ಮಡಿಕೇರಿ, NEWS DESK ಸೆ. 7: ಭಾರತ-ಪಾಕ್ ನಡುವಿನ 1965ರ ಯುದ್ಧದಲ್ಲಿ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಬಲಿದಾನಗೈದ ಸಾಹಸಿ ಕೊಡಗಿನ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ 61ನೇ ಪುಣ್ಯಸ್ಮರಣಾ ಕಾರ್ಯಕ್ರಮವನ್ನು ಕೊಡವ ಮಕ್ಕಡ ಕೂಟ, ಅಜ್ಜಮಾಡ ಒಕ್ಕ (ಕುಟುಂಬಸ್ಥರು) ಹಾಗೂ ಸ್ವಾ.ಲೀ. ಅಜ್ಜಮಾಡ ದೇವಯ್ಯ ಟ್ರಸ್ಟ್ನ ಸಹಯೋಗದಲ್ಲಿ ಮಡಿಕೇರಿಯಲ್ಲಿ ನಡೆಸಲಾಯಿತು.
ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿಯ ಸ್ಕ್ವಾ.ಲೀ. ದೇವಯ್ಯ ವೃತ್ತದಲ್ಲಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸುವ ಮೂಲಕ ವೀರ ಸೇನಾನಿಗೆ ಗೌರವ ಅರ್ಪಿಸಲಾಯಿತು.
ಸ್ಕ್ವಾ.ಲೀ. ಅಜ್ಜಮಾಡ ದೇವಯ್ಯ ಅವರ ಭವ್ಯ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ನಿವೃತ್ತ ಏರ್ ಮಾರ್ಷಲ್ ಕೊಡಂದೇರ ನಂದಾ ಕಾರ್ಯಪ್ಪ ಅವರು, ಮಹಾನ್ ಯೋಧನ ಸಾಹಸ ಮತ್ತು ರಾಷ್ಟ್ರಕ್ಕಾಗಿ ಮಾಡಿದ ಬಲಿದಾನದ ಕುರಿತು ಸ್ಮರಿಸುವ ಮೂಲಕ ಯುವ ಸಮೂಹದಲ್ಲಿ ಪ್ರೇರಣೆಯನ್ನು ತುಂಬಬೇಕೆಂದು ಕರೆ ನೀಡಿದರು.
ಸ್ಕ್ವಾ.ಲೀ. ದೇವಯ್ಯ ಅವರು ರಾಷ್ಟ್ರ ರಕ್ಷಣೆಗಾಗಿ ಯುದ್ಧ ವಿಮಾನದಲ್ಲಿ ಶತ್ರು ರಾಷ್ಟ್ರ ಪಾಕಿಸ್ತಾನದ ವಿರುದ್ಧ ವೀರೋಚಿತ ಹೋರಾಟ ನಡೆಸಿದರು. ಅವರು 1965ರಲ್ಲಿ ಹುತಾತ್ಮರಾದರೂ, ಸುಮಾರು 23 ವರ್ಷಗಳ ಬಳಿಕ ಅವರ ಸಾಹಸಗಾಥೆ ವಿಶ್ವದ ಅರಿವಿಗೆ ಬಂದಿತು. ಬಳಿಕ ಭಾರತ ಸರ್ಕಾರ ಅವರಿಗೆ ಮರಣೋತ್ತರವಾಗಿ ‘ಮಹಾವೀರ ಚಕ್ರ’ವನ್ನು ಪ್ರದಾನ ಮಾಡಿತು ಎಂದರು.
