ಮಡಿಕೇರಿ ಜು.9 NEWS DESK : ಶ್ರೀ ರಾಜೇಶ್ವರಿ ವಿದ್ಯಾಲಯ ವತಿಯಿಂದ ನಡೆದ ಎಸ್.ಆರ್.ವಿ ಹೊನಲು ಬೆಳಕಿನ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಟೀಮ್ ಬ್ರದರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಟೀಮ್ ಭಗವತಿ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ತೃತೀಯ ಹಾಗೂ ನಾಲ್ಕನೇ ಸ್ಥಾನವನ್ನು ಟೀಮ್ ಒನ್ ಟಚ್ ಮತ್ತು ವೈಲ್ಡ್ ಮಾಸ್ಟರ್ಸ್ ತಂಡ ಪಡೆದು ಕೊಂಡಿತು.
ನಗರದ ಗಾಂಧಿ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಒಟ್ಟು ಹತ್ತು ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿದವು.
ಇದಕ್ಕೂ ಮೊದಲು ನಡೆದ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಟೀಮ್ ಬ್ರದರ್ಸ್ ತಂಡವು ಟೀಮ್ ಒನ್ ಟಚ್ ವಿರುದ್ಧ ಪೆನಲ್ಟಿಯಲ್ಲಿ 1-0 ಜಯ ಸಾಧಿಸಿ ನೇರವಾಗಿ ಫೈನಲ್ ಗೆ ಅರ್ಹತೆ ಪಡೆದುಕೊಂಡಿತು.
ಟೀಮ್ ಭಗವತಿ ಹಾಗೂ ವೈಲ್ಡ್ ಮಾಸ್ಟರ್ಸ್ ತಂಡದ ನಡುವೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಟೀಮ್ ಭಗವತಿ ತಂಡವು ಪೆನಲ್ಟಿ ಶೂಟ್ ಔಟ್ ನಲ್ಲಿ 8-7 ರ ಜಯ ಪಡೆದು ಕ್ವಾಲಿಫಯರ್ಗೆ ಲಗ್ಗೆ ಇಟ್ಟಿತು.
ಟೀಮ್ ಭಗವತಿ ಹಾಗೂ ಟೀಮ್ ಒನ್ ಟಚ್ ತಂಡದ ನಡುವೆ ನಡೆದ ದ್ವಿತೀಯ ಕ್ವಾಲಿಫಯರ್ ರೋಚಕ ಹಣಹಣಿಯಲ್ಲಿ 2 ತಂಡವು ಪೂರ್ಣ ಅವಧಿಯಲ್ಲಿ ಯಾವುದೆ ಗೋಲ್ಗಳಿಸದೆ ಸಮಬಲ ಸಾಧಿಸಿ ಪೆನಲ್ಟಿಯತ್ತ ಸಾಗಿತು. ಪೆನಲ್ಟಿ ಶೂಟೌಟ್ನಲ್ಲಿ ಟೀಮ್ ಭಗವತಿ ತಂಡವು 2-0 ಗೋಲುಗಳ ಅಂತರದಲ್ಲಿ ಗೆದ್ದು ಫೈನಲ್ ಗೆ ದ್ವಿತೀಯ ಅರ್ಹತೆ ಪಡೆದುಕೊಂಡಿತು.
ಟೀಮ್ ಭಗವತಿ ಹಾಗೂ ಟೀಮ್ ಬ್ರದರ್ಸ್ ತಂಡದ ನಡುವೆ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಟೀಮ್ ಬ್ರದರ್ಸ್ ತಂಡವು ಭಗವತಿ ವಿರುದ್ಧ 3-0 ಅಂತರದಲ್ಲಿ ಗೆದ್ದು ಎಸ್.ಆರ್.ವಿ ಫುಟ್ಬಾಲ್ ಚಾಂಪಿಯನ್ ಲೀಗ್ ಸೀಸನ್-1 ರ ಚಾಂಪಿಯನ್ ಪಟ್ಟ ಅಲಂಕರಿಸಿತು.
