ಕುಶಾಲನಗರ ಜು.20 NEWS DESK : ಕನಿಷ್ಠ ವೇತನ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಜು.23 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟ ಧರಣಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷ ಪಿ.ಆರ್.ಭರತ್ ತಿಳಿಸಿದ್ದಾರೆ.
ಕುಶಾಲನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಭರತ್ ಗ್ರಾ.ಪಂ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ ವಸೂಲಿಗಾರ, ಡಾಟಾ ಎಂಟ್ರಿ ಆಪರೇಟರ್ ,ನೀರು ಗಂಟಿಗಳು, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕು. ಪ್ರಸಕ್ತ ದಿನನಿತ್ಯದ ಬಳಕೆ ವಸ್ತುಗಳ ಮೇಲೆ ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ವೇತನ ರೂ.31 ಸಾವಿರ ನಿಗದಿಗೊಳಿಸಬೇಕು ಸೇರಿದಂತೆ ಸುಮಾರು 19 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಬೆಲೆ ಏರಿಕೆ ಗಗನಕ್ಕೆ ಏರಿದೆ, ಈ ಮೂಲಕ ಸಾಮಾನ್ಯ ಕಾರ್ಮಿಕನ ಬದುಕು ಅತಂತ್ರವಾಗಿದೆ, ಕೂಲಿ ವೇತನ ಕನಿಷ್ಠ ದರದಲ್ಲಿ ಇದೆ. ಈ ಬಗ್ಗೆ ಸರಕಾರಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಸರ್ಕಾರದಲ್ಲಿ ಪಕ್ಷ ಬದಲಾವಣೆಯಾಗುತ್ತಿದೆಯೇ ಹೊರತು ಕಾರ್ಮಿಕ ನೀತಿಗಳು ಬದಲಾಗುತ್ತಿಲ್ಲ ಎಂದು ಭರತ್ ಆರೋಪಿಸಿದರು.
ಸರಕಾರದಲ್ಲಿ ಸಚಿವರು ಕೇವಲ ಆಶ್ವಾಸನೆ ಭರವಸೆಗಳಲ್ಲಿಯೇ ದಿನದೊಳುತ್ತಿದ್ದಾರೆ.
ಕೇವಲ ಪತ್ರಿಕಾ ಪ್ರಚಾರಕ್ಕೆ ಮಾತ್ರ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದರು. ವೇತನ ತಾರತಮ್ಯ ಎದ್ದು ಕಾಣುತ್ತಿದೆ ಎಂದು ತಿಳಿಸಿದ ಅವರು ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು 23ಕ್ಕೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಅವರು ಹೇಳಿದರು.
ಕೊಡಗು ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆ ಖಾಲಿ ಆಗುವುದರ ನಡುವೆ ಕೇವಲ ಒಬ್ಬರೇ ಇಡೀ ಕಚೇರಿಯ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿಗಳಲ್ಲಿ ಬಿಲ್ ಕಲೆಕ್ಟರ್ ಮತ್ತು ಗುಮಾಸ್ತ ವೃಂದದಿಂದ ಗ್ರೇಡ್-2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗಳಿಗೆ ನೇಮಕಗೊಂಡ ನೌಕರರಿಗೆ ಸರ್ಕಾರದ ನಿಯಮಾನುಸಾರ ಹಿಂದಿನ ಸೇವೆಯನ್ನು ಪರಿಗಣಿಸಿ ಹಳೇ ಪಿಂಚಣಿ ಜಾರಿ ಮಾಡುವಂತೆ ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಪ್ರಮುಖರಾದ ಎಂ.ಎ.ಅಮೀರ್, ರಂಗಸ್ವಾಮಿ, ಹೆಚ್.ಆರ್.ಮಂಜು ಇದ್ದರು. 









