
ಮಡಿಕೇರಿ ಜು.24 NEWS DESK : ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಐ.ಪಿ.ಇ ಗ್ಲೋಬಲ್ ಸಂಸ್ಥೆ ಇವರ ಸಹಯೋಗದೊಂದಿಗೆ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಕೊಡಗು ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮೇಲ್ವಿಚಾರಕಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಹಾಗೂ ಗರ್ಭಿಣಿಯರ ಪೌಷ್ಟಿಕತೆ ಕುರಿತು ಒಂದು ದಿನದ ತರಬೇತಿ ಕಾರ್ಯಗಾರವು ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್ ಅವರು ಮಾತನಾಡಿ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯು ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ (ಬಾಣಂತಿಯರಿಗೆ) ಆರ್ಥಿಕ ನೆರವು ನೀಡುವ ಯೋಜನೆಯಾಗಿದ್ದು, ಇದರಲ್ಲಿ ಮೊದಲನೆಯ ಮಗು ಗಂಡು ಆಗಿರಲಿ ಅಥವಾ ಹೆಣ್ಣು ಆಗಿರಲಿ ರೂ. 5 ಸಾವಿರ, ಎರಡನೇ ಹೆಣ್ಣು ಮಗುವಿಗೆ ರೂ. 6 ಸಾವಿರ ನೀಡುತ್ತಿದ್ದು ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ನಿಮ್ಮ ಹಂತದಲ್ಲಿರುವ ಎಲ್ಲಾ ಫಲಾನುಭವಿಗಳಿಗೆ ಈ ಯೋಜನೆಯ ಬಗ್ಗೆ ಮಾಹಿತಿ ನೀಡಿ ಅರ್ಜಿಯನ್ನು ಸಲ್ಲಿಸುವಂತೆ ತಿಳಿಹೇಳಿ ಸೌಲಭ್ಯ ಒದಗಿಸಬೇಕು ಎಂದರು. ಕೊಡಗು ಜಿಲ್ಲೆ ಬೆಟ್ಟ ಗುಡ್ಡಗಳಿಂದ ಕೂಡಿದ್ದು ಆದ್ದರಿಂದ ಪಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ಗಮನಹರಿಸುವುದು ಅತ್ಯಮೂಲ್ಯವಾಗಿದೆ ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಗಳಾದ ಐ.ಪಿ.ಇ ಸಂಸ್ಥೆಯ ರಾಜ್ಯ ಕಾರ್ಯಕ್ರಮ ಅಧಿಕಾರಿಯಾದ ಮಹದೇವ್ ಅವರು ಮಾತನಾಡಿ ಮಾತೃವಂದನಾ ಯೋಜನೆಯಲ್ಲಿ ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರ ಪಾತ್ರ, ಮೇಲ್ವಿಚಾರಕಿಯವರ ಪಾತ್ರ, ಅಂಗನವಾಡಿ ಕಾರ್ಯಕರ್ತೆಯವರ ಪಾತ್ರ ಹಾಗೂ ಮಾತೃವಂದನಾ ಯೋಜನೆಯಲ್ಲಿ ಅರ್ಜಿಸಲ್ಲಿಸುವ ವಿಧಾನದ ಕುರಿತು ವಿವರಿಸಿದರು. ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಯವರಾದ ವಿಮಲ ಕೆ.ಜಿ., ಕೊಡಗು ಜಿಲ್ಲೆಯ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ರೇಣುಕಾ ಬಾಳಪ್ಪ ಹೊಸಮನಿ, ಶ್ರೀದೇವಿ ಮುದೋಳ್, ಪೂಣಚ್ಚ, ಶೀಲಾ ಹಾಗೂ ಮಾತೃವಂದನಾ ಯೋಜನೆಯ ಸಹಾಯ ಸಂಯೋಜಕರಾದ ಗಾಯಿತ್ರಿ, ಜಿಲ್ಲಾ ಮಹಿಳಾ ಸಬಲೀಕರಣ ಯೋಜನೆಯ ಸಿಬ್ಬಂದಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು. ಜೆಂಡರ್ ಸ್ಪೆಷಲೀಸ್ಟ್ ಕೇಶಿನಿ ಎಸ್.ಆರ್. ಕಾರ್ಯಕ್ರಮ ನಿರೂಪಿಸಿ, ಮಾತೃವಂದನಾ ಸಂಯೋಜಕರು ನವ್ಯ ಸ್ವಾಗತಿಸಿದರು. ಮಿಷನ್ ಶಕ್ತಿ ಜಿಲ್ಲಾ ಸಂಯೋಜಕಿ ಮಮತಾ ವಂದಿಸಿದರು.









