
ಮಡಿಕೇರಿ NEWS DESK ಜೂ.17 : ಪ್ರಗತಿಪರ ಸಂಘಟನೆಯ ಹೆಸರಿನಲ್ಲಿ ವಿವಿಧ ಸಂಘ-ಸAಸ್ಥೆಗಳು ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಯನ್ನು ವಿರೋಧಿಸುತ್ತಿರುವುದು ಹಾಸ್ಯಾಸ್ಪದ ಮತ್ತು ದೇಶದ ಕಾನೂನಿಗೆ ತೋರುವ ಅಗೌರವವಾಗಿದೆ ಎಂದು ಬಿಜೆಪಿ ಎಸ್.ಸಿ ಮೋರ್ಚಾದ ಕೊಡಗು ಜಿಲ್ಲಾಧ್ಯಕ್ಷ ಪಿ.ಎಂ.ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಎಸ್ಐಆರ್ ನ ಅವಶ್ಯಕತೆ ಇದೆ. ಇದರ ಗಂಭೀರತೆಯನ್ನು ಅರಿಯದೆ ವಿನಾಕಾರಣ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುವುದರಿಂದ ಅಕ್ರಮ ಮತದಾನ ಮಾಡುವವರಿಗೆ ಪ್ರೇರಣೆ ನೀಡಿದಂತ್ತಾಗುತ್ತದೆ. ಈ ರೀತಿಯ ಪ್ರತಿಭಟನೆಗಳು ನೈಜ ಮತದಾರರ ಹಾದಿ ತಪ್ಪಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಎರಡು ದಶಕದ ನಂತರ ನಮ್ಮ ರಾಜ್ಯದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಯನ್ನು ಚುನಾವಣಾ ಆಯೋಗ ನಡೆಸುತ್ತಿದೆ. ಇದಕ್ಕೆ ರಾಜ್ಯದ ಮತ್ತು ಜಿಲ್ಲೆಯ ಜನತೆ ಸಹಕಾರ ನೀಡಬೇಕೆ ಹೊರತು ಇಲ್ಲಸಲ್ಲದ ಹೇಳಿಕೆ ನೀಡಿ ಈ ಪ್ರಕ್ರಿಯೆಗೆ ತೊಡಕುಂಟು ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಎಸ್ಐಆರ್ ಮತದಾರರ ಪಟ್ಟಿಯ ನಿಖರ, ಸಂಪೂರ್ಣ ಮಾಹಿತಿ ಮತ್ತು ನವೀಕೃತಗೊಳಿಸುವ ಸಲುವಾಗಿ ಭಾರತೀಯ ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ಅಭಿಯಾನವಾಗಿದೆ. ಬಿಹಾರ, ಪಶ್ಚಿಮ ಬಂಗಾಳ, ಪುದುಚೇರಿ ಮತ್ತು ಕೇರಳ ರಾಜ್ಯಗಳಲ್ಲಿ ಎಸ್ಐಆರ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಲಕ್ಷಾಂತರ ನಕಲಿ ಹಾಗೂ ಅನರ್ಹ ಮತದಾರರನ್ನು ಪತ್ತೆಹಚ್ಚಲು ಎಸ್ಐಆರ್ ಸಹಕಾರಿಯಾಗಿದೆ. ಕರ್ನಾಟಕ ರಾಜ್ಯದಲ್ಲೂ ಇಂತಹ ಪ್ರಕರಣಗಳು ಪ್ರತಿಯೊಂದು ಜಿಲ್ಲೆಯಲ್ಲಿದ್ದು, ಮತದಾರರ ಮ್ಯಾಪಿಂಗ್ ಪ್ರಕ್ರಿಯೆಯಿಂದಾಗಿ ಅಕ್ರಮಗಳು ಬಯಲಾಗಲಿದೆ ಎಂದು ತಿಳಿಸಿದ್ದಾರೆ.
ಎಸ್ಐಆರ್ ಭಾರತೀಯ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗ ಕೈಗೊಂಡ ಅಭಿಯಾನವೇ ಹೊರತು ಕೇಂದ್ರ ಸರಕಾರದ ಕಾರ್ಯಕ್ರಮವಲ್ಲ ಎನ್ನುವುದನ್ನು ಪ್ರಗತಿಪರ ಸಂಘಟನೆಗಳು ಹಾಗೂ ಪ್ರತಿಭಟಿಸುತ್ತಿರುವ ಇತರ ಸಂಘಟನೆಗಳು ತಿಳಿದುಕೊಳ್ಳಬೇಕಾಗಿದೆ ಎಂದು ಪಿ.ಎಂ.ರವಿ ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿರುವ ಅಧಿಕಾರಿ ವರ್ಗ ಹೆಚ್ಚು ಹೆಚ್ಚು ಜನಜಾಗೃತಿ ಜಾಥಾ ಮತ್ತು ತರಬೇತಿ ಶಿಬಿರ ಆಯೋಜಿಸುವ ಮೂಲಕ ಈ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ಒತ್ತಾಯಿಸಿದ್ದಾರೆ.








