
ಮಡಿಕೇರಿ NEWS DESK ಜು.19 : ದಕ್ಷಿಣ ಭಾರತದ ಜೀವನದಿ ಎಂದೇ ಖ್ಯಾತವಾಗಿರುವ ಕಾವೇರಿಯ ಸನ್ನಿಧಿ ಭಾಗಮಂಡಲದ ಮೇಲ್ಸೇತುವೆ ಹಾಗೂ ಸುತ್ತಮುತ್ತಲಿನ ಅಭಿವೃದ್ಧಿ ಕಾಮಗಾರಿಗೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಕೋರಿಕೆ ಮೇರೆಗೆ ಕಾವೇರಿ ನೀರಾವರಿ ನಿಗಮದಿಂದ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕೃಯೆ ಪೂರ್ಣಗೊಂಡು ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದಿಂದ ಮಾಹಿತಿ ಲಭ್ಯವಾಗಿದೆ. ಮೇಲ್ಸೇತುವೆ ಆವರಣದ ಸುಧಾರಣೆಗಳು, ನೀರು ಹರಿಯುವ ಪೈಪ್ ಗಳ ಸುಧಾರಣೆ, ಮೇಲ್ಸೇತುವೆ ಕೆಳಗೆ ಕಾಂಕ್ರೀಟ್ ಕಾಮಗಾರಿ, ಕನ್ನಿಕೆ ನದಿಗೆ ಪಾದಚಾರಿ ಸೇತುವೆ, ಕಾವೇರಿ ನದಿಗೆ ಪಾದಚಾರಿ ಸೇತುವೆ ಕಾಮಗಾರಿಗಳು ಉಲ್ಲೇಖಿತ ಅನುದಾನದಲ್ಲಿ ನಡೆಯಲಿದ್ದು ಬೆಂಗಳೂರಿನ ಪ್ರಥಮ ದರ್ಜೆ ಗುತ್ತಿಗೆದಾರ ಕೆ.ರೋಹಿತ್ ರವರು ಗುತ್ತಿಗೆ ಪಡೆದಿದ್ದು 2026 ರ ಅಕ್ಟೋಬರ್ ಅಂತ್ಯದ ಒಳಗೆ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರ ಮಾಡುವಂತೆ ನಿಗಮದ ಆದೇಶದಲ್ಲಿ ಸೂಚಿಸಲಾಗಿದೆ.









