





ಮಡಿಕೇರಿ ಆ.15 NEWS DESK : ರಾಜ್ಯ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ರಾಜ್ಯದ ಮತ್ತು ಜಿಲ್ಲೆಯ ಜನತೆಗೆ ಹೊಸ ಚೈತನ್ಯವನ್ನ ನೀಡಿವೆ. ಜನಪರ ಯೋಜನೆಗಳ ಯಶಸ್ಸಿನ ಪ್ರತಿಫಲವನ್ನು ಸಂತೃಪ್ತ ಜನೆತೆಯ ಮುಖದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ ಎಂದು ಕೃಷಿ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ತಿಳಿಸಿದ್ದಾರೆ. ನಗರದ ಕೋಟೆ ಆವರಣದಲ್ಲಿ ಕೊಡಗು ಜಿಲ್ಲಾಡಳಿತದ ವತಿಯಿಂದ ನಡೆದ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಸಚಿವರು ಮಾತನಾಡಿದರು.
ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳನ್ನು ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು “ಬೆಂಗಳೂರು ನಮ್ಮ ಕಿರೀಟ, ಕರ್ನಾಟಕ ನಮ್ಮ ಹೃದಯ” ಎಂಬ ಮಾತನ್ನು ಹೇಳಿದ್ದಾರೆ. ಇದು ಮುಖ್ಯಮಂತ್ರಿಗಳ ದೂರದೃಷ್ಟಿಯ ಅಭಿವೃದ್ಧಿ ದೃಷ್ಟಿಕೋನ. ಕರ್ನಾಟಕದ ಅಭಿವೃದ್ಧಿಯನ್ನು ಬೆಂಗಳೂರು ಕೇಂದ್ರಿತವಾಗಿರಿಸದೆ, ರಾಜ್ಯದ ಪ್ರತಿಯೊಂದು ಪ್ರದೇಶಕ್ಕೂ ಅಭಿವೃದ್ಧಿಯ ಅವಕಾಶಗಳನ್ನು ವಿಸ್ತರಿಸಬೇಕು ಎಂದು ನಮ್ಮ ಸರ್ಕಾರ ನಾಡಿನ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಪರಿಸರ ಮತ್ತು ಅಧ್ಯಾತ್ಮಿಕ ಪ್ರವಾಸೋಧ್ಯಮದಲ್ಲಿ ಕೊಡಗು ಕನ್ನಡ ನಾಡಿನ ಕಿರೀಟ ಎನ್ನುವ ಹೆಮ್ಮೆ ನಮಗಿದೆ ಎಂದರು. ಕೃಷಿಗೆ ಬಲ, ಕಾಫಿಗೆ ಮೌಲ್ಯವರ್ಧನೆ, ಯುವಕರಿಗೆ ಉದ್ಯೋಗ, ಪ್ರವಾಸೋದ್ಯಮಕ್ಕೆ ಹೊಸ ಅವಕಾಶ, ಮಹಿಳೆಯರಿಗೆ ಆರ್ಥಿಕ ಶಕ್ತಿ, ಗ್ರಾಮಗಳಿಗೆ ಉತ್ತಮ ಮೂಲಸೌಕರ್ಯ ಮತ್ತು ಪ್ರಕೃತಿಯ ಸಂಪೂರ್ಣ ರಕ್ಷಣೆ ನೀಡುವುದು ಸರಕಾರದ ಜವಾಬ್ದಾರಿಯಾಗಿದೆ. ಕೊಡಗಿನ ಆರ್ಥಿಕತೆಯ ಬೆನ್ನೆಲುಬಾಗಿರುವ ಕಾಫಿ ಬೆಳೆಗಾರರು ಹಾಗೂ ಕೃಷಿಕರ ಬದುಕು ಬಲವಾಗಬೇಕು. ಹವಾಮಾನ ಬದಲಾವಣೆ, ಅತಿವೃಷ್ಟಿ, ಅನಿಶ್ಚಿತ ಮಳೆ, ಬೆಲೆ ಏರಿಳಿತ ಮತ್ತು ವನ್ಯಜೀವಿ ಸಂಘರ್ಷದಂತಹ ಸವಾಲುಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುತ್ತಿದ್ದೇವೆ. ಕೊಡಗಿನ ಕೃಷಿಯನ್ನು ಕೇವಲ ಉತ್ಪಾದನೆಯಾಗಿ ನೋಡುವುದಲ್ಲ, ಮೌಲ್ಯವರ್ಧನೆ, ಸಂಸ್ಕರಣೆ, ಬ್ರ್ಯಾಂಡಿಂಗ್, ರಫ್ತು ಮತ್ತು ಪ್ರವಾಸೋದ್ಯಮದೊಂದಿಗೆ ಸಂಪರ್ಕಿಸುವ ಹೊಸ ಆರ್ಥಿಕತೆಯಾಗಿ ರೂಪಿಸಬೇಕಾಗಿದೆ. ಕೊಡಗಿನ ಕಾಫಿ ವಿಶ್ವದ ಮಾರುಕಟ್ಟೆಯಲ್ಲಿ ಇನ್ನಷ್ಟು ಬಲವಾಗಿ ಗುರುತಿಸಿಕೊಳ್ಳಬೇಕು. “ಕೊಡಗು ಕಾಫಿ”ಎಂಬ ಹೆಸರೇ ಜಾಗತಿಕ ಗುಣಮಟ್ಟದ ಸಂಕೇತವಾಗುವ ದಿನವನ್ನು ನಾವು ನಿರ್ಮಿಸೋಣ ಎಂದು ಸಚಿವರು ಆಶಿಸಿದರು. ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಅರ್ಪಿಸಿದ ಅಸಂಖ್ಯಾತ ಮಹನೀಯರ ತ್ಯಾಗ, ಬಲಿದಾನ ಮತ್ತು ಕನಸುಗಳನ್ನು ಸ್ಮರಿಸುವ ಪವಿತ್ರ ದಿನವನ್ನು ಇಂದು ನಾವು ಆಚರಿಸುತ್ತಿದ್ದೇವೆ. ನಮ್ಮ ನೆಲದಿಂದ ಬ್ರಿಟೀಷರನ್ನು ಹೊರಹಾಕಲು ಅಸಂಖ್ಯಾತ ದೇಶಭಕ್ತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ್ದಾರೆ. ಅಹಿಂಸೆಯನ್ನೇ ಅಸ್ತ್ರವನ್ನಾಗಿ ರೂಪಿಸಿದ ಮಹಾತ್ಮಗಾಂಧೀಜಿ ಯವರೊಂದಿಗೆ ಜವಾಹರ ಲಾಲ್ ನೆಹರು, ವಲ್ಲಭಭಾಯಿ ಪಟೇಲ್, ಗೋಪಾಲಕೃಷ್ಣ ಗೋಖಲೆ, ಲೋಕಮಾನ್ಯ ಬಾಲಗಂಗಾಧರ್ ತಿಲಕ್, ನೇತಾಜಿ ಸುಭಾಷ್ ಚಂದ್ರ ಬೋಸ್, ಮೌಲಾನಾ ಅಬ್ದುಲ್ ಖಲಾಂ ಆಜಾದ್, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಎಲ್ಲಾ ಧೀರ ಮಹನೀಯರು ಭಾರತ ಸ್ವಾತಂತ್ರ್ಯವನ್ನು ಗಳಿಸಲು ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ವೀರರಾಣಿ ಕಿತ್ತೂರುರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಕೆಳದಿ ಚೆನ್ನಮ್ಮ,ರಾಣಿ ಅಬ್ಬಕ್ಕ ಇನ್ನೂ ಮೊದಲಾದ ವೀರ ವನಿತೆಯರು ಈ ದಿಸೆಯಲ್ಲಿ ಅವಿಸ್ಮರಣೀಯರಾಗಿದ್ದಾರೆ. ಕೊಡಗು ಎಂದರೆ ಕೇವಲ ಪ್ರಕೃತಿಯ ಸೌಂದರ್ಯವಲ್ಲ. ಇದು ಶೌರ್ಯ, ತ್ಯಾಗ, ದೇಶಪ್ರೇಮ ಮತ್ತು ಸಂಸ್ಕøತಿಯ ಸಂಗಮವಾಗಿದೆ. ಪಶ್ಚಿಮ ಘಟ್ಟಗಳ ಹಸಿರು ಹೊದಿಕೆಯ ನಡುವೆ ಕಾವೇರಿ ಹುಟ್ಟುವ ಈ ಪುಣ್ಯಭೂಮಿ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ತನ್ನದೇ ಆದ ಅಮೂಲ್ಯ ಕೊಡುಗೆಯನ್ನು ನೀಡಿದೆ. ಕೊಡಗಿನ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ನೆನಪಿಸಿಕೊಂಡಾಗ ಗುಡ್ಡೆಮನೆ ಅಪ್ಪಯ್ಯಗೌಡ ಅವರಂತಹ ವೀರರನ್ನು ನಾವು ಮರೆಯಲು ಸಾಧ್ಯವಿಲ್ಲ. ನಂತರ ಪಂದ್ಯಂಡ ಐ. ಬೆಳ್ಯಪ್ಪ ಅವರು ಗಾಂಧೀಜಿಯವರ ಸತ್ಯ, ಅಹಿಂಸೆ, ಸ್ವದೇಶಿ ಮತ್ತು ಸಾಮಾಜಿಕ ಸಮಾನತೆಯ ಸಂದೇಶವನ್ನು ಕೊಡಗಿನ ಜನರ ನಡುವೆ ಜನಾಂದೋಲನ ಆಗಿಸಿದರು. ಅದಕ್ಕಾಗಿಯೇ ಅವರನ್ನು ಪ್ರೀತಿಯಿಂದ “ಕೊಡಗಿನ ಗಾಂಧಿ” ಎಂದು ಕರೆಯಲಾಯಿತು. ಕೊಡಗಿನಲ್ಲಿ ಸ್ವಾತಂತ್ರ್ಯ ಚಳುವಳಿಗೆ ಜನಬೆಂಬಲವನ್ನು ಸಂಘಟಿಸುವಲ್ಲಿ ಪಂದ್ಯಂಡ ಬೆಳ್ಯಪ್ಪನವರ ಪಾತ್ರ ಅಪಾರ. ‘ಕೊಡಗು’ ಪತ್ರಿಕೆಯ ಮೂಲಕ ರಾಷ್ಟ್ರೀಯ ಜಾಗೃತಿಯನ್ನು ಮೂಡಿಸುವ ಕೆಲಸವೂ ನಡೆಯಿತು. 1930ರ ಸತ್ಯಾಗ್ರಹ ಚಟುವಟಿಕೆಗಳಲ್ಲಿ ಅವರು ಸೇರಿದಂತೆ ಹಲವು ಹೋರಾಟಗಾರರು ಬಂಧನಕ್ಕೊಳಗಾದರು. ಪಂದ್ಯಂಡ ಬೆಳ್ಯಪ್ಪ, ಕೊಳ್ಳಿಮಾಡ ಕರುಂಬಯ್ಯ, ಸಿ.ಎಂ. ಪೂಣಚ್ಚ ಸೇರಿದಂತೆ ಸ್ಥಳೀಯ ನಾಯಕರು ಗಾಂಧೀಜಿಯವರನ್ನು ಕೊಡಗಿಗೆ ಆಹ್ವಾನಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 1934ರ ಫೆಬ್ರವರಿ 21ರಿಂದ 23ರವರೆಗೆ ಗಾಂಧೀಜಿಯವರು ಕೊಡಗಿನಲ್ಲಿ ಪ್ರವಾಸ ಕೈಗೊಂಡಿದ್ದರು. ಗಾಂಧೀಜಿಯವರ ಆಗಮನದಿಂದ ಈ ಮಣ್ಣಿನಲ್ಲಿ ಸ್ವಾತಂತ್ರ್ಯದ ಕಿಡಿ ಇನ್ನಷ್ಟು ಪ್ರಜ್ವಲಿಸಿತು. ಸತ್ಯ, ಅಹಿಂಸೆ, ಅಸ್ಪೃಶ್ಯತಾ ನಿವಾರಣೆ, ಖಾದಿ, ಸ್ವಾವಲಂಬನೆ ಮತ್ತು ಸಾಮಾಜಿಕ ಸಮಾನತೆಯ ಅವರ ಚಿಂತನೆಗಳು ಕೊಡಗಿನ ಹೋರಾಟಕ್ಕೆ ಹೊಸ ಚೈತನ್ಯ ನೀಡಿದವು ಎಂದರು.
ಫೀ.ಮಾ.ಕೆ.ಎಂ.ಕಾರ್ಯಪ್ಪ ಅವರು ಸ್ವತಂತ್ರ ಭಾರತದ ಮೊದಲ ಭಾರತೀಯ ಸೇನಾ ಮುಖ್ಯಸ್ಥರಾಗಿ ದೇಶದ ಸೇನಾ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದರು. ಜನರಲ್ ತಿಮ್ಮಯ್ಯ ಅವರ ಸೈನಿಕ ನಾಯಕತ್ವವೂ ಭಾರತದ ರಕ್ಷಣಾ ಇತಿಹಾಸದ ಅಮೂಲ್ಯ ಅಧ್ಯಾಯ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕೊಡಗು, ಸ್ವಾತಂತ್ರ್ಯವನ್ನು ರಕ್ಷಿಸಲು ಯೋಧರನ್ನೂ ಕೊಟ್ಟಿದೆ ಹಾಗೂ ಕೊಡುತ್ತಿದೆ. ಇದೇ ಕೊಡಗಿನ ಮಣ್ಣಿನ ವೈಶಿಷ್ಟ್ಯ. ಹಾಗೆಯೇ, ನಮ್ಮ ಕೊಡಗು ಎಲ್ಲಾ ಧರ್ಮ, ಸುಭಾಷ್, ಜಾತಿ, ಸಮುದಾಯದ ಭೇದಗಳನ್ನು ಮೀರಿ ಎಲ್ಲರೂ ಒಂದಾಗಿ, ಎಲ್ಲರನ್ನೂ ಒಳಗೊಂಡಿರುವ ಸೌಹಾರ್ಧದ ತಪ್ಪಲಾಗಿದೆ. ಕೊಡಗಿನ ಮತ್ತೊಂದು ದೊಡ್ಡ ಹಿರಿಮೆ ಎಂದರೆ ಇದರ ಪ್ರಕೃತಿ ಸಂಪತ್ತು. ಬ್ರಹ್ಮಗಿರಿ, ಪುಷ್ಪಗಿರಿ, ತಡಿಯಂಡಮೋಳ್, ಕಾವೇರಿ ನದಿ, ದಟ್ಟ ಅರಣ್ಯಗಳು, ಕಾಫಿ ತೋಟಗಳು, ಜಲಪಾತಗಳಿಂದ ಮೈತುಂಬಿಕೊಂಡಿರುವ ಕೊಡಗು ಕನ್ನಡ ನಾಡಿನ ಸೌಂದರ್ಯ ಮತ್ತು ಕೀರ್ತಿಯನ್ನು ಹೆಚ್ಚಿಸಿದೆ. ತಲಕಾವೇರಿಯಲ್ಲಿ ಉದ್ಭವಿಸುವ ಕಾವೇರಿ ಕರ್ನಾಟಕದ ಕೋಟ್ಯಂತರ ಜನರ ಬದುಕಿನ ಜೀವನಾಡಿ. ಕಾವೇರಿಯ ನೀರು ನಮ್ಮ ಜೀವಜಲ. ಕುಡಿಯುವ ನೀರಿನ ಜಲಮೂಲವೂ ಆಗಿದೆ. ಭಾಗಮಂಡಲ, ತಲಕಾವೇರಿ, ಓಂಕಾರೇಶ್ವರ ದೇವಸ್ಥಾನ, ಪಾಡಿ ಇಗ್ಗುತಪ್ಪ, ನಾಪೋಕ್ಲು ಮತ್ತು ಇತರ ಪವಿತ್ರ ಕ್ಷೇತ್ರಗಳು ಕೊಡಗಿನ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಪರಂಪರೆಯ ಆಳವನ್ನು ಸಾರುತ್ತವೆ. ಕೊಡಗು ಜಿಲ್ಲೆ ಪ್ರಕೃತಿ ಮತ್ತು ಅಧ್ಯಾತ್ಮ ಪರಸ್ಪರ ಬೆಸೆದುಕೊಂಡಿವೆ. ಅರಣ್ಯವನ್ನು ದೇವರಂತೆ ಕಾಣುವ ಸಂಸ್ಕೃತಿ, ನದಿಯನ್ನು ತಾಯಿಯಂತೆ ಪೂಜಿಸುವ ಮನೋಭಾವ ಮತ್ತು ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವ ಜೀವನ ಪದ್ಧತಿ ಕೊಡಗಿನ ವಿಶಿಷ್ಟ ಪರಂಪರೆ. ಆದ್ದರಿಂದ ಕೊಡಗಿನ ಪ್ರಕೃತಿಯನ್ನು ಸಂರಕ್ಷಿಸುತ್ತಲೇ ಪ್ರವಾಸೋದ್ಯಮ, ಕೃಷಿ, ಕಾಫಿ, ತೋಟಗಾರಿಕೆ ಮತ್ತು ಸ್ಥಳೀಯ ಉದ್ಯೋಗಗಳನ್ನು ಬೆಳೆಸುವುದು ನಮ್ಮ ಆದ್ಯತೆಯಾಗಿದೆ ಎಂದು ನರೇಂದ್ರ ಸ್ವಾಮಿ ತಿಳಿಸಿದರು. ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಮೆಹರೋಜ್ ಖಾನ್, ಮಡಿಕೇರಿ ನಗರಸಭೆ ಅಧ್ಯಕ್ಷರಾದ ಕಲಾವತಿ ಪಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಟಿ.ಎಂ.ಧರ್ಮಜ ಉತ್ತಪ್ಪ, ಏರ್ ಮಾರ್ಷಲ್ (ನಿವೃತ್ತ) ನಂದಾ ಕಾರ್ಯಪ್ಪ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್ ಹಾದಿಮನಿ, ಮಾಜಿ ಸೈನಿಕರು, ಜಿಲ್ಲಾ ಹಾಗೂ ತಾಲ್ಲೂಕಿನ ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಆಕರ್ಷಕ ಪಥಸಂಚಲನ ಮತ್ತು ವಿದ್ಯಾರ್ಥಿಗಳ ದೇಶಭಕ್ತಿಯ ನೃತ್ಯ ಗಮನ ಸೆಳೆಯಿತು.











