ಮಡಿಕೇರಿ, NEWS DESK ಆ.25 : ಕೊಡಗಿನ ಜನತೆಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿಯಲ್ಲಿನ ಕೊಡಗಿನ ಸೂಕ್ಷ್ಮ ಪರಿಸರ ಪ್ರದೇಶಗಳಾಗಿ ಗುರುತಿಸಲ್ಪಟ್ಟ ಗ್ರಾಮಗಳನ್ನು ವರದಿಯಿಂದ ಕೈ ಬಿಡುವುದಕ್ಕೆ ಪೂರಕವಾಗಿ ಕಂದಾಯ ಮತ್ತು ಅರಣ್ಯ ಇಲಾಖಾ ಜಂಟಿ ಸರ್ವೆ ಕಾರ್ಯಕ್ಕೆ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಯ ಏಳನೇ ಕರಡು ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಇದನ್ನು ರಾಜ್ಯ ಸರ್ಕಾರ ಈಗಾಗಲೇ ತಿರಸ್ಕರಿಸಿದ್ದು, ಇದಕ್ಕೆ ನಮ್ಮ ಸಹಮತ ಮತ್ತು ಬೆಂಬಲವಿದೆ. ಆದರೆ, ವರದಿಯನ್ನು ತಿರಸ್ಕರಿಸಿರುವ ಕ್ರಮ ಕೇವಲ ಪಶ್ಚಿಮಘಟ್ಟ ಪ್ರದೇಶದ ಜನರ ಆಕ್ರೋಶದಿಂದ ತಪ್ಪಿಸಿಕೊಳ್ಳುವ ಅಥವಾ ಕೈತೊಳೆದುಕೊಳ್ಳುವ ಪ್ರಯತ್ನವಾಗಬಾರದು ಎಂದರು.
ಕಸ್ತೂರಿ ರಂಗನ್ ವರದಿಯ ಆರಂಭದ ಹಂತದಲ್ಲೆ ನೆರೆಯ ಕೇರಳ ರಾಜ್ಯವು, ತನ್ನ ರಾಜ್ಯದಲ್ಲಿನ ಪರಿಸರ ಸೂಕ್ಷ್ಮ ವಲಯಕ್ಕೆ ಒಳಪಟ್ಟ ಗ್ರಾಮಗಳಿಗೆ ಸಂಬಂಧಿಸಿದಂತೆ ಕಂದಾಯ, ಅರಣ್ಯ ಇಲಾಖೆಯ ಜಂಟಿ ಸರ್ವೇ ನಡೆಸಿ, ಆ ಗ್ರಾಮಗಳನ್ನು ಪಟ್ಟಿಯಿಂದ ತೆಗೆಸುವಲ್ಲಿ ಯಶಸ್ವಿಯಾಗಿದೆ. ಅದೇ ರೀತಿ ಕೊಡಗನ್ನು ಒಳಗೊಂಡಂತೆ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿನ 1500ಕ್ಕೂ ಹೆಚ್ಚಿನ ಜನವಸತಿಯನ್ನು ಹೊಂದಿದ ಸೂಕ್ಷö್ಮ ಪರಿಸರ ವಲಯಕ್ಕೆ ಒಳಪಟ್ಟ ಗ್ರಾಮಗಳನ್ನು ಕೈ ಬಿಡುವ ಕುರಿತಾದ ಸಮಗ್ರ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಬೇಕೆಂದು ತಿಳಿಸಿದರು.
ಬಫರ್ ಝೋನ್ “0”ಗೆ ಸೀಮಿತವಾಗಲಿ- ಪಶ್ಚಿಮಘಟ್ಟ ಸಂರಕ್ಷಣೆೆಗೆ ಸಂಬಂಧಿಸಿದಂತೆ ಕಸ್ತೂರಿ ರಂಗನ್ ವರದಿಯಲ್ಲಿ ಪರಿಸರ ಸೂಕ್ಷ್ಮ ವಲಯದ ಗಡಿಯಿಂದ 0 ದಿಂದ 10 ಕಿ.ಮೀ. ವರೆಗಿನ ಪ್ರದೇಶವನ್ನು ಬಫರ್ ಝೋನ್ಗೆ ಅವಕಾಶವಿದೆ. ಇದನ್ನು “0”ಗೆ ಸೀಮಿತಗೊಳಿಸಬೇಕು. ಯಾವುದೇ ಕಾರಣಕ್ಕೂ ಬಫರ್ಝೋನ್ ವಿಸ್ತ್ತರಿಸಕೂಡದೆಂದು ಆಗ್ರಹಿಸಿದರು.
