
ಮಡಿಕೇರಿ NEWS DESK ಜೂ.18 : ದೇಶ ರಕ್ಷಣೆಗಾಗಿ ರಾತ್ರಿ ಹಗಲೆನ್ನದೆ ದುಡಿದ ಮಾಜಿ ಸೈನಿಕರ ಸಮಸ್ಯೆಗಳಿಗೆ ಪ್ರಸ್ತುತ ಇರುವ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಸುಮಾರು ಎರಡು ದಶಕಗಳ ಅವಧಿಯಲ್ಲಿ ಮಾಜಿ ಸೈನಿಕರು ಸಲ್ಲಿಸಿರುವ ಜಾಗ ಮಂಜೂರಾತಿಯ 1500ಕ್ಕೂ ಹೆಚ್ಚಿನ ಅರ್ಜಿಗಳು ಶೀಘ್ರ ವಿಲೇವಾರಿಯಾಗಲಿದೆ ಎಂದು ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಪ್ರಮುಖರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮೇಜರ್ ಜನರಲ್ ಬಿ.ಎ.ಕಾರ್ಯಪ್ಪ(ನಿವೃತ್ತ) ಅವರು, ಮಾಜಿ ಸೈನಿಕರು ಸಲ್ಲಿಸಿರುವ 1500ಕ್ಕೂ ಅರ್ಜಿಗಳು ಇಂದಿಗೂ ವಿಲೇವಾರಿಯಾಗದೆ ಹಾಗೆಯೇ ಬಾಕಿ ಉಳಿದಿವೆ. ಕಳೆದ ಐದು ವರ್ಷಗಳಿಂದ ಮಾಜಿ ಸೈನಿಕರ ಸಂಕಷ್ಟಗಳನ್ನು ಕೇಳುವ ಮತ್ತು ಅವುಗಳನ್ನು ಪರಿಹರಿಸುವ ಕುಂದುಕೊರತೆ ಸಭೆೆಗಳೇ ನಡೆದಿರಲಿಲ್ಲ. ಈಗ ಇರುವ ಜಿಲ್ಲಾಧಿಕಾರಿಗಳು ಸುದೀರ್ಘ ಅವಧಿಯ ಬಳಿಕ ಕುಂದುಕೊರತೆ ಸಭೆ ನಡೆಸಿ ನಮ್ಮ ಅಳಲು ಆಲಿಸಿದ್ದಾರೆ ಎಂದರು. ಸಭೆಯಲ್ಲಿ ಮಾಜಿ ಯೋಧರ ಜಾಗ ಮಂಜೂರಾತಿ, ನಿವೇಶನ ಮಂಜೂರಾತಿ, ಸಮುದಾಯ ಭವನ ಮೊದಲಾದವುಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸಳೆಯಲಾಗಿದೆ. ಅದಕ್ಕೆ ಸ್ಪಂದಿಸಿರುವ ಜಿಲ್ಲಾಧಿಕಾರಿಗಳು ಸಂಬoಧಪಟ್ಟ ಅಧಿಕಾರಿಗಳಿಗೆ ಮುಂದಿನ 2 ತಿಂಗಳ ಒಳಗಾಗಿ ಮಾಜಿ ಯೋಧರ ಸಂಕಷ್ಟಗಳಿಗೆ ಸ್ಪಂದಿಸಿ ಅವರ ಅಗತ್ಯ ಕೆಲಸ ಕಾರ್ಯ ಮಾಡುವಂತೆ ನಿರ್ದೇಶನ ನೀಡಿರುವುದಾಗಿ ತಿಳಿಸಿದರು. *ರಕ್ಷಣೆ ಮಾಡಿಕೊಳ್ಳುತ್ತೇವೆ* ಕೊಡಗು ಜಿಲ್ಲೆಯಲ್ಲಿ ಕಾಡಾನೆ ಸೇರಿದಂತೆ ವಿವಿಧ ವನ್ಯಜೀವಿಗಳ ಉಪಟಳ ಮಿತಿಮೀರಿದೆ. ಇವುಗಳ ನಿಯಂತ್ರಣಕ್ಕೆ ಸರಕಾರ ಮತ್ತು ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಇತ್ತೀಚೆಗಷ್ಟೆ ಮಹಿಳೆಯೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿರುವುದನ್ನು ಉಲ್ಲೇಖಿಸಿದ ಮೇ.ಜ.ಬಿ.ಎ.ಕಾರ್ಯಪ್ಪ, ಇದೊಂದು ಅತ್ಯಂತ ನೋವಿನ ವಿಷಯವಾಗಿದೆ, ಸರಕಾರ ವನ್ಯಜೀವಿ ದಾಳಿಯನ್ನು ನಿಯಂತ್ರಿಸದಿದ್ದಲ್ಲಿ ನಾವೇ ನಮ್ಮ ರಕ್ಷಣೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಸಂಘದ ಗೌರವ ಕಾರ್ಯದರ್ಶಿ ಮೇಜರ್ ಓ.