ಮಡಿಕೇರಿ ಅ.24 : ನಗರದ ಶ್ರೀ ಚೌಡೇಶ್ವರಿ ದೇವಾಲಯ ದಸರಾ ಮಂಟಪ ಸಮಿತಿ 61ನೇ ವರ್ಷದ ದಸರಾ ಉತ್ಸವ ಆಚರಿಸುತ್ತಿದ್ದು, ಶ್ರೀ ಕಟೀಲು ಕ್ಷೇತ್ರ ಮಹಾತ್ಮ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ ಎಂದು ಚೌಡೇಶ್ವರಿ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ವಿಶಾಕ್ ರಮೇಶ್ ತಿಳಿಸಿದ್ದಾರೆ.
ಎರಡು ಟ್ರ್ಯಾಕ್ಟರ್ ಗಳನ್ನು ಬಳಸಲಾಗುತ್ತಿದ್ದು, ಮಧುರೈನ ಶ್ರೀ ಕಾರ್ತಿಕೇಯನ್ ಲೈಟಿಂಗ್ ಬೋರ್ಡ್ಸ್ ಅಂಡ್ ಡಿಸ್ ಪ್ಲೇ ಸಂಸ್ಥೆಯವರು ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಧ್ವನಿವರ್ಧಕ ಹಾಗೂ ಸ್ಟುಡಿಯೋ ಲೈಟ್ ವ್ಯವಸ್ಥೆಯನ್ನು ಸೋಮವಾರಪೇಟೆಯ ನಂದಿ ಸೌಂಡ್ ನವರು ಮಾಡಲಿದ್ದಾರೆ. ಪ್ಲಾಟ್ ಫಾರಂನ್ನು ಜಯರಾಂ ಆಚಾರ್, ಹರೀಶ್, ಲಕ್ಷ್ಮಣಾಚಾರ್ ಶೇಖರ್, ರಾಕಿ, ಜನ್ನು, ಶಶಿ ಮತ್ತು ತಂಡ, ಗುಣ ಮತ್ತು ತಂಡದವರು ನಿರ್ಮಿಸಲಿದ್ದಾರೆ. ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ನ್ನು ಕ್ರಿಯೇಟಿವ್ ಸ್ಟುಡಿಯೋ ಬಾಯ್ಸ್ ಮಾಡಲಿದ್ದಾರೆ. ಒಟ್ಟು 23 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಮತ್ತು ಕ್ರಿಯೇಟಿವ್ ಸ್ಟುಡಿಯೋ ಬಾಯ್ಸ್ ಮಾಡಲಿದ್ದಾರೆ.
ಕಲಾಕೃತಿಗಳಿಗೆ ಚಲನವಲನವನ್ನು ಕ್ರಿಯೇಟಿವ್ ಸ್ಟುಡಿಯೋ ಹಾಗೂ ಸಿಯರ್ ಬಾಯ್ಸ್ ತಂಡ ನೀಡಲಿದೆ. ಬೆಂಗಳೂರಿನ ಫೈರ್ ಟ್ರೋನಿಕ್ಸ್ ತಂಡ ಫೈರ್ ಎಫೆಕ್ಟ್ ಕಲ್ಪಿಸಲಿದೆ.
ಒಟ್ಟು 20 ಲಕ್ಷ ರೂ. ವೆಚ್ಚದಲ್ಲಿ ಮಂಟಪವನ್ನು ಹೊರ ತರಲಾಗುತ್ತಿದ್ದು, ಜನಾಕರ್ಷಣೆಯೊಂದಿಗೆ ಬಹುಮಾನಕ್ಕೂ ಪೈಪೋಟಿ ನೀಡಲಾಗುವುದು ಎಂದು ವಿಶಾಕ್ ರಮೇಶ್ ಮಾಹಿತಿ ನೀಡಿದ್ದಾರೆ.










