ಮಡಿಕೇರಿ, NEWS DESK ಆ.25 : ಪಶ್ಚಿಮಘಟ್ಟ ಪರಿಸರ ಸೂಕ್ಷö್ಮವಲಯದ ಪಟ್ಟಿಯಿಂದ ಕೊಳಗದಾಳು ಗ್ರಾಮವನ್ನು ಕೈಬಿಡುವಂತೆ ಒತ್ತಾಯಿಸಿ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಶಾಂತಿಯುತ ಮೆರವಣಿಗೆ ನಡೆಸಿ ಬೇಂಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿಪಿನ್ ಅವರಿಗೆ ಆಕ್ಷೇಪಣೆ ಸಲ್ಲಿಸಿದರು.
ಕೇಂದ್ರ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಜುಲೈ 27, 2026ರಂದು ಪ್ರಕಟಿಸಿರುವ ಹೊಸ ಕರಡು ಅಧಿಸೂಚನೆಯಲ್ಲಿ ಕೊಡಗು ಜಿಲ್ಲೆಯ 55 ಗ್ರಾಮಗಳನ್ನು ಪರಿಸರ ಸೂಕ್ಷö್ಮವಲಯದ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದ್ದು, ಇವುಗಳಲ್ಲಿ ಕೊಳಗದಾಳು ಗ್ರಾಮವೂ ಸೇರಿದೆ. ಈ ಗ್ರಾಮದಲ್ಲಿ ಶತಮಾನಗಳಿಂದ ರೈತರು, ಕೃಷಿ ಕಾರ್ಮಿಕರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರು ವಾಸಿಸುತ್ತಿದ್ದು, ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಶಾಲೆ, ಅಂಗನವಾಡಿ, ವಸತಿ ಪ್ರದೇಶ, ಸಾರ್ವಜನಿಕ ಸಮುದಾಯ ಭವನ, ರಸ್ತೆಗಳು, ಕುಡಿಯುವ ನೀರಿನ ಪೈಪ್ಲೈನ್ಗಳು ಹಾಗೂ ನೈಸರ್ಗಿಕ ನೀರಿನ ಟ್ಯಾಂಕ್ಗಳಿವೆ.
ಈಗಾಗಲೇ ಅರಣ್ಯದ ಅಂಚಿನಲ್ಲಿರುವ ಕೊಳಗದಾಳು ಗ್ರಾಮದಲ್ಲಿ ನಿರಂತರವಾಗಿ ವನ್ಯಜೀವಿಗಳ ಹಾವಳಿ ಎದುರಾಗುತ್ತಿದ್ದು, ಕೃಷಿ ಬೆಳೆ ಹಾನಿ ಹಾಗೂ ಮಾನವ ಪ್ರಾಣಹಾನಿಯಂತಹ ಘಟನೆಗಳಿಗೆ ಕಾರಣವಾಗುತ್ತಿದೆ. ಗ್ರಾಮದ ಒಟ್ಟು ಭೂಪ್ರದೇಶದಲ್ಲಿ ಈಗಾಗಲೇ ಶೇ.36ರಷ್ಟು ಮೀಸಲು ಅರಣ್ಯ ಹಾಗೂ ದೇವರಕಾಡುಗಳಿವೆ. ಇಂತಹ ಸಂದರ್ಭದಲ್ಲಿ ಗ್ರಾಮವನ್ನು ಪರಿಸರ ಸೂಕ್ಷö್ಮವಲಯಕ್ಕೆ ಸೇರಿಸಿದರೆ ಬಡವರು ಹಾಗೂ ಕೃಷಿಕರ ಬದುಕಿಗೆ ತೊಂದರೆಯಾಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ಪರಿಸರ ಸೂಕ್ಷö್ಮವಲಯದಿಂದ ಕೊಳಗದಾಳು ಗ್ರಾಮವನ್ನು ಕೈಬಿಟ್ಟು, ಕರಡು ಅಧಿಸೂಚನೆಯಿಂದ ಗ್ರಾಮ ಹಾಗೂ ಕೊಡಗು ಜಿಲ್ಲೆಗೆ ಉಂಟಾಗಬಹುದಾದ ಅನಾಹುತಗಳನ್ನು ತಪ್ಪಿಸಬೇಕು. ಆ ಮೂಲಕ ಗ್ರಾಮಸ್ಥರು ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಆಕ್ಷೇಪಣೆ ಸಲ್ಲಿಸಿದರು.
ಸಾರ್ವಜನಿಕರು, ರೈತರು, ಗ್ರಾಮ ಪಂಚಾಯಿತಿಗಳು ಹಾಗೂ ವಿವಿಧ ಸಂಘ-ಸAಸ್ಥೆಗಳು ಆಕ್ಷೇಪಣೆ ಅಥವಾ ಸಲಹೆ ಸಲ್ಲಿಸಲು ಕೇಂದ್ರ ಸರಕಾರÀ 60 ದಿನಗಳ ಕಾಲಾವಕಾಶ ನೀಡಿದ್ದು, ನಮ್ಮ ಮನವಿಯನ್ನು ಸರಕಾರ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಚರಣಿಯಂಡ ಸುಮನ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಸ್ತೂರಿ ರಂಗನ್ ವರದಿಗೆ ವಿರೋಧ ವ್ಯಕ್ತಪಡಿಸುವ ಕುರಿತು ಸೇವ್ ಕೊಡಗು ಸಂಘಟನೆಯ ಸಂಚಾಲಕ ಕೀಪಾಡಂಡ ಮಧು ಬೋಪಣ್ಣ ಅವರು ಮಾತನಾಡಿದರು. ಚೇರಂಬಾಣೆ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಬಡ್ಡೀರ ಆನಂದ ಹಾಗೂ ಪಟ್ಟಮಾಡ ಪೊನ್ನಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಳಗದಾಳು ಗ್ರಾಮದ ಕೂರನ ಮೋಹನ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ವಿ.ಕಿಶೋರ್ ಕುಮಾರ್, ಬಾಚರಣಿಯಂಡ ಹ್ಯಾರಿ ತಮ್ಮಯ್ಯ, ಮುಕ್ಕಾಟ್ಟಿ ನಾಣಯ್ಯ, ನಾಳಿಯಮ್ಮನ ಜೀವನ್, ಕುಂಚೆಟ್ಟಿರ ಅಜಿತ್, ರಾಜಪ್ಪ, ಬೇಂಗೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷÀ ಪಿ.ಜಿ.ಜೀವನ್, ಕೆ.ಬಿ.ಅಶೋಕ್, ಕೊಳಗದಾಳು ಗ್ರಾಮಸ್ಥರು ಹಾಗೂ ಬೇಂಗೂರು ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಭಾಗವಹಿಸಿದ್ದರು. ಫೋಟೋ :: ಕೊಳಗದಾಳು







