು ಮತ್ತು ಎಸ್ಟಿ ವರ್ಗೀಕರಣವು ಸೇರಿದಂತೆ 2026ರ ರಾಷ್ಟ್ರೀಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ (ಆ್ಯನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಸೇರಿಸಬೇಕು, ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕೆನ್ನುವ ಬೇಡಿಕೆಗಳ ಕುರಿತು ಆಡಳಿತ ವ್ಯವಸ್ಥೆಯ ಗಮನ ಸೆಳೆಯಲು ವಿವಿಧಡೆ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು. ಜನಗಣತಿಯ ಸಂದರ್ಭ ಪ್ರತ್ಯೇಕ ಕಾಲಮ್ ಮತ್ತು ಕೋಡ್ ಸೇರಿಸುವುದರಿಂದ ಕೊಡವ ಸಮುದಾಯಕ್ಕೆ ಆಗಬಹುದಾದ ಲಾಭಗಳನ್ನು ಸರ್ವ ಕೊಡವರು ಅರಿತುಕೊಳ್ಳಬೇಕು. ಕೊಡವರ ಸಾಂವಿಧಾನಿಕ ಹಕ್ಕುಗಳಿಗಾಗಿ ಸಿಎನ್ಸಿ ನಡೆಸುವ ಶಾಂತಿಯುತ ಹೋರಾಟಕ್ಕೆ ಕೈಜೋಡಿಸಬೇಕೆಂದು ಎನ್.ಯು.ನಾಚಪ್ಪ ಕರೆ ನೀಡಿದರು. 2025-26 ರ ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಗಣತಿಯಲ್ಲಿ ಕೊಡವರಿಗೆ ಪ್ರತ್ಯೇಕ ಕೋಡ್ ಹಾಗೂ ಕಾಲಮ್ ವ್ಯವಸ್ಥೆ ಮಾಡಬೇಕು. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಸಂವಿಧಾನದಡಿ ಕೊಡವರನ್ನು ಎಸ್ಟಿ ಪಟ್ಟಿಯಲ್ಲಿ ಸೇರಿಸಬೇಕು. ಸಿಕ್ಕಿಂನ ಬೌದ್ಧ ಸನ್ಯಾಸಿಗಳಿಗೆ ನೀಡಿದ “ಸಂಘ” ಕ್ಷೇತ್ರದಂತೆಯೇ 2026 ರ ಮತಕ್ಷೇತ್ರ ಪುನರ್ ವಿಂಗಡಣೆ ನಿರ್ಣಯದ ಸಂದರ್ಭ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ಪ್ರತ್ಯೇಕ ವಿಶೇಷ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು. ವಿಶ್ವರಾಷ್ಟç ಸಂಸ್ಥೆಯ ಅಂತರಾಷ್ಟ್ರೀಯ ಕಾನೂನಿನಡಿ ಆದಿಮಸಂಜಾತ (ಆ್ಯನಿಮಿಸ್ಟಿಕ್) ಕೊಡವ ಸಮುದಾಯವನ್ನು ಸಂರಕ್ಷಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗುತ್ತಿದೆ ಎಂದು ತಿಳಿಸಿದರು. ಕೊಡವ ಸಮುದಾಯದ ಹಕ್ಕೊತ್ತಾಯಗಳಿಗೆ ಮತ್ತು ಜಾಗೃತಿ ಮೂಡಿಸುವುದಕ್ಕಾಗಿ ಮಾನವ ಸರಪಳಿ ಕಾರ್ಯಕ್ರಮವು ಶಾಂತಿಯುತವಾಗಿ ಕೊಡವಲ್ಯಾಂಡ್ ನಾದ್ಯಂತ ನಡೆಯುತ್ತಿದೆ. ಕೊಡವ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಸಿಎನ್ಸಿಯ ಹೋರಾಟದ ಬಲ ಮತ್ತಷ್ಟು ಹೆಚ್ಚಿದೆ ಎಂದರು.
