ಮಡಿಕೇರಿ, NEWS DESK ಸೆ. 2: 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಕೊಡಗು ಜಿಲ್ಲೆಯಲ್ಲಿ ಆರಂಭಗೊಂಡಿದ್ದು, ಜಿಲ್ಲೆಯ 525 ಹಳ್ಳಿಗಳ ವ್ಯಾಪ್ತಿಯ ಒಟ್ಟು 2,60,798 ತಾಕುಗಳಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ.
ಈ ಬಾರಿ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ವಿವರಗಳನ್ನು ಸ್ವತಃ ದಾಖಲಿಸಲು ಸರ್ಕಾರ ಅವಕಾಶ ಕಲ್ಪಿಸಿದ್ದು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ಅವರು ರೈತರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ವಿವರ ದಾಖಲಿಸಲು ಅಗತ್ಯವಿರುವ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಆ್ಯಪ್ ಬಳಕೆಗೆ ಸಂಬಂಧಿಸಿದಂತೆ ರೈತರಿಗೆ ಮಾರ್ಗದರ್ಶನ ನೀಡಲು ಪ್ರತಿ ಗ್ರಾಮದಲ್ಲಿ ನುರಿತ ಖಾಸಗಿ ನಿವಾಸಿಗಳನ್ನು ನೇಮಿಸಲಾಗಿದೆ. ತಮ್ಮ ಗ್ರಾಮದ ನಿಯೋಜಿತ ಖಾಸಗಿ ನಿವಾಸಿಗಳ ವಿವರಗಳನ್ನು ಸಂಬಂಧಪಟ್ಟ ಕೃಷಿ ಅಥವಾ ಕಂದಾಯ ಇಲಾಖೆಯ ಕಚೇರಿಗಳಿಂದ ಪಡೆಯಬಹುದು ಎಂದು ತಿಳಿಸಿದ್ದಾರೆ.
ಎಫ್ಐಡಿ ಸಂಖ್ಯೆ ಕಡ್ಡಾಯ
ಬೆಳೆ ಸಮೀಕ್ಷೆ ಆ್ಯಪ್ ಬಳಸಲು ರೈತರು FRUITS ತಂತ್ರಾಂಶದ ಎಫ್ಐಡಿ (FID) ಸಂಖ್ಯೆ ಹೊಂದಿರುವುದು ಕಡ್ಡಾಯವಾಗಿದೆ. ರೈತರ ಆಧಾರ್ ಸಂಖ್ಯೆ ಮತ್ತು ಎಫ್ಐಡಿ ಸಂಖ್ಯೆಗೆ ಜೋಡಣೆಯಾಗಿರುವ ಜಮೀನುಗಳ ಮಾಹಿತಿಯು ಆ್ಯಪ್ನಲ್ಲಿ ಲಭ್ಯವಾಗಲಿದೆ.
ಮೊದಲು ಗೂಗಲ್ ಪ್ಲೇ ಸ್ಟೋರ್ನಲ್ಲಿ ಬೆಳೆ ಸಮೀಕ್ಷೆ ಆ್ಯಪ್ ಡೌನ್ಲೋಡ್ ಮಾಡಿಕೊಂಡು, e-KYC ಮೂಲಕ ಆಧಾರ್ ದೃಢೀಕರಣ ಮಾಡಬೇಕು. ಆಧಾರ್ ಸಂಖ್ಯೆ ನಮೂದಿಸಿ ‘Generate OTP’ ಆಯ್ಕೆ ಮಾಡಿದ ಬಳಿಕ ಮೊಬೈಲ್ಗೆ ಬರುವ ಒಟಿಪಿಯನ್ನು ನಮೂದಿಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನಂತರ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಮೂಲಕ ಆ್ಯಪ್ ಅನ್ನು ಸಕ್ರಿಯಗೊಳಿಸಬಹುದು.
ಬೆಳೆ ವಿವರದೊಂದಿಗೆ ಛಾಯಾಚಿತ್ರ ಅಪ್ಲೋಡ್
ಆ್ಯಪ್ನಲ್ಲಿ ಲಭ್ಯವಾಗುವ ತಮ್ಮ ಜಮೀನಿನ ಮಾಹಿತಿಯನ್ನು ಪರಿಶೀಲಿಸಿದ ಬಳಿಕ ರೈತರು ಬೆಳೆದಿರುವ ಬೆಳೆಗಳ ವಿವರ ದಾಖಲಿಸಬೇಕು. ಪಾಳು ಬಿಟ್ಟಿರುವ ಪ್ರದೇಶ ಹಾಗೂ ಕೊಟ್ಟಿಗೆ, ಕೃಷಿ ಹೊಂಡ, ಮನೆ ಸೇರಿದಂತೆ ಕೃಷಿಯೇತರ ಉದ್ದೇಶಗಳಿಗೆ ಬಳಸಲಾಗುತ್ತಿರುವ ಪ್ರದೇಶದ ವಿವರಗಳನ್ನೂ ದಾಖಲಿಸಬೇಕಿದೆ.
