ಮಡಿಕೇರಿ, NEWS DESK ಆ. 26: ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ, ತಲೆತಲಾಂತರಗಳಿಂದ ಸಿ ಮತ್ತು ಡಿ ದರ್ಜೆಯ ಜಮೀನಿನಲ್ಲಿ ಬದುಕು ಕಟ್ಟಿಕೊಂಡಿರುವ ಕೃಷಿಕ ಸಮೂಹವು ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ ಎಂದು ರೈತ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಯಿಂದ ಜನವಸತಿಯ 53 ಗ್ರಾಮಗಳನ್ನು ಕೈಬಿಡುವುದು ಸೇರಿದಂತೆ ಸೂಕ್ಷ್ಮ ಪರಿಸರ ವಲಯದ ಗಡಿಯಿಂದ ಬಫರ್ ಝೋನ್ನ್ನು ‘ಶೂನ್ಯ’ಕ್ಕೆ ಮಿತಿಗೊಳಿಸಬೇಕೆಂದು ಆಗ್ರಹಿಸಿ, ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಸೆ. 11ರಂದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಅಂದು ಬೆಳಗ್ಗೆ 10.30 ಗಂಟೆಗೆ ಮಡಿಕೇರಿಯ ಸುದರ್ಶನ ವೃತ್ತದ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಗಾಂಧಿ ಮೈದಾನದಲ್ಲಿ ಬಹಿರಂಗ ಸಭೆ ನಡೆಸಲು ಉದ್ದೇಶಿಸಲಾಗಿದೆ. ಇದರಲ್ಲಿ ಜಿಲ್ಲೆಯಾದ್ಯಂತದಿಂದ ಜನರು ಹಾಗೂ ಸಂಘ-ಸಂಸ್ಥೆಗಳು ಪಾಲ್ಗೊಳ್ಳಲಿರುವುದಾಗಿ ಹೇಳಿದರು.
ಇಡೀ ಜಿಲ್ಲೆಯೇ ಸೂಕ್ಷ್ಮ ಪರಿಸರ ವಲಯವಾಗುವ ಆತಂಕ
ಕಸ್ತೂರಿ ರಂಗನ್ ವರದಿ ಯಥಾವತ್ತಾಗಿ ಅನುಷ್ಠಾನವಾದಲ್ಲಿ ಇಡೀ ಕೊಡಗು ಜಿಲ್ಲೆಯೇ ಸೂಕ್ಷ್ಮ ಪರಿಸರ ವಲಯವಾಗಿ ಪರಿವರ್ತನೆಯಾಗುವ ಅಪಾಯವಿದೆ. ವರದಿಯಲ್ಲಿ ಸೂಚಿಸಿರುವ ಸೂಕ್ಷ್ಮ ಪರಿಸರ ವಲಯದ 55 ಗ್ರಾಮಗಳಲ್ಲಿ 53 ಗ್ರಾಮಗಳು ಜನವಸತಿಯನ್ನು ಹೊಂದಿವೆ. ಈ ಸೂಕ್ಷ್ಮ ಪರಿಸರ ವಲಯಕ್ಕೆ ಒಳಪಟ್ಟ ಗ್ರಾಮಗಳು ಹಾಗೂ ಹಸಿರು ವಲಯದ ಗಡಿ ಭಾಗದಿಂದ, ವರದಿಯಲ್ಲಿ ತಿಳಿಸಿರುವಂತೆ 0-10 ಕಿ.ಮೀ. ಬಫರ್ ಝೋನ್ ಎಂದು ಘೋಷಿಸಿದಲ್ಲಿ ಇಡೀ ಕೊಡಗು ಸೂಕ್ಷ್ಮ ಪರಿಸರ ವಲಯವಾಗುವ ಆತಂಕವಿದೆ ಎಂದು ತಿಳಿಸಿದರು.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ, ಅದರಲ್ಲೂ ಸೋಮವಾರಪೇಟೆ ತಾಲ್ಲೂಕಿನ ಸಾಕಷ್ಟು ಕಡೆಗಳಲ್ಲಿ ಜನವಸತಿ ಪ್ರದೇಶಗಳನ್ನು ಸಿ ಮತ್ತು ಡಿ ದರ್ಜೆಯ ಜಾಗವೆಂದು ಗುರುತಿಸಲಾಗಿದೆ. ಅಲ್ಲಿ ತಲೆತಲಾಂತರಗಳಿಂದ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವವರ ಜಾಗದ ದಾಖಲೆಗಳಲ್ಲಿ ‘ಅರಣ್ಯ’ವೆಂದು ನಮೂದಾಗಿದೆ. ಇದನ್ನು ಕೈಬಿಟ್ಟು ಕೃಷಿಕರ ಜಾಗವನ್ನು ಸೆಕ್ಷನ್ 50, 53, 57ರ ಅಡಿಯಲ್ಲಿ ಅವರಿಗೆ ಒದಗಿಸಬೇಕೆನ್ನುವುದು ತಮ್ಮ ಆಗ್ರಹವಾಗಿದೆ ಎಂದು ಸುರೇಶ್ ಸ್ಪಷ್ಟಪಡಿಸಿದರು.
