
ಮಡಿಕೇರಿ NEWS DESK ಆ.21 : ರೋಟರಿ ಮಡಿಕೇರಿ ವುಡ್ಸ್, ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ರೋಟರಾಕ್ಟ್ ಕ್ಲಬ್ನ ಜಂಟಿ ಆಶ್ರಯದಲ್ಲಿ ಹಿರಿಯ ನಾಗರಿಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಹಿಳಾ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಆಕಾಶವಾಣಿಯ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಅವರು ಹಿರಿಯರನ್ನು ಗೌರವಿಸಿ, ಅವರ ಜೀವನದ ಸಂಧ್ಯಾಕಾಲದಲ್ಲಿ ಅವರೊಂದಿಗೆ ಇದ್ದು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹಿರಿಯರಿಗೆ ಪ್ರೀತಿ ತೋರಿಸುವ ಮೂಲಕ ನಾವೂ ಒಂದು ದಿನ ಹಿರಿಯ ನಾಗರಿಕರಾಗಲಿದ್ದೇವೆ ಎಂಬ ಸತ್ಯವನ್ನು ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ವುಡ್ಸ್ ಅಧ್ಯಕ್ಷೆ ರೊ.ಪ್ರಮೀಳಾ ಶೆಟ್ಟಿ ಅವರು ಹಿರಿಯರು ನಡೆದು ಬಂದ ದಾರಿ ಕಿರಿಯರಿಗೆ ದಾರಿ ದೀಪದಂತಿದೆ ಎಂದರು. ಹಿರಿಯ ನಾಗರಿಕರನ್ನು ಮರದ ಆಳವಾದ ಬೇರಿಗೆ ಹೋಲಿಸಿದ ಅವರು, ಸುಮಧುರ ಗೀತೆ ಹಾಡುವ ಮೂಲಕ ಕಾರ್ಯಕ್ರಮದ ಮಹತ್ವವನ್ನು ಸಾರಿದರು. ಸುಬ್ರಾಯ ಸಂಪಾಜೆ ಅವರು ಹಿರಿಯ ನಾಗರಿಕರಿಗೆ ಸಂಬ0ಧಿಸಿದ ಪುರಾಣ ಕಥೆಗಳನ್ನು ಉಲ್ಲೇಖಿಸಿ ಯಕ್ಷಗಾನದ ಹಾಡುಗಳನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು. ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ವೇಣುಗೋಪಾಲ್ ಅವರು ಹಿರಿಯರನ್ನು ಪ್ರೀತಿಯಿಂದ ನೋಡಿಕೊಳ್ಳುವಂತೆ ಕರೆ ನೀಡಿದರು. ರೋಟರಿ ಜಿಲ್ಲೆ 3181ರ ವಲಯ 6ರ ವಲಯ ಸೇನಾನಿ ರೊ.ವಸಂತ್ ಕುಮಾರ್ ಅವರು ಮಾತನಾಡಿ ಹಿರಿಯ ನಾಗರಿಕರ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಹಿರಿಯರ ಆರೈಕೆ ನಮ್ಮ ಜವಾಬ್ದಾರಿ ಎಂಬುವುದನ್ನು ಅರಿತು ಅವರನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಹೇಳಿದರು. ರೋಟರಿ ವುಡ್ಸ್ ನ ನಿಕಟಪೂರ್ವ ಅಧ್ಯಕ್ಷ ರೊ.ಕಿರಣ್ ಕುಂದರ್ ಹಾಗೂ ವುಡ್ಸ್ ಕಾರ್ಯದರ್ಶಿ ರೊ.ಸ್ಮಿತಾ ಚೆಂಗಪ್ಪ ಉಪಸ್ಥಿತರಿದ್ದರು. ಹಿರಿಯ ತಲೆಮಾರು ನಡೆದು ಬಂದ ರೀತಿ, ಕೂಡು ಕುಟುಂಬದ ಸಂಭ್ರಮ ಹಾಗೂ ಆಚಾರ-ವಿಚಾರಗಳನ್ನು ಒಳಗೊಂಡ ಸಾಕ್ಷ್ಯಚಿತ್ರ ಚಿತ್ರವನ್ನು ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸಲಾಯಿತು. ಸಾಕ್ಷ್ಯಚಿತ್ರ ಚಿತ್ರ ವೀಕ್ಷಿಸಿದ ಸಭಿಕರು ಭಾವುಕರಾದರು. ಬಳಿಕ ಹಿರಿಯ ನಾಗರಿಕರನ್ನು ವೇದಿಕೆಗೆ ಆಹ್ವಾನಿಸಿ ಅವರ ಜೀವನಾನುಭವಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿರಿಯ ನಾಗರಿಕರಿಗೆ ರೋಟರಿ ವುಡ್ಸ್ ಹೆಸರಿನ ಛತ್ರಿಗಳನ್ನು ನೀಡಿ ಗೌರವಿಸಲಾಯಿತು. ಕಾಲೇಜು ಉಪನ್ಯಾಸಕಿ ರಾಖೀ ಪೂವಣ್ಣ ಅವರ ಮಾರ್ಗದರ್ಶನದಲ್ಲಿ ರೋಟರಾಕ್ಟ್ ಕ್ಲಬ್ ಸದಸ್ಯರು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಿರ್ವಹಿಸಿ ಗಮನ ಸೆಳೆದರು. ರೋಟರಿಯನ್ನರಾದ ಧನಂಜಯ ಶಾಸ್ತಿç, ರವಿ ಪಿ., ರವೀಂದ್ರ ಹೆಚ್., ದಿವ್ಯಾ ಲೋಕೇಶ್ ಸೇರಿದಂತೆ ಬೋಧಕ ವರ್ಗ ಹಾಗೂ ಪೋಷಕರು ಉಪಸ್ಥಿತರಿದ್ದರು. ರೋಟರಾಕ್ಟ್ ಕ್ಲಬ್ ಸದಸ್ಯರ ಪ್ರಾರ್ಥನೆ ಹಾಗೂ ಹೂವಿನ ಕುಂಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.









