ಮಡಿಕೇರಿ ಮಾ.10 : ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಬೆಂಗಳೂರು ಮತ್ತು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ದೊಡ್ಡೇಗೌಡ ಜಗದ್ವಿಖ್ಯಾತ ವಿಜ್ಞಾನಿ ಸರ್. ಸಿ.ವಿ.ರಾಮನ್ ಅವರು ವಿಜ್ಞಾನಕ್ಕೆ ನೀಡಿರುವ ಕೊಡುಗೆಯನ್ನು ವಿದ್ಯಾರ್ಥಿಗಳು ದೈನಂದಿನ ಬದುಕಿನಲ್ಲಿ ವೈಜ್ಞಾನಿಕ ಪ್ರಜ್ಞೆ ಮೂಡಿಸಿಕೊಳ್ಳುವುದು ತುಂಬಾ ಅವಶ್ಯಕ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂತಹ ವ್ಯಕ್ತಿತ್ವ ಹಾಗೂ ಆದರ್ಶವನ್ನಾಗಿಸಿ ಅವರ ಹೆಜ್ಜೆಯಲ್ಲಿ ಸಾಗಬೇಕು ಎಂದರು.
ಶಾಲೆಯ ಉಪ ಪ್ರಾಂಶುಪಾಲರಾದ ನಳಿನಿ ಮಾತನಾಡಿ ಸರ್.ಸಿ.ವಿ.ರಾಮನ್ ಅವರ ಜೀವನ ಮತ್ತು ಸಾಧನೆಯನ್ನು ವಿದ್ಯಾರ್ಥಿಗಳಿಗೆ ವಿವರಿಸುತ್ತಾ ವೈಜ್ಞಾನಿಕ ಮನೋಭಾವದ ಜೊತೆಗೆ ಸಾಮಾಜಿಕ ಕಳಕಳಿಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದರು.
ಕೊಡಗು ಜಿಲ್ಲಾ ಪಂಚಾಯತ್ ಎನ್.ಆರ್.ಡಿ.ಎಂ.ಎಸ್. ಅಧಿಕಾರಿ ಸೂರಜ್, ‘ರಾಷ್ಟ್ರೀಯ ವಿಜ್ಞಾನ ದಿನʼದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಇತರೆ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಕೊಡಗು ಜಿಲ್ಲಾ ಪಂಚಾಯತ್ ವತಿಯಿಂದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಪ್ರಬಂಧ ಸ್ಪರ್ಧೆಯಲ್ಲಿ ಕೆನ್ನೆತ್ ರಾಯ್ ಪ್ರಥಮ, ಅಪೂರ್ವ ಪಿ. ಡಿ. ದ್ವಿತೀಯ, ಹಾಗೂ ಅನುಶಾ ಎಸ್, ತೃತೀಯ ಬಹುಮಾನ ಪಡೆದರು.
ಸಮಾಧಾನಕರ ಬಹುಮಾನವನ್ನು ಅನನ್ಯ ಎನ್. ಜೆ., ಫಾತಿಮಾ ವಿ. ಎಸ್., ಸುಮಂತ್ ಬಿ. ಆರ್. ಮತ್ತು ಕ್ರಿತಿಕಾ ಸಿರ್ವಿ ಪಡೆದುಕೊಂಡರು.









