
ಮಡಿಕೇರಿ
NEWS DESK ಅ.27 : ಕವಿತೆಗಳಿಗೆ ಸ್ಪಂದಿಸುವ ಪ್ರತಿಯೊಬ್ಬರಲ್ಲೂ ಒಬ್ಬ ‘ಕವಿ ಇರುತ್ತಾನೆಂದು ನಾಡಿನ ಹೆಮ್ಮೆಯ ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ಅಭಿಪ್ರಾಯಪಟ್ಟಿದ್ದಾರೆ. ಕೊಡಗಿನ ಹಿರಿಯ ಚುಟುಕು ಕವಿ ಹಾ.ತಿ.ಜಯಪ್ರಕಾಶ್ ಅವರು ರಚಿಸಿದ ಚುಟುಕುಗಳ ಸಂಕಲನ ‘ಹನಿ’ಯನ್ನು ಲೇಖಕರ ಕುಶಾಲನಗರ ಗುಮ್ಮನಕೊಲ್ಲಿಯಲ್ಲಿನ ವರವರದ ಮನೆಯಲ್ಲಿ ಅನಾವರಣಗೊಳಿಸಿ ಮಾತನಾಡಿದ ಅವರು, ಯಾವುದೇ ಒಬ್ಬ ವ್ಯಕ್ತಿ ಇನ್ನಿಲ್ಲವೆಂದಾದರೆ, ಕವಿಮನಸೊಂದು ಇಲ್ಲವಾಯಿತೆಂದೇ ಅರ್ಥ. ಯಾವುದೇ ಕಾವ್ಯ, ಕವನಗಳನ್ನು ಕೇಳಿ ಸಂತೋಷಿಸುವವರಲ್ಲಿ ಕವಿ ಮನಸು ಇದ್ದೇ ಇರುತ್ತದೆ. ಇಂತಹ ಕವಿ ಮನಸುಗಳು ಕವಿತೆ ರಚನೆಗೆಗಷ್ಟೆ ಮುಂದಾಗಿರುವುದಿಲ್ಲವೆಂದು ಅನಿಸಿಕೆ ವ್ಯಕ್ತಪಡಿಸಿದರು. ಹನಿಗವನವೆಂಬುದು ಹುರಿಗಾಳು ಇದ್ದಂತೆ!- ಚುಟುಕು ಇಲ್ಲವೆ ಹನಿಗವನವೆಂಬುದು ಹುರಿ ಗಾಳು ಇದ್ದಂತೆ. ಆಗೊಮ್ಮೆ ಈಗೊಮ್ಮೆ ಮೆಲ್ಲಲ್ಲಷ್ಟೆ ಇರುವ ಹುರಿಗಾಳನ್ನು ಊಟದಂತೆ ಮಾಡಲಾಗದು. ಇದೇ ತೆರದಲ್ಲಿ ಹನಿಗವನಗಳನ್ನು ರಚಿಸುವವರು ‘ಇಡಿಗವಿತೆ’ಗಳ ರಚನೆಗೆ ಮನಮಾಡಬೇಕು. ಬಿಂದು ಸಿಂಧುವೆನಿಸಿಕೊಂಡು ಸಮುದ್ರದ ವಿಸ್ತಾರಕ್ಕೆ ಸೇರುವಂತೆ ಹನಿಗವಿತೆಗಳೊಂದಿಗೆ ಇಡಿಗವಿತೆಗಳ ರಚನೆಯ ಮೂಲಕ ತಮ್ಮ ಸಾಹಿತ್ಯದ ಪರಿಧಿಯನ್ನು ಪ್ರತಿಯೊಬ್ಬರು ವಿಸ್ತರಿಸಿಕೊಳ್ಳಬೇಕೆಂದು ಸೂಕ್ಷ್ಮವಾಗಿ ನುಡಿದರು. ಧಾವಂತದ ಹಾದಿಯಲ್ಲಿ ಕವಿತೆ- ಸಮಾಧಾನವಿಲ್ಲದ ಧಾವಂತದ ಬದುಕು ಇಂದು ಎಲ್ಲರದ್ದಾಗಿದೆ. ಇದೇ ರೀತಿ ಕವಿತೆಗಳು ಧಾವಂತದ ಹಾದಿಯಲ್ಲಿದೆ. ಇದರಿಂದ ಗುಣಮಟ್ಟಕ್ಕಿಂತ ಮಿಗಿಲಾಗಿ ‘ಜೊಳ್ಳು’ಹೆಚ್ಚಾಗಿದೆಯೆಂದು ಅನಿಸಿಕೆ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯದಲ್ಲಿ, ರಾಷ್ಟ್ರಕವಿ ಕುವೆಂಪು ಅವರ ‘ಚಿಂತನಾತ್ಮಕ’ ಸಾಹಿತ್ಯ ಮತ್ತು ದಿನಕರ ದೇಸಾಯಿಯವರ ‘ವಿಡಂಬನಾತ್ಮಕ’ ಎನ್ನುವ ಸಾಹಿತ್ಯದ ಎರಡು ಧಾರೆಗಳಿವೆ.