ಮಡಿಕೇರಿ, NEWS DESK ಆ.24 : ಕಾವೇರಿ ನದಿಯ ಸಂರಕ್ಷಣೆ, ಸ್ವಚ್ಛತೆ ಮತ್ತು ಜನಜಾಗೃತಿಗಾಗಿ 16ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ಅ.26ರಿಂದ ತಲಕಾವೇರಿಯಲ್ಲಿ ಆರಂಭವಾಗಿ ನ.18ರಂದು ಕಾವೇರಿಯು ಬಂಗಾಳಕೊಲ್ಲಿಯಲ್ಲಿ ಸಂಗಮವಾಗುವ ತಮಿಳುನಾಡಿನ ಪೂಂಪುಹಾರ್ ವರೆಗೆ ನಡೆಯಲಿದೆ ಎಂದು ರಾಜ್ಯ ಸಂಚಾಲಕ ಎಂ.ಎನ್.ಚAದ್ರಮೋಹನ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ಸನ್ಯಾಸಿ ಸಂಘದ ಆಶ್ರಯದಲ್ಲಿ, ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್, ಕಾವೇರಿ ರಿವರ್ ಸೇವಾ ಟ್ರಸ್ಟ್ ಹಾಗೂ ನಮಾಮಿ ಕಾವೇರಿ ಸಹಯೋಗದಲ್ಲಿ ರಥಯಾತ್ರೆ ಆಯೋಜಿಸಲಾಗಿದೆ ಎಂದರು.
ಕಾವೇರಿ ನದಿ ದಕ್ಷಿಣ ಭಾರತದ ಕೋಟ್ಯಂತರ ಜನರು ಹಾಗೂ ಜಾನುವಾರುಗಳಿಗೆ ಜೀವಜಲವಾಗಿದ್ದು, ಇತ್ತೀಚಿನ ದಿನಗಳಲ್ಲಿ ಮಾಲಿನ್ಯ, ಅರಣ್ಯ ನಾಶ, ಪ್ಲಾಸ್ಟಿಕ್ ತ್ಯಾಜ್ಯ, ರಾಸಾಯನಿಕ ಕೃಷಿ, ಒಳಚರಂಡಿ ಹಾಗೂ ಕೈಗಾರಿಕಾ ತ್ಯಾಜ್ಯಗಳಿಂದ ನದಿಯ ಪಾವಿತ್ರ್ಯತೆ ಹಾಳಾಗುತ್ತಿದೆ. ನದಿ ತಟಗಳ ಒತ್ತುವರಿ ಮತ್ತು ಜಲಮೂಲಗಳ ನಾಶದಿಂದ ಕಾವೇರಿ ತನ್ನ ಮೂಲ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಥಯಾತ್ರೆಯ ಮೂಲಕ ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಭಾಗಗಳಲ್ಲಿ ಸಾಧು-ಸಂತರು, ಸ್ವಾಮೀಜಿಗಳು ಹಾಗೂ ಕಾರ್ಯಕರ್ತರು ಕಾವೇರಿ ನದಿ ತಟಗಳಲ್ಲಿ ಸಂಚರಿಸಿ ಜನರಿಗೆ ನದಿ ಸಂರಕ್ಷಣೆ, ನೀರಿನ ಸ್ವಚ್ಛತೆ ಮತ್ತು ಪರಿಸರ ಜಾಗೃತಿ ಮೂಡಿಸಲಿದ್ದಾರೆ ಎಂದು ಹೇಳಿದರು.
ರಥಯಾತ್ರೆಗೆ ಚಾಲನೆ- ಅ.25ರಂದು ಕಾವೇರಿ ನದಿ ಜಾಗೃತಿ ತೀರ್ಥಯಾತ್ರೆ ತಂಡ ಕುಶಾಲನಗರ ಮೂಲಕ ತಲಕಾವೇರಿಗೆ ಸಂಜೆ ತಲುಪಲಿದೆ. ಅ.26ರಂದು ಬೆಳಗ್ಗೆ 8 ಗಂಟೆಗೆ ತಲಕಾವೇರಿ ಕ್ಷೇತ್ರದಲ್ಲಿ ರಥಯಾತ್ರೆಗೆ ಚಾಲನೆ ದೊರಕಲಿದೆ. ಬಳಿಕ ಭಾಗಮಂಡಲ ಸಂಗಮದಲ್ಲಿ ಕಾವೇರಿ ಆರತಿ ನಡೆಯಲಿದೆಯೆಂದು ತಿಳಿಸಿದರು.