ಭಾರತೀಯ ವಾಯುದಳದ ನಾನ್-ಕಮಿಷನ್ಡ್ ಆಫೀಸರ್, ರಾಡಾರ್ ಮತ್ತು ಮಿಸೈಲ್ ಇನ್ಸ್ಟ್ರಕ್ಟರ್ ಮುಂಜಾಂದಿರ ರಾಜ ಅಪ್ಪಯ್ಯ ಅವರು ಮಾತನಾಡಿ, 1965ರ ಇಂಡೋ-ಪಾಕ್ ಯುದ್ಧದ ಸಂದರ್ಭದಲ್ಲಿ ಸ್ಕ್ವಾ.ಲೀ. ಅಜ್ಜಮಾಡ ದೇವಯ್ಯ ಅವರು ಶತ್ರು ರಾಷ್ಟ್ರ ಪಾಕಿಸ್ತಾನ ಅಂದಿನ ಕಾಲಘಟ್ಟದಲ್ಲಿ ಹೊಂದಿದ್ದ ಅತ್ಯಾಧುನಿಕ ಯುದ್ಧ ವಿಮಾನವನ್ನು, ತಾವು ಚಾಲನೆ ಮಾಡುತ್ತಿದ್ದ ಯುದ್ಧ ವಿಮಾನ ಅದಕ್ಕಿಂತ ಕೆಳಮಟ್ಟದ್ದಾಗಿದ್ದರೂ, ಅದನ್ನು ಲೆಕ್ಕಿಸದೆ ತಮ್ಮ ಚಾಕಚಕ್ಯತೆ, ಅಸಾಮಾನ್ಯ ಸಾಹಸ ಹಾಗೂ ದೃಢನಿಶ್ಚಯದ ಮೂಲಕ ಹೊಡೆದುರುಳಿಸಿ ಸಾಹಸ ಮೆರೆದಿದ್ದರು. ಆದರೆ, ಈ ವಿಚಾರ ಸಾಕಷ್ಟು ವರ್ಷಗಳ ಕಾಲ ಬೆಳಕಿಗೆ ಬಂದಿರಲಿಲ್ಲ. ನಂತರ ಅಂದಿನ ಯುದ್ಧದಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನಿ ಸೈನ್ಯದ ಅಧಿಕಾರಿಯ ಮೂಲಕ ಈ ವಿಚಾರ ಬೆಳಕಿಗೆ ಬಂದಿತ್ತೆಂದು ತಿಳಿಸಿದರು.
ಇಂತಹ ಮಹಾನ್ ಯೋಧನ ಪ್ರತಿಮೆಯನ್ನು ಕೊಡವ ಮಕ್ಕಡ ಕೂಟ ಸಾಕಷ್ಟು ಪರಿಶ್ರಮದಿಂದ ಅಜ್ಜಮಾಡ ಕುಟುಂಬಸ್ಥರು ಹಾಗೂ ಮತ್ತಿತರರ ಸಹಕಾರದೊಂದಿಗೆ ಸ್ಥಾಪಿಸಿರುವುದು ಶ್ಲಾಘನೀಯವೆಂದರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಅವರು ಮಾತನಾಡಿ, ಸ್ಕ್ವಾ.ಲೀ. ಅಜ್ಜಮಾಡ ದೇವಯ್ಯ ಅವರ ಪುಣ್ಯ ದಿನ ಎನ್ನುವುದಕ್ಕೂ ಮಿಗಿಲಾಗಿ, ಈ ದಿನ ತ್ಯಾಗ ಮತ್ತು ಬಲಿದಾನದ ದಿನವಾಗಿದೆ. ಸ್ಕ್ವಾ.ಲೀ. ದೇವಯ್ಯ ಅವರ ಸಾಹಸ ಹಾಗೂ ರಾಷ್ಟ್ರ ರಕ್ಷಣೆಯೆಡೆಗಿನ ಅಚಲ ನಿರ್ಧಾರಗಳು ಇಂದಿನ ಯುವ ಸಮೂಹಕ್ಕೆ ಸ್ಫೂರ್ತಿ ನೀಡಲಿವೆ ಎಂದು ತಿಳಿಸಿದರು.
ಭಾರತ ಮಾತೆಗೆ ಸ್ಕ್ವಾ.ಲೀ. ದೇವಯ್ಯ ಅವರಂತಹ ವೀರ ಯೋಧರನ್ನು ನೀಡಿದ ಕೊಡಗಿನ ಪುಣ್ಯಭೂಮಿ ಹಾಗೂ ಇಲ್ಲಿನ ಪರಿಸರಕ್ಕೆ ನಾವೆಲ್ಲರೂ ಚಿರಋಣಿಗಳಾಗಬೇಕೆಂದು ಕರೆ ನೀಡಿದ ಅವರು, ಇಲ್ಲಿನ ಯುವ ಸಮೂಹ ದೇಶಸೇವೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಉತ್ಸುಕವಾಗಬೇಕೆಂದರು.