ರೈತರು ಬೆಳೆದಿರುವ ಬೆಳೆಯ ಗಿಡಗಳ ಸಂಖ್ಯೆ, ಪ್ರತಿ ಗಿಡದ ನಡುವಿನ ಅಂತರ ಹಾಗೂ ಬೆಳೆ ವಿಸ್ತೀರ್ಣದ ವಿವರಗಳನ್ನು ನಮೂದಿಸಬೇಕು. ಪ್ರತಿ ಬೆಳೆಗೆ ಸಂಬಂಧಿಸಿದಂತೆ ಎರಡು ಛಾಯಾಚಿತ್ರಗಳನ್ನು ತೆಗೆದು ಆ್ಯಪ್ನಲ್ಲಿ ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ. ರೈತರು ದಾಖಲಿಸುವ ಮಾಹಿತಿಯನ್ನು ಆಯಾ ಗ್ರಾಮಗಳಿಗೆ ನೇಮಕಗೊಂಡಿರುವ ಸರ್ಕಾರಿ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸಲಿದ್ದಾರೆ.
ಎಫ್ಐಡಿ ಇಲ್ಲದವರು ನೋಂದಾಯಿಸಿಕೊಳ್ಳಿ
ಎಫ್ಐಡಿ ಸಂಖ್ಯೆ ಹೊಂದಿರದ ರೈತರು ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ, ತೋಟಗಾರಿಕೆ ಇಲಾಖೆ ಅಥವಾ ಕಂದಾಯ ಇಲಾಖೆಯನ್ನು ಸಂಪರ್ಕಿಸಿ ಎಫ್ಐಡಿ ಮಾಡಿಸಿಕೊಳ್ಳಬಹುದು. ಎಫ್ಐಡಿ ಸಂಖ್ಯೆಗೆ ಯಾವುದೇ ಜಮೀನು ಸೇರ್ಪಡೆಯಾಗದೆ ಇದ್ದಲ್ಲಿ ಅದನ್ನು ಸೇರಿಸಲು ಸಹ ಆ್ಯಪ್ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.
ನಿಗದಿತ ಅವಧಿಯೊಳಗೆ ರೈತರು ತಮ್ಮ ಜಮೀನಿನ ಬೆಳೆ ವಿವರಗಳನ್ನು ಆ್ಯಪ್ನಲ್ಲಿ ದಾಖಲಿಸದಿದ್ದರೆ, ಇಲಾಖೆಯಿಂದ ನೇಮಿಸಲಾದ ಖಾಸಗಿ ನಿವಾಸಿಗಳ ಮೂಲಕ ಬೆಳೆ ಸಮೀಕ್ಷೆ ನಡೆಸಲಾಗುತ್ತದೆ. ಆದರೆ ಕೆಲವು ದುರ್ಗಮ ಪ್ರದೇಶಗಳಲ್ಲಿ ಖಾಸಗಿ ನಿವಾಸಿಗಳು ತಲುಪಲು ಸಾಧ್ಯವಾಗದ ಕಾರಣ ಅಲ್ಲಿನ ಬೆಳೆಗಳು ಸಮೀಕ್ಷೆಯಿಂದ ಹೊರಗುಳಿಯುವ ಸಾಧ್ಯತೆ ಇರುವುದರಿಂದ ರೈತರು ಸ್ವತಃ ತಮ್ಮ ಬೆಳೆ ವಿವರಗಳನ್ನು ನಿಗದಿತ ಅವಧಿಯೊಳಗೆ ದಾಖಲಿಸುವುದು ಸೂಕ್ತ ಎಂದು ಕೃಷಿ ಇಲಾಖೆ ತಿಳಿಸಿದೆ.
ಹಲವು ಸರ್ಕಾರಿ ಯೋಜನೆಗಳಿಗೆ ಬೆಳೆ ಸಮೀಕ್ಷೆ ಆಧಾರ
ಬೆಳೆ ಸಮೀಕ್ಷೆಯಲ್ಲಿ ಸಂಗ್ರಹಿಸಲಾಗುವ ಮಾಹಿತಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಬೆಳೆ ವಿಮಾ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು ಹಾಗೂ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಬೆಳೆ ವಿಸ್ತೀರ್ಣ ವರದಿ ತಯಾರಿಸಲು ಬಳಸಲಾಗುತ್ತದೆ.
ಇದಲ್ಲದೆ, ಬೆಳೆ ಕಟಾವು ಪ್ರಯೋಗ, ವಿವಿಧ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನ, ಪಹಣಿಯಲ್ಲಿ ಬೆಳೆ ವಿವರ ದಾಖಲಿಸುವುದು ಹಾಗೂ ಬ್ಯಾಂಕ್ ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘಗಳ ಮೂಲಕ ಬೆಳೆ ಸಾಲ ನೀಡುವ ಸಂದರ್ಭದಲ್ಲಿನ ಬೆಳೆ ಪರಿಶೀಲನೆಗೂ ಈ ಮಾಹಿತಿಯನ್ನು ಬಳಸಲಾಗುತ್ತದೆ.
ಹೀಗಾಗಿ ಕೊಡಗು ಜಿಲ್ಲೆಯ ರೈತರು ಸರ್ಕಾರ ಕಲ್ಪಿಸಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ನಿಖರ ವಿವರಗಳನ್ನು ಸ್ವತಃ ನಿಗದಿತ ಅವಧಿಯೊಳಗೆ ದಾಖಲಿಸುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಗ್ರಾಮದ ನಿಯೋಜಿತ ಖಾಸಗಿ ನಿವಾಸಿ, ಸಮೀಪದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ನಾಡ ಕಚೇರಿ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.






