
ಮಡಿಕೇರಿ ಸೆ.11 NEWS DESK : ಕರ್ನಾಟಕ ಅರಣ್ಯ ಇಲಾಖೆ ಕೊಡಗು ವೃತ್ತ ಮಡಿಕೇರಿ ವತಿಯಿಂದ ಶುಕ್ರವಾರ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಹಿನ್ನೆಲೆ ನಗರದ ಅರಣ್ಯ ಭವನ ಆವರಣದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಏರ್ ಮಾರ್ಷಲ್(ನಿವೃತ್ತ) ಕೆ.ಸಿ.ಕಾರ್ಯಪ್ಪ ಅವರು ಪುಷ್ಪಗುಚ್ಚ ಇರಿಸಿ, ಗೌರವ ನಮನ ಸಲ್ಲಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಅಭಿಷೇಕ್, ಉಪ ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ತಹಶೀನ್ ಬಾನು ದವಡಿ, ಕೆ.ಪಿ.ಗೋಪಾಲ್, ಸಂದೀಪ್ ಪಿ.ಅಭಯಂಕರ್, ಶ್ರೀನಿವಾಸ್ ನಾಯಕ್, ವಿ. ಸೆಂದಿಲ್ ಕುಮಾರ್, ನಿವೃತ್ತ ಉಪ ಅರಣ್ಯ ಸಂರಕ್ಷಾಧಿಕಾರಿ ಜಯ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್, ವಲಯ ಅರಣ್ಯಾಧಿಕಾರಿ ಶಂಕರ, ಪತ್ರಾಂಕಿತ ವ್ಯವಸ್ಥಾಪಕರಾದ ಸರೋಜ ಪಿ.ಪಿ., ಉಪ ವಲಯ ಅರಣ್ಯಾಧಿಕಾರಿ ಸುಬ್ರಾಯ ಕೆ.ಎಸ್., ಆನೆ ಜಮೇದಾರ್ ಬೋಜಪ್ಪ ಜೆ.ಕೆ., ಗಸ್ತು ಅರಣ್ಯ ಪಾಲಕ ನಾಗರಾಜ ರಡರಟ್ಟಿ, ಆನೆ ಮಾವುತ ಪುಟ್ಟ ಜೆ.ಎಂ., ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಅರುಣ್ ಕುಮಾರ್, ಆನೆ ಕಾವಡಿಗ ಭರತ್ ನಾಯಕ್, ದಲಾಯತ್ ನೌಕರ ಬಸವರಾಜ್, ಅರಣ್ಯ ವೀಕ್ಷಕ ಸಚಿನ್ ತಳವಾರ, ಕ್ಷೇಮಾಭಿವೃದ್ಧಿ ನೌಕರ ಮೇದಪ್ಪ, ಆರ್ಆರ್ಟಿ ತಂಡದ ಕಾರ್ತಿಕ್, ಹೊರಗುತ್ತಿಗೆ ನೌಕರರ ಪರವಾಗಿ ದೀಪಕ್, ವಾಹನ ಚಾಲಕರ ಪರವಾಗಿ ಮಣಿ, ಪೊಲೀಸ್ ಸಿಬ್ಬಂದಿಗಳ ಪರವಾಗಿ ಚೆನ್ನಕೇಶವ ಅವರು ಅರಣ್ಯ ಹುತಾತ್ಮ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿದರು. ಮುಖ್ಯ ಅತಿಥಿಗಳಿಗೆ ಪೆರೇಡ್ ಕಮಾಂಡರ್ ಸದಾನಂದ ಹಿಪ್ಪರಗಿ ಅವರು ಗೌರವ ವಂದನೆ ಸಲ್ಲಿಸಿದರು. ಪೊಲೀಸ್ ವಾದ್ಯ ವೃಂದದಿಂದ ರಾಷ್ಟ್ರಗೀತೆ ನುಡಿಸಲಾಯಿತು. ಅರಣ್ಯ ವನ್ಯಜೀವಿ ಸಂಪತ್ತನ್ನು ಉಳಿಸಲು ಹೋರಾಡಿ ಮಡಿದವರ ಗೌರವಾರ್ಥ ರಿವರ್ಸ್ ಆರ್ಮಸ್ ನುಡಿಸಲಾಯಿತು. ನಂತರ ಮೌನಾಚರಣೆ ನಡೆಯಿತು. ಪೊಲೀಸ್ ವಾದ್ಯ ವೃಂದದಿಂದ ಅಬೈಡ್ ವಿತ್ ಮೀ ವಾದ್ಯವನ್ನು ನುಡಿಸಲಾಯಿತು. ಡಿಆರ್ಎಫ್ಒ ಐಶ್ವರ್ಯ ಆರ್.