ಕುಶಾಲನಗರ, NEWS DESK ಸೆ.11: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡಗು ಜಿಲ್ಲೆಯ ಕೊಡುಗೆ ಅಪಾರವಾಗಿದ್ದು, ಜಿಲ್ಲೆಯ ಕವಿಗಳು ಮತ್ತು ಸಾಹಿತಿಗಳ ಸಾಹಿತ್ಯದಲ್ಲಿ ಪಶ್ಚಿಮಘಟ್ಟದ ಪ್ರಕೃತಿ, ಪರಿಸರ, ಜೀವನದಿ ಕಾವೇರಿ, ಜನಪದ, ಸಂಸ್ಕೃತಿ ಹಾಗೂ ಪರಂಪರೆಗೆ ಪ್ರಮುಖ ಸ್ಥಾನ ದೊರೆತಿದೆ ಎಂದು ಚಿಂತಕ ಹಾಗೂ ನಿವೃತ್ತ ಕಲಾ ಶಿಕ್ಷಕ ಉ.ರಾ. ನಾಗೇಶ್ ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (ಕ.ಸಾ.ಪ.), ಕುಶಾಲನಗರ ತಾಲ್ಲೂಕು ಕ.ಸಾ.ಪ. ಘಟಕ ಹಾಗೂ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ತ್ರಿವೇಣಿ ತ್ರಿಭಾಷಾ ಸಂಘದ ಸಂಯುಕ್ತಾಶ್ರಯದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಕೊಡಗು’ ಎಂಬ ವಿಷಯ ಕುರಿತು ಆಯೋಜಿಸಿದ್ದ ಕೆ.ಟಿ. ಸುಬ್ಬರಾವ್ ಅವರ ವಾರ್ಷಿಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊಡಗಿನಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆ ಕುರಿತು ಮಾತನಾಡಿದ ಅವರು, ಜಿಲ್ಲೆ ಕಂಡ ಹೆಸರಾಂತ ಕಥೆಗಾರ್ತಿ ಕೊಡಗಿನ ಗೌರಮ್ಮ, ಹಿರಿಯ ಕವಿ ಹರದಾಸ ಅಪ್ಪಚ್ಚು ಕವಿ, ಕವಿ ಪಂಜೆ ಮಂಗೇಶರಾಯರು, ಸಾಹಿತಿ ಭಾರತೀಸುತ ಸೇರಿದಂತೆ ಇಂದಿನ ಹೊಸ ತಲೆಮಾರಿನ ಉದಯೋನ್ಮುಖ ಸಾಹಿತಿಗಳ ಸಾಹಿತ್ಯ ರಚನೆ ಹಾಗೂ ಬೆಳವಣಿಗೆಗೆ ಕೊಡಗಿನ ಪ್ರಾಕೃತಿಕ ಸೌಂದರ್ಯ ಸ್ಪೂರ್ತಿ ಮತ್ತು ಚೈತನ್ಯ ನೀಡಿದೆ ಎಂದರು.
ಕೊಡಗಿನ ನೆಲ, ಜಲ, ಪ್ರಾಕೃತಿಕ ಸನ್ನಿವೇಶ ಹಾಗೂ ಕೊಡವ ಕಲೆ, ಸಂಸ್ಕೃತಿ ಮತ್ತು ಪರಂಪರೆಗಳು ಸಾಹಿತ್ಯದಲ್ಲಿ ಪ್ರತಿಬಿಂಬಿತವಾಗಿವೆ. ವಿಶೇಷವಾಗಿ ಹುತ್ತರಿ ಹಾಡುಗಳಲ್ಲಿ ಕೊಡಗಿನ ಪ್ರಾಕೃತಿಕ ಸನ್ನಿವೇಶಗಳನ್ನು ಚೆನ್ನಾಗಿ ಬಿಂಬಿಸುವ ಮೂಲಕ ಕೊಡಗಿನ ಶೌರ್ಯವನ್ನು ಚಿತ್ರಿಸಲಾಗಿದೆ ಎಂದು ಉ.ರಾ. ನಾಗೇಶ್ ಹೇಳಿದರು.
ಪಶ್ಚಿಮಘಟ್ಟದ ಜೀವನದಿ ಕಾವೇರಿ ಹಾಗೂ ಕೊಡಗಿನ ಪ್ರಕೃತಿ ಸೌಂದರ್ಯವೇ ಜಿಲ್ಲೆಯ ಸಾಹಿತಿಗಳು ಮತ್ತು ಕವಿಗಳಿಗೆ ಸಾಹಿತ್ಯ ರಚನೆಗೆ ಪ್ರೇರಣೆ ಹಾಗೂ ಸ್ಪೂರ್ತಿ ನೀಡಿದೆ ಎಂದರು.
