ಸುಂಟಿಕೊಪ್ಪ, NEWS DESK ಸೆ.1: ಮಾನವ–ವನ್ಯಜೀವಿ ಸಂಘರ್ಷದ ಕುರಿತು ಮುಂದಿನ ವಾರದಿಂದಲೇ ಸಭೆಗಳನ್ನು ನಡೆಸಿ, ಹಂತ ಹಂತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ಗೌಡ ಹೇಳಿದರು.
ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಂಜನಾಥಯ್ಯ ಸಭಾಂಗಣದಲ್ಲಿ ನಡೆದ ಮಾನವ–ವನ್ಯಜೀವಿ ಸಂಘರ್ಷ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಹಲವು ಸಭೆಗಳನ್ನು ನಡೆಸಿದ್ದರೂ ಆನೆ–ಮಾನವ ಸಂಘರ್ಷದಿಂದಾಗುವ ಸಾವು-ನೋವು ಮತ್ತು ದಾಳಿಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು. ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ 8 ಗ್ರಾಮ ಪಂಚಾಯಿತಿಗಳಲ್ಲಿ ಆನೆ–ಮಾನವ ಸಂಘರ್ಷದ ಸಮಸ್ಯೆ ನಿರಂತರವಾಗಿದ್ದು, ತುರ್ತು ಸಂದರ್ಭದಲ್ಲಿ ಆಸ್ಪತ್ರೆ ಅಥವಾ ಪರಿಹಾರಕ್ಕಾಗಿ ಚೆಕ್ ನೀಡುವ ಪರಿಸ್ಥಿತಿ ಎದುರಾಗುತ್ತಿದೆ ಎಂದರು.
ಅರಣ್ಯ ಇಲಾಖೆಯ ವಿವಿಧ ವಲಯಗಳ ನಡುವೆ ಸಂವಹನ ಮತ್ತು ಹೊಂದಾಣಿಕೆಯ ಕೊರತೆಯಿರುವುದನ್ನು ಪ್ರಸ್ತಾಪಿಸಿದ ಅವರು, ಅರಣ್ಯ ಇಲಾಖೆ, ಜನರು ಹಾಗೂ ವನ್ಯಜೀವಿಗಳ ಸಮಸ್ಯೆಯನ್ನು ಅರಣ್ಯ ಸಚಿವರ ಮಡಿಕೇರಿ ಭೇಟಿಯ ಸಂದರ್ಭ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು. ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯಲ್ಲಿ ವೈಜ್ಞಾನಿಕವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಆಶಾಭಾವನೆಯೊಂದಿಗೆ ಕೆಲಸ ಮಾಡಬೇಕಿದ್ದು, ಅಗತ್ಯ ಅನುದಾನಕ್ಕಾಗಿ ಸಮಗ್ರ ಕ್ರಿಯಾಯೋಜನೆಯನ್ನು ಸಲ್ಲಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಪ್ರತಿಯೊಂದು ಪರಿಹಾರ ಅಥವಾ ಅನುದಾನಕ್ಕಾಗಿ ಬೆಂಗಳೂರಿನತ್ತ ಮುಖ ಮಾಡಬೇಕಾದ ಪರಿಸ್ಥಿತಿ ತಪ್ಪಿಸಿ, ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಬಳಿ ಅಗತ್ಯ ಅನುದಾನ ಲಭ್ಯವಾಗುವಂತೆ ಅವಕಾಶ ಕಲ್ಪಿಸುವಂತೆ ಅರಣ್ಯ ಸಚಿವರಿಗೆ ಮನವಿ ಮಾಡಿರುವುದಾಗಿ ಹೇಳಿದರು. ಕಾಡಂಚಿನ ಪ್ರದೇಶಗಳಲ್ಲಿ ಕೃಷಿಕರು ಮತ್ತು ಕಾರ್ಮಿಕರು ಜೀವಭಯದಲ್ಲೇ ಬದುಕುವಂತಾಗಿದೆ. ಕೆಲ ಸಂದರ್ಭಗಳಲ್ಲಿ ಅರಣ್ಯ ಇಲಾಖೆಯ ನಡವಳಿಕೆಯಿಂದ ಜನರು ಕಾನೂನನ್ನು ಕೈಗೆತ್ತಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವ್ಯಾಪ್ತಿಯಲ್ಲಿ ಭತ್ತದ ಕೃಷಿ ಅವಲಂಬಿತವಾಗಿದ್ದರೂ ಆನೆಗಳ ಹಾವಳಿಯಿಂದ ಕೃಷಿಕರು ಭತ್ತದ ಬೇಸಾಯ ಕೈಬಿಟ್ಟಿದ್ದಾರೆ. ಕಾಫಿ ತೋಟಗಳು ಕೂಡ ಪಾಳು ಬೀಳುತ್ತಿದ್ದು, ಈ ಬಗ್ಗೆ ಎಲ್ಲರೂ ಗಮನಹರಿಸಿ ತುರ್ತು ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಕೊಡಗಿನಲ್ಲಿ ಅದರಲ್ಲೂ ಕುಶಾಲನಗರ ಅರಣ್ಯ ವಲಯದಲ್ಲಿ ಆನೆ–ಮಾನವ ಸಂಘರ್ಷ ಮಿತಿಮೀರಿದ್ದು, ಸುಮಾರು ಮೂರು ದಶಕಗಳಿಂದ ಸಮಸ್ಯೆ ಮುಂದುವರಿದಿದೆ ಎಂದರು. ಆನೆ ಕಂದಕಗಳಿಂದ ಹಿಡಿದು ರೈಲ್ವೆ ಬ್ಯಾರಿಕೇಡ್ವರೆಗಿನ ವಿವಿಧ ಪರಿಹಾರ ಕ್ರಮಗಳ ಕುರಿತು ಮಾಹಿತಿ ನೀಡಿದ ಅವರು, ಕಳೆದ ಮೂರು ವರ್ಷಗಳಲ್ಲಿ ಕುಶಾಲನಗರ ವಲಯಕ್ಕೆ ರೂ.3 ಕೋಟಿಗೂ ಅಧಿಕ ಅನುದಾನ ನೀಡಲಾಗಿದೆ. ಇದೀಗ ರೂ.5 ಕೋಟಿಯ ಪ್ರಸ್ತಾವನೆಯನ್ನು ಅರಣ್ಯ ಇಲಾಖೆ ಸಿದ್ಧಪಡಿಸಿದ್ದು, ಶಾಸಕರು ಅಗತ್ಯ ಅನುದಾನ ತರಲು ಮುತುವರ್ಜಿ ವಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಡಿಕೇರಿ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಮಾತನಾಡಿ, ಸಮಗ್ರ ಕ್ರಿಯಾಯೋಜನೆಯ ನೀಲಿನಕ್ಷೆ ಶೇ.70ರಷ್ಟು ಪೂರ್ಣಗೊಂಡಿದ್ದು, ಮೊದಲ ಹಂತದಲ್ಲಿ ರೂ.5 ಕೋಟಿಯ ತುರ್ತು ಅನುದಾನಕ್ಕಾಗಿ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದರು. ಇಲಾಖೆಯ ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಶೀಘ್ರ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಅರಣ್ಯ ಇಲಾಖೆಯ ವಾಹನ ಹಾಗೂ ಸಿಬ್ಬಂದಿ ಕೊರತೆ, ಕಾಡಿನಲ್ಲಿ ಆನೆಗಳಿಗೆ ಮೇವು ಮತ್ತು ನೀರಿನ ಲಭ್ಯತೆ ಸೇರಿದಂತೆ ಮಾನವ–ವನ್ಯಜೀವಿ ಸಂಘರ್ಷಕ್ಕೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಿನ ಹತ್ತು ವರ್ಷಗಳ ಅವಧಿಗೆ ಸಮಗ್ರ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸುಂಟಿಕೊಪ್ಪ ಹೋಬಳಿ ರೈತಸಂಘದ ಅಧ್ಯಕ್ಷ ನಾಗಚೆಟ್ಟಿರ ಸಿ. ಪೊನ್ನಪ್ಪ, ಉಪಾಧ್ಯಕ್ಷ ಕುಂಜಿಲನ ಎಸ್. ಮಂಜುನಾಥ್, ದಾಸಂಡ ರಮೇಶ್, ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆರ್ಮಿಡಿಸೋಜ, ಎಸಿಎಫ್ ನವೀನ್ ಕುಮಾರ್, ಮಾಜಿ ಜಿ.ಪಂ. ಸದಸ್ಯ ಬಿ.ಬಿ. ಭಾರತೀಶ್, ಕುಶಾಲನಗರ ವಲಯ ಅರಣ್ಯಾಧಿಕಾರಿ ರಕ್ಷಿತ್ ಉಪಸ್ಥಿತರಿದ್ದರು.







