
ಮಡಿಕೇರಿ ನ.8 NEWS DESK : ಕೊಡಗಿನ ಆಟೋ ರಿಕ್ಷಾಗಳಿಗೆ ಜಿಲ್ಲಾ ಮಟ್ಟದ ಪರವಾನಗಿ ನೀಡಬೇಕೆಂದು ಆಟೋ ರಿಕ್ಷಾ ಚಾಲಕರ ಸಂಘ ರಾಜ್ಯ ಸರಕಾರಕ್ಕೆ ಸಲ್ಲಿಸಿರುವ ಮನವಿಗೆ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಟ್ರೇಡ್ ಯೂನಿಯನ್ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಟ್ರೇಡ್ ಯೂನಿಯನ್ನ ರಾಜ್ಯ ಸಂಘಟನಾ ಕಾರ್ಯದರ್ಶಿ ವಿನ್ಸೆಂಟ್ ಬಾಬು ಅವರು ಕೊಡಗು ಜಿಲ್ಲೆಯ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಈಗಾಗಲೆ ಅಗತ್ಯ ಬಾಡಿಗೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಂತದಲ್ಲಿ ಆಟೋ ರಿಕ್ಷಾಗಳಿಗೆ ಜಿಲ್ಲಾ ಪರವಾನಗಿ ನೀಡಿದಲ್ಲಿ ಟ್ಯಾಕ್ಸಿ ಚಾಲಕರು, ಮಾಲೀಕರ ಬದುಕು ಅತಂತ್ರವಾಗಲಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಅಗತ್ಯ ತೆರಿಗೆ ಪಾವತಿಸಿ, ನಿಯಮಾವಳಿಗಳನ್ನು ಪಾಲಿಸಿಕೊಂಡು ಬರುತ್ತಿರುವ ಎಲ್ಲೋ ಬೋರ್ಡ್ ಟ್ಯಾಕ್ಸಿಗಳಿಗೆ ಬರಬೇಕಾದ ಬಾಡಿಗೆ ಟ್ರಿಪ್ಗಳನ್ನು, ವೈಟ್ ಬೊರ್ಡ್ ಖಾಸಗಿ ವಾಹನಗಳು ಪಡೆದುಕೊಳ್ಳುತ್ತಿವೆ. ಈ ಸಮಸ್ಯೆಯ ಬಗೆಹರಿಕೆಗೆ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳಿಗೆ ಹತ್ತು ಹಲವು ಬಾರಿ ಸಂಘಟನೆಯಿಂದ ಮನವಿಗಳನ್ನು ಸಲ್ಲಿಸಲಾಗಿದ್ದರು ಸಮಸ್ಯೆ ಬಗೆಹರಿದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಈ ಎಲ್ಲಾ ಕಾರಣಗಳಿಂದ ಸರಕಾರ ರಾಜ್ಯ ವ್ಯಾಪಿ ಆಟೋ ರಿಕ್ಷಾಗಳಿಗೆ ನಿಗದಿ ಪಡಿಸಿರುವ ಪರವಾನಗಿ ಮಿತಿಯನ್ನು ಯಾವುದೇ ಕಾರಣಕ್ಕೂ ಹೆಚ್ಚಿಸಬಾರದೆಂದು ವಿನ್ಸೆಂಟ್ ಬಾಬು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಎಂ.ಪರಶುರಾಮ್, ಉಪಾಧ್ಯಕ್ಷ ಅಖಿಲ್ ಶಿವಾಜಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಎ.ರಫೀಕ್ ಹಾಗೂ ಕೋಶಾಧಿಕಾರಿ ಎ.ಸಿ.ಲೋಕೇಶ್ ಉಪಸ್ಥಿತರಿದ್ದರು.