ಗೌಡರ ಅವರು ನಿರೂಪಿಸಿ, ವಂದಿಸಿದರು. ಇನ್ನಷ್ಟು ಮಾಹಿತಿ: ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯ ನಿರ್ದೇಶನದ ಮೇರೆಗೆ ಸೆಪ್ಟೆಂಬರ್, 11 ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆಯ ಸಿಬ್ಬಂದಿಗಳು ದೇಶದ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ಮಾಡಿದ ತ್ಯಾಗ ಮತ್ತು ಬಲಿದಾನಗಳ ಸ್ಮರಣೆಗಾಗಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. 1730ರ ಸೆಪ್ಟೆಂಬರ್, 11 ರಂದು ಜೋಧಪುರ್ನ ಮಹಾರಾಜ ಅಭಯಸಿಂಗ್ನ ಹೊಸ ಅರಮನೆ ನಿರ್ಮಾಣಕ್ಕೆ ಕೇಜರ್ಲಿ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು ಕಡಿಯಲು ವಿರೋಧಿಸಿದ ಬಿಷ್ಣೋಯಿ ಸಮುದಾಯದ 363 ಪುರುಷ, ಮಹಿಳೆ ಮತ್ತು ಮಕ್ಕಳನ್ನು ಸೈನಿಕರಿಂದ ಹತ್ಯೆಗಯ್ಯಲಾಯಿತು. ಮರಗಳ ಸಂರಕ್ಷಣೆಗಾಗಿ ಬಲಿದಾನ ಹೊಂದಿದ ಬಿಷ್ಣೋಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಭಾರತ ಸರ್ಕಾರ ಈ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಘೋಷಿಸಿದೆ. ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿ ಸರ್ವೋಚ್ಛ ತ್ಯಾಗವನ್ನು ಮಾಡಿ ಸಮರ್ಪಣಾ ಮನೋಭಾವದ ಹಲವಾರು ಅರಣ್ಯ ಅಧಿಕಾರಿಗಳ ಹೆಸರುಗಳು ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಇಂದಿಗೂ ಹಚ್ಚ ಹಸಿರಾಗಿ ರಾರಾಜಿಸುತ್ತಿದೆ. ಇವರ ಅಸಾಧಾರಣ ಪ್ರಯತ್ನಗಳು, ಧೈರ್ಯಶೀಲ ಕಾರ್ಯಗಳು ಮತ್ತು ಸರ್ವೋಚ್ಛ ತ್ಯಾಗಗಳು, ಅಪಾಯಕ್ಕೆ ಒಳಗಾದ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಿ ಕಾಪಾಡಲು ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗಿದೆ. ಇಂತಹ ಆದರ್ಶ ವ್ಯಕ್ತಿಗಳಲ್ಲಿ ಭಾರತೀಯ ಅರಣ್ಯ ಸೇವೆಯ ಅಧಿಕಾರಿಯಾಗಿದ್ದ ದಿವಂಗತ ಪಿ.ಶ್ರೀನಿವಾಸ್ ಅವರು ಒಬ್ಬರು. ಕಾಡಿಗಾಗಿ ಜನನ, ಕಾಡಿಗಾಗಿ ಜೀವನ, ಕಾಡಿಗಾಗಿ ಮರಣ ಎಂಬುದನ್ನೇ ತತ್ವಗಳನ್ನಾಗಿ ಇಟ್ಟುಕೊಂಡಿದ್ದ ಕರ್ನಾಟಕ ಅರಣ್ಯ ಇಲಾಖೆಯ ವೀರ ಅಭಿಮನ್ಯು ಎಂದೇ ಕರೆಯಬಹುದಾದ ದಿವಂಗತ ಪಿ.