ಕ್ರೀಡಾಕೂಟದಲ್ಲಿ ಹೈ ಸ್ಕೋರರ್ ಆಗಿ ಟೀಮ್ ಬ್ರದರ್ಸ್ ತಂಡದ ಹಿಶಾಮ್ ಪಡೆದು ಕೊಂಡರೆ, ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಟೀಮ್ ಒನ್ ಟಚ್ ತಂಡದ ದಿನೇಶ್ (ಕುಳ್ಳಿ) ಪಡೆದುಕೊಂಡರು, ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಟೀಮ್ ಬ್ರದರ್ಸ್ ತಂಡದ ಸುರೇಶ್ ಪಡೆದುಕೊಂಡರೆ, ಉದಯೋನ್ಮಕ ಪ್ರಶಸ್ತಿಯನ್ನು ಟೀಮ್ ಭಗವತಿ ತಂಡದ ಆಕಾಶ್ ಪಡೆದರು. ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಟೀಮ್ ಭಗವತಿ ತಂಡದ ನಾಯಕ ಲೋಹಿತ್ ಪಡೆದುಕೊಂಡರು.
ಸಮಾರೋಪ ಸಮಾರಂಭ : ಶ್ರೀ ರಾಜೇಶ್ವರಿ ವಿದ್ಯಾಲಯದ ಕಾರ್ಯದರ್ಶಿ ಸಚಿನ್ ವಾಸುದೇವ್ ಅವರ ಸಮ್ಮುಖದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಡಿ.ವೈ.ಎಸ್.ಪಿ.ಮಹೇಶ್ ಕುಮಾರ್, ಕ್ರೀಡೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಆದ್ದರಿಂದ ಪ್ರಸ್ತುತ ದಿನಗಳಲ್ಲಿ ಕ್ರೀಡಾಕೂಟಗಳನ್ನು ಹೆಚ್ಚು ಹೆಚ್ಚು ಆಯೋಜಿಸುವ ಅಗತ್ಯವಿದೆ ಎಂದರು.
ಶ್ರೀ ರಾಜೇಶ್ವರಿ ವಿದ್ಯಾಲಯದ ಅಧ್ಯಕ್ಷ ಗೋವಿಂದ ರಾಜು ಮಾತನಾಡಿ, ಕ್ರೀಡಾಕೂಟವನ್ನು ಆಯೋಜಿಸುವುದು ಸಣ್ಣ ಕೆಲಸವಲ್ಲ. ಸಂಘಟನಾ ಮನೋಭಾವನೆ ಮತ್ತು ಆರ್ಥಿಕ ಸ್ಥಿತಿಗತಿ ಸದೃಢವಾಗಿರಬೇಕು. ಪ್ರಥಮ ವರ್ಷದ ಕ್ರೀಡಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ರಾಜೇಶ್ವರಿ ವಿದ್ಯಾಲಯದ ಕಾರ್ಯದರ್ಶಿ ಸಚಿನ್ ವಾಸುದೇವ್, ಯುವಕ, ಯುವತಿಯರು ದುಶ್ಚಟಗಳಿಗೆ ಬಲಿಯಾಗಿ, ಕಾಲಹರಣ ಮಾಡುವುದನ್ನು ಬಿಟ್ಟು ಬಿಡುವಿನ ಸಮಯದಲ್ಲಿ ಕ್ರೀಡಾ ಮನೋಭಾವನೆ ಬೆಳೆಸಿಕೊಂಡು ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶ್ರೀ ರಾಜೇಶ್ವರಿ ವಿದ್ಯಾಲಯದ ನಿರ್ದೇಶಕ ದೇವರಾಜು ಮಾತನಾಡಿ, ಪ್ರಥಮ ಬಾರಿಗೆ ಹೊನಲು ಬೆಳಕಿನ ಪಂದ್ಯ ಆಯೋಜನೆಗೊಂಡಿರುವುದು ಸಂತೋಷದ ವಿಷಯ. ಕ್ರೀಡೆ ಎಂದ ಕೂಡಲೇ ಬಾಲ್ಯದ ಜೀವನ ಮತ್ತೆ ಮರುಕಳಿಸುತ್ತದೆ. ಕ್ರೀಡೆಯನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಿದಾಗ ಮಾತ್ರ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಲು ಸಾಧ್ಯ ಎಂದು ಹೇಳಿದರು.
