
ಮಡಿಕೇರಿ ಜೂ.17 NEWS DESK : ಮಳೆಗಾಲದ ಅವಧಿಯಲ್ಲಿ ರಸ್ತೆ ಅಪಘಾತ ತಡೆಯಲು ರಸ್ತೆ ಸುರಕ್ಷತಾ ನಿಯಮಗಳು ಮತ್ತು ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ `ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ’ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಅಪಘಾತ ವಲಯಗಳನ್ನು ಗುರುತಿಸಿ, ಇಂತಹ ಸ್ಥಳಗಳಲ್ಲಿ ಸೂಕ್ತ ರಸ್ತೆ ಸುರಕ್ಷತಾ ಕ್ರಮ ವಹಿಸಬೇಕು. ಅಪಘಾತ ಸಂಭವಿಸುವ ರಸ್ತೆಗಳಲ್ಲಿ ಸಂಚಾರ ಚಿಹ್ನೆ ಹಾಗೂ ರಸ್ತೆ ಗುರುತು ಫಲಕ ಅಳವಡಿಸಬೇಕು. ಅವಶ್ಯವಿದ್ದೆಡೆ ಬ್ಯಾರಿಕೇಡ್ ಸೇರಿದಂತೆ ಸುರಕ್ಷತಾ ಕ್ರಮವಹಿಸಿ ರಸ್ತೆ ನಿಯಮಗಳ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. ಸಭೆಯಲ್ಲಿ ಈ ಹಿಂದೆ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಅನುಷ್ಠಾನ ಕುರಿತಂತೆ ಸಂಬಂಧಪಟ್ಟ ಇಲಾಖೆಯವರು ತೆಗೆದುಕೊಂಡ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಉಪ-ವಿಭಾಗದ ಸಹಾಯಕ ಎಂಜಿನಿಯರ್ ಎಂ.ಹನುಮಂತ ಅವರು ಸಂಪಾಜೆಯಿಂದ-ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಚ್ಚರಿಕೆಯ ಬೋರ್ಡ್ ಅಳವಡಿಸಲು ಮುಂದಾಗಲಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸೋಮಶೇಖರ್ ಅವರು ಮಾತನಾಡಿ, ಈಗಾಗಲೇ ಅಳವಡಿಸಿರುವ ಎಚ್ಚರಿಕೆಯ ಬೋರ್ಡ್ಗಳನ್ನು ಅಳವಡಿಸಿರುವ ದಿನಾಂಕ, ಜಿಯೋ ಕೋ-ಆರ್ಡಿನೇಟ್ಸ್ ಬಗ್ಗೆ ಮಾಹಿತಿಯನ್ನು ಒದಗಿಸಲು ಹಾಗೂ ಅಗತ್ಯವಿರುವ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಪೆÇಲೀಸ್ ಇಲಾಖೆಯವರು ಜಂಟಿ ಕಾರ್ಯಾಚರಣೆ ನಡೆಸಿ ರಸ್ತೆ ಸುರಕ್ಷತೆಯ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಮಡಿಕೇರಿಯಿಂದ-ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯ ಭದ್ರಕಾಳಿ ದೇವಸ್ಥಾನ ಹತ್ತಿರ ಪ್ರವಾಸಿಗರು ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ಮಾಡುವುದರಿಂದ ತಿರುವಿನಲ್ಲಿ ರಸ್ತೆಯ ಅಗಲ ಕಿರಿದಾಗಿ ವಾಹನ ಚಲಾಯಿಸಲು ಚಾಲಕರಿಗೆ ಕಷ್ಟಕರವಾಗಿ ಅಪಘಾತಗಳು ಉಂಟಾಗುತ್ತಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಆ ತಿರುವಿನಲ್ಲಿ ರಸ್ತೆಯ ಎರಡೂ ಬದಿಯಲ್ಲಿ ನೋ ಪಾರ್ಕಿಂಗ್ ಬೋರ್ಡ್ ಅಳವಡಿಸಿ ವಾಹನ ನಿಲುಗಡೆ ಮಾಡದಿರುವಂತೆ ಕ್ರಮ ವಹಿಸಬೇಕಿದೆ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಂಜಿನಿಯರ್ ಅವರು ಕೋರಿದರು. ಮಡಿಕೇರಿ-ಕಾಟಕೇರಿ ರಸ್ತೆಯಲ್ಲಿ ಅಪಘಾತ ವಲಯಗಳು ಹೆಚ್ಚಿದ್ದು, ವಾಹನ ಸವಾರರಿಗೆ ಸಮಸ್ಯೆ ಎದುರಾಗಲಿದೆ. ಆದ್ದರಿಂದ ಕ್ಯಾಟ್ಐಸ್ ಸ್ಟಿಕ್ಕರ್, ಬಿಳಿ ರೇಡಿಯಂ ಸ್ಟಿಕ್ಕರ್ಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಲಹೆ ನೀಡಿದರು. ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕೆ.ಟಿ.ಪ್ರಭು ಅವರು ಮಾತನಾಡಿ, ಗೋಣಿಕೊಪ್ಪ ಪಟ್ಟಣ ಮುಖ್ಯರಸ್ತೆ ಹಾಗೂ ಬೈಪಾಸ್ ರಸ್ತೆಯಲ್ಲಿ ವಾಹನ ದಟ್ಟಣೆ ಹಾಗೂ ಅಪಘಾತ ಪ್ರಕರಣ ಹೆಚ್ಚಾಗಿದ್ದು, ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನಗಳ ಏಕಮುಖ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಪಟ್ಟಣದ ಪಾಲಿಬೆಟ್ಟ ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್ಗೆ ಕೆಲವೊಂದು ನಿರ್ಬಂಧ ವಿಧಿಸಿ ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆಗೆ ತಾತ್ಕಾಲಿಕವಾಗಿ ಮೂರು ತಿಂಗಳವರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ವಿರಾಜಪೇಟೆ ಪಟ್ಟಣದಲ್ಲಿ ವಾಹನಗಳ ಸಂಚಾರ ಮತ್ತು ನಿಲುಗಡೆ ವ್ಯವಸ್ಥೆಗೆ ಸಂಬಂಧಿಸಿದಂತೆ ಪಟ್ಟಣದ ಮೂರ್ನಾಡು ಜಂಕ್ಷನ್ನಿಂದ ದೊಡ್ಡಟ್ಟಿ ಚೌಕಿ ವರೆಗೆ ದ್ವಿಮುಖ ಸಂಚಾರ ವ್ಯವಸ್ಥೆಮಾಡಿ ಪಾರ್ಕಿಂಗ್ ನಿಷೇಧಿಸುವುದರಿಂದ ಗೋಣಿಕೊಪ್ಪದ ಕಡೆಗೆ ತೆರಳುವ ವಾಹನಗಳು ಮತ್ತು ಗೋಣಿಕೊಪ್ಪದಿಂದ ಮಡಿಕೇರಿ ಕಡೆಗೆ ತೆರಳುವ ವಾಹನಗಳಿಗೆ ಸಂಚಾರ ದಟ್ಟಣೆ ಉಂಟಾಗದಂತೆ ಸುಗಮ ಸಂಚಾರಕ್ಕೆ ಅವಕಾಶವಾಗುತ್ತದೆ. ಹಾಗೆಯೇ ಗಡಿಯಾರ ಕಂಬದಿಂದ ಬದ್ರಿಯಾ ಜಂಕ್ಷನ್ ವರೆಗೆ ದ್ವಿಮುಖ ಸಂಚಾರಕ್ಕೆ ಅವಕಾಶವಾಗುವುದರಿಂದ ಹಾಗೂ ಪಾರ್ಕಿಂಗ್ ವ್ಯವಸ್ಥೆ ನಿಷೇಧಿಸುವುದರಿಂದ ಪೆರುಂಬಾಡಿ, ಮೀನುಪೇಟೆ, ಆರ್ಜಿ, ಬೇಟೋಳಿ ಕಡೆಗಳಿಂದ ತೆರಳಲು ಅವಕಾಶವಾಗುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ತಾತ್ಕಾಲಿಕವಾಗಿ ಮೂರು ತಿಂಗಳವರೆಗೆ ದ್ವಿಮುಖ ಸಂಚಾರ ನಿಯಮ ಜಾರಿಗೊಳಿಸಿ, ಪಾರ್ಕಿಂಗ್ ನಿಷೇಧಿಸಲಾಗಿದೆ ಎಂದು ಕೆ.ಟಿ.ಪ್ರಭು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಮಾತನಾಡಿ, ನಗರದ ಅರಣ್ಯ ಭವನದ ರಸ್ತೆಯ ಎರಡು ಬದಿಗಳಲ್ಲಿ ಪ್ರವಾಸಿ ವಾಹನಗಳು ಪಾರ್ಕಿಂಗ್ ಮಾಡುತ್ತಿದ್ದು, ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಹಾಗೆಯೇ ರಸ್ತೆಗಳಲ್ಲಿ ಅಳವಡಿಸಲಾದ ರೇಡಿಯಂ ಸ್ಟಿಕ್ಕರ್ಗಳು ಹಳೆಯದಾಗಿದ್ದು, ಅವುಗಳನ್ನು ಬದಲಾಯಿಸುವಂತೆ ಅಥವಾ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಟಿ.ಸತೀಶ್ ಅವರು ಮಾತನಾಡಿ, ಸಾರಿಗೆ ಕ್ಷೇಮಾಭಿವೃದ್ಧಿ ಮತ್ತು ರಸ್ತೆ ಸುರಕ್ಷತಾ ಯೋಜನೆಯಡಿ ಅನುದಾನವಿದ್ದು, ಅಗತ್ಯವಿರುವ ಕಡೆ ರಸ್ತೆ ಸುರಕ್ಷತೆಗೆ ಒತ್ತು ನೀಡಬಹುದಾಗಿದೆ ಎಂದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಜಿ.ಸುನೀಲ್, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸದಸ್ಯರಾದ ವಿ.ಬಿ.ಸಜಿತ್, ಕೆ.ಸತ್ಯನಾರಾಯಣ, ಡಾ.ಕೆ.ಎಂ.ಸತೀಶ್ ಕುಮಾರ್, ರಾಮಚಂದ್ ದರ್ಶನ್, ಡಿ.ಎಂ.ಗಿರೀಶ್ ಇತರರು ಇದ್ದರು.









