ಮಡಿಕೇರಿ, NEWS DESK ಆ.26: ಕೊಡಗು ಜಿಲ್ಲೆಯಲ್ಲಿ ಮೋಡ ಭಿತ್ತನೆ ಮಾಡಲ್ಲ. ಅದರ ಅಗತ್ಯವೂ ಜಿಲ್ಲೆಗೆ ಇಲ್ಲ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಸ್ಪಷ್ಟಪಡಿಸಿದ್ದಾರೆ. ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಡಾ.ಮಂತರ್ ಗೌಡ, ಕೊಡಗು ಜಿಲ್ಲೆಯಲ್ಲಿ ಮೋಡ ಭಿತ್ತನೆ ಮಾಡಿಲ್ಲ, ಮಾಡುವ ಅಗತ್ಯವೂ ಇಲ್ಲ. ಈ ಕುರಿತು ನೆನ್ನೆ ದಿನ ಮುಖ್ಯಮಂತ್ರಿಗಳು, ನೀರಾವರಿ ಸಚಿವರ ಜೊತೆಯಲ್ಲಿ ಚರ್ಚೆ ಮಾಡಿ ಅಭಿಪ್ರಾಯ ಮಂಡಿಸಲಾಗಿದೆ ಎಂದು ಹೇಳಿದರು.
ಇನ್ನುಳಿದಂತೆ ಬೇರೆ ಜಿಲ್ಲೆಗಳ ಕಾವೇರಿ ಕಣಿವೆ ಪ್ರವೇಶಗಳಲ್ಲಿ ಮೋಡ ಭಿತ್ತನೆ ಮಾಡಲು ನಮ್ಮ ಅಭ್ಯಂತರವಿಲ್ಲ. ಅಲ್ಲಿ ಬೇಕಾದರೆ ಮೊಡ ಭಿತ್ತನೆ ಮಾಡಲಿ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು. ಈಗ ಮೋಡ ಭಿತ್ತನೆ ಮಾಡಿದಲ್ಲಿ 5ರಿಂದ 8 ಇಂಚು ಮಳೆಯಾಗಿ ಮೇಘ ಸ್ಪೋಟವಾಗುವ ಸಂಭವವಿದೆ. ಆ ಸಂದರ್ಭ ಭೂ ಕುಸಿತದಂತಹ ಘಟನೆಗಳು ಕೂಡ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಸುರಿದ ಮಳೆಗೆ ಕೆಲವು ಕಡೆಗಳಲ್ಲಿ ಸಣ್ಣ ಪ್ರಮಾಣದ ಭೂ ಕುಸಿತವಾಗಿದೆ. ಈ ಎಲ್ಲಾ ವಿಚಾರಗಳನ್ನು ಮುಖ್ಯಮಂತ್ರಿಗಳು ಮತ್ತು ನೀರಾವರಿ ಸಚಿವರ ಗಮನಕ್ಕೆ ತರಲಾಗಿದೆ. ಅವರು ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಶಾಸಕ ಡಾ.ಮಂತರ್ ಗೌಡ ಸ್ಪಷ್ಟಪಡಿಸಿದರು.
ವರದಿ ತಿರಸ್ಕರಿಸಲಾಗಿದೆ:
ಕಸ್ತೂರಿ ರಂಗನ್ ವರದಿಯ 7ನೇ ಅಧಿಸೂಚನೆಯನ್ನು ಕೇಂದ್ರ ಸರಕಾರ ಹೊರಡಿಸಿದೆ. ಈ ವರದಿಯನ್ನು ರಾಜ್ಯ ಸರಕಾರ ತಿರಸ್ಕರಿಸಿದೆ. ಗ್ರಾಮಸ್ಥರಿಗೆ ಆಕ್ಷೇಪಣೆ ಸಲ್ಲಿಸಲು ವಿಶೇಷ ಗ್ರಾಮ ಸಭೆ ನಡೆಸಲು ಅವಕಾಶ ಒದಗಿಸಲು ಸಿಇಓ ಅವರ ಜೊತೆ ಕೂಡ ಚರ್ಚಿಸಲಾಗಿದೆ. ಕಸ್ತೂರಿ ರಂಗನ್ ವರದಿಯಲ್ಲಿ ಸೂಕ್ಷö್ಮ ವಲಯ, ಬಫರ್ ಝೋನ್ ಸೇರಿದಂತೆ ಕೆಲವು ಕಾನೂನಾತ್ಮಕ ವಿಚಾರಗಳು ಇನ್ನೂ ಸ್ಪಷ್ಟವಾಗಿಲ್ಲ. ಆ.28ರಂದು ಪರಿಸರ ಖಾತೆ ಮತ್ತು ಅರಣ್ಯ ಸಚಿವರು ಜಿಲ್ಲೆಗೆ ಆಗಮಿಸಲಿದ್ದು ಆ ಸಂದರ್ಭ ಅವರ ಮೂಲಕ ಜನರ ಪ್ರಶ್ನೆಗಳಿಗೆ ಉತ್ತರ ಕೊಡಿಸಲು ಪ್ರಯತ್ನಿಸಲಾಗುತ್ತದೆ ಎಂದು ಡಾ.ಮಂತರ್ ಗೌಡ ಹೇಳಿದರು.
ಅಭಿವೃದ್ದಿ ಪರ ಚರ್ಚೆ:
ನೆನ್ನೆ ದಿನ ಮುಖ್ಯಮಂತ್ರಿಗಳ ಜೊತೆ ಕೊಡಗಿನ ಅಭಿವೃದ್ದಿ ಕುರಿತು ಚರ್ಚೆ ನಡೆಸಲಾಗಿದೆ. ರಸ್ತೆಗಳು, ಕಂದಾಯ ಇಲಾಖೆ, ನೀರಾವರಿ, ಅರಣ್ಯ ಮತ್ತಿತ್ತರ ವಿಚಾರಗಳ ಕುರಿತು ಚರ್ಚಿಸಲಾಗಿದೆ. ಮುಖ್ಯಮಂತ್ರಿಗಳು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೊಡಗಿನ ಅಭಿವೃದ್ದಿ ವಿಚಾರದಲ್ಲಿ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ಇದೆ ಎಂದು ಹೇಳಿದರು.








