
ಮಡಿಕೇರಿ ನ.8 NEWS DESK : ಪ್ರತಿಯೊಬ್ಬರ ಉತ್ತಮ ಬದುಕಿಗೆ ಭಕ್ತ ಕನಕದಾಸರ ಕೀರ್ತನೆಗಳ ಅಧ್ಯಯನ ಅಗತ್ಯ ಎಂದು ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನಕದಾಸರು ಹಲವು ಕೀರ್ತನೆ ರಚಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ, ದಾಸ ಶ್ರೇಷ್ಠರಲ್ಲಿ ಕನಕದಾಸರು ಸಂತ ಕವಿಗಳಾಗಿದ್ದು, ತಮ್ಮ ದಾಸ ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ ಎಂದು ನುಡಿದರು. ಕನಕದಾಸರು ಭಕ್ತಿ ಮಾರ್ಗದ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಕನಕದಾಸರ ಕೀರ್ತನೆಗಳು ಉಪನಿಷತ್ತು ಹಾಗೂ ಭಗವದ್ಗೀತೆಯಲ್ಲಿನ ಸಾರವನ್ನು ಒಳಗೊಂಡಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ತಿಳಿಸಿದರು. ಭಕ್ತಿ ಹಾಗೂ ಮಾನವೀಯ ನೆಲೆಯಲ್ಲಿ ಪ್ರತಿಯೊಬ್ಬರೂ ಬದುಕಬೇಕು ಎಂದು ಭಕ್ತ ಕನಕದಾಸರು ಸಾರಿದ್ದಾರೆ ಎಂದರು. ಕನಕದಾಸರ ನಳಚರಿತೆ, ಮೊಹನ ತರಂಗಿಣಿ ಹಾಗೂ ರಾಮ ಧಾನ್ಯ ಚರಿತೆ ಕೀರ್ತನೆಗಳು ಪ್ರಮುಖವಾಗಿದ್ದು, ರಾಮ ಧಾನ್ಯ ಚರಿತೆಯು ಪ್ರಪಂಚದ ಇತಿಹಾಸದಲ್ಲಿ ಆಹಾರ ಧಾನ್ಯವನ್ನು ವರ್ಣಿಸುವ ಮೂಲಕ ಬರೆದಿದ್ದಾರೆ. ಇದೊಂದು ಅದ್ಬುತವೇ ಸರಿ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ವಿವರಿಸಿದರು. ಹರಿಭಕ್ತಿಯೊಂದಿಗೆ ಸಮಾಜವನ್ನು ಸರಿದಾರಿಗೆ ತರಲು ಶ್ರಮಿಸಿದ್ದಾರೆ. ಮಾನವ ಧರ್ಮ ಶ್ರೀಮಂತವಾದುದು ಎಂದು ಹೇಳಿದರು. ಕನಕದಾಸರ ಬದುಕೇ ಎಲ್ಲರಿಗೂ ದಾರಿದೀಪ, ಆ ನಿಟ್ಟಿನಲ್ಲಿ ಕನಕದಾಸರ ಜೀವನ ಚರಿತ್ರೆ ತಿಳಿದುಕೊಳ್ಳುವಂತಾಗಬೇಕು. ಕನ್ನಡ ನಾಡಿನಲ್ಲಿ ಹುಟ್ಟಿದ ನಾವು ದಾಸರು, ಶರಣರು, ವಚನಕಾರರ ಪರಂಪರೆ ತಿಳಿಯಬೇಕು ಎಂದು ಆರ್.ಐಶ್ವರ್ಯ ನುಡಿದರು. ಸರಸ್ವತಿ ಡಿಇಡಿ ಕಾಲೇಜಿನ ಪ್ರಾಂಶುಪಾಲರಾದ ಕುಮಾರ ಅವರು ಮಾತನಾಡಿ ಕನಕದಾಸರು ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು. ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ, ಈಗಿನ ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಹುಟ್ಟಿ ಬೆಳೆದ ಕನಕದಾಸರು ದೈವ ಭಕ್ತರಾಗಿದ್ದರು ಎಂದು ತಿಳಿಸಿದರು. ಕನಕದಾಸರ ಕೀರ್ತನೆಗಳು ಸಮಾಜದಲ್ಲಿ ಬದಲಾವಣೆಗೆ ಸಹಕಾರಿಯಾಗಿದ್ದು, ಕನಕದಾಸರು ಕೀರ್ತನೆಗಳನ್ನು ಹಾಡುವ ಮೂಲಕ ಸಮಾಜದಲ್ಲಿನ ಪರಿವರ್ತನೆಗೆ ಶ್ರಮಿಸಿದ್ದಾರೆ ಎಂದು ಕುಮಾರ ಹೇಳಿದರು. ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂದು ಕನಕದಾಸರು ವಿವರಿಸಿದ್ದಾರೆ. ಅಂಬಲಿ ಹಾಗೂ ಕಂಬಳಿ ಬಗ್ಗೆ ವರ್ಣಿಸಿದ್ದಾರೆ. ಜೀವನದ ಬದುಕಿನ ಸ್ಥಾವರದ ವಿಚಾರಧಾರೆಯನ್ನು ಕನಕದಾಸರ ಕೀರ್ತನೆಗಳಲ್ಲಿ ನೀಡಿದ್ದಾರೆ ಎಂದರು.
ಕೊಡಗು ಜಿಲ್ಲಾ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ ಅವರು ಮಾತನಾಡಿ, ಕನಕದಾಸರು ದಾಸ ಶ್ರೇಷ್ಠ ಕವಿಯಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು. ಯಾರಲ್ಲಿಯೂ ಸಹ ಅಹಂ ಇರಬಾರದು, ದುರಂಕಾರ ಹಾಗೂ ದುರಾಲೋಚನೆ ಇದ್ದಲ್ಲಿ ಬದುಕು ಅಪೂರ್ಣ ಎಂದು ಕನಕದಾಸರು ಸಾರಿದ್ದಾರೆ ಎಂದರು. ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣ ವೇದಿಕೆಯ ಜಿಲ್ಲಾಧ್ಯಕ್ಷರಾದ ಡಿ.ಆರ್.ಪ್ರಭಾಕರ ಅವರು ಮಾತನಾಡಿದರು.
ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ಬಿ.ಸಿ.ಶಂಕರಯ್ಯ, ಮಣಜೂರು ಮಂಜುನಾಥ್ ಇತರರು ಇದ್ದರು.









