
ವಿರಾಜಪೇಟೆ ಆ.18 NEWS DESK : ಕಲೆ ಮತ್ತು ಸಂಸ್ಕೃತಿಯ ಅನಾವರಣಕ್ಕೆ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು ಉತ್ತಮ ವೇದಿಕೆಯಾಗಿದೆ ಎಂದು ಕೊಡಗು ಜಿಲ್ಲಾ ಖಜಾನೆ ಇಲಾಖೆಯ ಉಪ ನಿರ್ದೇಶಕರಾದ ಡಾ. ರಘುನಾಥ್ ಬಿ. ಎನ್ ಅವರು ಅಭಿಪ್ರಾಯಪಟ್ಟರು. ವಿರಾಜಪೇಟೆಯ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು ಇದರ ಕೊಡಗು ಜಿಲ್ಲಾ ಘಟಕದ ಪದಗ್ರಹಣ ಸಮಾರಂಭ ಹಾಗೂ ಆದರ್ಶ ಸೇವ ರತ್ನ ಪ್ರಶಸ್ತಿ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕೊಡಗು ಜಿಲ್ಲಾ ಘಟಕದ ಪದಗ್ರಹಣ ಸಮಾರಂಭ ಇಂದು ಬಹಳ ವ್ಯವಸ್ಥವಾಗಿ ಇಲ್ಲಿ ಆಯೋಜಿಸಲಾಗಿದ್ದು ಕಲೆ, ಸಂಸ್ಕೃತಿ ಪ್ರದರ್ಶನಕ್ಕೆ ಭಾಷೆ ಹಾಗೂ ಗಡಿಯ ಅಂತರವಿರುವುದಿಲ್ಲ. ಪ್ರತಿಯೊಬ್ಬರು ವಿಶ್ವಮಾನವ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು. ಉತ್ತಮವಾದ ಕಾರ್ಯವನ್ನು ಮಾಡಲು ಹಿಂದೆ ಮುಂದೆ ನೋಡಬಾರದು. ಪ್ರತಿಯೊಂದು ಕೆಲಸವನ್ನು ಗೌರವಿಸಿ ಬೌದ್ಧಿಕವಾಗಿಯೂ ಚಟುವಟಿಕೆಗಳಿಂದ ಕೂಡಿರಬೇಕು. ಹಿರಿಯರನ್ನು ಗೌರವಿಸಬೇಕು. ಸರ್ಕಾರಿ ನೌಕರರಿಗೆ ತಮ್ಮ ಪ್ರತಿಭೆಗಳನ್ನು ಹೊರತರಲು ಇದೊಂದು ಉತ್ತಮ ವೇದಿಕೆಯಾಗಿದ್ದು ಸರ್ವರೂ ಇದನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ನ ಸಂಸ್ಥಾಪಕ ರಾಜ್ಯ ಗೌರವಾಧ್ಯಕ್ಷರಾದ ಎಲ್. ಐ. ಲಕ್ಕಮ್ಮನವರ ಮಾತನಾಡಿ ಸರ್ಕಾರಿ ನೌಕರರಲ್ಲಿ ಅನೇಕ ಪ್ರತಿಭೆಗಳು ಇದ್ದು ಆ ಪ್ರತಿಭೆಗಳನ್ನು ಹೊರ ತರುವುದೇ ಈ ವೇದಿಕೆ ಉದ್ದೇಶವಾಗಿದೆ. ಪ್ರತಿಯೊಬ್ಬರು ಓದು ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಓದು ಹವ್ಯಾಸ ಮುಡಿದಾಗ ಸಾಹಿತ್ಯದ ಬಗ್ಗೆ ಒಲವು ಹೆಚ್ಚಾಗುತ್ತದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಸಾಹಿತ್ಯ ಪರಿಷತ್ ನ ಪದಗ್ರಹಣ ಸಮಾರಂಭ ಆಗಲಿದ್ದು ಪ್ರತಿಯೊಂದು ಘಟಕವು ಸಕ್ರಿಯವಾಗಿ ಕಾರ್ಯವನ್ನು ನಿರ್ವಹಿಸಿ ಎಂದು ಕರೆ ನೀಡಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಮತ್ತು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ರಾಜ್ಯ ಪ್ರಧಾನ ಕಾರ್ಯದರ್ಶಿ ಪರ್ವಿನ್ ಬಾನು ಬುಳ್ಳಣ್ಣವರ್ ಮಾತನಾಡಿ ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಮುಖ್ಯವಾಗುತ್ತದೆ. ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು ರಾಜ್ಯಾದ್ಯಂತ ಸಕ್ರಿಯವಾಗಿದೆ. ಕನ್ನಡವನ್ನು ಕಟ್ಟಬೇಕು ಕನ್ನಡದ ಹಣತೆಯನ್ನು ಬೆಳಗಿಸಿ ಸಂಸ್ಕೃತಿ ಸಾಹಿತ್ಯವನ್ನು ಪೋಷಿಸಬೇಕು ಎಂದರು. ರಾಜ್ಯ ಉಪಾಧ್ಯಕ್ಷರಾದ ಗಣೇಶ್ ನಿಲುವಾಗಿಲು ರವರ ಪ್ರಯತ್ನದಿಂದ ಕೊಡಗು ಜಿಲ್ಲಾ ಘಟಕವು ಸಕ್ರಿಯವಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವಂತಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ರಾಜ್ಯ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾದ ಹೇಮಲತಾ ಅವರಿಗೆ ಆದೇಶ ಪತ್ರವನ್ನು ವಿತರಿಸಲಾಯಿತು. ಆದೇಶ ಪತ್ರವನ್ನು ಸ್ವೀಕರಿಸಿದ ಹೇಮಲತರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಕಮಲಮ್ಮ ಕೆ ಎನ್ ರವರು ಮಾತನಾಡಿ ಕೊಡಗು ಜಿಲ್ಲಾ ಘಟಕದ ಈ ಸಾಹಿತ್ಯ ಪರಿಷತ್ತು ರಾಜ್ಯದಾದ್ಯಂತ ರಾರಾಜಿಸಲಿ. ಕೊಡಗು ಜಿಲ್ಲೆಯಲ್ಲಿ ಇನ್ನೂ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವನ್ನು ಹೊಂದಲಾಗಿದ್ದು ಇಂದು ಈ ಸಮಾರಂಭಕ್ಕೆ ಸರ್ವರೂ ಸಹಕಾರವನ್ನು ನೀಡಿರುತ್ತಾರೆ ಎಂದರು. ಇನ್ನು ಮುಂದೆಯೂ ಸರ್ವ ಪದಾಧಿಕಾರಿಗಳ ಸಹಕಾರ ನಮ್ಮ ಘಟಕಕ್ಕೆ ಇರಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿರಾಜಪೇಟೆಯ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ, ನಾಟಿಯ ಮಯೂರಿ ನೃತ್ಯ ಟ್ರಸ್ಟ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬೇಟೋಳಿ ಗ್ರಾಮದ ರಾಮನಗರದ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರುದ್ರಂ ಚಂಡೆ ಬಳಗ ರವರಿಂದ ಚಂಡೆ ಮೇಳ , ವಿದ್ಯಾರ್ಥಿಗಳಿಂದ ಉಮ್ಮತ್ತಾಟ್ ಪ್ರದರ್ಶನ, ನ್ಯಾಯಾಂಗ ಇಲಾಖೆಯ ನೌಕರರಾದ ಮಂಜುನಾಥ್ ರವರಿಂದ ಹಾಡು ಇನ್ನು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ವಿರಾಜಪೇಟೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೆ ಎಂ ತಿಮ್ಮಯ್ಯ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ನ ರಾಜ್ಯ ಉಪಾಧ್ಯಕ್ಷರಾದ ಗಣೇಶ್ ನಿಲುವಾಗಿಲು, ದೇವರಾಜ್ ಬಿ. ಟಿ., ರಾಜೇಶ್ ಕೆ ಆರ್, ಅಶ್ವಿನ್ ಕುಮಾರ್ ಹೆಚ್ ಬಿ ಇನ್ನು ಮುಂತಾದ ಗಣ್ಯರು ಉಪಸ್ಥಿತರಿದ್ದರು. ರಾಜ್ಯ ಉಪಾಧ್ಯಕ್ಷರಾದ ಗಣೇಶ್ ನಿಲುವಾಗಿಲು ಪ್ರಸ್ತಾವಿಕವಾಗಿ ಮಾತನಾಡಿ,ಶಿಕ್ಷಕಿ ಪದ್ಮ ಹೆಚ್ .