ಅವಧಿ ಕಳೆದರೂ ದೊರಕದ ಉತ್ತರ
ಸಿ ಮತ್ತು ಡಿ ಜಮೀನಿನ ಸಮಸ್ಯೆಯ ಬಗೆಹರಿಕೆಗೆ ಸಮಿತಿ ರಚಿಸಿ ಆರು ತಿಂಗಳೊಳಗಾಗಿ ವರದಿ ನೀಡುವಂತೆ ಕಳೆದ ಸಾಲಿನ ನ. 27ರಂದು ಸರ್ಕಾರ ಸೂಚಿಸಿದೆ. ಈ ಅವಧಿ ಮುಕ್ತಾಯವಾಗಿದ್ದರೂ ಸಿ ಮತ್ತು ಡಿ ಜಾಗದ ಕುರಿತು ಇಲ್ಲಿಯವರೆಗೆ ಸ್ಪಷ್ಟವಾದ ಉತ್ತರ ದೊರೆತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಿ ಮತ್ತು ಡಿ ಜಮೀನಿನ ಸಂಕಷ್ಟಗಳ ನಡುವೆಯೇ ಇದೀಗ ಕಸ್ತೂರಿ ರಂಗನ್ ವರದಿಯ ಏಳನೇ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಇದು ಜಾರಿಯಾದಲ್ಲಿ ಸಿ ಮತ್ತು ಡಿ ಜಮೀನಿನ ಸಂಕಷ್ಟ ಎದುರಿಸುತ್ತಿರುವ ಮಂದಿ ಮತ್ತಷ್ಟು ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಿದರು.
ಬ್ರಿಟಿಷರ ಕಾಲದ ಸೆಕ್ಷನ್ 4 ಕೈಬಿಡಿ
ಈ ಎಲ್ಲಾ ಸಂಕಷ್ಟಗಳ ನಡುವೆ ರಕ್ಷಿತಾರಣ್ಯಗಳಿಗೆ ಸಂಬಂಧಿಸಿದಂತೆ ಬ್ರಿಟಿಷರ ಅವಧಿಯಲ್ಲಿ 1905ರಲ್ಲಿ ಜಾರಿಗೆ ತಂದ ಸೆಕ್ಷನ್ 5ನ್ನು ಮುಂದಿಟ್ಟುಕೊಂಡು ರೈತರ ಕೃಷಿ ಜಮೀನನ್ನು ಅರಣ್ಯವೆನ್ನುವ ಮೂಲಕ ಸಂಕಷ್ಟ ತಂದೊಡ್ಡುವ ಕಾರ್ಯ ನಡೆದಿದೆ. ಈ ಹಿನ್ನೆಲೆಯಲ್ಲಿ ಸೆಕ್ಷನ್ 4ನ್ನು ಸಂಪೂರ್ಣವಾಗಿ ಕೈಬಿಟ್ಟು, ಹಾಲಿ ಇರುವ ಅರಣ್ಯವನ್ನಷ್ಟೇ ಮುಂದುವರಿಸಬೇಕೆಂದು ಆಗ್ರಹಿಸುವ ಸಲುವಾಗಿಯೂ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸ್ಪಷ್ಟಪಡಿಸಿದರು.