ಕಾವೇರಿ ಮೂಲ ಸ್ವರೂಪ ಸಂರಕ್ಷಣಾ ಸಮಿತಿಯ ಪದಾಧಿಕಾರಿ ಉಳ್ಳಿಯಡ ಎಂ. ಪೂವಯ್ಯ ಅವರು ಮಾತನಾಡಿ, ಸ್ಕ್ವಾ.ಲೀ. ದೇವಯ್ಯ ಅವರ ಸಾಹಸ ಮತ್ತು ಬಲಿದಾನದ ಹಿನ್ನೆಲೆಯಲ್ಲಿ ಅವರಿಗೆ ಸೇವಾ ಪದಕಗಳಲ್ಲಿ ಮೊದಲನೆಯದಾದ ಪರಮವೀರ ಚಕ್ರವನ್ನು ಮರಣೋತ್ತರವಾಗಿ ಪ್ರದಾನ ಮಾಡಬೇಕಾಗಿತ್ತು. ರಾಷ್ಟ್ರದೆಡೆಗಿನ ಅವರ ಅಚಲ ನಿಷ್ಠೆ ಹಾಗೂ ದೇಶಪ್ರೇಮ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯು ಅವರು ಮಾತನಾಡಿ, ಕೊಡಗು ಜಿಲ್ಲೆಯ ಪ್ರತಿಯೊಂದು ಶಾಲೆಯ ಮಕ್ಕಳಿಗೆ ಕೊಡಗಿನ ನೆಲದ ವೀರ ಯೋಧರ ಸಾಹಸಗಾಥೆ ಹಾಗೂ ಅವರ ಬದುಕಿನ ವಿವರಗಳನ್ನು ಒದಗಿಸುವ ಮೂಲಕ ದೇಶಪ್ರೇಮದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.
ವಾಯುದಳದ ಜೂನಿಯರ್ ವಾರಂಟ್ ಆಫೀಸರ್ ಬಾಳೆಯಡ ಮಂದಪ್ಪ ಅವರು ಮಾತನಾಡಿ, ಇಂಡೋ-ಪಾಕ್ ಯುದ್ಧದ ಸಂದರ್ಭದಲ್ಲಿ ಶತ್ರು ರಾಷ್ಟ್ರದ ಮೇಲೆ ನಡೆದ ದಾಳಿಯ ಹಂತದಲ್ಲಿ ಸ್ಕ್ವಾ.ಲೀ. ದೇವಯ್ಯ ಅವರು ತಮ್ಮೊಂದಿಗೆ ದಾಳಿಗಿಳಿದಿದ್ದ ಇತರ 11 ಯುದ್ಧ ವಿಮಾನಗಳು ಹಿಂದಿರುವಂತೆ ನೋಡಿಕೊಂಡಿದ್ದಲ್ಲದೆ, ತಮ್ಮ ಯುದ್ಧ ವಿಮಾನಕ್ಕೆ ಹಾನಿಯಾಗಿದ್ದರೂ ಅದನ್ನು ಲೆಕ್ಕಿಸದೆ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ಕೆಡವಿದರು. ಆ ಯುದ್ಧದಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನದ ವಾಯುಸೇನೆಯ ಅಧಿಕಾರಿ ಅಂಜತ್ ಖಾನ್ ಅವರನ್ನು ಬಿಬಿಸಿ ಸುದ್ದಿವಾಹಿನಿ ಹಲವು ವರ್ಷಗಳ ಬಳಿಕ ಸಂದರ್ಶನ ನಡೆಸಿದ ಸಂದರ್ಭದಲ್ಲಿ ಅವರು ಸ್ಕ್ವಾ.ಲೀ. ದೇವಯ್ಯ ಅವರ ಸಾಹಸವನ್ನು ಜಗತ್ತಿಗೆ ತಿಳಿಸಿದ್ದರು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರು, ಕೊಡಗಿನ ಇಬ್ಬರು ಮಹಾವೀರ ಚಕ್ರ ಪುರಸ್ಕೃತರಿದ್ದಾರೆ. ಸ್ಕ್ವಾ.ಲೀ. ಅಜ್ಜಮಾಡ ದೇವಯ್ಯ ಅವರ ಬಲಿದಾನದ ಬಳಿಕ 23 ವರ್ಷಗಳ ನಂತರ, 1988ರಲ್ಲಿ ಅವರಿಗೆ ಮರಣೋತ್ತರವಾಗಿ ಮಹಾವೀರ ಚಕ್ರವನ್ನು ಪ್ರದಾನ ಮಾಡಲಾಗಿತ್ತು. ಕೊಡಗಿನವರೇ ಆದ ಲೆ.