
ಮಡಿಕೇರಿ ಜ.3 NEWS DESK : ಆರ್ಬಿಎಸ್ಕೆ ತಂಡದಿಂದ ನಗರದ ಪುಟಾಣಿನಗರ ಅಂಗನವಾಡಿ ಕೇಂದ್ರದಲ್ಲಿ ಅನೀಮಿಯ ಹಾಗೂ ಆರೋಗ್ಯ ತಪಾಸಣೆ ನಡೆಯಿತು. ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅನಿಮಿಯ ತಪಾಸಣೆ ಕುರಿತು ಪೋಷಕರಿಗೆ ಮಾಹಿತಿ ನೀಡಿದರು. ಜನವರಿ 2026 ರಿಂದ ವರ್ಷದಲ್ಲಿ ಎರಡು ಬಾರಿ ಅಂಗನವಾಡಿ ಕೇಂದ್ರದ ವ್ಯಾಪ್ತಿಗೆ ಒಳಪಡುವ ಆರು ತಿಂಗಳಿಂದ 5 ವರ್ಷದವರೆಗಿನ ಮಕ್ಕಳಿಗೆ ಅನಿಮಿಯ ತಪಾಸಣೆಯನ್ನು ಮಾಡಿ ರಕ್ತಹೀನತೆ ತಡೆಗಟ್ಟುವ ಪ್ರಯತ್ನವನ್ನು ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರದೊಂದಿಗೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. ಐವತ್ತೊಂಭತ್ತು ತಿಂಗಳ ವಯಸ್ಸಿನ ಮಕ್ಕಳಲ್ಲಿ ಹಿಮೋಗ್ಲೋಬಿನ್ ಸಾಂದ್ರತೆ ಕಡಿಮೆ ಇದ್ದರೆ ರಕ್ತಹೀನತೆ ಎಂದು ಪರಿಗಣಿ ಈ ಬಗ್ಗೆ ಪೋಷಕರಿಗೆ ಸಭೆಯ ಮೂಲಕ ತಿಳುವಳಿಕೆ ಮೂಡಿಸಿ, ನಂತರ ಮಗುವಿನ ಆಹಾರ ಪದ್ಧತಿ ಮಾಹಿತಿ ಪಡೆದು ಸ್ಕ್ರೀನಿಂಗ್ ಮಾಡಲಾಗುವುದು ಎಂದು ಹೇಳಿದರು. ರಕ್ತಹೀನತೆಗೆ ಒಳಗಾಗಿದ್ದ ಮಕ್ಕಳ ಚಿಕಿತ್ಸೆ, 6-12 ತಿಂಗಳ ಮಕ್ಕಳಿಗೆ ಪ್ರತಿದಿನ 1 ಎಂಎಲ್ ಐರನ್ ಸಿರಪ್, 1-3 ವರ್ಷದ ಮಕ್ಕಳಿಗೆ ಪ್ರತಿದಿನ 1.5 ಎಂಎಲ್, 3-5 ವರ್ಷದ ಮಕ್ಕಳಿಗೆ ಪ್ರತಿದಿನ 2 ಎಂಎಲ್, ಎರಡು ತಿಂಗಳ ಅವಧಿಗೆ ಪ್ರತಿ 14 ದಿನಗಳಿಗೊಮ್ಮೆ ಐ ಎಫ್ ಎ ಸಿರಪ್ ನ ಅನುಸರಣೆಗಾಗಿ ಆಶಾ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದರು. ಹಿಮೋಗ್ಲೋಬಿನ್ ಸಾಮಾನ್ಯ ಮಟ್ಟಕ್ಕೆ ಸುಧಾರಿಸಿದರೆ ಚಿಕಿತ್ಸೆ ನಿಲ್ಲಿಸಲಾಗುವುದು. ಆದರೆ ರೋಗನಿರೋಧಕ ಐಎಫ್ಎ ಡೋಸ್ಗಳು ಮುಂದುವರಿಸಲಾಗುವುದು (ವಾರಕ್ಕೊಮ್ಮೆ), ಎರಡು ತಿಂಗಳಲ್ಲಿ ರಕ್ತಹೀನತೆ ಚಿಕಿತ್ಸೆಗೆ ಮಗು ಪ್ರತಿಕ್ರಿಸದಿದ್ದಲ್ಲಿ ಹೆಚ್ಚಿನ ತಪಾಸಣೆಗಾಗಿ ಶಿಶುವೈದ್ಯರ ಬಳಿಗೆ ಜಿಲ್ಲಾಸ್ಪತ್ರೆಗೆ ರೆಫರ್ ಮಾಡಲಾಗುವುದು ಎಂದು ಹೇಳಿದರು. ಮಕ್ಕಳಲ್ಲಿ ಪೋಷಕಾಂಶದ ಕೊರತೆ, ಜಂತುಹುಳು ಭಾದೆ, ಸ್ವಚ್ಛತೆಗೆ ಗಮನ ಹರಿಸದೆ ಇರುವುದರಿಂದ ರಕ್ತಹೀನತೆ ಉಂಟಾಗುತ್ತದೆ. ಸುಸ್ತು, ತಲೆ ಸುತ್ತುವಿಕೆ, ಕೈ ಕಾಲು ಸೆಳೆಯುವಿಕೆ, ಏಕಾಗ್ರತೆಯ ಕೊರತೆ, ಹಸಿವಾಗದೆ ಇರುವುದು ಇವೆಲ್ಲ ತೊಂದರೆಗಳಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ತಿಳಿಸಿದರು. ಪೋಷಕರ ಒಪ್ಪಿಗೆ ಪಡೆದು 35 ಮಕ್ಕಳ ಅನಿಮಿಯಾ ತಪಾಸಣೆಯನ್ನು ವೈದ್ಯಾಧಿಕಾರಿ ಶೈಮಾ, ಆರೋಗ್ಯ ಕಾರ್ಯಕರ್ತರಾದ ಮಮತಾ ನೆರವೇರಿಸಿದರು. ಮಕ್ಕಳನ್ನು ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮತ್ತು ಅನಿಮಿಯ ತಪಾಸಣೆಗೆ ಒಳಪಡಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆ ಉಮಾವತಿ ಮತ್ತು ಸಹಾಯಕಿ ದೈವಣಿ ರವರು ಶ್ರಮಿಸಿದ್ದು ಅಧಿಕಾರಿಯವರಿಂದ ಪ್ರಶಂಸೆಗೆ ಒಳಪಟ್ಟರು.