ಎಸ್.ಚಿಂಗಪ್ಪ(ನಿವೃತ್ತ) ಅವರು ಮಾತನಾಡಿ, ಹಿಂದೆ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಬಂದ ಮಾಜಿ ಸೈನಿಕರಿಗೆ ತಲಾ 5 ಏಕರೆಯಷ್ಟು ಜಾಗವನ್ನು ಜಿಲ್ಲಾಧಿಕಾರಿಗಳೇ ಮಂಜೂರು ಮಾಡಿಕೊಡುವ ಪರಿಸ್ಥಿತಿ ಇತ್ತು. ಪ್ರಸ್ತುತ ಆ ಅಧಿಕಾರ ಜಿಲ್ಲಾಧಿಕಾರಿಗಳ ಬದಲಾಗಿ ಅಕ್ರಮ ಸಕ್ರಮದ ಮೂಲಕ ಮಾಡಬೇಕೆನ್ನುವ ನಿಯಮವನ್ನು ಜಾರಿಗೆ ತರಲಾಗಿದೆ. ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಜಾಗ ಮಂಜೂರಾತಿಗಾಗಿ ಒಂದೂವರೆ ಸಾವಿರಕ್ಕೂ ಹೆಚ್ಚಿನ ಅರ್ಜಿಗಳು ಮಾಜಿ ಸೈನಿಕರಿಂದ ಸಲ್ಲಿಕೆಯಾಗಿದ್ದರು, ಅವುಗಳು ವಿಲೇವಾರಿಯಾಗಿಲ್ಲ. ಕೆಲವೊಂದು ಅರ್ಜಿಗಳು ವಿಲೇವಾರಿಯಾಗಿದ್ದರು, ಸಂಘದ ಗಮನಕ್ಕೆ ಅದು ಬಂದಿಲ್ಲವೆoದು ಹೇಳಿದರು. ಕಳೆದ ಕೆಲವು ವರ್ಷಗಳಿಂದ ಮಾಜಿ ಯೋಧರಿಗೆ ಪಿತ್ರಾರ್ಜಿತ ಆಸ್ತಿ ಇದ್ದರೆ ಅಂತಹವರಿಗೆ, ಜಾಗ ನೀಡುವುದಿಲ್ಲವೆಂದು ತಿಳಿಸಲಾಗುತ್ತಿದೆ. ತಂದೆಯಿದ ಬಂದ ಪಿತ್ರಾರ್ಜಿತ ಆಸ್ತಿ ಹಾಗೂ ರಾಷ್ಟ್ರ ರಕ್ಷಣೆಗಾಗಿ ಸೇವೆ ಸಲ್ಲಿಸಿದ್ದಕ್ಕಾಗಿ ಜಾಗವನ್ನು ಒದಗಿಸುವುದನ್ನು ಬೇರೆ ಬೇರೆಯಾಗಿಯೇ ಪರಿಗಣಿಸಬೇಕು. ಆದರೆ, ಹಾಗೆ ಮಾಡುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಕೊಡಗಿನಲ್ಲಿ ನೆಲೆಸಿರುವ ಮಾಜಿ ಯೋಧರಲ್ಲಿ ಶೇ.90 ಕ್ಕೂ ಹೆಚ್ಚಿನ ಮಂದಿಗೆ ಮನೆಗಳು ಇವೆ. ಕೇವಲ ಶೇ.10ರಷ್ಟು ಮಂದಿಗೆ ಮಾತ್ರ ನಿವೇಶನಗಳಿಲ್ಲ. ಇಂತಹವರು ಸಲ್ಲಿಸಿರುವ 200 ರಿಂದ 300 ಅರ್ಜಿಗಳು ಇಂದಿಗೂ ವಿಲೇವಾರಿಯಾಗದೆ ಹಾಗೆಯೇ ಉಳಿದಿದ್ದು, ಇವುಗಳನ್ನು ವಿಲೇವಾರಿ ಮಾಡಿ ಮಾಜಿ ಯೋಧರಿಗೆ ನೆಲೆಯೊದಗಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಲೆಫ್ಟಿನೆಂಟ್ ಕರ್ನಲ್ ಅಯ್ಯುಡ ಗಣಪತಿ(ನಿವೃತ್ತ), ಪೊನ್ನಂಪೇಟೆ ತಾಲ್ಲೂಕು ಅಧ್ಯಕ್ಷ ಐನಂಡ ಮಂದಣ್ಣ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಬಿ.ಆರ್.ಈರಪ್ಪ ಹಾಗೂ ವಿರಾಜಪೇಟೆ ತಾಲ್ಲೂಕು ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಉಪಸ್ಥಿತರಿದ್ದರು.








