
ಮಡಿಕೇರಿ ಡಿ.27 NEWS DESK : ಕುಶಾಲನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಳಶೋತ್ಸವದ ಅಂಗವಾಗಿ ‘ವಾಸವಿ ಸಪ್ತಾಹ-2026’ ಜ.2 ರಿಂದ 8ರವರೆಗೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಮತ್ತು ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾದ ಬಿ.ಆರ್. ನಾಗೇಂದ್ರ ಪ್ರಸಾದ್ ಅವರು ಈ ಕುರಿತು ಮಾಹಿತಿ ನೀಡಿ, 1947ರಲ್ಲಿ ಶ್ರೀ ಮೈಲಾರ ಶೆಟ್ಟರ ಅಧ್ಯಕ್ಷತೆಯಲ್ಲಿ ಪ್ರತಿಷ್ಠಾನಪನೆಗೊಂಡ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ಕಾರ್ಯ 2014ರಲ್ಲಿ ನಡೆಯಿತು. ಪುನರ್ ಪ್ರತಿಷ್ಠಾಪನೆಗೊಂಡ ದೇವಸ್ಥಾನದಲ್ಲಿ 12 ವರ್ಷಗಳಿಗೊಮ್ಮೆ ನಡೆಯಬೇಕಾದ ಪೂಜಾ ಕಾರ್ಯಗಳು, ಕುಂಬಾಭಿಷೇಕ, ಬ್ರಹ್ಮ ಕಳಶೋತ್ಸವ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಜ.29 ರಿಂದ 2ರವರೆಗೆ ಜರುಗಲಿದೆಯೆಂದು ತಿಳಿಸಿದರು. :: ವಾಸವಿ ಸಪ್ತಾಹ :: ಬ್ರಹ್ಮ ಕಳಶೋತ್ಸವದ ಹಿನ್ನೆಲೆಯಲ್ಲಿ ‘ವಾಸವಿ ಸಪ್ತಾಹ’ವನ್ನು ಕುಶಾಲನಗರದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ. ಸಪ್ತಾಹದ ಆರಂಭಿಕ ದಿನವಾದ ಜ.2 ರಂದು ಬೆಳಿಗ್ಗೆ ‘ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ’ಕ್ಕಾಗಿ ವಾಕಥಾನ್ ಮತ್ತು ಸೈಕಥಾನ್ಗಳನ್ನು ಆಯೋಜಿಸಲಾಗಿದೆ. ಇದು ಬೆಳಗ್ಗೆ 7 ಗಂಟೆಗೆ ಹೋಟೆಲ್ ಅತಿಥಿ ಕಂಫಟ್ರ್ಸ್ ಮುಂಭಾಗದಿಂದ ಆರಂಭಗೊಳ್ಳಲಿದೆ. ಅದೇ ದಿನ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ ಹೋಟೆಲ್ ಕನ್ನಿಕಾ ಇಂಟರ್ನ್ಯಾಷನಲ್ ನ ಕನ್ನಿಕಾ ಕನ್ವೆನ್ಷನ್ ಸೆಂಟರ್ನಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 4ರವರೆಗೆ ನಡೆಯಲಿದೆಯೆಂದು ಮಾಹಿತಿ ನೀಡಿದರು. ಜ.3 ರಂದು ಆರ್ಯವೈಶ್ಯ ಮಹಿಳಾ ಮಂಡಳಿಯ ಸಹಕಾರದೊಂದಿಗೆ ಬೆಳಿಗ್ಗೆ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮ, ಮಧ್ಯಾಹ್ನ ಕೂಡಿಗೆಯ ಶಕ್ತಿ ವೃದ್ಧಾಶ್ರಮದ ಹಿರಿಯರಿಗೆ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿದೆ. ಅದೇ ದಿನ ಸಂಜೆ ಕಾವೇರಿ ಮಹಾ ಆರತಿ ಬಳಗದ ಸಹಯೋಗದೊಂದಿಗೆ ಕಾವೇರಿಗೆ 181ನೇ ಮಹಾ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭ ವಂದೇ ಮಾತರಂ ರಾಷ್ಟ್ರೀಯ ಗೀತೆಯ 150ನೇ ವರ್ಷದ ಅಂಗವಾಗಿ ಮಾತರಂ ಗೀತ ಗಾಯನ ಮತ್ತು ಭಜನೆ ನಡೆಯಲಿದೆಯೆಂದು ವಿವರಗಳನ್ನಿತ್ತರು. ಜ.4 ರಂದು ರಾಜ್ಯಮಟ್ಟದ ವಾಸವಿ ಬ್ಯಾಡ್ಮಿಂಟನ್ ಪಂದ್ಯಾವಳಿ ಕುಶಾಲನಗರದ ಜಂಪ್ ಸ್ಮ್ಯಾಶ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. :: 114 ವೃಕ್ಷಾರೋಪಣ :: ಜ.5 ರಂದು 114 ವರ್ಷಗಳ ಕಾಲ ನಮ್ಮೊಂದಿಗಿದ್ದ ಸಾಲುಮರದ ತಿಮ್ಮಕ್ಕನವರ ಸ್ಮರಣೆಯಲ್ಲಿ 114 ಗಿಡಗಳನ್ನು ನೆಡುವ ಮೂಲಕ, ‘ಲಕ್ಷ ವೃಕ್ಷ’ ಗಿಡ ನೆಡುವ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗುವುದೆಂದರು. ಜ.6 ರಂದು ವಾಸವಿ ಯುವತಿಯರ ಸಂಘದ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯೂರಿಟಿ ಮತ್ತು ಸ್ವಯಂ ರಕ್ಷಣೆ ಜಾಗೃತಿ ಮೂಡಿಸುವ ಶಿಬಿರ ಕುಶಾಲನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಸರ್ಕಾರಿ ಪಪೂ ಕಾಲೇಜಿನಲ್ಲಿ ನಡೆಯಲಿದೆಯೆಂದು ಮಾಹಿತಿ ನೀಡಿದರು. ಜ.7 ರಂದು ವಾಸವಿ ಕ್ಲಬ್ನ ಸಹಯೋಗದೊಂದಿಗೆ ಯುವ ಸಮೂಹಕ್ಕೆ ಉಪಯುಕ್ತವಾದ ಎಂಎಸ್ಎಂಇ ಕಾರ್ಯಾಗಾರ ನಗರದ ಪಾಳ್ಯಂ ಎಮರಾಲ್ಡ್ನಲ್ಲಿ ಹಮ್ಮಿಕೊಳ್ಳಲಾಗಿದೆ.ಜ.8 ರಂದು ಸದೃಢ ಭಾರತಕ್ಕಾಗಿ ವಿದ್ಯಾರ್ಥಿಗಳ ಪಾತ್ರ ವಿಷಯದ ಬಗ್ಗೆ ಭಾಷಣ ಸ್ಪರ್ಧೆ ಮತ್ತು ಹಳ್ಳಿ ಜೀವನ ವಿಷಯದ ಬಗ್ಗೆ ಚಿತ್ರಕಲಾ ಸ್ಪರ್ಧೆಯನ್ನು ಆಯ್ದ ಶಾಲಾ ವಿದ್ಯಾರ್ಥಿಗಳಿಗೆ ಪಾಳ್ಯಂ ಎಮರಾಲ್ಡ್ನಲ್ಲಿ ಹಮ್ಮಿಕೊಳ್ಳಲಾಗಿದೆಯೆಂದರು. ಗೋಷ್ಠಿಯಲ್ಲಿ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಟ್ರಸ್ಟ್ ಮತ್ತು ಆರ್ಯವೈಶ್ಯ ಮಂಡಳಿಯ ಕಾರ್ಯದರ್ಶಿ ಕೆ.ಪ್ರವೀಣ್, ಖಜಾಂಚಿ ಪಿ. ಎಸ್.ಪ್ರಶಾಂತ್, ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಬಿ.ಅಮೃತ್ ರಾಜ್, ವಾಸವಿ ಸಪ್ತಾಹ ಕಾರ್ಯಕ್ರಮದ ಯೋಜನಾ ನಿರ್ದೇಶಕರಾದ ಎ.ಎಸ್.ಕುಮಾರ್ ಉಪಸ್ಥಿತರಿದ್ದರು.









