
ಸುಂಟಿಕೊಪ್ಪ ಆ.5 NEWS DESK : ಯಾವುದೇ ಒಂದು ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಿ ಹೊರಹೊಮ್ಮಲು ಕ್ರೀಡಾಕೂಟ ಪ್ರಮುಖ ಸಾಧನ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹೇಳಿದ್ದಾರೆ. ಸುಂಟಿಕೊಪ್ಪ ಗದ್ದೆಹಳ್ಳದ ವೈ.ಎಂ.ಕರುಂಬಯ್ಯ ಅವರ ಗದ್ದೆಯಲ್ಲಿ ಪ್ರಪಥಮ ಬಾರಿಗೆ ಆಯೋಜಿತವಾಗಿದ್ದ “ಗದ್ದೆಹಳ್ಳದಲ್ಲಿ ಗದ್ದೆ ಆಟ ಮಳೆಗಾಲದ ಹಬ್ಬ 2025” ರ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಭತ್ತದ ಬೇಸಾಯ ಹಿನ್ನಡೆ ಕಂಡಿರುವ ಈ ದಿನಗಳಲ್ಲಿ ಹಿರಿಯರಾದ ವೈ.ಎಂ.ಕರುಂಬಯ್ಯ ಅವರು ಯುವಜನತೆ ಮಹಿಳೆಯರು, ಪುರುಷರು, ಮತ್ತು ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಏಕತೆ, ಪದ್ಧತಿ, ಪರಂಪರೆ ಮತ್ತು ಸಮಾಜದ ಒಗ್ಗಟ್ಟನ್ನು ಕಾಪಾಡಿಕೊಳ್ಳುವ ಧ್ಯೇಯ ವಾಕ್ಯದೊಂದಿಗೆ ಈ ಹಬ್ಬವನ್ನು ಆಯೋಜಿಸಿದ್ದು, ಅತ್ಯಂತ ಮಹತ್ವ ಪೂರ್ಣವಾಗಿದೆ ಪ್ರಶಂಸಿದರು. ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಸಮಾಜ ಸರ್ವಜನಾಂಗದ ಶಾಂತಿಯ ತೋಟವಾಗಿ ಹೊರಹೊಮ್ಮುತ್ತದೆ ಎಂದು ಹೇಳಿದರು. ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಕೆಸರುಗದ್ದೆ ಕ್ರೀಡಾಕೂಟ ಎಂಬುದು ಪ್ರಕೃತಿ ಮಣ್ಣು ಚಿಕಿತ್ಸೆಯಾಗಿದ್ದು, ನಮ್ಮ ಹಿರಿಯರು ಆಯಾಕಾಲಘಟ್ಟದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯುತ್ತಮ ಚಿಕಿತ್ಸಾ ಕ್ರಮಗಳನ್ನು ಕಂಡುಕೊಂಡಿದ್ದರು. ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಜಾತಿ, ಮತ, ಜನಾಂಗ ನಡುವೆ ವಿವಿಧತೆಯಲ್ಲಿ ಏಕತೆಯನ್ನು ತರಲು ಕ್ರೀಡಾಕೂಟ ಪ್ರಬಲ ಸಾಧನ ಎಂದು ಅಪ್ಪಚ್ಚು ರಂಜನ್ ಬಣ್ಣಿಸಿದರು. ಹಿರಿಯರಾದ ವೈ.ಎಂ.ಕರುಂಬಯ್ಯ ಮಾತನಾಡಿ, ಗದ್ದೆಹಳ್ಳದಲ್ಲಿ ಗದ್ದೆಆಟ ನಿರಂತರವಾಗಿ ನಡೆಯಲು ನಾವೆಲ್ಲಾರೂ ಕೈಜೋಡಿಸಬೇಕೆಂದು ಕರೆ ನೀಡಿದರು. ಇದೇ ಪರಿಸರದಿಂದ ರಾಷ್ಟ್ರೀಯ ಬಾಸ್ಕೆಟ್ಬಾಲ್ ಆಟಗಾರ್ತಿಯಾಗಿ ಪಟ್ಟೆಮನೆ ನವನಿತ ಉದಯಕುಮಾರ್ ಹೊರಮ್ಮಿದ್ದನ್ನು ಅಪ್ಪಚ್ಚು ರಂಜನ್ ಸ್ಮರಿಸಿದರಲ್ಲದೆ ಈ ಕ್ರೀಡಾಕೂಟದ ಕ್ರೀಡಾ ಪ್ರತಿಭೆಗಳು ಹೊರ ಬರಲು ಮುನ್ನುಡಿ ಬರೆಯಲು ಎಂದು ಆಶೀಸಿದರು. ಕಾರ್ಯಕ್ರಮದ ಆಯೋಜಕರುಗಳಾದ ನಿಡ್ಯಮನೆ ತೃಶಲ್ ಸನ್ಮಾನ್, ಪಟ್ಟೆಮನೆ ಹರ್ಷ, ಬೈಮನೆ ಚರಣ್, ಪಟ್ಟೆಮನೆ ಚರಣ್, ಮೀನಾ ಚೇತನ್, ಪಟ್ಟೆಮನೆ ಹರ್ಷ, ಗಹನ ಪಾರ್ಥ, ಪವಿತ್ರ ದಿವಾಕರ್, ಆರ್.ರಮೇಶ್ ಪಿಳ್ಳೆ, ಭಾರ್ಗವ, ಪಾರ್ಥ ಎ.ಬಿ., ಸುಮನ ಎನ್.ಎಂ, ತೀರ್ಪುಗಾರರಾಗಿ ಚಂದ್ರಶೇಖರ್ ಪೂಜಾರಿ, ಮಂಜು, ಕುಸುಮ, ಮೋಹನ (ಮಹೇಂದ್ರ) ಸೇರಿದಂತೆ ಮತ್ತಿತರರು ಇದ್ದರು. ಸಮಾರಂಭದ ವೇದಿಕೆಯಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ಕುಮಾರ್, ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯೆ ಮಂಜುಳ (ರಾಸಥಿ), ರಾಷ್ಟ್ರೀಯ ಬಾಸ್ಕೆಟ್ಬಾಲ್ ಆಟಗಾರ್ತಿ ಪಟ್ಟೆಮನೆ ನವನೀತ ಮತ್ತಿತರರು ಇದ್ದರು. ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ 8 ಪುರುಷರ ವಿಭಾಗದಲ್ಲಿ ಟೀಂ ಕಾರ್ಗಿಲ್ ಪ್ರಥಮ ಹಾಗೂ ಗದ್ದೆಹಳ್ಳದ ಟೀಂ ಡಾಲ್ಪಿನ್ ತಂಡ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ 4 ತಂಡಗಳು ಭಾಗವಹಿಸಿದ್ದು ಗದ್ದೆಹಳ್ಳ ಮಹಿಳೆಯರು ಪ್ರಥವi ಹಾಗೂ ದ್ವಿತೀಯ ಸ್ಥಾನವನ್ನು ಬಾಳೆಕಾಡು ತಂಡದವರು ಪಡೆದುಕೊಂಡರು. ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾಪಟುಗಳಿಗೆ ಓಟದ ಸ್ಪರ್ದೆ, ರಿಲೇ ಓಟ, ಹಗ್ಗ ಜಗ್ಗಾಟ, ಫನ್ಗೇಮ್ಸ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಜಯಗಳಿಸಿದ ಸ್ಪರ್ಧಿಗಳಿಗೆ ಮತ್ತು ತಂಡದವರಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.








