
ಸುಂಟಿಕೊಪ್ಪ ಜು.8 NEWS DESK : ಮೈಸೂರು ವಿಶ್ವ ವಿದ್ಯಾನಿಲಯದ 106ನೇ ಘಟಿಕೋತ್ಸವದಲ್ಲಿ ಕೊಡಗಿನ ವಿದ್ಯಾರ್ಥಿನಿ ಬಿ.ಪಿ.ಕೃತಿಕಾ ಸ್ನಾತಕೋತ್ತರ ಪದವಿಯನ್ನು ಮೊದಲ ರ್ಯಾಂಕ್ ನೊಂದಿಗೆ ಪಡೆದಿದ್ದು, 5 ಚಿನ್ನದ ಪದಕಗಳು ಮತ್ತು ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ. ಮೂಲತಃ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ ಗ್ರಾಮ ನಿವಾಸಿ ನಿವೃತ್ತ ಎ.ಎಸ್.ಐ ಪಾರ್ಥ ಮತ್ತು ನಿವೃತ್ತ ಮುಖ್ಯೋಪಾದ್ಯಾಯನಿ ಗೀತಾ ಪಾರ್ಥ ಅವರ ಪುತ್ರಿ. ಪ್ರಸ್ತುತ ಪೊನ್ನಂಪೇಟೆ ನಿವಾಸಿ ಲವೀನ್ ಬಿದ್ದಪ್ಪ ಅವರ ಪತ್ನಿಯಾಗಿರುವ ಕೃತಿಕಾ ತಮ್ಮ ಎಂ.ಎಡ್ ಪದವಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥವರ್ಚಂದ್ ಗೇಹ್ಲೋಟ್ ಅವರಿಂದ ಪ್ರಮಾಣ ಪತ್ರ ಮತ್ತು ಪ್ರಶಸ್ತಿ ಸ್ವೀಕರಿಸಿದರು. ಈ ಕುರಿತು ಪ್ರತಿಕ್ರಿಯಿಸಿರುವ ಕೃತಿಕಾ, ನನ್ನ ಸಾಧನೆಗೆ ಹೆತ್ತವರು ಮತ್ತು ಪತಿ ಸಹಕಾರ ಮಾರ್ಗದರ್ಶನ ಅವಿಸ್ಮರಣೀಯ. ಪ್ರಯತ್ನ, ಅವಿರತ ಶ್ರಮಕ್ಕೆ ಫಲ ಸಿಕ್ಕಿದ ತೃಪ್ತಿ ಇದೆ ಎಂದು ಅವರು ಹೇಳಿದರು. ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂಸಿ.ಸುಧಾಕರ್, ಮೈಸೂರು ವಿವಿಕುಲಪತಿ ಎನ್.ಕೆ.ಲೋಕನಾಥ್, ಇಸ್ರೋ ವಿಶ್ರಾಂತ ಅಧ್ಯಕ್ಷ ಡಾ.ಎಸ್.ಸೋಮನಾಥ್ ಮೊದಲಾದವರ ಉಪಸ್ಥಿತಿಯಲ್ಲಿ ಪದವಿ ಪ್ರಮಾಣಪತ್ರ ಮತ್ತು ಪ್ರಶಸ್ತಿಗಳನ್ನು ಸ್ವೀಕರಿಸಿದ್ದು ಜೀವನದ ಶ್ರೇಷ್ಠ ಕ್ಷಣಗಳಲ್ಲಿ ಒಂದು ಎಂದು ಕೃತಿಕಾ ಹೇಳಿದರು. ಪ್ರಸ್ತುತ ಮೈಸೂರಿನ ಸಂತ ಜೋಸೆಫರ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಗಳ ಸಾಧನೆಯ ಬಗ್ಗೆ ಪೋಷಕರು ಹರ್ಷ ಮತ್ತು ಹೆಮ್ಮೆ ವ್ಯಕ್ತಪಡಿಸಿದ್ದು, ಪ್ರತಿನಿತ್ಯ ಅವರು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿದ್ದು, ದೇವರ ಕೃಪೆ ಗುರುಹಿರಿಯರ ಆರ್ಶಿವಾದ ಕಾರಣ ಎಂದು ಹೇಳಿದರು.