*ಭೂಪರಿವರ್ತನೆಯಿಂದ ಅನಾಹುತ*
2018ರಲ್ಲಿ ಕೊಡವಲ್ಯಾಂಡ್ ನಲ್ಲಿ ವ್ಯಾಪಕ ಜಲಸ್ಫೋಟ ಮತ್ತು ಭೂಸ್ಫೋಟ ಸಂಭವಿಸಿ ಸಾವುನೋವು, ಕಷ್ಟನಷ್ಟಗಳು ಎದುರಾಗಿದ್ದರೂ ಇದನ್ನು ಲೆಕ್ಕಿಸದೆ ಸಿದ್ದಾಪುರದ ಭೂತಪೂರ್ವ ಬಿಬಿಟಿಸಿ ತೋಟ, ಈಗಿನ 2400 ಏಕ್ರೆ “ಎಲ್ಕಿಹಿಲ್” ಕಾಫಿ ತೋಟವನ್ನು ಪರಿಸರ ಕಾಳಾಜಿಯನ್ನು ಬಲಿಕೊಟ್ಟು ಬೃಹತ್ ವಿಲ್ಲಾ ಮತ್ತು ಟೌನ್ಶಿಪ್ ಮಾಡಲು ಆಡಳಿತಾಂಗ ಸಂಚುರೂಪಿಸಿದೆ. ಜಿಲ್ಲಾಡಳಿತ ಎಗ್ಗಿಲ್ಲದೆ ಭೂಪರಿವರ್ತನೆಗೆ ಅವಕಾಶ ನೀಡುತ್ತಿದೆ. ಹೊರಗಿನ ಬಂಡವಾಳಶಾಹಿಗಳು ಕಪ್ಪು ಹಣವನ್ನು ಬಳಸಿ ಭೂಖರೀದಿಯಲ್ಲಿ ತೊಡಗಿದ್ದಾರೆ. ದೊಡ್ಡ ದೊಡ್ಡ ರೆಸಾರ್ಟ್ಗಳು ತಲೆ ಎತ್ತುತ್ತಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತವೇ ಎದುರಾಗುವ ಸಾಧ್ಯತೆಗಳಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. ಆದಿಮಸಂಜಾತ ಕೊಡವರಿಗೆ ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯೊಂದಿಗೆ ಸ್ವಯಂ ಆಡಳಿತ ಮತ್ತು ಆಂತರಿಕ ಸ್ವಯಂನಿರ್ಣಯದ ಹಕ್ಕನ್ನು ಖಾತ್ರಿ ಪಡಿಸುವುದರಿಂದ ಈ ರೀತಿಯ ಅಕ್ರಮ ಮತ್ತು ಅನಾಹುತಗಳನ್ನು ತಡೆಯಲು ಸಾಧ್ಯವೆಂದು ಅಭಿಪ್ರಾಯಪಟ್ಟರು. ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಸೂರ್ಯ-ಚಂದ್ರ, ಭೂದೇವಿ, ಪ್ರಕೃತಿ ದೇವಿ, ಜಲದೇವಿ, ವನದೇವಿ, ಸಂವಿಧಾನ, ಗುರು ಕಾರೋಣ ಹೆಸರಿನಲ್ಲಿ ಸಿಎನ್ಸಿಯ ಕೊಡವಲ್ಯಾಂಡ್ ಹೋರಾಟದೊಂದಿಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಪ್ರತಿಜ್ಞೆ ಸ್ವೀಕರಿಸಿದರು. ರಾಷ್ಟçಗೀತೆ ಜನ-ಗಣ-ಮನದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.
