
ಮಡಿಕೇರಿ ಆ.12 NEWS DESK : 2 ಲೀಟರ್ ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್ ಮಾರಾಟ ಮಾಡದಂತೆ ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ವರ್ತಕರಲ್ಲಿ ಮನವಿ ಮಾಡಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಚೇಂಬರ್ ಆಫ್ ಕಾಮರ್ಸ್ನ ನಗರಾಧ್ಯಕ್ಷ ಸಂತೋಷ್ ಅಣ್ವೇಕರ್ ಹಾಗೂ ಜಿಲ್ಲಾ ನಿರ್ದೇಶಕ ಧನಂಜಯ ಎಂ. ಅವರು ಸ್ವಚ್ಛ ಪರಿಸರಕ್ಕಾಗಿ 2 ಲೀಟರ್ ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್ ಮಾರಾಟ ಮಾಡದಂತೆ ಸಗಟು ವ್ಯಾಪಾರಸ್ಥರು ಹಾಗೂ ಚಿಲ್ಲರೆ ಮಾರಾಟ ಅಂಗಡಿ ಮಾಲೀಕರಲ್ಲಿ ಕಳೆದ ಜನವರಿಯಿಂದ ಮನವಿ ಮಾಡಿಕೊಳ್ಳಲಾಗಿದೆ. ಇದೇ ಆ.1 ರಿಂದ ಈ ನೀರಿನ ಬಾಟಲಿಗಳ ಮಾರಾಟವನ್ನು ನಗರಸಭೆ ಕಡ್ಡಾಯವಾಗಿ ನಿಷೇಧಿಸಿದೆ ಎಂದು ತಿಳಿಸಿದ್ದಾರೆ. 2024-25ರ ಪ್ರವಾಸೋದ್ಯಮ ಇಲಾಖೆಯ ಅಂಕಿ ಅಂಶದ ಪ್ರಕಾರ 45 ಲಕ್ಷಕ್ಕೂ ಅಧಿಕ ಪ್ರವಾಸಿಗರು ಮಡಿಕೇರಿ ನಗರಕ್ಕೆ ಭೇಟಿ ನೀಡಿದ್ದಾರೆ. ಕನಿಷ್ಠ 25 ರಿಂದ 30 ಲಕ್ಷ ನೀರಿನ ಬಾಟಲ್ ಮಡಿಕೇರಿ ನಗರ ಒಂದರಲ್ಲೇ ಕಂಡು ಬಂದಿದೆ. ಈ ಬಾಟಲ್ ಗಳು ತೋಡು, ಚರಂಡಿಗಳಲ್ಲಿ, ಕಾಡಿನ ಮಧ್ಯ ಭಾಗದಲ್ಲಿ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಮರುಬಳಕೆಯಾಗದ ಸ್ಥಿತಿಯಲ್ಲಿ ರಾಶಿ ಬಿದ್ದಿರುವುದನ್ನು ಗಮನಿಸಿದ್ದೇವೆ. ಚರಂಡಿ ಮತ್ತು ತೋಡುಗಳಲ್ಲಿ ನೀರು ಸರಾಗವಾಗಿ ಹರಿಯಲು ಪ್ಲಾಸ್ಟಿಕ್ ಬಾಟಲಿಗಳು ಅಡಚಣೆಯನ್ನುಂಟು ಮಾಡುತ್ತಿವೆ. ಎಲ್ಲೆಂದರಲ್ಲಿ ಬಿದ್ದಿರುವ ಖಾಲಿ ಬಾಟಲಿಗಳಿಂದ ಸೊಳ್ಳೆ, ಕ್ರಿಮಿ, ಕೀಟಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವುದಕ್ಕೂ ಕಾರಣವಾಗುತ್ತಿದೆ. ಪರಿಸರದ ಮೇಲೂ ನೀರಿನ ಪ್ಲಾಸ್ಟಿಕ್ ಬಾಟಲಿಗಳು ದುಷ್ಪರಿಣಾಮ ಉಂಟು ಮಾಡುತ್ತಿರುವುದರಿಂದ ಜಿಲ್ಲಾಡಳಿತ ಮತ್ತು ನಗರಸಭೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ ವರ್ತಕರು 2 ಲೀಟರ್ ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್ ಮಾರಾಟ ಮಾಡದೆ ಮಡಿಕೇರಿ ನಗರದ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕೆಂದು ಸಂತೋಷ್ ಅಣ್ವೇಕರ್ ಹಾಗೂ ಧನಂಜಯ ಎಂ. ಮನವಿ ಮಾಡಿದ್ದಾರೆ.
ನಗರದಲ್ಲಿ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಜಿಲ್ಲಾಡಳಿತ, ನಗರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಲು ಚೇಂಬರ್ ಆಫ್ ಕಾಮರ್ಸ್ ಮುಂದಾಗಿದೆ. ಈಗಾಗಲೇ ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಯುಕ್ತರ ಸಮ್ಮುಖದಲ್ಲಿ ನಗರದ ವಿವಿಧ ಭಾಗಗಳಲ್ಲಿ ಸುಮಾರು 10 ಸ್ಥಳಗಳನ್ನು ಗುರುತಿಸಿ 500 ಲೀಟರ್ ಸಾಮಥ್ರ್ಯದ ನೀರಿನ ಟ್ಯಾಂಕ್ ಅಳವಡಿಸಲು ಚಿಂತನೆ ನಡೆದಿದೆ. ಟ್ಯಾಂಕ್ ನ ಕೆಳಭಾಗದಲ್ಲಿ ತಣ್ಣೀರು ಮತ್ತು ಬಿಸಿ ನೀರು ಒದಗಿಸಲು ವಾಟರ್ ಪ್ಯೂರಿಫೈಯರ್ ವ್ಯವಸ್ಥೆಯನ್ನು ಮಾಡಲಾಗುವುದು. ಆದ್ದರಿಂದ ವರ್ತಕರು ಪ್ಲಾಸ್ಟಿಕ್ ಮುಕ್ತ ಮಡಿಕೇರಿ ನಗರದ ಪರಿಕಲ್ಪನೆಗೆ ಬೆಂಬಲ ನೀಡಬೇಕೆಂದು ಕೋರಿದ್ದಾರೆ.
ನಗರದಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆಗೆ ನಿಷೇಧವಿದ್ದರೂ ಇತ್ತೀಚಿನ ದಿನಗಳಲ್ಲಿ ಇದರ ಬಳಕೆ ಹೆಚ್ಚಾಗುತ್ತಿದೆ. ನಗರದ ಹಿತದೃಷ್ಟಿಯಿಂದ ವರ್ತಕರು ಹಾಗೂ ಗ್ರಾಹಕರು ಸ್ವಯಂ ಪ್ರೇರಿತರಾಗಿ ಇದಕ್ಕೆ ಕಡಿವಾಣ ಹಾಕಬೇಕು ಎಂದು ತಿಳಿಸಿದ್ದಾರೆ. ವ್ಯಾಪಾರೋದ್ಯಮ ಪರವಾನಗಿಯನ್ನು ನವೀಕರಿಸದೆ ಇರುವ ನಗರದ ವರ್ತಕರು ತಕ್ಷಣ ನವೀಕರಣಗೊಳಿಸುವಂತೆ ಸಂತೋಷ್ ಅಣ್ವೇಕರ್ ಹಾಗೂ ಧನಂಜಯ ಎಂ. ಮನವಿ ಮಾಡಿದ್ದಾರೆ.










