
ಮಡಿಕೇರಿ NEWS DESK ಸೆ.9: ಕೈಲ್ ಪೊವ್ದ್ ಹಬ್ಬದ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ವತಿಯಿಂದ ದೇವಟ್ ಪರಂಬ್ ಕೊಡವ ಹತ್ಯಾಕಾಂಡ ಸ್ಮಾರಕ ಹಾಗೂ ಮಡಿಕೇರಿ ಕೋಟೆಯಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು. ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಕೊಡವ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕೊಡವರ ಯೋಗಕ್ಷೇಮಕ್ಕಾಗಿ ಹಾಗೂ ಕೊಡವಲ್ಯಾಂಡ್ಗೆ ವಿಶೇಷ ಸಾಂವಿಧಾನಿಕ ಸ್ಥಾನಮಾನ ದೊರೆಯಬೇಕೆಂಬ ಹೋರಾಟಕ್ಕೆ ಆಶೀರ್ವಾದ ಕೋರಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ 1633ರಿಂದ 1834ರವರೆಗೆ ನಡೆದ ಕರಾಳ ಆಡಳಿತದ ಅವಧಿಯಲ್ಲಿ ಕೊಡವರು ಎದುರಿಸಿದ ದುರಂತಗಳನ್ನು ಸ್ಮರಿಸಲಾಯಿತು. 1785ರ ಡಿಸೆಂಬರ್ 12ರಂದು ಮೈಸೂರು ಸುಲ್ತಾನರ ಪಡೆಗಳು ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯ ಸೈನಿಕರ ಸಹಯೋಗದೊಂದಿಗೆ ನಡೆಸಿದ ದಾಳಿಯನ್ನೂ ಸ್ಮರಿಸಲಾಯಿತು. ಪ್ರಾರ್ಥನಾ ವಿಧಿಗಳಲ್ಲಿ ಲೆ. ಕರ್ನಲ್ ಬಿ.ಎಂ. ಪಾರ್ವತಿ, ಪಟ್ಟಮಾಡ ಕುಶ, ಅರೆಯಡ ಗಿರೀಶ್ ತಿಮ್ಮಯ್ಯ, ಮಂಡಪಂಡ ಮನೋಜ್ ಮಂದಣ್ಣ, ಕೊಟ್ಟಕತಿರ ಬಾಬಿ ಪಲಂಗಪ್ಪ, ಮಂಡಪಂಡ ದೀಪಕ್ ಗಣಪತಿ, ಅಪ್ಪಾರಂಡ ಶ್ರೀನಿವಾಸ್ ನಂಜಪ್ಪ, ಪಾಲೇಕಂಡ ಪ್ರಧಾನ್ ಪೂಣಚ್ಚ ಹಾಗೂ ಐತಿಚಂಡ ಪೂವಣ್ಣ ಭಾಗವಹಿಸಿದ್ದರು.









