ಮಡಿಕೇರಿ ಸೆ.22 : ರೈತರ ಸೇವೆಗಾಗಿಯೇ ಮೀಸಲಾಗಿರುವ ಸಹಕಾರ ಕ್ಷೇತ್ರದಲ್ಲಿ ರಾಜಕೀಯ ನುಸುಳಬಾರದು ಎಂದು ಹಿರಿಯ ಸಹಕಾರಿ ಹಾಗೂ ಮಾಜಿ ಕಾನೂನು ಸಚಿವ ಎಂ.ಸಿ.ನಾಣಯ್ಯ ಹೇಳಿದ್ದಾರೆ.
ನಗರದ ಬಾಲಭವನದ ಸಭಾಂಗಣದಲ್ಲಿ ನಡೆದ ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಮಹಾಸಭೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದ ಅವರು ರೈತರ ಅಭ್ಯುದಯಕ್ಕೆ ಸಹಕಾರಿ ಕ್ಷೇತ್ರ ಸಹಕಾರಿಯಾಗಿದೆ ಎಂದರು.
ನನಗೆ ಸಹಕಾರಿ ಕ್ಷೇತ್ರ ಹೆಚ್ಚು ಪ್ರೀತಿಯ ಕ್ಷೇತ್ರವಾಗಿದೆ, ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಮೂಲಕವೇ ನಾನು ಸಹಕಾರ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಗುರುತಿಸಿಕೊಂಡೆ. ಕೊಡಗು ಜಿಲ್ಲೆಯ ಬೆಳೆಗಾರರು ಹಾಗೂ ರೈತರು ಸಹಕಾರಿ ಕ್ಷೇತ್ರವನ್ನು ಅತಿಯಾಗಿ ನಂಬಿರುವುದರಿoದ ಉತ್ತಮ ಸೇವೆ ನೀಡುವುದು ಈ ಕ್ಷೇತ್ರದಲ್ಲಿರುವವರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ನಾನು ಏಲಕ್ಕಿ ಸಹಕಾರ ಸಂಘದ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ನಮ್ಮ ಸಂಘದ ಗೋದಾಮು ವರ್ಷದಲ್ಲಿ 3-4 ಲಕ್ಷ ಕೆ.ಜಿ ಯಷ್ಟು ಏಲಕ್ಕಿ ದಾಸ್ತಾನು ಹೊಂದಿತ್ತು. ಆದರೆ ಈಗ ಕೊಡಗಿನಲ್ಲಿ ಏಲಕ್ಕಿ ಹೆಸರಿಲ್ಲದಂತೆ ನಾಶವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತರಿಗೆ ಬೇಕಾದ ಗುಣಮಟ್ಟದ ವಿವಿಧ ಸಾಮಾಗ್ರಿಗಳ ಮಾರಾಟ ಮಳಿಗೆಯನ್ನು ಆನಂತರ ತೆರೆಯಲಾಗಿದೆ. ಸದಸ್ಯರು ಹಾಗೂ ರೈತರು ಸಂಘದ ಮೂಲಕವೇ ವ್ಯವಹರಿಸಬೇಕೆಂದು ಹೇಳಿದರು.
ಕಳೆದ ವರ್ಷದಿಂದ ಸಾಂಬಾರ ಮಳಿಗೆಯನ್ನು ತೆರೆಯಲಾಗಿದ್ದು, ಸಂಘದ ಈಗಿನ ಮಂಡಳಿ ಉತ್ತಮ ಯೋಜನೆಗಳನ್ನು ರೂಪಿಸಿಕೊಂಡು ಉತ್ತಮ ಕೆಲಸ ಮಾಡುತ್ತಿರುವುದು ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಸೂದನ ಎಸ್.ಈರಪ್ಪ ಈ ಸಾಲಿನಲ್ಲಿ ಸಂಘ ರೂ.6,74,453.18 ನಿವ್ವಳ ಲಾಭ ಗಳಿಸಿದೆ ಎಂದರು.
