ಮಡಿಕೇರಿ ಸೆ.22 : ಬರಹಗಾರ ಉಡುವೆರ ವಿಠಲ್ ತಿಮ್ಮಯ್ಯ ಅವರು ಬರೆದಿರುವ ಕೊಡವ ಮಕ್ಕಡ ಕೂಟದ 73ನೇ ಪುಸ್ತಕ ಕೊಡವ ಭಾಷೆಯ “ಬೊಳ್ಳಿ ಬಿಲ್ಲ್” ಬಿಡುಗಡೆಗೊಂಡಿದೆ.
ನಗರದ ಪತ್ರಿಕಾ ಭವನದಲ್ಲಿ ಡಿಎಫ್ಓ ಅಜ್ಜಿಕುಟ್ಟಿರ ಪೂವಯ್ಯ ಅವರು ಪುಸ್ತಕ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರ ಬೇರೆ ಕ್ಷೇತ್ರಗಳಂತಲ್ಲ, ಇದೊಂದು ವಿಭಿನ್ನ ಕ್ಷೇತ್ರವಾಗಿದ್ದು, ಕಬ್ಬಿಣದ ಕಡಲೆ ಇದ್ದಂತೆ, ಇದಕ್ಕೆ ಸ್ವಯಂ ಪ್ರತಿಭೆ ಅಗತ್ಯ ಎಂದರು.
ಒಂದು ಒಳ್ಳೆಯ ಪುಸ್ತಕ ಮನುಷ್ಯನ ಒಳ್ಳೆಯ ಸ್ನೇಹಿತ ಇದ್ದ ಹಾಗೆ, ಪುಸ್ತಕ ಓದುವುದರಿಂದ ಹೆಚ್ಚಿನ ಜ್ಞಾನ, ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಪುಸ್ತಕವು ಸಮಾಜದ ಅಂಕು-ಡೊಂಕು, ಪಿಡುಗುಗಳನ್ನು ಎತ್ತಿ ತೋರುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಹೆಚ್ಚು ಸಹಕಾರಿಯಾಗಿದೆ ಎಂದು ತಿಳಿಸಿದರು.
ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಕೊಡಗಿನ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
“ಬೊಳ್ಳಿ ಬಿಲ್ಲ್” ಪುಸ್ತಕದ ಮೂಲಕ ಬರಹಗಾರ ಉಡುವೆರ ವಿಠಲ್ ತಿಮ್ಮಯ್ಯ ಅವರು, ಕೊಡಗಿನ ಸಂಸ್ಕøತಿ, ಆಚಾರ, ವಿಚಾರದ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕಗಳು ಹೊರತರುವಂತಾಗಲಿ ಎಂದು ಪೂವಯ್ಯ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ ತನ್ನ ಅಧ್ಯಕ್ಷತೆಯಲ್ಲಿ ಈವರೆಗೆ ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು 72 ಕೃತಿಗಳನ್ನು ಬಿಡುಗಡೆ ಮಾಡಿದೆ. ಇದೀಗ 73ನೇ ಪುಸ್ತಕ “ಬೊಳ್ಳಿ ಬಿಲ್ಲ್” ನ್ನು ಲೋಕಾರ್ಪಣೆ ಮಾಡಲಾಗಿದೆ ಎಂದರು.
ಕೊಡವ ಮಕ್ಕಡ ಕೂಟ ಪ್ರಕಟಿಸಿರುವ 72 ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಇದೀಗ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಬರೆದ “1965ರ ಯುದ್ಧ ಹಾಗೂ ಕೊಡಗಿನ ಮಹಾವೀರ ಸ್ಕ್ವಾ.ಲೀ ಅಜ್ಜಮಾಡ ದೇವಯ್ಯ” ಅವರ ಪುಸ್ತಕವು ಬಾಲಿವುಡ್ ಚಿತ್ರೀಕರಣಕ್ಕೆ ತಯಾರಿ ನಡೆಯುತ್ತಿದ್ದು, ಬಾಲಿವುಡ್ನ ನಿರ್ದೇಶಕ ಸಂದೀಪ್ ಚಿತ್ರ ನಿರ್ದೇಶನಕ್ಕೆ ಕೊಡವ ಮಕ್ಕಡ ಕೂಟದ ವತಿಯಿಂದ ಎನ್ಓಸಿ ಪಡೆದುಕೊಂಡಿದೆ. ಅಲ್ಲದೇ ಸ್ವ್ಕಾ.ಲೀ.