ಮಡಿಕೇರಿ ಜು.5 NEWS DESK : ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದಲ್ಲಿ ವಿಶೇಷಚೇತನರು ಮತ್ತು ಅವರ ಪಾಲಕರಿಗೆ ಅಣಬೆ ಕೃಷಿ ಮತ್ತು ಎರೆಗೊಬ್ಬರ ತಯಾರಿಕೆಯ ಸ್ವ-ಉದ್ಯೋಗ ತರಬೇತಿ ಶಿಬಿರ ಮತ್ತು ಪ್ರಾಯೋಗಿಕ ಕಾರ್ಯಾಗಾರ ನಡೆಯಿತು.
ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಪ್ರಭಾಕರ್ ಮಾತನಾಡಿ, ನಿಸರ್ಗಕ್ಕೆ ಪೂರಕವಾದ ಕೃಷಿ ಪದ್ಧತಿಗಳು, ಎರೆಗೊಬ್ಬರ ತಯಾರಿಕೆಯಲ್ಲಿ ಸ್ಥಳೀಯವಾಗಿ ದೊರೆಯುವ ಕಚ್ಚಾವಸ್ತುಗಳ ಬಳಕೆ, ಅಣಬೆಗಳ ಪ್ರಭೇದಗಳು ಮತ್ತು ಬೇಸಾಯ ಪದ್ಧತಿಗಳು, ಕಾರ್ಯಸಾಧ್ಯತೆಗಳು ಮತ್ತು ಬೆಳೆಯ ವಹಿವಾಟಿನ ಬಗ್ಗೆ ಅರಿವು ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ವೀಣಾ ಅಶೋಕ್, ಅಣಬೆ ಬೇಸಾಯದ ಪ್ರಾತ್ಯಕ್ಷಿಕೆ ನೀಡಿದರು. ಡಾ. ಮೃಣಾಲ್ ದೀಪಕ್ ಮಕ್ಕಳಲ್ಲಿ ಪೌಷ್ಟಿಕತೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಸ್ವಸ್ಥ ಸಂಸ್ಥೆಯ ನಿರ್ದೇಶಕರಾದ ಆರತಿ ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಾಟಾ ಸಂಸ್ಥೆಯ ಸುಂಟಿಕೊಪ್ಪ ವ್ಯವಸ್ಥಾಪಕ ಗೌತಮ್ ಮೈನಿ ಭಾಗವಹಿಸಿದ್ದರು. 29 ಫಲಾನುಭವಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.










