
ಮಡಿಕೇರಿ NEWS DESK ಸೆ.10 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ನ.26 ರಂದು ಭಾರತೀಯ ಸಂವಿಧಾನ ದಿನ ಮತ್ತು 36ನೇ ವರ್ಷದ ಕೊಡವ ನ್ಯಾಷನಲ್ ಡೇ ಯನ್ನು ಆಚರಿಸಲಾಗುವುದು ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಮಡಿಕೇರಿ ಸಮೀಪದ ಕ್ಯಾಪಿಟಲ್ ವಿಲೇಜ್ನಲ್ಲಿ ಬೆಳಗ್ಗೆ 10.30 ಗಂಟೆಗೆ ನಡೆಯಲಿರುವ ಸಮಾವೇಶದಲ್ಲಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಬುಡಕಟ್ಟು ಸ್ಥಾನಮಾನ ಸೇರಿದಂತೆ ಕೊಡವರ 10 ಪ್ರಮುಖ ಸಂವಿಧಾನಿಕ ಬೇಡಿಕೆಗಳ ಹೋರಾಟವನ್ನು ಹೊಸ ಹುರುಪಿನಿಂದ ಪುನರುಜ್ಜೀವನಗೊಳಿಸುವ ಕುರಿತು ಐತಿಹಾಸಿಕ ಘೋಷಣೆ ಮತ್ತು ನಿರ್ಣಯ ಅಂಗೀಕರಿಸಲಾಗುವುದು. ಕಾರ್ಯಕ್ರಮದಲ್ಲಿ ಖ್ಯಾತ ಮಾನವಶಾಸ್ತçಜ್ಞರು, ನ್ಯಾಯಶಾಸ್ತçಜ್ಞರು ಹಾಗೂ ಸಂವಿಧಾನ ತಜ್ಞರು ಭಾಗವಹಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಎನ್ಸಿ ಕಳೆದ 36 ವರ್ಷಗಳಿಂದ ಕೊಡವರ ಹಕ್ಕುಗಳು ಮತ್ತು ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದ್ದು, ಸಂವಿಧಾನದ 244 ಮತ್ತು 371ನೇ ವಿಧಿಗಳು ಹಾಗೂ 5, 6 ಮತ್ತು 8ನೇ ಪರಿಚ್ಛೇದಗಳ ಅಡಿಯಲ್ಲಿ ಕೊಡವಲ್ಯಾಂಡ್ಗೆ ವಿಶೇಷ ಸ್ಥಾನಮಾನ, ಸ್ವ-ಆಡಳಿತ ಮತ್ತು ಆಂತರಿಕ ಸ್ವ-ನಿರ್ಣಯದ ಹಕ್ಕುಗಳನ್ನು ಒದಗಿಸಬೇಕು ಎಂದು ಒತ್ತಾಯಿಸುತ್ತಿದೆ.
*ಪ್ರಮುಖ ಬೇಡಿಕೆಗಳು*
ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ವಿಶೇಷ ಸಂವಿಧಾನಿಕ ಸ್ಥಾನಮಾನ. ಕೊಡವರಿಗೆ ಬುಡಕಟ್ಟು ಸ್ಥಾನಮಾನ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಆದಿಮಸಂಜಾತ ಸಮುದಾಯವಾಗಿ ಮಾನ್ಯತೆ. ಗನ್-ತೋಕ್ ಅನ್ನು ಕೊಡವರ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿ ಸಂವಿಧಾನಿಕ ರಕ್ಷಣೆ. ಕೊಡವ ತಕ್ಕ್ ಭಾಷೆಗೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಮಾನ್ಯತೆ. ಕೊಡವರ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು UಓಇSಅಔ ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರಿಸುವುದು. ದೇವಟ್ ಪರಂಬ್, ನಾಲ್ನಾಡ್ ಅರಮನೆ, ಮಡಿಕೇರಿ ಕೋಟೆ ಹಾಗೂ ವಿವಿಧ ಯುದ್ಧ ಸ್ಮಾರಕಗಳ ಸಂರಕ್ಷಣೆ. ತಲಕಾವೇರಿಗೆ ಪವಿತ್ರ ಯಾತ್ರಾ ಸ್ಥಳದ ಮಾನ್ಯತೆ ಹಾಗೂ ಕಾವೇರಿ ನೀರಿನ ಹಕ್ಕುಗಳ ರಕ್ಷಣೆ. ಕೊಡವ ಪ್ರದೇಶಕ್ಕೆ ಒಳರೇಖಾ ಪರವಾನಗಿ ವ್ಯವಸ್ಥೆ ಜಾರಿ. ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ. ಐತಿಹಾಸಿಕವಾಗಿ ಕಳೆದುಕೊಂಡ ಪೂರ್ವಿಕರ ಭೂಮಿಯ ಮರುಸ್ಥಾಪನೆ.