ಅಜ್ಜಮಾಡ ದೇವಯ್ಯ ಅವರ ಪತ್ನಿ ಸುಂದರಿ ದೇವಯ್ಯ ಮತ್ತು ಮಕ್ಕಳಿಂದ ಅನುಮತಿ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಹಲವು ದಾಖಲೀಕರಣ ಪುಸ್ತಕ, ಸಾಧಕರ ವಿವರದ ಪುಸ್ತಕ ಕೊಡಗಿನ ಹಾಗೂ ಕೊಡವ ಆಚಾರ, ವಿಚಾರ ಸಂಬಂಧಪಟ್ಟಂತ ಪುಸ್ತಕ, ಕೊಡಗಿನ ಎರಡು ಮಹಾವೀರ ಚಕ್ರ ಪುರಸ್ಕೃತ ವೀರ ಯೋಧರ ಪುಸ್ತಕಗಳನ್ನು ಲೋಕಾರ್ಪಣೆ ಮಾಡುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದೆ. ಅಲ್ಲದೇ ಹೊಸ ಬರಹಗಾರರನ್ನು ಪ್ರೋತ್ಸಾಹಿಸುತ್ತ ಬಂದಿದೆ ಎಂದರು. ಮುಂದಿನ ದಿನಗಳಲ್ಲೂ ಬರಹಗಾರರ ಪ್ರಯತ್ನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಬೊಳ್ಳಿ ಬಿಲ್ಲ್ ಪುಸ್ತಕದ ಬರಹಗಾರ ಉಡುವೆರ ವಿಠಲ್ ತಿಮ್ಮಯ್ಯ ಮಾತನಾಡಿ, “ಬೊಳ್ಳಿ ಬಿಲ್ಲ್” ಪುಸ್ತಕವು ಕೊಡವ ಪದ್ಧತಿ, ಸಂಸ್ಕೃತಿ , ಮರ ಗಿಡ, ವಾತಾವರಣ, ಹಬ್ಬ ಹರಿದಿನ, ಕೊಡಗಿನ ಪ್ರಕೃತಿ, ಔಷಧಿ ಗಿಡಮೂಲಿಕೆ ಬಗ್ಗೆ ಮಾಹಿತಿ ಇರುವ ಸಂಗ್ರಹ ಪುಸ್ತಕವಾಗಿದ್ದು, ಇದು ಮೊದಲ ಕೃತಿಯಾಗಿದೆ ಎಂದರು.
ಬಾಲ್ಯದಿಂದಲೇ ಓದುವ ಹಾವ್ಯಸ ಇದ್ದರಿಂದ ಸಣ್ಣ ಸಣ್ಣ ಕವನ, ಚುಟುಕ್ ಬರೆಯುತ್ತಿದ್ದು, ಇದೀಗ ಪುಸ್ತಕ ಬರೆಯಲು ಸಹಕಾರಿಯಾಗಿದೆ ಎಂದ ಅವರು, ಪುಸ್ತಕ ಬರೆಯಲು ಸಹಕರಿಸಿದ ಎಲ್ಲರಿಗೂ ಇದೇ ಸಂದರ್ಭ ಅಭಿನಂದನೆ ಸಲ್ಲಿಸಿದರು.
ಸಮಾಜ ಸೇವಕರಾದ ತೆಕ್ಕಬೊಟ್ಟೋಳಂಡ ಗಣೇಶ್, ಅಡ್ಡಂಡ ಚಂಗಪ್ಪ ಹಾಗೂ ಕೋಟೇರ ತಾರಾ ನಂಜಪ್ಪ ಉಪಸ್ಥಿತರಿದ್ದರು.
::: ಉಡುವೆರ ವಿಠಲ್ ತಿಮ್ಮಯ್ಯ ಪರಿಚಯ :::
ಗಡಿನಾಡು ಶಿರಂಗಳ್ಳಿಯ ಉಡುವೆರ ಜಿ.ಮುತ್ತಪ್ಪ ಹಾಗೂ ಗಂಗಮ್ಮ ದಂಪತಿಯ ಪುತ್ರ ವಿಠಲ್ ತಿಮ್ಮಯ್ಯ 08.06.1979ರಲ್ಲಿ ಜನಿಸಿದರು. ಸಣ್ಣವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಇವರು ತಾವೇ ಮನೆಯ ಜವಾಬ್ದಾರಿ ಹೊಂದಿದ್ದರಿಂದ 10ನೇ ತರಗತಿಯವರೆಗೆ ಶಿಕ್ಷಣ ಪಡೆದರು. ನಂತರ ಅಡ್ಡಂಡ ಚಂಗಪ್ಪ ಮತ್ತು ಚೋಂದವ್ವ ದಂಪತಿಯ ಪುತ್ರಿ ಸಾವಿತ್ರಿ ಎಂಬವರನ್ನು ವಿವಾಹವಾದರು. ಈ ದಂಪತಿಗೆ ಶರತ್ ಸುಬ್ಬಯ್ಯ ಹಾಗೂ ದೀಕ್ಷ ದೇಚಮ್ಮ ಎಂಬ ಇಬ್ಬರು ಮಕ್ಕಳಿದ್ದಾರೆ.
ಇವರು ಸೋಮವಾರಪೇಟೆ ಕೊಡವ ಸಮಾಜದ ಕ್ಲಕ್ ಆಗಿ ಸೇವೆ ಸಲ್ಲಿಸಿದ್ದು, ಇದೀಗ ಹಾಸನದಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೇ ಓದುವ ಹಾವ್ಯಸ ಹೊಂದಿದ್ದ ವಿಠಲ್ ತಿಮ್ಮಯ್ಯ ಸಣ್ಣ ಸಣ್ಣ ಕವನ, ಚುಟುಕ್ ಬರೆಯುತ್ತಿದ್ದರು. ಇದು ವಿಠಲ್ ತಿಮ್ಮಯ್ಯ ಅವರ ಮೊದಲ ಪುಸ್ತಕವಾಗಿದೆ.









