ಮಡಿಕೇರಿ ಆ.11 : ಚೆಯ್ಯಂಡಾಣೆಯ ನರಿಯಂದಡ ಕೇಂದ್ರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮನೋಹರ್ ನಾಯ್ಕ ಅವರ ಮೇಲೆ ಹಲ್ಲೆ, ನಡೆಸಿ, ಸುಳ್ಳು ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ಗಿರೀಶ್, ಒಟ್ಟು ಪ್ರಕರಣವನ್ನು ಸಿಐಡಿಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯೋಪಾಧ್ಯಾಯ ಮನೋಹರ್ ನಾಯ್ಕ್ ಅವರು ತಮ್ಮ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಆರೋಪಿಗಳಲ್ಲಿ ಎಂಟು ಮಂದಿ ಜಾಮೀನು ಪಡೆದುಕೊಂಡಿದ್ದು, ಉಳಿದ ಇಬ್ಬರನ್ನು ವಾರದ ಒಳಗಾಗಿ ತನಿಖಾಧಿಕಾರಿಯಾದ ಡಿವೈಎಸ್ಪಿ ಅವರು ಬಂಧಿಸಬೇಕು. ಇಲ್ಲವಾದಲ್ಲಿ ರಾಜ್ಯ ಮಟ್ಟದ ‘ಮಡಿಕೇರಿ ಚಲೋ’ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ನರಿಯಂದಡ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದ ಮನೋಹರ್ ನಾಯ್ಕ್ 2017 ರಲ್ಲಿ ‘ಉತ್ತಮ ಶಿಕ್ಷಕ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ನಿಯಮ ಬಾಹಿರ ಕಾರ್ಯಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ಕಾರಣಕ್ಕೆ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದರು.
ಒಟ್ಟು ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಯಬೇಕೆಂದು ಆಗ್ರಹಿಸಿದ ಗಿರೀಶ್, ತಪ್ಪು ಯಾರೇ ಮಾಡಿರಲಿ ಅವರಿಗೆ ಶಿಕ್ಷೆಯಾಗಲಿ. ಆದರೆ, ಯಾವುದೇ ತಪ್ಪುಗಳನ್ನು ಮಾಡದವರು ಶಿಕ್ಷೆಗೆ ಒಳಗಾಗಬಾರದು. ಕಳೆದ ಇಪ್ಪತ್ತೈದು ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿರುವ ಮನೋಹರ್ ನಾಯ್ಕ ಅವರು, ಕೊಡಗು ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರೂ ಆಗಿದ್ದಾರೆ. ಪ್ರಸ್ತುತ ಇವರ ಮೇಲೆ ಪೋಕ್ಸೋ ಪ್ರಕರಣವನ್ನು ದಾಖಲಿಸಲಾಗಿದೆ. ಈ ಪ್ರಕರಣದ ಸತ್ಯಾಸತ್ಯತೆಯನ್ನು ಕಂಡುಕೊಳ್ಳಲು ಸಿಐಡಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಸದಸ್ಯರಾದ ನಾಗರಾಜು ಆರ್., ಶಾಂತಾ ನಾಯ್ಕ ಡಿ.ಜಿ., ಚೇತನ್ ಕುಮಾರ್, ಮಂಜುನಾಥ್ ಎಲ್. ಹಾಗೂ ಜಿ.ಜಿ.ನಾಯಕ್ ಉಪಸ್ಥಿತರಿದ್ದರು.








