
ಮಡಿಕೇರಿ ಸೆ.8 NEWS DESK : ಕುಶಾಲನಗರದ ಪಿ.ಎಂ. ಶ್ರೀ ಶಾಲೆಯಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ನವಸಾಕ್ಷರರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸಾಕ್ಷರತಾ ನೋಡಲ್ ಅಧಿಕಾರಿ ಡಾ. ಹೇಮಂತ್ ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿಯೇ ಕೊಡಗು ಜಿಲ್ಲೆ ಶೇ.93ರಷ್ಟು ಸಾಕ್ಷರತೆ ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಕೆಲವೇ ದಿನಗಳಲ್ಲಿ ಕೊಡಗು ಜಿಲ್ಲೆಯನ್ನು ‘ಸಂಪೂರ್ಣ ಸಾಕ್ಷರತಾ ಜಿಲ್ಲೆ’ ಎಂದು ಘೋಷಿಸಲಾಗುವುದು ಎಂದು ತಿಳಿಸಿದರು. ಡಯಟ್ ಉಪ ನಿರ್ದೇಶಕ (ಅಭಿವೃದ್ಧಿ) ರಾಮಚಂದ್ರರಾಜೇ ಅರಸ್ ಅವರು ಪಿ.ಎಂ. ಶ್ರೀ ಶಾಲೆಯ ದ್ವಿಭಾಷಾ ಚಟುವಟಿಕೆಗಳ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರ ಹಲವು ದಿನಗಳ ಪರಿಶ್ರಮದ ಫಲವಾಗಿ ಈ ಕೊಠಡಿ ನಿರ್ಮಾಣಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 15 ವರ್ಷ ಮೇಲ್ಪಟ್ಟ ಅಕ್ಷರಸ್ಥರಲ್ಲದವರನ್ನು ಶಿಕ್ಷಣದ ಮುಖ್ಯವಾಹಿನಿಗೆ ತರುವುದು ಸಾಕ್ಷರತಾ ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಬಿ.ಆರ್.ಸಿ., ಬಿ.ಆರ್.ಪಿ. ಹಾಗೂ ಸಿ.ಆರ್.ಪಿ.ಗಳ ಪರಿಶ್ರಮ ಶ್ಲಾಘನೀಯ ಎಂದು ತಿಳಿಸಿದರು. ನವಸಾಕ್ಷರರು ಕೇವಲ ಸಹಿ ಮಾಡುವುದನ್ನು ಕಲಿತರೆ ಸಾಲದು. ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತಹ ಶಿಕ್ಷಣವನ್ನು ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು. ಸಾಕ್ಷರರನ್ನು ಗುರುತಿಸಿ, ಅವರನ್ನು ಒಂದೆಡೆ ಸೇರಿಸಿ ಮುಖ್ಯವಾಹಿನಿಗೆ ತರುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಪ್ರತಿಯೊಬ್ಬರೂ ಸಾಕ್ಷರರಾಗಬೇಕು ಹಾಗೂ ಶಿಕ್ಷಣದ ಮೂಲಕ ತಮ್ಮ ಬಾಳಿಗೆ ಬೆಳಕು ಕಂಡುಕೊಳ್ಳಬೇಕು ಎಂದು ಹೇಳಿದರು. ಸಾಕ್ಷರತಾ ಕಾರ್ಯಕ್ರಮದಲ್ಲಿ ‘ಬಾಳಿಗೆ ಬೆಳಕು’ ಹಾಗೂ ‘ಸವಿ ಬರಹ’ ಎಂಬ ಎರಡು ಪಠ್ಯಪುಸ್ತಕಗಳನ್ನು ಬಳಸಲಾಗುತ್ತಿದೆ. ಕರ್ನಾಟಕದಲ್ಲಿ ಸಾಕ್ಷರತಾ ಪ್ರಮಾಣ ಹಿಂದೆ ಶೇ.54ರಷ್ಟಿದ್ದು, ಈಗ ಶೇ.75ಕ್ಕೆ ತಲುಪಿದೆ. ಕೊಡಗು ಜಿಲ್ಲೆ ಶೇ.93ರಷ್ಟು ಸಾಕ್ಷರತೆ ಸಾಧಿಸಿರುವುದು ಗಮನಾರ್ಹ ಸಾಧನೆ ಎಂದು ತಿಳಿಸಿದರು. ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಮಾತನಾಡಿ, ಜರ್ಮನಿ, ಅಮೆರಿಕ ಹಾಗೂ ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳು ಶೇ.100ರಷ್ಟು ಸಾಕ್ಷರತೆ ಸಾಧಿಸಿವೆ. ಈ ದೇಶಗಳ ಸಾಕ್ಷರತಾ ಸಾಧನೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. 1988ರಲ್ಲಿ ಸಾಕ್ಷರತಾ ಕಾರ್ಯಕ್ರಮ ಆರಂಭಗೊಂಡ ಹಿನ್ನೆಲೆ ಹಾಗೂ ವಿವಿಧ ದೇಶಗಳ ಸಾಕ್ಷರತಾ ಪ್ರಮಾಣದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಸಹಾಯಕರಾದ ರವಿಶಂಕರ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಮೂರು ತಾಲ್ಲೂಕುಗಳ ನವಸಾಕ್ಷರರನ್ನು ಸನ್ಮಾನಿಸಲಾಯಿತು. ವಿಭಾಗ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ನಂಜರಾಯಪಟ್ಟಣ ಕ್ಲಸ್ಟರ್ನ ನೆಲ್ಲಿಹುದಿಕೇರಿ ಪ್ರಧಾನ ಮುಖ್ಯ ಶಿಕ್ಷಕಿ ಆಶಾ ಅವರ ಸೇವೆಯನ್ನು ಪ್ರಶಂಸಿಸಲಾಯಿತು. ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಹೇಶ್ ಮಾತನಾಡಿ, ಸಾಕ್ಷರತೆ ಪ್ರತಿಯೊಬ್ಬರ ಹಕ್ಕಾಗಿದ್ದು, ಶಿಕ್ಷಣ ಪ್ರತಿಯೊಬ್ಬರ ಶಕ್ತಿಯಾಗಿದೆ. ದೇಶದ ಅಭಿವೃದ್ಧಿಗೆ ಸಂಪೂರ್ಣ ಸಾಕ್ಷರತೆ ಅತ್ಯಗತ್ಯ ಎಂದು ಹೇಳಿದರು. ಶಿಕ್ಷಣಾಧಿಕಾರಿ ಸೌಮ್ಯ ಪೊನ್ನಪ್ಪ ಮಾತನಾಡಿ, 2023-24ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಆರಂಭಿಸಿದ ಸಾಕ್ಷರತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಬಿ.ಆರ್.ಪಿ. ಹಾಗೂ ಸಿ.ಆರ್.ಪಿ.ಗಳ ಕೊಡುಗೆ ಶ್ಲಾಘನೀಯವಾಗಿದೆ ಎಂದು ತಿಳಿಸಿದರು. ಪಿ.ಎಂ. ಶ್ರೀ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಚಂದನ್ ಕುಮಾರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಾಕ್ಷರತಾ ಇಲಾಖೆಯಿಂದ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸಿ. ಸೌಮ್ಯ, ಡಯಟ್ನ ಹಿರಿಯ ಉಪನ್ಯಾಸಕ ಕೃಷ್ಣಪ್ಪ, ಸ್ವಾಮಿ, ಪುಷ್ಪ, ವಿಜಯ್, ಪಿ.ಎಂ. ಶ್ರೀ ಶಾಲೆಯ ಮುಖ್ಯೋಪಾಧ್ಯಾಯ ಸಣ್ಣಸ್ವಾಮಿ, ಎಸ್ಡಿಎಂಸಿ ಅಧ್ಯಕ್ಷ ಚಂದನ್ ಕುಮಾರ್ ಸೇರಿದಂತೆ ಮೂರು ತಾಲ್ಲೂಕುಗಳ ಸಿ.ಆರ್.ಪಿ. ಹಾಗೂ ಬಿ.ಆರ್.ಪಿ.ಗಳು ಉಪಸ್ಥಿತರಿದ್ದರು. ಪ್ರೌಢಶಾಲಾ ವಿದ್ಯಾರ್ಥಿನಿ ಪವಿತ್ರ ಮತ್ತು ತಂಡದವರು ಪ್ರಾರ್ಥಿಸಿದರು. ಡಯಟ್ ಉಪನ್ಯಾಸಕ ಡಾ. ಹೇಮಂತ್ ರಾಜ್ ಸ್ವಾಗತಿಸಿದರು. ಸಿ.ಆರ್.ಪಿ. ಶಾಂತಕುಮಾರ್ ನಿರೂಪಿಸಿದರು. ಬಿ.ಆರ್.ಪಿ. ಪುಷ್ಪ ವಂದಿಸಿದರು.