ನಗರಸಭೆ ಮಾಜಿ ಸದಸ್ಯ ಚುಮ್ಮಿ ದೇವಯ್ಯ ಶ್ರೀ ರಾಜೇಶ್ವರಿ ವಿದ್ಯಾಲಯ ಉಪಾಧ್ಯಕ್ಷರಾದ ದಾಕ್ಷಾಯಿಣಿ ವಾಸುದೇವ್, ನಿರ್ದೇಶಕ ಸತೀಶ್, ಪ್ರಾಂಶುಪಾಲರಾದ ಲಕ್ಷ್ಮಿ ಸಚಿನ್, ಉಪಪ್ರಾಂಶುಪಾಲರಾದ ಮಂದಣ್ಣ, ಎಂಸಿಸಿ ಅಧ್ಯಕ್ಷ ಕ್ರಿಸ್ಟೋಫರ್, ಶ್ರೀ ರಾಜೇಶ್ವರಿ ವಿದ್ಯಾಲಯದ ಸದಸ್ಯರುಗಳಾದ ಕಿರಣ್ ಕುಮಾರ್, ಪ್ರಶಾಂತ್, ದಿಶಾಂತ್, ಪ್ರಜ್ವಲ್, ಪ್ರಮುಖರಾದ ತೆಕ್ಕಡ ಕಾಶಿ ಕಾವೇರಪ್ಪ, ಪವನ್, ಅಚ್ಚಯ್ಯ, ಧ್ಯಾನ್, ದೇವರಾಜು, ಹಾಗೂ ಎಸ್.ಆರ್.ವಿ ಫುಟ್ಬಾಲ್ ಚಾಂಪಿಯನ್ ಲೀಗ್ ನ ಆಯೋಜಕರಾದ ಸಚಿನ್ ವಾಸುದೇವ್, ಲೋಹಿತ್ (ಪಿಕ), ಸುರ್ಜಿತ್, ಮನೋಜ್, ಅಶೋಕ್, ಲಿಖಿತ್, ಬಿಬ್ಲ, ದಿನೇಶ್, ಬೆಂಝಿ ಹಾಜರಿದ್ದರು.
ಕ್ರೀಡಾಕೂಟದ ತೀರ್ಪುಗಾರರಾಗಿ ಸಿದ್ದಾಪುರ ಇಕ್ರಾ ಪಬ್ಲಿಕ್ ಸ್ಕೂಲ್ನ ದೈಹಿಕ ಶಿಕ್ಷಣ ಶಿಕ್ಷಕ ಎಂ.ಎಂ.ಉನ್ನೈಸ್ ಹಾಗೂ ಬೆಂಗಳೂರಿನ ನರಸಿಂಹ (ನಾಣಿ) ಕಾರ್ಯನಿರ್ವಹಿಸಿದರು. ವೀಕ್ಷಕ ವಿವರಣೆಯನ್ನು ವೀಕ್ಷಕ ವಿವರಣೆಗಾರ ತೀರ್ಥಹಳ್ಳಿಯ ಶಿವು ಗೌಡ ಹಾಗೂ ರಮೇಶ್ ಹೆಬ್ಬಟ್ಟಗೇರಿ ನಡೆಸಿಕೊಟ್ಟರು. ಲೈವ್ ಸ್ಕೋರರ್ ಆಗಿ ಅಶೋಕ್ ಮಡಿಕೇರಿ, ರಫೀಕ್, ಹಾಗೂ ಅಜಿತ್ ಕಾರ್ಯನಿರ್ವಹಿಸಿದರು.
ವರದಿ : ಅಶೋಕ್ ಮಡಿಕೇರಿ