ಸಂಘ ಸಾಂಬಾರ ಮಳಿಗೆ ಆರಂಭಿಸಿ ಒಂದು ವರ್ಷವಾಗಿದೆ, ಸದಸ್ಯರು ಹಾಗೂ ಬೆಳೆಗಾರರು ಏಲಕ್ಕಿ ಮತ್ತು ಕರಿಮೆಣಸನ್ನು ಸಂಘಕ್ಕೆ ತಂದು ವಸ್ತು ನ್ಯಾಯಯುತ ದರವನ್ನು ಪಡೆಯುವಂತೆ ಮನವಿ ಮಾಡಿದರು.
ಬೆಳೆಗಾರರು ಹಾಗೂ ಗ್ರಾಹಕರು ವಂಚನೆಗೆ ಒಳಗಾಗದಂತೆ ಸಂಘ ಎಚ್ಚರ ವಹಿಸುತ್ತಿದೆ. ಗುಣಮಟ್ಟಕ್ಕೆ ಆದ್ಯತೆ ನೀಡುತ್ತಿದ್ದು, ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು. ಸದಸ್ಯರು ಹಾಗೂ ರೈತರೊಂದಿಗೆ ಸ್ನೇಹಪರವಾಗಿ ಇರುವಂತೆ ಸಿಬ್ಬಂದಿಗಳಿಗೆ ಸೂಚಿಸಿದ್ದೇನೆ. ಸದಸ್ಯರು ತಮ್ಮ ಸಮಸ್ಯೆಗಳನ್ನು ನನ್ನೊಂದಿಗೆ ಅಥವಾ ನಿರ್ದೇಶಕರೊಂದಿಗೆ ನೇರವಾಗಿ ಹಂಚಿಕೊಳ್ಳಬಹುದು. ತಾರತಮ್ಯ ಮತ್ತು ರಾಜಕೀಯ ನಮ್ಮ ಸಂಘದಲ್ಲಿ ಇಲ್ಲ, ರೈತಪರ ಕಾಳಜಿಯೇ ನಮ್ಮ ಗುರಿ ಎಂದು ಸೂದನ ಈರಪ್ಪ ಹೇಳಿದರು.
ಸಭೆಯಲ್ಲಿ ನಿರ್ದೇಶಕರುಗಳಾದ ಬಿ.ಈ.ಬೋಪಯ್ಯ, ಕೋಳುಮುಡಿಯನ ಆರ್.ಅನಂತ ಕುಮಾರ್, ಮಂದ್ರೀರ, ಜೆ.ಮೋಹನ್ದಾಸ್, ಬಿ.ಸಿ.ಚೆನ್ನಪ್ಪ, ಅಜಿನಂಡ. ಎಂ.ಗೋಪಾಲಕೃಷ್ಣ, ಶಿವಚಾರರ ಎಸ್.ಸುರೇಶ್, ಕುಂಭಗೌಡನ, ಡಿ.ವಿನೋದ್ಕುಮಾರ್, ಸಿ.ಪಿ.ವಿಜಯ್ ಕುಮಾರ್, ಪೇರಿಯನ ಉದಯ ಕುಮಾರ್, ಹೆಚ್.ಎ.ಬೊಳ್ಳು, ಕೆ.ಬಿ.ಬೆಳ್ಯಪ್ಪ, ಅಂಬೆಕಲ್ಲು ಸುಶೀಲ ಕುಶಾಲಪ್ಪ ಹಾಗೂ ಪರಿವಾರ ಎಸ್.ಕವಿತ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಎಂ.ಎo.ತಮ್ಮಯ್ಯ ನಿರೂಪಿಸಿ, ಉಪಾಧ್ಯಕ್ಷ ಕೆ.ಕೆ.ಗೋಪಾಲ ವಂದಿಸಿದರು.
ಸಭೆಯಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.










