
ಮಡಿಕೇರಿ NEWS DESK ಸೆ.23 : ಸರಕಾರದ ವತಿಯಿಂದ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಇಸ್ಲಾಂ, ಜಾತಿಯ ಕಾಲಂನಲ್ಲಿ ಮುಸ್ಲಿಂ, ಉಪಜಾತಿ ಹಾಗೂ ಭಾಷೆಯ ಕಾಲಂನಲ್ಲಿ ತಮ್ಮ ತಮ್ಮ ಉಪಜಾತಿ ಮತ್ತು ಮಾತೃಭಾಷೆಯನ್ನು ನಮೂದಿಸಬೇಕೆಂದು ಮಡಿಕೇರಿ ಮುಸ್ಲಿಂ ಜಮಾಅತ್ ಗಳ ಒಕ್ಕೂಟ ಒಮ್ಮತದ ನಿರ್ಧಾರ ಕೈಗೊಂಡಿದೆ. ಮಡಿಕೇರಿಯ ಬದ್ರಿಯಾ ಜಮಾಅತ್ ನ ಸಭಾಂಗಣದಲ್ಲಿ ನಡೆದ ಮುಸ್ಲಿಂ ಜಮಾಅತ್ ಗಳ ಒಕ್ಕೂಟದ ಸಭೆಯಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಕುರಿತು ಸಮಾಲೋಚನೆ ನಡೆಸಲಾಯಿತು. ಸಮೀಕ್ಷೆ ಕುರಿತು ಮಾಹಿತಿ ನೀಡಿದ ಜಮಾಅತ್ ಗಳ ಒಕ್ಕೂಟದ ಕಾರ್ಯದರ್ಶಿ ಅಮೀನ್ ಮೊಹಿಸಿನ್ ಅವರು ಮುಂದಿನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಸಮೀಕ್ಷೆ ಹೆಚ್ಚು ಮಹತ್ವವನ್ನು ಪಡೆದುಕೊಂಡಿದ್ದು, ಸ್ಪಷ್ಟವಾದ ಮಾಹಿತಿಯನ್ನು ನೀಡಿ ಸಹಕರಿಸಬೇಕೆಂದು ಮನವಿ ಮಾಡಿದರು. ಪ್ರಸ್ತುತ ನಡೆಯುತ್ತಿರುವ ಜಾತಿ ಜನಗಣತಿ ಮತ್ತು ಸಮೀಕ್ಷೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ನಮ್ಮ ಜನಾಂಗದ ನೈಜ ಸ್ಥಿತಿಗತಿಗಳನ್ನು ನಮೂದಿಸಿಕೊಳ್ಳಬೇಕು. ಕುಲಶಾಸ್ತ್ರ ಅಧ್ಯಯನದ ವರದಿ ಹಿನ್ನೆಲೆಯಲ್ಲಿ ಜಾತಿ ಜನಸಂಖ್ಯೆಯ ಅನುಪಾತದಡಿ ಸರಕಾರ ಎಲ್ಲಾ ಕ್ಷೇತ್ರದಲ್ಲಿ ಮೀಸಲಾತಿ ಮತ್ತು ಅನುದಾನ ನೀಡಲು ಮುಂದಾಗುತ್ತದೆ. ಆದ್ದರಿಂದ ಸಮೀಕ್ಷೆದಾರರು ಮನೆಗೆ ಬಂದಾಗ ಪ್ರತಿಯೊಬ್ಬರು ಸರಿಯಾದ ಮಾಹಿತಿಯನ್ನು ನೀಡಬೇಕು ಎಂದರು. ಧರ್ಮದ ಕಾಲಂನಲ್ಲಿ ಇಸ್ಲಾಂ, ಜಾತಿಯ ಕಾಲಂನಲ್ಲಿ ಮುಸ್ಲಿಂ, ಉಪಜಾತಿ ಹಾಗೂ ಭಾಷೆಯ ಕಾಲಂನಲ್ಲಿ ತಮ್ಮ ತಮ್ಮ ಉಪಜಾತಿ ಮತ್ತು ಮಾತೃಭಾಷೆಯನ್ನು ನಮೂದಿಸಬೇಕೆಂದು ಅಮೀನ್ ಮೊಹಿಸಿನ್ ತಿಳಿಸಿದರು. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಕುರಿತು ಸಂಪನ್ಮೂಲ ವ್ಯಕ್ತಿ ಪಿಡಿಓ ಅಬ್ದುಲ್ಲ ಅವರು ಸಮಗ್ರ ಮಾಹಿತಿಯನ್ನು ನೀಡಿದರು. ಪ್ರಮುಖರಾದ ತಮ್ಲಿಕ್ ದಾರಿಮಿ ಉದ್ಘಾಟನಾ ಭಾಷಣ ಮಾಡಿದರು, ಹನೀಫ್ ದಾರಿಮಿ ನಿರೂಪಿಸಿದರು. ಸಭೆಯಲ್ಲಿ ಜಾಮಿಯಾ ಮಸೀದಿ ಅಧ್ಯಕ್ಷ ನಜೀರ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹೆಚ್.ಎ.ಹಂಸ, ಯುವ ಕಾಂಗ್ರೆಸ್ ನ ಮೈಸಿ, ಉಮ್ಮತ್ ವನ್ ಕಾರ್ಯದರ್ಶಿ ಖಾಲಿದ್, ಕುಶಾಲನಗರ ಹಿಲಾಲ್ ಮಸೀದಿಯ ಕರೀಂ, ಹನೀಫ್, ಹಾರುನ್, ಸಲೀಂ, ಬಶೀರ್, ನಗರಸಭಾ ಸದಸ್ಯರುಗಳಾದ ಬಶೀರ್, ಎಂ.ಕೆ.ಮನ್ಸೂರ್, ಇಮ್ರಾನ್ ಮತ್ತಿತರರು ಪಾಲ್ಗೊಂಡಿದ್ದರು.