ಕೊಡಗಿನಲ್ಲಿ ಸಾಹಿತ್ಯದ ಬೆಳವಣಿಗೆಗೆ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡಪರ ಮನಸ್ಸುಗಳು ಜತೆಗೂಡಿ ಶ್ರಮಿಸುತ್ತಿವೆ. ಜಿಲ್ಲೆಯ ಸಾಹಿತಿಗಳಲ್ಲದೆ, ಹೊರಗಿನಿಂದ ಜಿಲ್ಲೆಗೆ ಬಂದ ಅನೇಕ ಕವಿಗಳು ಹಾಗೂ ಸಾಹಿತಿಗಳೂ ಉತ್ತಮ ಸಾಹಿತ್ಯ ರಚನೆಯ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ ಎಂದು ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸೋಮವಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಪ್ರತಿಯೊಬ್ಬರೂ ತಮ್ಮನ್ನು ತೊಡಗಿಸಿಕೊಂಡಾಗ ಕನ್ನಡ ನಾಡು-ನುಡಿ, ಸಂಸ್ಕೃತಿ ಮತ್ತು ಪರಂಪರೆಯನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಎಸ್.ಜಿ. ನಾಗರತ್ನ ಮಾತನಾಡಿ, ಇಂತಹ ಸಾಹಿತ್ಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಕ್ಷೇತ್ರದ ಬಗ್ಗೆ ಅಭಿರುಚಿ ಬೆಳೆಸುವುದರೊಂದಿಗೆ ಕನ್ನಡ ನಾಡು-ನುಡಿಯ ಬೆಳವಣಿಗೆಗೆ ತಮ್ಮನ್ನು ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತವೆ ಎಂದರು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಕನ್ನಡ ಸಾಹಿತ್ಯವು ಮಕ್ಕಳಲ್ಲಿ ಭಾಷಾ ಜ್ಞಾನ, ಬರವಣಿಗೆ ಕೌಶಲ್ಯ, ನೈತಿಕತೆ ಹಾಗೂ ಕಲ್ಪನಾ ಶಕ್ತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ, ಉತ್ತಮ ನಡವಳಿಕೆಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಮಹಿಳಾ ಬರಹಗಾರ್ತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮಾತನಾಡಿ, ವಿದ್ಯಾರ್ಥಿಗಳು ಕೊಡಗಿನ ಸಾಹಿತಿಗಳ ಕುರಿತು ಹೆಚ್ಚಿನ ಜ್ಞಾನವನ್ನು ಬೆಳೆಸಿಕೊಂಡು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿ, ಇಂತಹ ಉಪನ್ಯಾಸ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿಯೊಂದಿಗೆ ಭಾಷಾ ಪ್ರೇಮವನ್ನು ಬೆಳೆಸಲು ನೆರವಾಗುತ್ತವೆ ಎಂದರು.
ಪ್ರೌಢಶಾಲಾ ವಿಭಾಗದ ಎಸ್.ಡಿ.ಎಂ.ಸಿ. ಅಧ್ಯಕ್ಷ ಎಸ್.ಜೆ. ರವಿಕಿರಣ್, ತಾಲ್ಲೂಕು ಕ.ಸಾ.ಪ. ಸಮಿತಿ ಸದಸ್ಯ ಎಂ.ಎನ್. ಕಾಳಪ್ಪ, ಕಸಾಪ ಸದಸ್ಯರಾದ ಸೂದನ ರತ್ನಾವತಿ, ಲೀಲಾಕುಮಾರಿ ತೊಡಿಕಾನ, ಶಿಕ್ಷಕಿಯರಾದ ಕೆ.ಆರ್. ದೇವಕಿ, ಬಿ.ಬಿ. ಹೇಮಲತಾ, ಎನ್.ಜಿ. ನಂದಿನಿ ಹಾಗೂ ಎಂ.ಪಿ. ರಶ್ಮಿ ಇದ್ದರು. ವಿದ್ಯಾರ್ಥಿನಿ ದುರ್ಗಾ ಪರಮೇಶ್ವರಿ ಹಾಗೂ ತಂಡದ ಸದಸ್ಯರು ಗೀತೆ ಹಾಡಿದರು. ಪ್ರೌಢಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಚಿತ್ರ 1: ಕುಶಾಲನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಕೆ.ಟಿ. ಸುಬ್ಬರಾವ್ ದತ್ತಿ ಕಾರ್ಯಕ್ರಮದಲ್ಲಿ ಚಿಂತಕ ಉ.ರಾ. ನಾಗೇಶ್ ಉಪನ್ಯಾಸ ನೀಡಿದರು. ಉಪ ಪ್ರಾಂಶುಪಾಲರಾದ ಎಸ್.ಜಿ. ನಾಗರತ್ನ, ಟಿ.ಜಿ. ಪ್ರೇಮಕುಮಾರ್, ಕೆ.ಎಸ್. ನಾಗೇಶ್, ಫ್ಯಾನ್ಸಿ ಮುತ್ತಣ್ಣ, ರವಿಕಿರಣ್, ಎಂ.ಎನ್. ಚಂದ್ರಮೋಹನ್ ಹಾಗೂ ಕೆ.ವಿ. ಉಮೇಶ್ ಇದ್ದಾರೆ.
ಚಿತ್ರ 2: ಕುಶಾಲನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಕೆ.ಟಿ. ಸುಬ್ಬರಾವ್ ದತ್ತಿ ಕಾರ್ಯಕ್ರಮವನ್ನು ಉಪ ಪ್ರಾಂಶುಪಾಲರಾದ ಎಸ್.ಜಿ. ನಾಗರತ್ನ ಉದ್ಘಾಟಿಸಿದರು. ಚಿಂತಕ ಉ.ರಾ. ನಾಗೇಶ್, ಟಿ.ಜಿ. ಪ್ರೇಮಕುಮಾರ್, ಕೆ.ಎಸ್. ನಾಗೇಶ್, ಫ್ಯಾನ್ಸಿ ಮುತ್ತಣ್ಣ, ರವಿಕಿರಣ್, ಎಂ.ಎನ್. ಚಂದ್ರಮೋಹನ್ ಹಾಗೂ ಕೆ.ವಿ. ಉಮೇಶ್ ಇದ್ದಾರೆ.