ಶ್ರೀನಿವಾಸ್ ಅವರು ದಂತಜೋರ ಮತ್ತು ಕುಖ್ಯಾತ ಶ್ರೀಗಂಧ ಕಳ್ಳಸಾಗಾಣಿಕೆದಾರ ವೀರಪ್ಪನ್ನ ನಯವಂಚನೆ ಚಕ್ರವ್ಯೂಹದಲ್ಲಿ ಸಿಲುಕಿ 1991 ರ ನವೆಂಬರ್, 10 ರಂದು ವಿಧಿವಶರಾದರು. ದಿವಂಗತ ಪಿ.ಶ್ರೀನಿವಾಸ್ ಅವರ ಕಾರ್ಯದಕ್ಷತೆಯನ್ನು ಮೆಚ್ಚಿ ಭಾರತ ಸರ್ಕಾರವು ಅವರಿಗೆ ‘ಕೀರ್ತಿಚಕ್ರ’ ಶೌರ್ಯ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಿದೆ. ಹಾಗೆಯೇ ವೀರಪ್ಪನ್ನ ವಂಚನೆಯಿಂದ ಹುತಾತ್ಮರಾದ ಕೊಳ್ಳೆಗಾಲದ ಅರಣ್ಯ ರಕ್ಷಕರಾದ ಬಿ.ಸಿ.ಮೋಹನಯ್ಯ ಅವರ ತ್ಯಾಗವನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ. ಶಿರಸಿಯ ಮರಗಳ್ಳರ ಕ್ರೌರ್ಯಕ್ಕೆ ಬಲಿಯಾದ ವಲಯ ಅರಣ್ಯಾಧಿಕಾರಿ ಅರವಿಂದ್ ಹೆಗೆಡೆ ಅವರ ಶೌರ್ಯ ಕೂಡ ಸ್ಮರಣೀಯವಾಗಿದೆ. ಕರ್ನಾಟಕ ಮತ್ತು ತಮಿಳುನಾಡು ಪೊಲೀಸ್ ಮತ್ತು ಅರಣ್ಯ ಸಿಬ್ಬಂದಿಗಳ ಅವಿಶ್ರಾಂತ ಹೋರಾಟದಿಂದಾಗಿ 2004 ರ ಅಕ್ಟೋಬರ್, 18 ರಂದು ದಂತಚೋರ, ಕುಖ್ಯಾತ ಕಾಡುಗಳ್ಳ ವೀರಪ್ಪನ್ ಹತ್ಯೆಯಾಗಿರುವುದು ಅರಣ್ಯ ಸಿಬ್ಬಂದಿಗೆ ಇನ್ನೂ ಹೆಚ್ಚಿನ ಶ್ರದ್ಧೆ ಹಾಗೂ ಕಿಚ್ಚಿನಿಂದ ಅರಣ್ಯ/ ವನ್ಯಜೀವಿ ಸಂಪತ್ತನ್ನು ಸಂರಕ್ಷಿಸಲು ಸ್ಪೂರ್ತಿ ಸಿಕ್ಕಿದಂತಾಗಿದೆ. ಕಳೆದ ಸುಮಾರು 49 ವರ್ಷಗಳಿಂದಲೂ ಅಮೂಲ್ಯ ಅರಣ್ಯ ಸಂಪತ್ತು ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ತಮ್ಮಗಳ ಬದುಕನ್ನೇ ಮುಡಿಪಾಗಿಟ್ಟು, ಕಳ್ಳಸಾಗಾಣಿಕೆದಾರರ, ಮರಗಳ್ಳರ, ದಂತಚೋರರ ಜೊತೆ ಕೆಚ್ಚೆದೆಯಿಂದ ಹೋರಾಡಿ, ನೈಸರ್ಗಿಕ ಸಂಪತ್ತನ್ನು ಉಳಿಸಲು ತಮ್ಮ ಜೀವನವನ್ನೇ ನಾಡಿಗಾಗಿ ತ್ಯಾಗ ಮಾಡಿದ ಇಲಾಖೆಯ/ ನೌಕರರ ಸ್ಮರಣೆಗಾಗಿ ಕೇಂದ್ರ ಸ್ಥಾನದಲ್ಲಿಯೇ ಅಲ್ಲದೇ, ಎಲ್ಲಾ ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿಯೂ ಆಚರಿಸಲಾಗುತ್ತಿದೆ. ಹುತಾತ್ಮರ ಕುಟುಂಬಕ್ಕೆ ನೆರವಾಗಲು ಅರಣ್ಯ ಹುತಾತ್ಮರ ದಿನಾಚರಣೆ ಸಮಿತಿಯನ್ನು ಸ್ಥಾಪಿಸಿದ್ದು, ಈ ಸಮಿತಿಗೆ ನಿಧಿಯನ್ನು ವಿವಿಧ ಅರಣ್ಯ ವೃತ್ತಗಳಿಂದ ಮತ್ತು ವೈಯಕ್ತಿಕ ದೇಣಿಗೆಗಳ ಮೂಲಕ ಸ್ವೀಕೃತವಾಗಿದೆ ಹಾಗೂ ಸ್ವೀಕೃತವಾಗುತ್ತಿರುತ್ತದೆ. ಅಂತಹ ದಾನಿಗಳಿಗೆ ಈ ಸಂದರ್ಭದಲ್ಲಿ ಹುತಾತ್ಮರ ದಿನಾಚರಣೆಯ ಸಮಿತಿಯ ಹಾಗೂ ಅರಣ್ಯ ಇಲಾಖೆಯ ಪರವಾಗಿ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಿದರು.











