ಮಡಿಕೇರಿ ಅ.16 : ಸರ್ಕಾರಿ ದಾಖಲೆಗಳಲ್ಲಿ “ಕೊಡವ” ಪದ ಬಳಕೆ ಕುರಿತು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸಿದ ಹೋರಾಟದ ಫಲವಾಗಿ ಡಾ.ದ್ವಾರಕಾನಾಥ್ ಆಯೋಗ ಹೊರಡಿಸಿದ ವರದಿಯ ಶಿಫಾರಸ್ಸಿಗಾಗಿ ಸಿಎನ್ಸಿ ಪರ ಕಾನೂನು ಹೋರಾಟ ನಡೆಸಿದ ರಾಜ್ಯ ಸಾರ್ವಜನಿಕ ಅಭಿಯೋಜಕ ಬಲ್ಲಚಂಡ ಬೊಳ್ಳಿಯಪ್ಪ ಅವರಿಗೆ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದ ನಿಯೋಗ ಧನ್ಯವಾದಗಳನ್ನು ಅರ್ಪಿಸಿತು.
ಬೆಂಗಳೂರಿನಲ್ಲಿರುವ ಬೊಳ್ಳಿಯಪ್ಪ ಅವರ ಹೈಕೋರ್ಟ್ ನ ಕಚೇರಿಯಲ್ಲಿ ಭೇಟಿಯಾದ ನಿಯೋಗ ಹೈಕೋರ್ಟ್ ನ ರಾಜ್ಯ ಸಾರ್ವಜನಿಕ ಅಭಿಯೋಜಕರಾಗಿ ಆಯ್ಕೆಯಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿತು.
ಸಿಎನ್ಸಿಯ ಕಾನೂನಾತ್ಮಕ ಹೋರಾಟಗಳಿಗೆ ಬೆಂಬಲವಾಗಿ ನಿಂತ ಕಾರಣಕ್ಕೆ ಧನ್ಯವಾದಗಳನ್ನು ಅರ್ಪಿಸಿ ಮಾತನಾಡಿದ ಎನ್.ಯು.ನಾಚಪ್ಪ, ಸುಮಾರು 15 ವರ್ಷಗಳ ನಿರಂತರ ಹೋರಾಟದ ಫಲವಾಗಿ “ಕೊಡವ” ಪದ ಬಳಕೆಯ ಹಕ್ಕು ದೊರೆತ್ತಿದೆ. ವಕೀಲರಾಗಿ ಬೊಳ್ಳಿಯಪ್ಪ ಅವರು 8 ವರ್ಷಗಳ ಕಾಲ ಕಾನೂನು ಹೋರಾಟದ ಮೂಲಕ ನಮಗೆ ವಿಜಯ ತಂದು ಕೊಟ್ಟಿದ್ದಾರೆ ಮತ್ತು ಕಳೆದ 10 ವರ್ಷಗಳಿಂದ ಸಿಎನ್ಸಿಗೆ ಬೆಂಬಲವಾಗಿ ನಿಂತಿದ್ದಾರೆ ಎಂದರು.
ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರ ಮಧ್ಯಸ್ಥಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಇದೇ ಅ.9 ರಂದು ಹೈಕೋರ್ಟ್ ತೀರ್ಪನ್ನು ಅಧಿಕೃತವಾಗಿ ಜಾರಿಗೆ ತರಲು ಅಧಿಸೂಚನೆಯನ್ನು ಹೊರಡಿಸಿತು. ಸಿಎನ್ಸಿ ಪ್ರಸ್ತಾಪಿಸಿದ ಕೊಡವ ಬುಡಕಟ್ಟಿನ ಪ್ರಮುಖ ಜನಾಂಗೀಯ ಸಮಸ್ಯೆಯೊಂದನ್ನು ಬಗೆಹರಿಸಲು ಸಹಾಯ ಮಾಡಿದ ಮತ್ತು ಸಂಘಟನೆಯೊಂದಿಗೆ ಕೈಜೋಡಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಈ ಸಂದರ್ಭ ಅರೆಯಡ ಗಿರೀಶ್, ಕಿರಿಯಮಾಡ ಶೆರಿನ್, ಬೇಪಡಿಯಂಡ ಬಿದ್ದಪ ಹಾಗೂ ಅಪ್ಪಾರಂಡ ಪೂವಣ್ಣ ಉಪಸ್ಥಿತರಿದ್ದರು.







