ವಿರಾಜಪೇಟೆ, NEWS DESK ಸೆ.12: ಪೂರ್ವಜರು ಕಂಡುಕೊಂಡ ಸಾಂಪ್ರದಾಯಿಕ ಪದ್ಧತಿಗಳು ಸಂಶೋಧನೆಯಿಂದ ಪರಿಷ್ಕೃತಗೊಂಡು ಇಂದಿಗೂ ಬಳಕೆಯಲ್ಲಿವೆ. ದೇಶದ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಂಶೋಧನೆಗಳು ಪೂರಕವಾಗಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಅಶೋಕ್ ಎಸ್. ಅಲೂರ ಅಭಿಪ್ರಾಯಪಟ್ಟರು.
ಸೇಂಟ್ ಆನ್ಸ್ ಪದವಿ ಕಾಲೇಜು ಹಾಗೂ ಎಂ.ಕಾಂ. ಸ್ನಾತಕೋತ್ತರ ಅಧ್ಯಯನ ಕೇಂದ್ರ, ಐಕ್ಯೂಎಸಿ ಮತ್ತು ಐ.ಪಿ.ಆರ್. ಕೋಶ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ “ಬೌದ್ಧಿಕ ಆಸ್ತಿ ಹಕ್ಕುಗಳು, ಸಂಶೋಧನೆಯಿಂದ ನಾವೀನ್ಯತೆ ಮತ್ತು ವಾಣಿಜ್ಯೀಕರಣ” ವಿಷಯದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸೃಜನಶೀಲತೆಯನ್ನು ಬೆಳೆಸಿಕೊಂಡು ಹೊಸ ಉದ್ಯಮಗಳನ್ನು ಸ್ಥಾಪಿಸುವ ಗುರಿ ಹೊಂದಬೇಕು. ಸಮಾಜದ ಬೇಡಿಕೆಗಳಿಗೆ ಸ್ಪಂದಿಸಿ, ಆಧುನಿಕ ಯುಗಕ್ಕೆ ತಕ್ಕಂತಹ ನೂತನ ಆವಿಷ್ಕಾರಗಳನ್ನು ಕಂಡುಕೊಂಡು ವಾಣಿಜ್ಯ ಅಭಿವೃದ್ಧಿಗೆ ಸಹಕರಿಸುವಂತಾಗಬೇಕು ಎಂದು ಹೇಳಿದರು.
ಕೆಲವು ವಸ್ತುಗಳ ನಿರ್ಮಾಣ ಹಾಗೂ ತಂತ್ರಜ್ಞಾನಗಳು ಇಂದಿಗೂ ಸವಾಲಾಗಿ ನಿಂತಿವೆ. ಆಧುನಿಕತೆ ಬರುವುದಕ್ಕೂ ಮೊದಲಿನಿಂದಲೂ ಬಳಕೆಯಲ್ಲಿದ್ದ ವಸ್ತುಗಳ ಕುರಿತು ಸಂಶೋಧನೆಗಳು ನಡೆದು, ಅವು ಹೊಸ ರೂಪ ಪಡೆದುಕೊಂಡಿವೆ. ಯುವ ಸಮುದಾಯವು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ದೇಶದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವುದರ ಜತೆಗೆ ವೈಯಕ್ತಿಕವಾಗಿ ಆರ್ಥಿಕವಾಗಿ ಸಬಲರಾಗಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣಗಳ ಆಯೋಜನೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸೇಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ರೆ. ಫಾ. ಮದಲೈ ಮುತ್ತು ಮಾತನಾಡಿ, ನಿರಂತರ ಸಂಶೋಧನೆಗಳಿಂದ ಆಧುನಿಕತೆಗೆ ಹೊಂದಿಕೊಂಡ ವಾತಾವರಣ ನಿರ್ಮಾಣವಾಗುತ್ತಿದೆ. ತಂತ್ರಜ್ಞಾನ ಬೆಳವಣಿಗೆಯ ಮೂಲಕ ಹೊಸ ಆವಿಷ್ಕಾರಗಳು ಉಗಮವಾಗುತ್ತಿವೆ. ಕೆಲವು ಸಂಶೋಧನೆಗಳು ಸಮಾಜಕ್ಕೆ ಪೂರಕವಾಗಿಯೂ, ಇನ್ನು ಕೆಲವು ವಾಣಿಜ್ಯಿಕವಾಗಿಯೂ ಪರಿಣಮಿಸಿವೆ. ಸೂಕ್ಷ್ಮವಾಗಿ ಗ್ರಹಿಸಿದಾಗ ಮಾತ್ರ ಬಳಕೆಯಲ್ಲಿರುವ ನಾವೀನ್ಯತೆಯ ಮಹತ್ವ ಮನದಟ್ಟಾಗುತ್ತದೆ ಎಂದು ಹೇಳಿದರು.
ಸೇಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಪ್ರಾಸ್ತಾವಿಕ ಭಾಷಣ ಮಾಡಿದರು.
“ಶಿಕ್ಷಣ ಕ್ಷೇತ್ರದಲ್ಲಿ ಐ.ಪಿ.ಆರ್.: ಆಲೋಚಿಸಿ, ರಚಿಸಿ ಮತ್ತು ರಕ್ಷಿಸಿ” ವಿಷಯದ ಕುರಿತು ಕೆ.ಎಸ್.ಸಿ., ಎಸ್.ಟಿ. ಯೋಜನಾ ಎಂಜಿನಿಯರ್ ವಿನೀತ್ ಕುಮಾರ್ ಎಸ್.ಆರ್. ಹಾಗೂ ಜೀವವೈವಿಧ್ಯ ಮತ್ತು ಭೌಗೋಳಿಕ ಸೂಚ್ಯಂಕ (ಜಿಐ) ಕುರಿತು ಕೆ.ಎಲ್.ಇ. ಸೊಸೈಟಿ, ಬೆಂಗಳೂರಿನ ಸಹಾಯಕ ಪ್ರಾಧ್ಯಾಪಕಿ ರಶ್ಮಿ ಸೇರಿದಂತೆ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.
ಸಂಶೋಧನೆಯನ್ನು ಬೌದ್ಧಿಕ ಆಸ್ತಿಯನ್ನಾಗಿ ಪರಿವರ್ತಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ವಿಚಾರ ಸಂಕಿರಣದಲ್ಲಿ ಚರ್ಚೆ ನಡೆಯಿತು.
ಕಾರ್ಯಕ್ರಮದಲ್ಲಿ ಐ.ಪಿ.ಆರ್. ವಿಭಾಗದ ಸಂಚಾಲಕಿ ಪೂಜಾ ಎಚ್.ಕೆ., ಕಾರ್ಯಕ್ರಮ ಸಂಚಾಲಕಿ ನಿಶಾ ಸಿ.ಎಲ್. ಹಾಗೂ ಐಕ್ಯೂಎಸಿ ಸಂಚಾಲಕಿ ಹೇಮಾ ಬಿ.ಡಿ. ಉಪಸ್ಥಿತರಿದ್ದರು.
ಸೇಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಸರ್ವರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ನಿಶಿ ಸರಸ್ವತಿ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸೇಂಟ್ ಆನ್ಸ್ ಪದವಿ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ರಾಜ್ಯದ ವಿವಿಧ ಕಾಲೇಜುಗಳಿಂದ ಆಗಮಿಸಿದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.