*2027ರ ಜನಗಣತಿಯಲ್ಲಿ ಪ್ರತ್ಯೇಕ ಕೊಡವ ಕೋಡ್ಗೆ ಒತ್ತಾಯ*
ಕೊಡವರ ನೈಜ ಜನಸಂಖ್ಯೆ, ಭಾಷೆ, ಸಂಸ್ಕೃತಿ ಮತ್ತು ಐತಿಹಾಸಿಕ ನಿರಂತರತೆಯನ್ನು ದಾಖಲಿಸಿ ಸಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು 2027ರ ರಾಷ್ಟ್ರೀಯ ಜನಗಣತಿಯಲ್ಲಿ ಪ್ರತ್ಯೇಕ ಕೊಡವ ಕೋಡ್ ಮತ್ತು ಕಾಲಂ ಕಲ್ಪಿಸಬೇಕು ಎಂದು ಒತ್ತಾಯಿಸಲಾಗುವುದು. 1941ರವರೆಗೆ ಕೊಡವರನ್ನು ಜನಗಣತಿಯಲ್ಲಿ ಪ್ರತ್ಯೇಕ ಜನಾಂಗೀಯತೆಯಾಗಿ ದಾಖಲಿಸಲಾಗುತ್ತಿತ್ತು. ನಂತರ ಜನಗಣತಿಯಲ್ಲಿ ಈ ಗುರುತು ಕಳೆದುಹೋಗಿದ್ದು, 1956ರ ರಾಜ್ಯ ಮರುಸಂಘಟನೆಯ ಸಂದರ್ಭದಲ್ಲಿ ಪ್ರಾದೇಶಿಕ ಗುರುತಿಗೂ ಧಕ್ಕೆಯಾಗಿದೆ. ಹೀಗಾಗಿ ಜನಸಂಖ್ಯಾ ಮತ್ತು ಪ್ರಾದೇಶಿಕ ಗುರುತಿನ ಈ ದ್ವಿಗುಣ ನಷ್ಟವನ್ನು ಪುನಃಸ್ಥಾಪಿಸುವ ಅಗತ್ಯವಿದೆ ಎಂದು ನಾಚಪ್ಪ ತಿಳಿಸಿದ್ದಾರೆ. ಕೊಡವ ಸಮುದಾಯದ ಎಲ್ಲ ಸಹೋದರ-ಸಹೋದರಿಯರು ನವೆಂಬರ್ 26ರಂದು ನಡೆಯುವ ಐತಿಹಾಸಿಕ ಸಮಾವೇಶದಲ್ಲಿ ಭಾಗವಹಿಸಿ, ಕೊಡವ ನ್ಯಾಷನಲ್ ಕೌನ್ಸಿಲ್ನ ಹಕ್ಕುಗಳ ಹೋರಾಟಕ್ಕೆ ತಮ್ಮ ಒಗ್ಗಟ್ಟನ್ನು ನವೀಕರಿಸುವಂತೆ ಮನವಿ ಮಾಡಿದ್ದಾರೆ.









