
(*ಬರಹ : ಡಾ|| ಕೆ. ಬಿ.ಸೂರ್ಯ ಕುಮಾರ್ …* *ಭಾರತೀಯ ಸೇನೆಯ ಧ್ರುವತಾರೆ ಜನರಲ್ ಕೆ. ಎಸ್.ತಿಮ್ಮಯ್ಯ*) ಭಾರತೀಯ ಸೇನಾ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದ ಹೆಸರು ಜನರಲ್ ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ . ಕೇವಲ ಒಬ್ಬ ಸೈನ್ಯಾಧಿಕಾರಿಯಾಗಿ ಮಾತ್ರವಲ್ಲದೆ, ವಿಶ್ವಮಟ್ಟದಲ್ಲಿ ಭಾರತದ ಗೌರವವನ್ನು ಎತ್ತಿಹಿಡಿದ ಮುತ್ಸದ್ದಿ ನಾಯಕರಾಗಿ ಅವರು ಚಿರಪರಿಚಿತರು. ಸೈನಿಕರ ಪಾಲಿಗೆ ‘ಟಿಮ್ಮಿ’ ಎಂದೇ ಖ್ಯಾತರಾಗಿದ್ದ ಅವರ ಜೀವನ ಶೌರ್ಯ, ನಾಯಕತ್ವ ಮತ್ತು ಅಚಲ ದೇಶಭಕ್ತಿಯ ಸಂಗಮ. 1906ರ ಮಾರ್ಚ್ 31ರಂದು ಕರ್ನಾಟಕದ ವೀರಭೂಮಿ ಕೊಡಗಿನ ಮಡಿಕೇರಿಯಲ್ಲಿ ತಿಮ್ಮಯ್ಯನವರು ಜನಿಸಿದರು. ಕೊಡಗಿನ ರಕ್ತದಲ್ಲೇ ಬೆರೆತು ಬಂದಿರುವ ಯೋಧ ಪರಂಪರೆ ಅವರಲ್ಲೂ ಬಾಲ್ಯದಿಂದಲೇ ಮನೆಮಾಡಿತ್ತು. ದೆಹಲಿಯ ಪ್ರಿನ್ಸ್ ಆಫ್ ವೇಲ್ಸ್ ರಾಯಲ್ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ ಪ್ರಾಥಮಿಕ ಸೈನಿಕ ಶಿಕ್ಷಣ ಪಡೆದರು. ಅಂದಿನ ಕಾಲದಲ್ಲಿ ಅತ್ಯಂತ ಪ್ರತಿಷ್ಠಿತವಾಗಿದ್ದ ಇಂಗ್ಲೆಂಡಿನ ರಾಯಲ್ ಮಿಲಿಟರಿ ಅಕಾಡೆಮಿ ಸ್ಯಾಂಡ್ಹರ್ಸ್ಟ್ನಲ್ಲಿ ತರಬೇತಿ ಪಡೆದ ಅತಿವಿರಳ ಭಾರತೀಯರಲ್ಲಿ ಇವರೂ ಒಬ್ಬರು. ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ವೃತ್ತಿಜೀವನ ಆರಂಭಿಸಿದ ತಿಮ್ಮಯ್ಯನವರು, ತಮ್ಮ ಅಪ್ರತಿಮ ಸಾಹಸದಿಂದ ಶೀಘ್ರವಾಗಿ ಗಮನ ಸೆಳೆದರು. ಎರಡನೇ ವಿಶ್ವ ಮಹಾಯುದ್ಧದ ಬರ್ಮಾ (ಮ್ಯಾನ್ಮಾರ್) ರಣರಂಗದಲ್ಲಿ ಜಪಾನ್ ಸೇನೆಯ ವಿರುದ್ಧ ಅವರು ತೋರಿದ ರಣತಂತ್ರ ಮತ್ತು ಧೈರ್ಯಕ್ಕೆ ಬ್ರಿಟಿಷ್ ಸರ್ಕಾರವು ಅವರಿಗೆ ‘ಡಿಸ್ಟಿಂಗ್ವಿಶ್ಡ್ ಸರ್ವಿಸ್ ಆರ್ಡರ್’ (DSO) ನೀಡಿ ಗೌರವಿಸಿತು. ಜನರಲ್ ಕೆ.