
ಮಡಿಕೇರಿ ಸೆ.15 NEWS DESK : ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಭೌಗೋಳಿಕ ಸ್ವಾಯತ್ತತೆ ಹಾಗೂ ವಿಶೇಷ ರಾಜಕೀಯ ಸ್ಥಾನಮಾನ ನೀಡುವ ಬೇಡಿಕೆ ಮತ್ತು ಮುಂದೆ ಇದರಿಂದಾಗುವ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟ ಸಂವಿಧಾನಾತ್ಮಕ ಕರ್ತವ್ಯವೆಂದು ಭಾವಿಸಿರುವುದಾಗಿ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಅವರು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗು ಯಾವುದೇ ಒಂದು ಸಮುದಾಯಕ್ಕೆ ಸೇರಿದ ಪ್ರದೇಶವಲ್ಲ. ಕೊಡಗಿನ ನೆಲದಲ್ಲಿ ತಲೆತಲಾಂತರಗಳಿಂದ ಕೊಡವರು, ಅರೆಭಾಷಿಕ ಗೌಡ ಸಮೂಹ ಸೇರಿದಂತೆ ವಿವಿಧ ಸಮುದಾಯಗಳು ಸಹಬಾಳ್ವೆಯನ್ನು ನಡೆಸಿಕೊಂಡು ಬರುತ್ತಿವೆ. ಈ ಸಮುದಾಯಗಳ ಹಕ್ಕು, ಗೌರವ ಮತ್ತು ಅಸ್ತಿತ್ವವನ್ನು ನಾವು ಎಂದಿಗೂ ಗೌರವಿಸುವುದಾಗಿ ತಿಳಿಸಿದರು. ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಭೌಗೋಳಿಕ ರಾಜಕೀಯ ಸ್ವಾಯತ್ತತೆ ಮತ್ತು ವಿಶೇಷ ರಾಜಕೀಯ ಆಡಳಿತಾತ್ಮಕ ಅಧಿಕಾರಗಳನ್ನು ನೀಡುವ ಬೇಡಿಕೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಅದರ ಪರಿಣಾಮಗಳು ಜಿಲ್ಲೆಯಲ್ಲಿ ನೆಲೆಸಿರುವ ವಿವಿಧ ಸಮುದಾಯಗಳ ಮೇಲೆ ಹೇಗಿರಬಹುದು ಎನ್ನುವುದನ್ನು ಪ್ರಶ್ನಿಸುವುದು ನಮ್ಮ ಸಂವಿಧಾನಾತ್ಮಕ ಕರ್ತವ್ಯವಾಗಿದೆ. ಒಂದು ಸಮುದಾಯದ ಹಕ್ಕುಗಳನ್ನು ರಕ್ಷಿಸುವ ಹೆಸರಿನಲ್ಲಿ ಮತ್ತೊಂದು ಸಮುದಾಯದ ಹಕ್ಕುಗಳನ್ನು ಕುಗ್ಗಿಸುವ ಕಾರ್ಯ ಎಂದಿಗೂ ನಡೆಯಬಾರದು. ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಶಾಸಕರುಗಳು ತಮ್ಮ ನಿಲುವುಗಳನ್ನು ವ್ಯಕ್ತಪಡಿಸಬೇಕೆಂದು ಆನಂದ ಕರಂದ್ಲಾಜೆ ಆಗ್ರಹಿಸಿದರು. ಒಕ್ಕೂಟದ ಉಪಾಧ್ಯಕ್ಷ ರಾಜೇಶ್ ತೇನನ ಅವರು ಮಾತನಾಡಿ, ಭೌಗೋಳಿಕ ರಾಜಕೀಯ ಸ್ವಾಯತ್ತತೆ ಎಂದರೆ ಅದು ಕೇವಲ ಒಂದು ಸಮುದಾಯದ ಭಾಷೆ, ಸಂಸ್ಕೃತಿಯ ಅಥವಾ ಪರಂಪರೆಯ ರಕ್ಷಣೆಯಲ್ಲ. ಬದಲಾಗಿ ಸ್ಥಳೀಯ ಆಡಳಿತ, ಕಾನೂನು ರೂಪಿಸುವಿಕೆ, ಭೂಮಿ, ನೈಸರ್ಗಿಕ ಸಂಪನ್ಮೂಲಗಳು, ಸಾಂಪ್ರದಾಯಿಕ ಕಾನೂನು ಮೊದಲಾದ ವಿಷಯಗಳಲ್ಲಿಯೂ ವಿಶೇಷ ಅಧಿಕಾರವನ್ನು ಹೊಂದಿರಬಹುದಾಗಿದೆ. ಈ ಹಿನ್ನೆಲೆ ಸ್ವಾಯತ್ತತೆ ಪದವನ್ನು ಕೇವಲ ಸಾಂಸ್ಕೃತಿಕ ಹಕ್ಕು ಎಂದು ಪರಿಗಣಿಸದೆ ಅದರ ಸಾಂವಿಧಾನಿಕ ಮತ್ತು ಆಡಳಿತಾತ್ಮಕ ಪರಿಣಾಮಗಳನ್ನು ಪರಿಶೀಲಿಸಬೇಕಾಗುತ್ತದೆ ಎಂದು ತಿಳಿಸಿದರು. ನಮ್ಮ ವಿರೋಧ ಕೊಡವ ಜನರ ವಿರುದ್ಧವಲ್ಲ, ಬದಲಾಗಿ ಒಂದು ಸಮುದಾಯಕ್ಕೆ ಮಾತ್ರ ಭೌಗೋಳಿಕ ರಾಜಕೀಯ ಸ್ವಾಯತ್ತತೆ ನೀಡುವ ಬೇಡಿಕೆಯ ವಿರುದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಕೊಡಗು ಗೌಡ ಸಮಾಜದ ಅಧ್ಯಕ್ಷ ದಂಬೆಕೋಡಿ ಆನಂದ, ಕುಶಾಲನಗರದ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಒಕ್ಕೂಟದ ನಿರ್ದೇಶಕರಾದ ಕುಯ್ಯಮುಡಿ ರಂಜು ಹಾಗೂ ಕುಂಬುಗೌಡನ ಜಲಜಾಕ್ಷಿ ಉಪಸ್ಥಿತರಿದ್ದರು.










