ಮಡಿಕೇರಿ ಅ.24 : ನಗರದ ದೇಚೂರು ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ 105ನೇ ವರ್ಷದ ದಸರಾ ಉತ್ಸವ ಆಚರಿಸುತ್ತಿದ್ದು, ವಿಷ್ಣುವಿನಿಂದ ಮಧು ಖೈಟಭರ ಸಂಹಾರ ಕಥಾ ಸಾರಾಂಶವನ್ನು ಈ ಬಾರಿ ಮಂಟಪದಲ್ಲಿ ಅಳವಡಿಸಲಾಗುತ್ತಿದೆ ಎಂದು ದೇಚೂರು ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಪಿ.ವೇಣುಗೋಪಾಲ್ ತಿಳಿಸಿದ್ದಾರೆ. ಎರಡು ಟ್ರ್ಯಾಕ್ಟರ್ ಗಳನ್ನು ಬಳಸಲಾಗುತ್ತಿದ್ದು, ಮಡಿಕೇರಿಯ ಪ್ರೊಫೆಷನಲ್ ಲೈಟ್ ಅಂಡ್ ಸೌಂಡ್ಸ್ ನ ಪವನ್ ತಂಡ ಲೈಟಿಂಗ್ ಬೋರ್ಡ್ ಅಳವಡಿಸಲಿದೆ. ಪ್ಲಾಟ್ ಫಾರಂ ನಿರ್ಮಾಣ ಮತ್ತು ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ಅನ್ನು ಅನಿಲ್ ಕಮಾರ್ ಹಾಗೂ ತಂಡದವರು ಮಾಡಲಿದ್ದಾರೆ. ಬೆಂಗಳೂರಿನ ಕಿಂಗ್ಸ್ ಆಫ್ ಮ್ಯೂಸಿಕ್ ಸಂಸ್ಥೆ ಧ್ವನಿವರ್ಧಕ ಹಾಗೂ ಸ್ಟುಡಿಯೋ ಲೈಟ್ ವ್ಯವಸ್ಥೆ ಮಾಡಲಿದೆ.
ಮಂಗಳೂರಿನ ಜೆಪಿ ಆರ್ಟ್ಸ್ ರಚಿಸಿದ ಒಟ್ಟು 14 ಕಲಾಕೃತಿಗಳನ್ನು ಬಳಸಲಾಗುತ್ತಿದೆ. ಕಲಾಕೃತಿಗಳಿಗೆ ಚಲನವಲನವನ್ನು ಸಮಿತಿ ಸದಸ್ಯರೇ ನೀಡಲಿದ್ದಾರೆ. ಒಟ್ಟು 10 ಲಕ್ಷ ರೂ. ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಜನಾಕರ್ಷಣೆ ಜೊತೆಗೆ ಬಹುಮಾನಕ್ಕೂ ಪೈಪೋಟಿ ನೀಡಲಾಗುತ್ತದೆ ಎಂದು ವೇಣುಗೋಪಾಲ್ ಹೇಳಿದ್ದಾರೆ.