ಹಾರಂಗಿ ಅಣೆಕಟ್ಟಿನಿಂದ ಮುಳುಗಡೆಯಾದ ಸುಮಾರು 3,600 ಎಕರೆ ಪ್ರದೇಶಕ್ಕೆ ಬದಲಿಯಾಗಿ ಅರಣ್ಯ ಇಲಾಖೆಗೆ ನೀಡಬೇಕಾಗಿರುವ ಸುಮಾರು 11 ಸಾವಿರ ಎಕರೆ ಜಾಗವನ್ನು ಕೊಡಗಿನಲ್ಲಿಯೇ ನೀಡುವ ಬದಲಾಗಿ, ಹೊರ ಜಿಲ್ಲೆಗಳಲ್ಲಿ ಜಾಗ ಗುರುತಿಸಿ ನೀಡಬೇಕು. ಮುಕ್ಕೋಡ್ಲು ಗ್ರಾಮದ ಕಾಳಚಂಡ ನಾಣಿಯಪ್ಪ ಎಂಬವರಿಗೆ ಸೇರಿದ ತೋಟವನ್ನು ಅರಣ್ಯವೆನ್ನುವ ಮೂಲಕ ಅರಣ್ಯ ಇಲಾಖೆ ನಾಶಪಡಿಸಿದೆ. ಇದಕ್ಕೆ ಸಂಬಂಧಿಸಿದ ಪರಿಹಾರವನ್ನು ತಕ್ಷಣ ಒದಗಿಸಬೇಕೆಂದು ಒತ್ತಾಯಿಸಿದರು.
ಸಮಿತಿಯ ಪ್ರಮುಖರಾದ ಕೀಪಾಡಂಡ ಮಧು ಬೋಪಣ್ಣ ಮಾತನಾಡಿ, ನೆರೆಯ ಕೇರಳ ರಾಜ್ಯದಲ್ಲಿ ನಡೆದಿರುವಂತೆ ಸೂಕ್ಷ್ಮ ಪರಿಸರ ವಲಯಕ್ಕೆ ಸಂಬಂಧಿಸಿದಂತೆ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಸರ್ವೇ ಕಾರ್ಯ ನಡೆಸಿ, ಸೂಕ್ಷ್ಮ ಪರಿಸರ ವಲಯದಿಂದ ಜನವಸತಿ ಪ್ರದೇಶವನ್ನು ವರದಿಯಿಂದ ಹೊರಗಿಡಬೇಕೆಂದು ಆಗ್ರಹಿಸಿದರು.
ವಿಷಯಕ್ಕೆ ಸಂಬಂಧಿಸಿದಂತೆ ಪಶ್ಚಿಮ ಘಟ್ಟ ಪ್ರದೇಶದ ಸಂಸದರು, ಶಾಸಕರನ್ನು ಒಳಗೊಂಡ ನಿಯೋಗವನ್ನು ಕೇಂದ್ರಕ್ಕೆ ಕರೆದೊಯ್ಯುವ ಕಾರ್ಯವನ್ನು ಸ್ಥಳೀಯ ಶಾಸಕರು ಮಾಡಬೇಕೆಂದು ಮಧು ಬೋಪಣ್ಣ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ನತೀಶ್ ಮಂದಣ್ಣ, ಚನ್ನಪಂಡ ದರ್ಶನ್, ಅಯಲಪಂಡ ಲೋಕೇಶ್ ಹಾಗೂ ನಲ್ಲಪಟ್ಟೀರ ಸಂಗ ಅವರು ಉಪಸ್ಥಿತರಿದ್ದರು.







