ಸೋಮವಾರಪೇಟೆ ನ.7 : ಉದ್ಯೋಗಕ್ಕೆ ಶಿಕ್ಷಣ ಎಷ್ಟು ಮುಖ್ಯವೋ ಹಾಗೆಯೇ ಬದುಕಿಗೆ ಸಾಮಾನ್ಯ ಜ್ಞಾನವೂ ಅಷ್ಟೇ ಮುಖ್ಯ ಎಂದು ಸಾಂದೀಪನಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಲಿಖಿತ್ ದಾಮೋದರ್ ತಿಳಿಸಿದರು.
ರಾಮಕೃಷ್ಣ ವಿದ್ಯಾಶಾಲೆ ಆರಂಭಗೊಂಡು 50 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಸಾಂದೀಪನಿ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಅಂತರ ಶಾಲಾ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ನಾವು ಪ್ರಮುಖವಾಗಿ ಉದ್ಯೋಗಕ್ಕಾಗಿ ಶಿಕ್ಷಣಕ್ಕೆ ಆದ್ಯತೆ ಕೊಡುತ್ತಿದ್ದೇವೆ. ಆದರೆ ಬದುಕಿನಲ್ಲಿ ಸಾಮಾನ್ಯ ಜ್ಞಾನವೆಂಬದು ಇಲ್ಲವಾದರೆ ಜೀವನ ಕಷ್ಟವಾಗುತ್ತದೆ ಎಂದರು.
ರಾಮಕೃಷ್ಣ ವಿದ್ಯಾಶಾಲೆ ಆರಂಭಗೊಂಡು 50 ವರ್ಷ ವಾಗಿರುವ ಸಂದರ್ಭ ಅಂದಿನ ಗುರುಗಳಾಗಿದ್ದ ಶಂಭವಾನಂದಜಿ ಅವರ ಜ್ಞಾಪಕಾರ್ಥ ರಾಜ್ಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯಾದ್ಯಾಂತ ಏಕಕಾಲದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ರಾಜ್ಯದ 732 ಕೇಂದ್ರಗಳಲ್ಲಿ ಒಟ್ಟು 17241 ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದು, ಕೊಡಗು ಜಿಲ್ಲೆಯಲ್ಲಿ 100 ಮಂದಿ ಪಾಲ್ಗೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಪತ್ರಿಕಾ ಭವನದ ಅಧ್ಯಕ್ಷ ಎಸ್.ಮಹೇಶ್ ಚಾಲನೆ ನೀಡಿದರು. ರಾಮಕೃಷ್ಣ ವಿದ್ಯಾಶಾಲೆಯ ಹಳೆಯ ವಿದ್ಯಾರ್ಥಿಗಳಾದ ಎಂ. ಟಿ.ದಾಮೋದರ್, ವಿಕ್ರಂ, ಬಿ.ಎಸ್.ಸುದೀಪ್, ಬಿ.ಎಸ್.ಸಿದ್ದಾರ್ಥ್ ಹಾಗೂ ಮತ್ತಿತರರು ಹಾಜರಿದ್ದರು.