ಜ. ಪುಟ್ಟಿಚಂಡ ಗಣಪತಿ ಅವರು ಇದೇ ಗೌರವವನ್ನು ಪಡೆದ ಮತ್ತೊಬ್ಬರಾಗಿದ್ದಾರೆ ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ, ಡಿವೈಎಸ್ಪಿ ಪಿ.ಎ. ಸೂರಜ್, ಕೊಡಗು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ವಿಶೇಷ ಅಧಿಕಾರಿ ಪ್ರೊ. ಮೇಚಿರ ರವಿಶಂಕರ್ ನಾಣಯ್ಯ, ಕೊಡಗು ವಿದ್ಯಾಲಯ ಶಾಲೆಯ ಎನ್ಸಿಸಿ ಅಧಿಕಾರಿ ಮೇಜರ್ ದಾಮೋದರ್ ಗೌಡ ಐ., ಮಡಿಕೇರಿ ಕೊಡವ ಸಮಾಜದ ಆಡಳಿತ ಮಂಡಳಿ ಉಪಾಧ್ಯಕ್ಷ ಕೇಕಡ ವಿಜು ದೇವಯ್ಯ, ಕಾರ್ಯದರ್ಶಿ ಬೊಪ್ಪಂಡ ಸರಳ ಕರುಂಬಯ್ಯ, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ನಿರ್ದೇಶಕರಾದ ಮೂವೆರ ಜಯರಾಂ, ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯು, ಜಿಲ್ಲಾ ಸ್ಥಾನಿಕ ಆಯುಕ್ತ ಹೆಚ್.ಆರ್. ಮುತ್ತಪ್ಪ, ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಸಾಹಿತಿ ಬೊಜ್ಜಂಗಡ ಡಾ. ಅವನಿಜ ಸೋಮಯ್ಯ, ಅಜ್ಜಮಾಡ ಒಕ್ಕದ ಬೆಳ್ಯಪ್ಪ, ಅಜ್ಜಮಾಡ ಕಾರ್ಯಪ್ಪ, ಅಜ್ಜಮಾಡ ಬೋಪಯ್ಯ, ಅಜ್ಜಮಾಡ ಚಂಗಪ್ಪ, ಅಜ್ಜಮಾಡ ಮಂಜುನಾಥ್, ಮಹೇಶ್, ಅಜ್ಜಮಾಡ ಅಯ್ಯಣ್ಣ, ಅಜ್ಜಮಾಡ ಜಗತ್, ಅಜ್ಜಮಾಡ ಸುಮನ್, ಅಜ್ಜಮಾಡ ದೀಕ್ಷಾ, ಅಜ್ಜಮಾಡ ಅನಿಕಾ, ದಾನಿಗಳಾದ ಉಳ್ಳಿಯಡ ನಂದಾ ನಂಜಪ್ಪ, ಮಾದೇಟಿರ ಟಿ. ಪ್ರಕಾಶ್ ತಿಮ್ಮಯ್ಯ, ನಿವೃತ್ತ ಲೆ. ಕರ್ನಲ್ ಮುಲ್ಲೇರ ಕಾವೇರಪ್ಪ, ಮಾಜಿ ಸೈನಿಕರ ಸಂಘದ ಮಡಿಕೇರಿ ಅಧ್ಯಕ್ಷ ಪಾನಿಕುಟ್ಟಿರ ಕುಟ್ಟಪ್ಪ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಸುಬೇದಾರ್ ಮೇಜರ್ ನಾಟೋಳಂಡ ಸುರೇಶ್ ಸೋಮಯ್ಯ, ಮಾಜಿ ಸೈನಿಕರ ಸಂಘದ ಜಂಟಿ ಕಾರ್ಯದರ್ಶಿ ಸುಬೇದಾರ್ ಮೇಜರ್ ವಾಸಪ್ಪ, ಕುಟ್ಟಂಡ ನಂದ ಮಾದಪ್ಪ, ಮಾದೆಯಂಡ ಕೆ. ನಾಚಪ್ಪ, ಕನ್ನಂಡ ಸುರೇಶ್, ಕೂಪದಿರ ಮುತ್ತಣ್ಣ, ತೊತ್ತಿಯಂಡ ಗಣಪತಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಕೆ.