
ಸುಂಟಿಕೊಪ್ಪ, ಆ.18 NEWS DESK : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ನಾವು ಪ್ರತಿಷ್ಠಾನ, ಕೊಡಗು ಇವರ ಸಹಯೋಗದಲ್ಲಿ ಸುಂಟಿಕೊಪ್ಪದ (ಕುಶಾಲನಗರ) ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಿಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಸಮಾಜದಲ್ಲಿ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಲು ಜೀವನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಅಗತ್ಯ. ನಾಯಕತ್ವದ ಗುಣಗಳನ್ನು ಬೆಳೆಸುವ ಮೂಲಕ ಅವರನ್ನು ಸಕ್ರಿಯ ಹಾಗೂ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವಲ್ಲಿ ಇಂತಹ ತರಬೇತಿ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು. ನಾವು ಪ್ರತಿಷ್ಠಾನದ ಕಾರ್ಯಕಾರಿ ನಿರ್ದೇಶಕ ಸುಮನ್ ಮ್ಯಾಥ್ಯೂ ಮಾತನಾಡಿ, ತರಬೇತಿಯಲ್ಲಿ ಹೆಣ್ಣುಮಕ್ಕಳ ಋತುಚಕ್ರದ ಕುರಿತು ಅರಿವು, ಆನ್ಲೈನ್ ಸುರಕ್ಷತೆ, ಹವಾಮಾನ ಬದಲಾವಣೆ, ಘನತ್ಯಾಜ್ಯ ನಿರ್ವಹಣೆ, ಮಕ್ಕಳ ಹಕ್ಕುಗಳು, ಲಿಂಗ ಸಮಾನತೆ, ವೈಯಕ್ತಿಕ ನೈತಿಕತೆ, ಸ್ಥಳೀಯ ಸರ್ಕಾರ, ಅನುಭೂತಿ ಮತ್ತು ಸಮಾನತೆ, ವಿಮರ್ಶಾತ್ಮಕ ಆಲೋಚನಾ ಸಾಮರ್ಥ್ಯದ ಅಭಿವೃದ್ಧಿ, ಪ್ರಕೃತಿಯೊಂದಿಗೆ ಸಾಮರಸ್ಯ ಹಾಗೂ ಹದಿಹರೆಯದ ಗಂಡು ಮಕ್ಕಳಲ್ಲಿ ಉಂಟಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆ ಸೇರಿದಂತೆ ಒಟ್ಟು 17 ವಿಷಯಗಳನ್ನು ಒಳಗೊಂಡ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಈ ವಿಷಯಗಳನ್ನು ಸಮಾಜ ವಿಜ್ಞಾನ ಶಿಕ್ಷಕರ ಮೂಲಕ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಚಟುವಟಿಕೆ ಆಧಾರಿತ ಕಲಿಕೆಯ ಮೂಲಕ ಪರಿಚಯಿಸಲಾಗುತ್ತದೆ. ಈ ತರಬೇತಿ ವಿಷಯಗಳನ್ನು ಸಿಎಂಸಿಎ (Children’s Movement for Civic Awareness – CMCA) ಸಹಯೋಗದಲ್ಲಿ ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಸಂಯೋಜಕಿ ನೀತು, ಶಾಲೆಯ ಪ್ರಾಂಶುಪಾಲ ಷಡಕ್ಷರಿ, ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು, ತರಬೇತುದಾರರಾದ ಅನಿತಾ, ಜಿಲ್ಲೆಯ ಸಮಾಜ ವಿಜ್ಞಾನ ಶಿಕ್ಷಕರು ಹಾಗೂ ನಾವು ಪ್ರತಿಷ್ಠಾನದ ಶಿಲ್ಪಾ, ಸುಬಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.