*ಸೆ.18 ರಂದು ಮೂರ್ನಾಡಿನಲ್ಲಿ ಜನಜಾಗೃತಿ*
ಕೊಡವ ಲ್ಯಾಂಡ್ ಗೆ ಹಾಗೂ ಕೊಡವರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಇಲ್ಲಿಯವರೆಗೆ ಬಿರುನಾಣಿ, ಕಡಂಗ, ಟಿ.ಶೆಟ್ಟಿಗೇರಿ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ನಾಪೋಕ್ಲು, ಮಾದಾಪುರ, ಸುಂಟಿಕೊಪ್ಪ ಮತ್ತು ಸಿದ್ದಾಪುರ, ವಿರಾಜಪೇಟೆಯಲ್ಲಿ ಮಾನವ ಸರಪಳಿ ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸಿ ಜನಜಾಗೃತಿ ಮೂಡಿಸಲಾಗಿದೆ. ಸೆ.18 ರಂದು ಬೆಳಿಗ್ಗೆ 10.30 ಗಂಟೆಗೆ ಮೂರ್ನಾಡಿನಲ್ಲಿ 13ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಎನ್.ಯು.ನಾಚಪ್ಪ ಇದೇ ಸಂದರ್ಭ ತಿಳಿಸಿದರು. ಕೊಲ್ಲಿರ ಗಯಾ, ಕಾಡ್ಯಮಾಡ ಗೌತಮ್, ಡಾ ಕಾಳಿಮಾಡ ಶಿವಪ್ಪ, ಕಂಬೀರಂಡ ಬೋಪಣ್ಣ, ಚೆಪ್ಪುಡಿರ ಕಾರ್ಯಪ್ಪ, ಕೊದೇಂಗಡ ನಟೇಶ್, ಕೇಚಮಾಡ ಶರತ್, ಪಾಲೆಂಗಡ ಮನು ನಂಜಪ, ಚೊಟ್ಟೆಯಂಡಮಾಡ ಉದಯ, ಮಾಣಿರ ಪ್ರವೀಣ್, ಮಾಣಿರ ಸಂಪತ್, ಚಿರಿಯಪಂಡ ಶ್ಯಾಮ್, ಮಾಣಿಪಂಡ ನಿರತ್, ಬೊಳ್ಳಿಮಾಡ ವಸಂತ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟೀರ ಲೋಕೇಶ್, ಚಂಬಂಡ ಜನತ್, ಬೊಟ್ಟಂಗಡ ಗಿರೀಶ್, ಕಿರಿಯಮಾಡ ಶೆರಿನ್, ಅರೆಯಡ ಗಿರೀಶ್, ಬೇಪಡಿಯಂಡ ದಿನು, ಪುಳ್ಳಂಗಡ ನರೇಶ್, ಕಾಂಡೇರ ಸುರೇಶ್, ಅಪ್ಪಂಡೇರಂಡ ಸುಗಂಧ, ಪಾರ್ವಂಗಡ ನವೀನ್, ಅಪ್ಪೆಂಗಡ ಮಾಲೆ, ಬೊಳ್ತಂಡ ಪ್ರಕಾಶ್ ಚಂಗಪ್ಪ, ಅಪ್ಪಂಡೇರಂಡ ಜಾಲಿ ಪೂಣಚ್ಚ, ದೇಯಂಡ ಕಾಳಯ್ಯ, ಚಿರಿಯಪಂಡ ಪೂಣಚ್ಚ, ಪುದಿಯೊಕ್ಕಡ ಪೃಥ್ವಿ, ಕೊಣಿಯಂಡ ಸಂಜು, ಕೇಳಪಂಡ ಕಾರ್ಯಪ್ಪ, ಕಡೇಮಾಡ ಉತ್ತಪ್ಪ, ಪುಲಿಯಂಡ ಅರುಣ, ಮೂಕೋಳೇರ ಮನು ಕುಮಾರ್, ಪೊನ್ನವಲತಂಡ ಕಿರಣ್, ಎ.ಸಿ.ನಂದಾ, ಪಾರ್ವಂಗಡ ಗಿರೀಶ್, ಪಂದ್ಯಂಡ ಧರ್ಮಜ, ಮಾಚಿಮಾಡ ಸನ್ನು, ದೇಯಂಡ ಮಂಜು, ಜಮ್ಮಡ ಗಿಲ್, ಜಮ್ಮಡ ಜಗನ್, ಕಾಯಪಂಡ ಅಪ್ಪಣ್ಣ, ದೇಯಂಡ ಕೈಲಾಶ್, ಗಾನಂಗಡ ಪೆಮ್ಮಯ್ಯ, ನೂರೆರ ಅಯ್ಯಪ್ಪ, ಬೊಳ್ಳಿಮಾಡ ಸುಬ್ರಮಣಿ, ಅಣ್ಣಳಮಾಡ ಶಂಬು, ಮೀದೇರಿರ ಪೂಣಚ್ಚ, ಚಿರಿಯಪಂಡ ಪೊನ್ನಪ್ಪ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.