ಇವುಗಳ ನಡುವೆ ಜನಸಾಮಾನ್ಯರು ತಮ್ಮ ತುಡಿತಗಳನ್ನು ವ್ಯಕ್ತಪಡಿಸಲು ಬಳಸುತ್ತಿರುವ ಹನಿಗವನಗಳು ಜನಸಾಮಾನ್ಯರ ಕವಿತೆಗಳೆ ಆಗಿವೆ. ಇಂತಹ ಚುಟುಕುಗಳು ಆಯಾ ಕಾಲಘಟ್ಟ ಇಲ್ಲವೆ ಸಂದರ್ಭದ ಸಾಮಾಜಿಕ ಪರಿಸ್ಥಿತಿಗಳಿಗೆ ತುರ್ತಾಗಿ ಸ್ಪಂದಿಸುವ ಶಕ್ತಿಯನ್ನು ಹೊಂದಿರುವುದಾಗಿ ನುಡಿದರು. ಖುಷಿಗಾಗಿ ಕವನ!- ಕವಿ ಹಾ.ತಿ.ಜಯಪ್ರಕಾಶ್ ಅವರು ಪ್ರಕಟಣೆ, ಪ್ರಚಾರದ ಹಂಗಿಲ್ಲದೆ ಕೇವಲ ತಮ್ಮ ಸ್ವಯಂ ಖುಷಿಗಾಗಿ ಕಾವ್ಯ ಪ್ರೀತಿಯನ್ನು ಹೊಂದಿರುವ ಬಗ್ಗೆ ಆಶ್ಚರ್ಯ ಮತ್ತು ಮೆಚ್ಚುಗೆಯ ನುಡಿಗಳನ್ನಾಡಿದ ಲಕ್ಷ್ಮಣರಾವ್ ಅವರು, ಇದೇ ಸಂದರ್ಭ ‘ನಿಂಬೆ ಗಿಡ ತುಂಬಾ ಚೆಂದ’ ಹಾಡನ್ನು ಹಾಡುವ ಮೂಲಕ ಸಾಹಿತ್ಯ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾದರು. ವಿಶೇಷ ಆಹ್ವಾನಿತರಾದ ಕೊಡಗು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಚುಟುಕು ಕವನಗಳ ರಚನೆಯಲ್ಲಿ ವಸ್ತು ವಿಷಯ ಕವಿಯದ್ದಾದರು, ಆಯ್ಕೆಯ ವಸ್ತು ವಿಷಯ ಸಾರ್ವತ್ರಿಕವಾಗಿರುತ್ತದೆ. ಹಾಯ್ಕು, ವಚನ ಪ್ರಕಾರಗಳ ಸಾಲಿನಲ್ಲೆ ಚುಟುಕು ಸಹ ಬರುತ್ತದೆ. ಇಂತಹ ಕವನ ಪ್ರಕಾರದಲ್ಲಿ ತೊಡಗಿಸಿಕೊಂಡು ಚುಟುಕು ಸಂಕಲನವನ್ನು ಹೊರ ತಂದಿರುವುದಕ್ಕೆ ಹಾ.ತಿ. ಜಯಪ್ರಕಾಶ್ರಿಗೆ ಶುಭ ಕೋರಿದರು. ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಕಳೆದ ನಾಲ್ಕು ದಶಕಗಳಿಂದ ಹಾ.ತಿ.ಜಯಪ್ರಕಾಶ್ ಅವರು ಚುಟುಕು ಸಾಹಿತ್ಯ ಪ್ರಕಾರದಲ್ಲಿ ತಮ್ಮನ್ನು ತೊಡಗಿಸಿಕೊಂಡವರೆಂದು ಮೆಚ್ಚುಗೆಯ ನುಡಿಗಳನ್ನಾಡಿ, ಪ್ರತಿಯೊಬ್ಬರು ದುಡ್ಡು ಕೊಟ್ಟು ಪುಸ್ತಕಗಳನ್ನು ಕೊಂಡು ಓದುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.ಇದೇ ಸಂದರ್ಭ ಇವರು ಲಕ್ಷ್ಮಣರಾವ್ ರಚನೆಯ ‘ಜಾಲಿ ಬಾರಿನಲ್ಲಿ..’ ಹಾಡನ್ನು ಸೊಗಸಾಗಿ ಪ್ರಸ್ತುತ ಪಡಿಸಿದ್ದು ವಿಶೇಷ. ‘ಹನಿ’ ಚುಟುಕು ಕೃತಿಗೆ ಮುನ್ನುಡಿ ಬರೆದ ತ್ರಿಭಾಷಾ ಸಾಹಿತಿ ನಾಗೇಶ್ ಕಾಲೂರು ಅವರು ಮಾತನಾಡಿ, ಚುಟುಕು ಕವನಗಳು ಎಂದರೆ ‘ಸ್ಟಿಲ್ ಫೋಟೋಗ್ರಾಫಿ’ಯಂತೆ. ಆಯಾ ಕ್ಷಣದ ಭಾವವನ್ನು ಕೆಲವೇ ಕೆಲವು ಸಾಲುಗಳಲ್ಲಿ ಚುಟುಕುಗಳು ಕಟ್ಟಿಕೊಡುತ್ತದೆಂದು ಅಭಿಪ್ರಾಯಿಸಿ, ಹನಿ ಸಂಕಲನದ ಚುಟುಕುಗಳ ಸ್ವಾರಸ್ಯಗಳನ್ನು ಸಭಿಕರ ಮುಂದೆ ತೆರೆದಿಟ್ಟರು. ಹಾಸನ ನ್ಯಾಯಾಲಯದ ಸಿಬ್ಬಂದಿ ಹಾಗೂ ಗಾಯಕಿಯೂ ಆದ ಫಣಿವೇಣಿ ಅವರು ಇದೇ ಸಂದರ್ಭ ಬಿ.ಆರ್.ಲಕ್ಷ್ಮಣರಾವ್ ಅವರ ಕವನಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಚುಟುಕು ಕವಿ ಹಾ.ತಿ. ಜಯಪ್ರಕಾಶ್, ಕಳೆದ ಮೂರುವರೆ ನಾಲ್ಕು ದಶಕಗಳಿಂದ ಚುಟುಕು ಕವನಗಳನ್ನು ರಚಿಸಿಕೊಂಡು ಬಂದಿರುವುದನ್ನು ತಿಳಿಸಿ, ತಾವು ಉದ್ಯೋಗಿಯಾಗಿ ೩೫ ವರ್ಷ ಸೇವೆ ಸಲ್ಲಿಸಿದ ಹಂತದಲ್ಲಿ ರಚಿಸಿದ ಚುರುಕು ಮಟ್ಟಿಸುವ ಕವನಗಳ ಕಾರಣದಿಂದ ತಮಗೆ ೧೫ ಬಾರಿ ವರ್ಗಾವಣೆಯಾದುದನ್ನು ಸ್ವಾರಸ್ಯಕರವಾಗಿ ತಿಳಿಸಿ, ವಾರ್ತಾ ಕಮ್ಯೂನಿಕೇಷನ್ನ ಅನಿಲ್ ಹೆಚ್.ಟಿ.ಅವರ ಪ್ರೀತಿ ವಿಶ್ವಾಸಗಳಿಂದ ಇದೀಗ ತಮ್ಮ ಚುಟುಕು ಸಂಕಲನ ಹೊರ ಬಂದಿದೆಯೆಂದು ಮನದಾಳದಿಂದ ನುಡಿದರು. ಸನ್ಮಾನ- ಕವಿ ಹಾ.ತಿ.ಜಯಪ್ರಕಾಶ್, ಜಯಲಕ್ಷ್ಮಿ ಹಾಗೂ ಬಿ.ಆರ್. ಲಕ್ಷ್ಮಣರಾವ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಇವರೊಂದಿಗೆ ಟಿ.ಪಿ.ರಮೇಶ್, ಬಿ.ಜಿ. ಅನಂತಶಯನ, ಚುಟುಕು ಸಂಕಲನವನ್ನು ಹೊರ ತಂದ ವಾರ್ತಾ ಕಮ್ಯೂನಿಕೇಷನ್ ಮುಖ್ಯಸ್ಥ ಅನಿಲ್ ಹೆಚ್.ಟಿ., ನಾಗೇಶ್ ಕಾಲೂರು, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್, ಗಾಯಕಿ ಫಣಿವೇಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕುಮಾರಿ ಅಭಿಜ್ಞಾ ಪ್ರಾರ್ಥಿಸಿ, ಅನಿಲ್ ಹೆಚ್.ಟಿ. ಸ್ವಾಗತಿಸಿದರು. ಎಸ್.ಐ.ಮುನೀರ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿ, ಸುಮಾ ವಂದಿಸಿದರು.


