ಕುಶಾಲನಗರ, NEWS DESK ಸೆ. 9: ಕೊಡಗಿನಲ್ಲಿ ಗದ್ಯ ಹಾಗೂ ಕಾವ್ಯ ರಚನೆಯ ಮೂಲಕ ಸಾಹಿತ್ಯ ಕೃಷಿ ಮಾಡಿರುವ ತ್ರಿಭಾಷಾ ಸಾಹಿತಿ ವಿ.ಎಸ್. ರಾಮಕೃಷ್ಣ ಅವರು ಕೊಡಗಿನ ಮೇರು ಸಾಹಿತಿಯಾಗಿ ರೂಪುಗೊಂಡು, ಯುವ ಸಾಹಿತಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಬಣ್ಣಿಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (ಕ.ಸಾ.ಪ.) ಹಾಗೂ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕುಶಾಲನಗರದ ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ (ಸೆ. 8ರಂದು) ತ್ರಿಭಾಷಾ ಸಾಹಿತಿ ದಿವಂಗತ ವಿ.ಎಸ್. ರಾಮಕೃಷ್ಣ ಅವರ ದತ್ತಿ ಕಾರ್ಯಕ್ರಮದ ಅಂಗವಾಗಿ ‘ವಿ.ಎಸ್. ರಾಮಕೃಷ್ಣ ಅವರ ಬದುಕು–ಬರಹ ಹಾಗೂ ಕೃತಿಗಳು’ ಕುರಿತು ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಹಿತಿ ವಿ.ಎಸ್. ರಾಮಕೃಷ್ಣ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ‘ಜೀವನ ದರ್ಶನ’ ಕುರಿತು ‘ಸ್ವತಂತ್ರ ಭಾನು’ ಎಂಬ ಕಾವ್ಯವನ್ನು ಬೋಗ ಷಟ್ಪದಿಯಲ್ಲಿ ಬರೆಯುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಆಯಾಮವನ್ನು ತಂದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರು ದಶಕಗಳಿಗೂ ಹೆಚ್ಚು ಕಾಲ ಕೊಡಗಿನ ನೆಲ–ಜಲ, ಪ್ರಕೃತಿ–ಪರಿಸರ, ಕಲೆ–ಸಂಸ್ಕೃತಿ ಹಾಗೂ ಸಾಹಿತ್ಯದ ಮೂಲಕ ಕೊಡಗು ಜಿಲ್ಲೆಯ ಪರಿಚಯವನ್ನು ಮಾಡಿಕೊಟ್ಟ ಹೆಗ್ಗಳಿಕೆ ವಿ.ಎಸ್. ರಾಮಕೃಷ್ಣ ಅವರಿಗೆ ಸಲ್ಲುತ್ತದೆ ಎಂದರು.
1994ರಲ್ಲಿ ಕುಶಾಲನಗರದಲ್ಲಿ ನಡೆದ 4ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ತ್ರಿಭಾಷಾ ಸಾಹಿತಿ ವಿ.ಎಸ್. ರಾಮಕೃಷ್ಣ ಅವರು ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿ ಹಾಗೂ ಕೂಡಿಗೆಯ ಶಿಕ್ಷಕರ ಬೇಸಿಕ್ ತರಬೇತಿ ಕೇಂದ್ರದಲ್ಲಿ (ಈಗಿನ ಡಯಟ್ ಸಂಸ್ಥೆ) ಪ್ರಾಂಶುಪಾಲರಾಗಿ ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ.