ಬೆಳದಿಂಗಳ ಊಟ ಕಾರ್ಯಕ್ರಮ- ಅಂದು ಸಂಜೆ 4 ಗಂಟೆಗೆ ಕುಶಾಲನಗರ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ಕಾವೇರಿ ಆರತಿ ನಡೆಯಲಿದೆ. ಸಂಜೆ 7 ಗಂಟೆಗೆ ಕುಶಾಲನಗರದ ಕೊಪ್ಪ ಗಡಿ ಭಾಗದ ಕಾವೇರಿ ನದಿ ಸೇತುವೆಯಲ್ಲಿ ನಿರ್ಮಾಣವಾಗಿರುವ ಕಾವೇರಿ ರೋಟರಿ ಉದ್ಯಾನದಲ್ಲಿ ಸಾಧು ಸಂತರು, ವಿವಿಧ ಸಂಘ ಸಂಸ್ಥೆಗಳೊAದಿಗೆ “ಬೆಳದಿಂಗಳ ಊಟ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅ.27 ರಂದು ಬೆಳಗ್ಗೆ ಕುಶಾಲನಗರದದಿಂದ ಕಣಿವೆ , ರಾಮನಾಥಪುರ ಮಾರ್ಗವಾಗಿ ತೆರಳಲಿರುವುದಾಗಿ ವಿವರಗಳನ್ನಿತ್ತರು.
ಕಾವೇರಿಯ ಗಡಿಗಳನ್ನು ಗುರುತಿಸಿ- ಕಳೆದ ಹದಿನಾರು ವರ್ಷಗಳಿಂದ ಯಾತ್ರೆಯ ಮೂಲಕ ಕಾವೇರಿ ನದಿ ಸ್ವಚ್ಛತೆ, ಪಾವಿತ್ರö್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆÀ. ಪ್ರಮುಖವಾಗಿ ಕೊಡಗಿನಲ್ಲಿ ಕಾವೇರಿಯ ಪಾತ್ರಗಳು ಒತ್ತುವರಿಯಾಗುತ್ತಿದ್ದು, ಇವುಗಳನ್ನು ತೆರವುಗೊಳಿಸಿ, ಒತ್ತುವರಿದಾರರಿಗೆ ಪುನರ್ವಸತಿ ಕಲ್ಪಿಸಬೇಕು ಮತ್ತು ನದಿ ಗಡಿಗಳನ್ನು ಗುರುತಿಸಬೇಕಾಗಿದೆ. ಕಾವೇರಿ ನದಿ ನೀರಿನ ಹಂಚಿಕೆಯ ಕಾನೂನು ವಿವಾದಗಳಿಗೆ ಕೋಟ್ಯಂತರ ವ್ಯಯವಾಗುತ್ತಿದೆ. ಇದಕ್ಕೆ ಬದಲಾಗಿ ಒಂದು ಸಾವಿರ ಕೊಟಿ ರೂ,.ಗಳ ವಿಶೇಷ ಪ್ಯಾಕೇಜನ್ನು ಕಾವೇರಿ ನದಿಯ ಸ್ವಚ್ಛತೆ, ಪರಿಸರ ಸಂರಕ್ಷಣೆಯ ಸಮಗ್ರ ಯೋಜನೆಗೆ ಮೀಸಲಿಡಬೇಕೆಂದು ಒತ್ತಾಯಿಸಿದರು.
ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿಗಳು ಮಾತನಾಡಿ, ನದಿಗಳು ಮತ್ತು ಅವುಗಳ ಪರಿಸರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು. ನದಿಯ ಪಾವಿತ್ರö್ಯತೆ ಮತ್ತು ಸ್ವಚ್ಛತೆಯಿಂದ ಆರೋಗ್ಯಯುತವಾದ ಸಮಾಜ ನಿರ್ಮಾಣ ಸಾಧ್ಯವಾಗಬಲ್ಲುದು. ಈ ನಿಟ್ಟಿನಲ್ಲಿ ಕಳೆದ ಹದಿನಾರು ವರ್ಷಗಳಿಂದ ರಥಯಾತ್ರೆಯ ಮೂಲಕ ಜಾಗೃತಿ ಕಾರ್ಯಕ್ರಮ ನಡೆಯುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಮಾಮಿ ಕಾವೇರಿ ಸಂಘÀಟನೆಯ ಅಧ್ಯಕ್ಷರಾದ ವನಿತಾ ಚಂದ್ರ ಮೋಹನ್ ಮಾತನಾಡಿ, ಕಾವೇರಿ ಪರಿಸರದ ಸಂರಕ್ಷಣೆÉಗೆ ಪೂರಕವಾಗಿ “ತಾಯಿಯ ನೆನಪಿನಲ್ಲಿ ಒಂದು ಗಿಡ” ಕಾರ್ಯಕ್ರಮವನ್ನು ಸಂಘಟನೆ ನಡೆಸುತ್ತಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಮಾಮಿ ಕಾವೇರಿ ಸಂಘಟನೆಯ ಪ್ರಮುಖರಾದ ಕೊಕ್ಕಲೆರ ಧರಣಿ ಉಪಸ್ಥಿತರಿದ್ದರು.