ಎನ್ ಪ್ರಾರ್ಥಿಸಿ, ಖಜಾಂಚಿ ಉತ್ತಪ್ಪ ಸ್ವಾಗತಿಸಿ, ಪದ್ಮ ಹಾಗೂ ಜಯಮಾಲ. ರವರು ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚಿಗೆ ನಿಧನರಾದ ವಿರಾಜಪೇಟೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆನಂದ್ ಅವರಿಗೆ ಶ್ರದ್ಧಾಂಜಲಿಯನ್ನು ಕೋರಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ ನ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಅಧ್ಯಕ್ಷರು ಕಾರ್ಯದರ್ಶಿಗಳು ಪದಾಧಿಕಾರಿಗಳು ಹಾಗೂ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಆಗಮಿಸಿದ ಸರ್ವರಿಗೂ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಸಾಧಕರಿಗೆ ಆದರ್ಶ ಸೇವ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಸಂಘಟನಾ ಕ್ಷೇತ್ರದಲ್ಲಿ ಬಿ . ಟಿ.ದೇವರಾಜ್, ಸಾಹಿತ್ಯ ಕ್ಷೇತ್ರದಲ್ಲಿ ಮನ ಕೆ ಆರ್, ಮಾಧ್ಯಮ ಕ್ಷೇತ್ರದಲ್ಲಿ ಶಶಿ ಅಚ್ಚಪ್ಪ, ಬಿ. ಎನ್. ಶಾಂತಿಭೂಷಣ್, ಸಮಾಜ ಸೇವ ಕ್ಷೇತ್ರದಲ್ಲಿ ಸಾಧಿಕ್ ಅಹಮದ್, ಪೂಜಾ ಸಜೇಶ್ , ಮಹೇಶ್ ಅಪ್ಪಯ್ಯ, ಕಲಾಕ್ಷೇತ್ರದಲ್ಲಿ ಮೀನಾಕ್ಷಿ, ಪ್ರೇಮಾಂಜಲಿ ಆಚಾರ್ಯ ಎಸ್, ಶಿಕ್ಷಣ ಕ್ಷೇತ್ರದಲ್ಲಿ ಕೆ ಆರ್ ವಿಶಾಲಾಕ್ಷಮ್ಮ, ಟಿ ವಿ ಭಾಗ್ಯವತಿ ಅಣ್ಣಪ್ಪ ರವರಿಗೆ ಆದರ್ಶ ಸೇವ ರತ್ನ ಪ್ರಶಸ್ತಿಯನ್ನು ಗಣ್ಯರು ಪ್ರಧಾನ ಮಾಡಿ ಗೌರವಿಸಿದರು. : : ಕೊಡಗು ಜಿಲ್ಲಾ ಘಟಕದ ಪದಗ್ರಹಣ : : ಸಮಾರಂಭದಲ್ಲಿ ಕೊಡಗು ಜಿಲ್ಲಾ ಘಟಕದ ಪದಗ್ರಹಣ ಸಮಾರಂಭವು ನಡೆಯಿತು. ಜಿಲ್ಲಾ ಅಧ್ಯಕ್ಷರಾಗಿ ಕಮಲಮ್ಮ ಕೆ. ಎನ್., ಮಹಾ ಪೋಷಕರಾಗಿ ರಾಜೇಶ್ ಕೆ ಆರ್, ಗೌರವಾಧ್ಯಕ್ಷರಾಗಿ ಡಾ .ರಘುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಿನ್ ಕುಮಾರ್ ಹೆಚ್ ಬಿ, ಕಾರ್ಯಧ್ಯಕ್ಷರಾಗಿ ಜಯಮಾಲ ಎಸ್ ಕೆ, ಖಜಾಂಚಿಯಾಗಿ ಉತ್ತಪ್ಪ ವಿ ಎನ್, ಹಿರಿಯ ಉಪಾಧ್ಯಕ್ಷರಾಗಿ ಪ್ರೇಮ ಹೆಚ್. ಎಸ್., ಉಪಾಧ್ಯಕ್ಷರಾಗಿ ದೀಪ ಡಿ ಎಸ್, ಜಂಟಿ ಕಾರ್ಯದರ್ಶಿಯಾಗಿ ಸುನಿಲ್ ರಾಜ್ ಇ. ಕೆ., ಸಂಘಟನಾ ಕಾರ್ಯದರ್ಶಿಯಾಗಿ ರಾಣಿ ಎಸ್ ಕೆ, ಸಹ ಕಾರ್ಯದರ್ಶಿಯಾಗಿ ಸುನಿತಾ ಕುಮಾರಿ, ಕ್ರೀಡಾ ಕಾರ್ಯದರ್ಶಿಯಾಗಿ ರವಿಕಾಂತ್ ಎಂ ಎನ್ ಹಾಗೂ ಪದ್ಮಾವತಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪದ್ಮ ಎಚ್ ಎನ್, ಕಾನೂನು ಸಲಹೆಗಾರರಾಗಿ ಗೋವಿಂದರಾಜ್, ತಾಂತ್ರಿಕ ಸಲಹೆಗಾರರಾಗಿ ಕಮರುನ್ನಿಸ ಡಿ ಎ ರವರು ಅಧಿಕಾರವನ್ನು ಸ್ವೀಕರಿಸಿದರು. ಆಯ್ಕೆಯಾದ ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ಅತಿಥಿಗಳು ನೇಮಕಾತಿಯ ಪ್ರಮಾಣ ಪತ್ರವನ್ನು ನೀಡಿದರು. ರಾಜ್ಯ ಉಪಾಧ್ಯಕ್ಷರಾದ ಗಣೇಶ್ ನಿಲುವಾಗಿಲು ಅವರು ನೂತನ ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.