ಎಂ. ತಿಮ್ಮಯ್ಯ ಅವರ ಸೈನಿಕ ಜೀವನವು ಅನೇಕ ರೋಚಕ ಸಾಹಸಗಳಿಂದ ಕೂಡಿದೆ. ಅದರಲ್ಲಿ ವಿಶ್ವದ ಮಿಲಿಟರಿ ಇತಿಹಾಸದಲ್ಲೇ ಅಚ್ಚರಿ ಮೂಡಿಸಿದ್ದು 1948ರ ಕಾಶ್ಮೀರ ಯುದ್ಧದ ಸಮಯದಲ್ಲಿ ನಡೆದ ‘ಆಪರೇಷನ್ ಬೈಸನ್’ (Operation Bison). 1948ರಲ್ಲಿ ಪಾಕಿಸ್ತಾನದ ಪಡೆಗಳು ಲಡಾಖ್ ಅನ್ನು ವಶಪಡಿಸಿಕೊಳ್ಳಲು ಸಂಚು ರೂಪಿಸಿದ್ದವು. ಆ ಸಮಯದಲ್ಲಿ ಸಮುದ್ರ ಮಟ್ಟದಿಂದ ಸುಮಾರು 11,575 ಅಡಿ ಎತ್ತರದಲ್ಲಿರುವ ‘ಜೋಜಿಲಾ ಪಾಸ್’ ಅನ್ನು ಶತ್ರುಗಳು ಆಕ್ರಮಿಸಿಕೊಂಡಿದ್ದರು. ಈ ಘಾಟಿಯು ಶ್ರೀನಗರದಿಂದ ಲಡಾಖ್ಗೆ ಸಂಪರ್ಕ ಕಲ್ಪಿಸುವ ಏಕೈಕ ದಾರಿ. ಶತ್ರುಗಳು ಗುಡ್ಡಗಳ ಮೇಲೆ ಕುಳಿತು ಕೆಳಗಿನಿಂದ ಬರುವ ಭಾರತೀಯ ಸೈನಿಕರ ಮೇಲೆ ಸುಲಭವಾಗಿ ದಾಳಿ ನಡೆಸುತ್ತಿದ್ದರು. ಅಂದಿನ ಸೇನಾ ತಜ್ಞರ ಪ್ರಕಾರ, ಅಷ್ಟು ಎತ್ತರದ, ಕಿರಿದಾದ ಮತ್ತು ಮಂಜಿನಿಂದ ಆವೃತವಾದ ಬೆಟ್ಟದ ಹಾದಿಯಲ್ಲಿ ಭಾರತದ ಟ್ಯಾಂಕ್ಗಳನ್ನು ಕೊಂಡೊಯ್ಯುವುದು ಅಸಾಧ್ಯವಾಗಿತ್ತು. ಆದರೆ ಮೇಜರ್ ಜನರಲ್ ತಿಮ್ಮಯ್ಯ (ಅಂದು ಆ ಹುದ್ದೆಯಲ್ಲಿದ್ದರು) ಅವರು ಒಂದು ಸಾಹಸಮಯ ನಿರ್ಧಾರ ತೆಗೆದುಕೊಂಡರು. ತಿಮ್ಮಯ್ಯನವರು ‘ಸ್ಟುವರ್ಟ್ ಲೈಟ್ ಟ್ಯಾಂಕ್’ಗಳನ್ನು (Stuart Light Tanks) ಅಲ್ಲಿಗೆ ತರಿಸಲು ನಿರ್ಧರಿಸಿದರು. ಆದರೆ ಶತ್ರುಗಳಿಗೆ ಇದು ತಿಳಿಯಬಾರದೆಂದು ಟ್ಯಾಂಕ್ಗಳ ಮೇಲ್ಭಾಗವನ್ನು ಬಿಚ್ಚಿ , ಅವುಗಳನ್ನು ಟ್ರಕ್ಗಳಲ್ಲಿ ಹೇರಿ ರಾತ್ರೋರಾತ್ರಿ ಜಮ್ಮುವಿನಿಂದ ಶ್ರೀನಗರಕ್ಕೆ ತರುವಂತೆ ಮಾಡಿದರು. ಅಲ್ಲಿ ಟ್ಯಾಂಕ್ಗಳನ್ನು ಮತ್ತೆ ಜೋಡಿಸಿ, ಅವುಗಳ ಗುರುತು ಸಿಗದಂತೆ ತಗಡಿನ ಶೀಟ್ ಮತ್ತು ಮರಳು ಮೂಟೆಗಳಿಂದ ಮುಚ್ಚಲಾಯಿತು. ಶತ್ರುಗಳು ಅವುಗಳನ್ನು ಸಾಧಾರಣ ಟ್ರಕ್ಗಳೆಂದು ಭಾವಿಸಿದರು. ನವೆಂಬರ್ 1, 1948: ಭಾರೀ ಹಿಮಪಾತದ ನಡುವೆಯೂ ತಿಮ್ಮಯ್ಯನವರು ಸ್ವತಃ ಮುಂಚೂಣಿಯಲ್ಲಿ ನಿಂತು ಈ ಕಾರ್ಯಾಚರಣೆಯನ್ನು ಮುನ್ನಡೆಸಿದರು. ಹಿಮದ ಗುಡ್ಡಗಳ ಮೇಲೆ ಟ್ಯಾಂಕ್ಗಳು ಘರ್ಜಿಸುತ್ತಾ ಏರುವುದನ್ನು ಕಂಡು ಪಾಕಿಸ್ತಾನಿ ಸೈನಿಕರು ದಿಗಿಲುಬಿದ್ದರು. “ಬೆಟ್ಟದ ಮೇಲೆ ಟ್ಯಾಂಕ್ಗಳು ಬರಲು ಸಾಧ್ಯವೇ ಇಲ್ಲ, ಇವುಗಳು ಯಾವುದೋ ದೆವ್ವಗಳು ” ಎಂದು ಭಾವಿಸಿ ಶತ್ರು ಸೈನಿಕರು ಹೆದರಿ ಓಡಿಹೋದರು! ಈ ಸಾಹಸದ ಫಲಿತಾಂಶವಾಗಿ ಕೇವಲ ಕೆಲವೇ ಗಂಟೆಗಳಲ್ಲಿ ಭಾರತೀಯ ಸೇನೆಯು ಜೋಜಿಲಾ ಪಾಸ್ ಅನ್ನು ಮರಳಿ ಪಡೆಯಿತು. ಈ ವಿಜಯದಿಂದಾಗಿ ಲಡಾಖ್ ಭಾರತದ ಅವಿಭಾಜ್ಯ ಅಂಗವಾಗಿ ಉಳಿಯಲು ಸಾಧ್ಯವಾಯಿತು. ಪ್ರಪಂಚದ ಮಿಲಿಟರಿ ಇತಿಹಾಸದಲ್ಲಿ ಇಷ್ಟು ಎತ್ತರದ ಪ್ರದೇಶದಲ್ಲಿ ಟ್ಯಾಂಕ್ಗಳನ್ನು ಬಳಸಿದ್ದು ಅದೇ ಮೊದಲು. ನಂತರ 1950ರ ದಶಕದಲ್ಲಿ ಉತ್ತರ ಮತ್ತು ದಕ್ಷಿಣ ಕೊರಿಯಾ ನಡುವೆ ಯುದ್ಧ ನಡೆದಾಗ, ಸಾವಿರಾರು ಯುದ್ಧ ಕೈದಿಗಳ ಹಸ್ತಾಂತರದ ಜವಾಬ್ದಾರಿಯನ್ನು ವಿಶ್ವಸಂಸ್ಥೆ ತಿಮ್ಮಯ್ಯನವರಿಗೆ ನೀಡಿತ್ತು. ಒಮ್ಮೆ ಅನೇಕ ಚೀನಾ ಮತ್ತು ಉತ್ತರ ಕೊರಿಯಾ ಕೈದಿಗಳು ಹಿಂಸಾತ್ಮಕವಾಗಿ ನಡೆದುಕೊಂಡಾಗ, ತಿಮ್ಮಯ್ಯನವರು ಯಾವುದೇ ಶಸ್ತ್ರಾಸ್ತ್ರವಿಲ್ಲದೆ, ಕೇವಲ ತಮ್ಮ ಆತ್ಮವಿಶ್ವಾಸದ ನಡಿಗೆಯಿಂದ ಅವರ ಬಳಿ ಹೋಗಿ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದರು. ಅವರ ಈ ಧೈರ್ಯ ಕಂಡು ವಿಶ್ವದ ನಾಯಕರು ಬೆರಗಾಗಿದ್ದರು. ಇದಕ್ಕಾಗಿ ಅವರಿಗೆ ಪ್ರತಿಷ್ಠಿತ “ಪದ್ಮ ಭೂಷಣ” ಪ್ರಶಸ್ತಿ ನೀಡಲಾಯಿತು. ಅವರು 1957ರಲ್ಲಿ ಭಾರತೀಯ ಸೇನೆಯ 6ನೇ ಮುಖ್ಯಸ್ಥರಾಗಿ (Chief of Army Staff) ಅಧಿಕಾರ ವಹಿಸಿಕೊಂಡಡು, ಭಾರತೀಯ ಸೇನೆಯನ್ನು ಕೇವಲ ಕಾಲಾಳು ಪಡೆಯಾಗಿರಿಸದೆ, ಆಧುನಿಕ ತಂತ್ರಜ್ಞಾನ ಮತ್ತು ಶಿಸ್ತಿನಿಂದ ಕೂಡಿದ ಬಲಿಷ್ಠ ಪಡೆಯನ್ನಾಗಿ ರೂಪಿಸಿದರು. ಅಂದಿನ ರಕ್ಷಣಾ ಸಚಿವ ಕೃಷ್ಣ ಮೆನನ್ ಅವರೊಂದಿಗೆ ಸೇನಾ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಮೂಡಿದಾಗ, ಅವರು ತಮ್ಮ ವೃತ್ತಿಪರತೆಗೆ ಕಟ್ಟುಬಿದ್ದರು. “ರಾಜಕೀಯಕ್ಕಿಂತ ದೇಶದ ಭದ್ರತೆ ಮುಖ್ಯ” ಎಂಬುದು ಅವರ ಅಚಲ ನಂಬಿಕೆಯಾಗಿತ್ತು. ಕಾಶ್ಮೀರದ ವಿಚಾರದಲ್ಲಿ ಅವರಿಗೆ ಸಂಪೂರ್ಣ ಸ್ವತಂತ್ರ ನೀಡಿದ್ದರೆ ಇಂದಿನ ಅನೇಕ ಭೌಗೋಳಿಕ ಸಮಸ್ಯೆಗಳು ಇರುತ್ತಿರಲಿಲ್ಲ ಎಂಬುದು ಇಂದಿಗೂ ಅನೇಕ ರಕ್ಷಣಾ ತಜ್ಞರ ಅಭಿಮತ. ಜನರಲ್ ತಿಮ್ಮಯ್ಯ ಕೇವಲ ಭಾರತಕ್ಕೆ ಸೀಮಿತವಾಗಲಿಲ್ಲ. ವಿಶ್ವಸಂಸ್ಥೆಯು ಸಂಕಷ್ಟದ ಸಮಯದಲ್ಲಿ ಅವರನ್ನು ನೆನಪಿಸಿಕೊಳ್ಳುತ್ತಿತ್ತು. ಸೈಪ್ರಸ್ನಲ್ಲಿ ಉಂಟಾಗಿದ್ದ ಅಂತರ್ಯುದ್ಧವನ್ನು ಹತ್ತಿಕ್ಕಲು ವಿಶ್ವಸಂಸ್ಥೆಯ ಶಾಂತಿ ಸೇನೆಯ ಕಮಾಂಡರ್ ಆಗಿ ಅವರು ನೀಡಿದ ಸೇವೆ ಸ್ಮರಣೀಯ. 1965ರಲ್ಲಿ ಸೈಪ್ರಸ್ನಲ್ಲಿ ಸೇವೆಯಲ್ಲಿದ್ದಾಗಲೇ ಹೃದಯಾಘಾತದಿಂದ ಅವರು ನಿಧನರಾದರು. ಸೈಪ್ರಸ್ ದೇಶವು ಅವರ ಗೌರವಾರ್ಥವಾಗಿ ಅಂಚೆ ಚೀಟಿ ಬಿಡುಗಡೆ ಮಾಡಿ, ರಸ್ತೆಯೊಂದಕ್ಕೆ ಅವರ ಹೆಸರಿಟ್ಟಿದೆ ಎನ್ನುವುದು ಪ್ರತಿಯೊಬ್ಬ ಕನ್ನಡಿಗನಿಗೆ ಹೆಮ್ಮೆಯ ವಿಷಯ. ಜನರಲ್ ಕೆ.ಎಂ. ತಿಮ್ಮಯ್ಯ ಅವರು ಕೇವಲ ಒಬ್ಬ ಸೈನ್ಯಾಧಿಕಾರಿ ಮಾತ್ರವಾಗಿರಲಿಲ್ಲ; ಅವರು ಭಾರತೀಯ ಸೇನೆಯ ನೈತಿಕ ಸ್ಥೈರ್ಯದ ಸಂಕೇತವಾಗಿದ್ದರು. ಅವರ ನಿಸ್ವಾರ್ಥ ಸೇವೆ ಮತ್ತು ಸಾಹಸದ ಕಥೆಗಳು ಇಂದಿನ ಯುವ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆ. ಮಡಿಕೇರಿಯಲ್ಲಿರುವ ಅವರು ಹುಟ್ಟಿ ಬೆಳೆದ ಮನೆ ” ಸನ್ನಿ ಸೈಡ್” ಈಗ ಒಂದು ವಸ್ತು ಸಂಗ್ರಹಾಲಯವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.