ಕಸ್ತೂರಿ ರಂಗನ್ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಕೆ ಮಾಡಲು 60 ದಿನಗಳ ಕಾಲಾವಕಾಶ ನೀಡಲಾಗಿದೆ. ಪ್ರಸ್ತುತ ಗ್ರಾಮ ಪಂಚಾಯ್ತಿಗಳಲ್ಲಿ ಆಡಳಿತ ಮಂಡಳಿ ಇಲ್ಲದೆ, ಆಡಳಿತಾಧಿಕಾರಿಗಳಷ್ಟೆ ಇದ್ದಾರೆ. ಈ ಹಿನ್ನೆಲೆ ಕರ್ನಾಟಕ ರಾಜ್ಯ ಸರ್ಕಾರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಗ್ರಾ.ಪಂ ಆಡಳಿತಾಧಿಕಾರಿಗಳಿಗೆ “ವಿಶೇಷ ಗ್ರಾಮ ಸಭೆ” ನಡೆಸಲು ಸೂಚನೆ ನೀಡಬೇಕು ಮತ್ತು ಈ ವಿಶೇಷ ಸಭೆಗಳಲ್ಲಿ ಕಸ್ತೂರಿ ರಂಗನ್ ವರದಿಗೆ ವಿರುದ್ಧವಾದ ನಿರ್ಣಯ ಕೈಗೊಂಡು ಕಳುಹಿಸುವ ಕಾರ್ಯ ನಡೆಯಬೇಕು ಎಂದರು.
ಆ.27 ರಂದು ಸರ್ವಪಕ್ಷಗಳ ಸಭೆ- ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಸರ್ವ ಪಕ್ಷಗಳ , ಸಂಘ ಸಂಸ್ಥೆಗಳ ಸಭೆಯನ್ನು ಸಂಸದ ಯದುವೀರ್ ಒಡೆಯರ್ ಅವರು ಆ.27ರಂದು ಬೆ.11 ಗಂಟೆಗೆ ನಗರದ ರಾಜದರ್ಶನ ಸಭಾಂಗಣದಲ್ಲಿ ಕರೆದಿದ್ದಾರೆ. ಇದಕ್ಕೆ ಸ್ಥಳೀಯ ಶಾಸಕರಿಗೆ ಆಹ್ವಾನ ನೀಡಲಾಗುತ್ತದೆ ಎಂದು ರವಿ ಕಾಳಪ್ಪ ಸ್ಪಷ್ಟಪಡಿಸಿದರು.
ಕೃತಕ ಮಳೆಯಿಂದ ರಾಸಾಯನಿಕಗಳು ಭೂಮಿಗೆ ಸೇರಿ ಅಲ್ಲಿನ ಸೂಕ್ಷö್ಮ ಜೀವಿಗಳಿಗೆ ತೊಂದರೆಯುಂಟಾಗುವ ಸಾಧ್ಯತೆ ಇದೆ. ಈಗಾಗಲೆ ಜಿಲೆಯಲ್ಲಿ ಹೆಚ್ಚಿನ ಮಳೆಯಿಂದ ಕಾಫಿ ಕೃಷಿಯಲ್ಲಿ ಕೊಳೆರೋಗದ ಬಾಧೆ ಕಾಣಿಸಿಕೊಂಡಿದ್ದು, ಯಾವುದೇ ಕಾರಣಕ್ಕೂ ಮೋಡಬಿತ್ತನೆ ಜಿಲ್ಲೆಗೆ ಬೇಡ. ಅಗತ್ಯ ಸರ್ವೇ ನಡೆಸಿ ಜಿಲ್ಲೆಯ ಬೆಳೆಗಾರರಿಗೆ ಕೃಷಿ ಹಾನಿಗೆ ಸಂಬಂಧಿಸಿದಂತೆ ಪರಿಹಾರ ಒದಗಿಸಬೇಕೆಂದರು.
ಪಕ್ಷದ ಪ್ರಮುಖರಾದ ನಾಗೇಶ್ ಕುಂದಲ್ಪಾಡಿ ಅವರು ಮಾತನಾಡಿ, ಕಂದಾಯ ಮತ್ತು ಅರಣ್ಯ ಇಲಾಖಾ ಸರ್ವೇ ಕಾರ್ಯದ ಮೂಲಕ ಕೃಷಿ ಪ್ರದೇಶ ಮತ್ತು ಸ್ವಾಭಾವಿಕ ಅರಣ್ಯಗಳನ್ನು ಸ್ಪಷ್ಟವಾಗಿ ಗುರುತಿಸುವ ಕಾರ್ಯ ನಡೆಯಬೇಕಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಉಪಾಧ್ಯಕ್ಷ ಕಾರೇರ ಸತೀಶ್ ಹಾಗೂ ಮಂಡಲ ಅಧ್ಯಕ್ಷ ಸುವಿನ್ ಗಣಪತಿ ಉಪಸ್ಥಿತರಿದ್ದರು.