ಎಂ.ಬಿ. ಗಣೇಶ್, ಸಮಾಜ ಸೇವಕ ಮಂಡೇಪಂಡ ರತನ್ ಕುಟ್ಟಯ್ಯ, ಮಣವಟ್ಟಿರ ಚಿಣ್ಣಪ್ಪ, ನಾಪೋಕ್ಲು ಕೊಡವ ಸಮಾಜದ ಪ್ರಧಾನ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಸೈನಿಕರ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ಆರ್. ಶೆಟ್ಟಿ, ಕೊಡವ ಮಕ್ಕಡ ಕೂಟದ ಸದಸ್ಯರು, ನಿವೃತ್ತ ಯೋಧರು, ಅಭಿಮಾನಿಗಳು ಸೇರಿದಂತೆ ಅಜ್ಜಮಾಡ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅಯ್ಯಪ್ಪಗೆ ಉಡುಗೊರೆ
ವೀರ ಸೇನಾನಿಯ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಪ್ರತಿವರ್ಷ ಅಚ್ಚುಕಟ್ಟಾಗಿ ಆಚರಿಸುವ ಮೂಲಕ ದೇಶಭಕ್ತಿ ಮತ್ತು ಸೇನಾ ಪರಂಪರೆಯ ಕುರಿತು ಯುವ ಸಮೂಹದಲ್ಲಿ ಸ್ಫೂರ್ತಿ ತುಂಬುತ್ತಿರುವ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರ ಕಾರ್ಯವನ್ನು ಶ್ಲಾಘಿಸಿ ನಿವೃತ್ತ ಏರ್ ಮಾರ್ಷಲ್ ಕೊಡಂದೇರ ನಂದಾ ಕಾರ್ಯಪ್ಪ ಅವರು ಏರ್ ಫೋರ್ಸ್ ಲಾಂಛನದ ಬ್ಯಾಡ್ಜ್ನ್ನು ಉಡುಗೊರೆಯಾಗಿ ನೀಡಿ ಗೌರವಿಸಿದರು.
ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ಕುರಿತು
ಆರು ದಶಕಗಳ ಹಿಂದೆ (1965) ಭಾರತ-ಪಾಕ್ ನಡುವೆ ನಡೆದ ಯುದ್ಧದಲ್ಲಿ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ದೇಶಕ್ಕಾಗಿ ಬಲಿದಾನಗೈದ ಕೊಡಗಿನ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಕಂಚಿನ ಪ್ರತಿಮೆಯನ್ನು ಕೊಡವ ಮಕ್ಕಡ ಕೂಟವು ಕೊಡಗಿನ ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರತಿಷ್ಠಾಪಿಸುವ ಮೂಲಕ ಅಮರ ವೀರಯೋಧನ ಕೀರ್ತಿಪತಾಕೆ ಅಜರಾಮರವಾಗಿರುವಂತೆ ನೋಡಿಕೊಂಡಿದೆ.
ಭಾರತೀಯ ವಾಯುಸೇನೆಯಲ್ಲಿ ಸ್ಕ್ವಾಡ್ರನ್ ಲೀಡರ್ ಹುದ್ದೆಯನ್ನೇರಿ ತನ್ನ ಜೀವದ ಹಂಗನ್ನು ತೊರೆದು ಶತ್ರುಗಳೊಂದಿಗೆ ಹೋರಾಡಿದ ಅಜ್ಜಮಾಡ ದೇವಯ್ಯ ಅವರು ವೀರಮರಣವನ್ನಪ್ಪಿ 61 ವರ್ಷಗಳು ಕಳೆದಿವೆ.