ಸಾಹಿತಿ ವಿ.ಎಸ್. ರಾಮಕೃಷ್ಣ ಅವರ ಬದುಕು, ಬರಹ ಹಾಗೂ ಕೃತಿಗಳ ಬಗ್ಗೆ ಇಂದಿನ ಯುವಜನಾಂಗಕ್ಕೆ ಪರಿಚಯಿಸುವ ದಿಸೆಯಲ್ಲಿ ಅವರ ಸಮಗ್ರ ಸಾಹಿತ್ಯದ ಕುರಿತು ಶಾಶ್ವತ ದಾಖಲೆಯಾಗಿ ಉಳಿಯುವಂತೆ ಗ್ರಂಥವನ್ನು ಹೊರತರುವ ಮೂಲಕ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಸಂಘಟಿತ ಪ್ರಯತ್ನ ಅಗತ್ಯವಿದೆ ಎಂದು ಪ್ರೇಮಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಹಿತಿ ವಿ.ಎಸ್. ರಾಮಕೃಷ್ಣ ಅವರ ಬರವಣಿಗೆಯ ಶೈಲಿ ಸರಳ ಮತ್ತು ಸ್ಪಷ್ಟವಾಗಿದ್ದು, ಅತ್ಯಂತ ಗಂಭೀರ ವಿಷಯಗಳನ್ನೂ ಸಾಮಾನ್ಯ ಜನರಿಗೂ ತಲುಪಿಸುವಷ್ಟು ಸರಳ ಹಾಗೂ ಆಕರ್ಷಕವಾಗಿದೆ ಎಂದು ಪ್ರೇಮಕುಮಾರ್ ಹೇಳಿದರು.
ರಾಮಕೃಷ್ಣ ಹೆಸರಿನಲ್ಲಿ ಗ್ರಂಥಾಲಯ ಸ್ಥಾಪನೆಯಾಗಲಿ
ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರಬಾಬು ಮಾತನಾಡಿ, ಕೊಡಗಿನ ತ್ರಿಭಾಷಾ ಸಾಹಿತಿ ವಿ.ಎಸ್. ರಾಮಕೃಷ್ಣ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಬೇಕಾಗಿದೆ ಎಂದರು.
ಈ ದಿಸೆಯಲ್ಲಿ ಸಾಹಿತಿ ವಿ.ಎಸ್. ರಾಮಕೃಷ್ಣ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಸಲುವಾಗಿ, ಅವರ ಸ್ಮಾರಕವಾಗಿ ಕುಶಾಲನಗರ ಪಟ್ಟಣದ ಗುಂಡೂರಾವ್ ಬಡಾವಣೆಯಲ್ಲಿ ಹಲವು ವೈಶಿಷ್ಟ್ಯತೆಗಳೊಂದಿಗೆ ಸುಸಜ್ಜಿತ ಸಾರ್ವಜನಿಕ ಗ್ರಂಥಾಲಯವನ್ನು ಸ್ಥಾಪಿಸುವ ಮೂಲಕ ಅವರ ಹೆಸರನ್ನು ಚಿರಸ್ಥಾಯಿಗೊಳಿಸಬೇಕಾಗಿದೆ. ಇದರ ಹೊಣೆಗಾರಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ವಿದ್ಯಾರ್ಥಿಗಳು ವಿ.ಎಸ್. ರಾಮಕೃಷ್ಣ ಅವರ ಕೃತಿಗಳನ್ನು ಅಧ್ಯಯನ ಮಾಡುವ ಮೂಲಕ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಹಾಗೆಯೇ, ಗ್ರಂಥಾಲಯವನ್ನು ಬಳಸಿಕೊಂಡು ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಅಭಿರುಚಿಯುಳ್ಳ ಪುಸ್ತಕಗಳನ್ನು ಅಧ್ಯಯನ ಮಾಡುವ ಮೂಲಕ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಸಾಹಿತ್ಯವು ವ್ಯಕ್ತಿತ್ವ ವಿಕಸನಕ್ಕೆ, ಸೃಜನಶೀಲತೆಯನ್ನು ಹೆಚ್ಚಿಸಲು ಹಾಗೂ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ನೆರವಾಗುತ್ತದೆ ಎಂದು ನಾಗೇಂದ್ರಬಾಬು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿ, ವಕೀಲ ಆರ್.ಕೆ. ನಾಗೇಂದ್ರಬಾಬು ಅವರು ಸಾಹಿತಿ ವಿ.ಎಸ್. ರಾಮಕೃಷ್ಣ ಅವರ ಹೆಸರಿನಲ್ಲಿ ಸೂಕ್ತ ಜಾಗದಲ್ಲಿ ವಿನೂತನ ಮಾದರಿಯಲ್ಲಿ ಗ್ರಂಥಾಲಯವನ್ನು ಆರಂಭಿಸಲು ನಾಗರಿಕರ ಪರವಾಗಿ ಸ್ಥಳೀಯ ಪುರಸಭೆಯೊಂದಿಗೆ ವ್ಯವಹರಿಸುವುದಾಗಿ ತಿಳಿಸಿದರು.
ಕುಶಾಲನಗರ ಪಟ್ಟಣದ ಕಲಾಭವನಕ್ಕೆ ತೆರಳುವ ರಸ್ತೆಗೆ ಸಾಹಿತಿ ವಿ.ಎಸ್. ರಾಮಕೃಷ್ಣ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮನವಿ ಸಲ್ಲಿಸಲಾಗಿದ್ದು, ಇದು ಇನ್ನಷ್ಟೇ ಕಾರ್ಯರೂಪಕ್ಕೆ ಬರಬೇಕಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಕೆ.ಎಸ್. ರುದ್ರಪ್ಪ, ಸಾಹಿತ್ಯಾಭಿರುಚಿಯಿಂದ ವಿದ್ಯಾರ್ಥಿಗಳ ಜ್ಞಾನವೃದ್ಧಿ, ಮಾನಸಿಕ ನೆಮ್ಮದಿ, ಸೃಜನಶೀಲತೆ, ಕ್ರಿಯಾಶೀಲತೆ ಹಾಗೂ ಸಂಸ್ಕೃತಿಯ ಅರಿವಿನಂತಹ ಪ್ರಯೋಜನಗಳು ಲಭಿಸುತ್ತವೆ. ವಿದ್ಯಾರ್ಥಿಗಳು ನಾಡು–ನುಡಿ, ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವ ಮೂಲಕ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಸಿ. ದಿನೇಶ್, ಸಾಹಿತಿ ದಿವಂಗತ ವಿ.ಎಸ್. ರಾಮಕೃಷ್ಣ ಅವರ ಪುತ್ರ ವಿ.ಆರ್. ದಿನೇಶ್, ತಾಲ್ಲೂಕು ಕಸಾಪ ಸಮಿತಿ ಸದಸ್ಯ ಎಂ.ಎನ್. ಕಾಳಪ್ಪ, ಕೋಶಾಧಿಕಾರಿ ಕೆ.ವಿ. ಉಮೇಶ್, ಎಸ್.ಬಿ.ಐ. ಬ್ಯಾಂಕ್ನ ನಿವೃತ್ತ ಹಿರಿಯ ವ್ಯವಸ್ಥಾಪಕಿ ಸೂದನ ರತ್ನಾವತಿ, ಸಾಹಿತಿ ಲೀಲಾಕುಮಾರಿ ತೊಡಿಕಾನ, ಉಪನ್ಯಾಸಕರು ಉಪಸ್ಥಿತರಿದ್ದರು.
ಉಪನ್ಯಾಸಕಿ ಬಿ.ಜಿ. ಸ್ಮಿತಾ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ಸುಮಯ ತಬಸಮ್ ಸ್ವಾಗತಿಸಿದರು. ಉಪನ್ಯಾಸಕಿ ಎ. ದರ್ಶಿನಿ ವಂದಿಸಿದರು.
ಸನ್ಮಾನ
ಇದೇ ವೇಳೆ ಉಪನ್ಯಾಸ ನೀಡಿದ ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಹಾಗೂ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರಬಾಬು ಅವರನ್ನು ತಾಲ್ಲೂಕು ಕಸಾಪ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.







